Advertisement

6 ಹಳೇ ಹುಲಿಗಳ ಕೈ ಗೆ ಟಿಕೆಟ್‌

04:11 PM Apr 16, 2018 | |

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಿಗೆ ಮಾತ್ರ ಟಿಕೆಟ್‌ ಪ್ರಕಟಗೊಂಡಿದ್ದು, ಓರ್ವ ಹಾಲಿ ಶಾಸಕರಿಗೆ ಟಿಕೆಟ್‌ ಕೈ ತಪ್ಪಿದೆ. ಮೊದಲ ಪಟ್ಟಿಯಲ್ಲಿ ಸಚಿವ ಡಾ| ಎಂ.ಬಿ. ಪಾಟೀಲ ಅವರ ಕೈ ಮೇಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿರುವ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. 

Advertisement

ವಿಜಯಪುರ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ| ಮಕಬೂಲ್‌ ಬಾಗವಾನಗೆ ಟಿಕೆಟ್‌ ಕೈ ತಪ್ಪಿದ್ದು, ಅಬ್ದುಲ್‌ ಹಮೀದ್‌ ಮುಶ್ರೀಫ್‌ ಅವರಿಗೆ ಕಾಂಗ್ರೆಸ್‌ ಮಣೆ ಹಾಕಿ ಮತ್ತೂಮ್ಮೆ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿದೆ. ಕಳೆದ ಬಾರಿ ಹೊಸ ಮುಖವಾಗಿದ್ದ ಡಾ| ಬಾಗವಾನ ಈ ಬಾರಿ ಟಿಕೆಟ್‌ ಕಳೆದುಕೊಂಡಿದ್ದು, ಅವರ ನಡೆ ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ಮಧ್ಯೆ ರವಿವಾರ ಮಧ್ಯಾಹ್ನದಿಂದಲೇ ಹಮೀದ್‌ ಮುಶ್ರೀಫ್‌ ಬೆಂಬಲಿಗರು ನಗರದಲ್ಲಿ ಸಂಭ್ರಮದಲ್ಲಿದ್ದಾರೆ.

ಈ ಮಧ್ಯೆ ಬಿಜೆಪಿ ಶಾಸಕ ರಮೇಶ ಭೂಸನೂರ ಅವರು ಪ್ರತಿನಿ ಧಿಸುವ ಸಿಂದಗಿ ಕ್ಷೇತ್ರದಿಂದ ನಾಲ್ಕಾರು ಜನ ಟಿಕೆಟ್‌ ಆಕಾಂಕ್ಷಿಗಳಿರುವ ಕಾರಣ ಈ ಕೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಇದೇ ಕ್ಷೇತ್ರದಿಂದ ಇರಾದೆಯಿಂದ ಬೆಂಗಳೂರಿನಿಂದ ಬಂದಿದ್ದ ಸಚಿವ ಎಚ್‌. ಎಂ. ರೇವಣ್ಣ ಅವರ ಸಂಬಂಧಿ ಎಂದು ಪರಿಚಯಿಸಿಕೊಂಡಿದ್ದ ಡಾ| ಮಂಜುಳಾ ಸೇರಿದಂತೆ ನಾಲ್ಕಾರು ಜನ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ತಮಗೆ ಟಿಕೆಟ್‌ ಕೈ ತಪ್ಪುವ ಮುನ್ಸೂಚನೆ ಅರಿತಿದ್ದರಿಂದ ಡಾ| ಮಂಜುಳಾ ಬೆಂಬಲಿಗರು ಈಗಾಗಲೇ ಪ್ರತಿಭಟನೆಗೆ ಮುಂದಾಗಿದ್ದು, ಸೋಮವಾರ ಈ ಪ್ರತಿಭಟನೆ ಜೋರಾಗುವ ಸಾಧ್ಯತೆ ಇದೆ. 

ಇನ್ನು ಪಕ್ಷದಿಂದ ಉಚ್ಛಾಟನೆಗೊಂಡಿರುವ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿರುವ ಎ.ಎಸ್‌. ಪಾಟೀಲ ನಡಹಳ್ಳಿ ಪ್ರತಿನಿಧಿಸುತ್ತಿರುವ ದೇವರಹಿಪ್ಪರಗಿ ಕ್ಷೇತ್ರಕ್ಕೆ ಬಾಪುಗೌಡ ಪಾಟೀಲ ಯಾಳಗಿ ಅವರಿಗೆ ನಿರೀಕ್ಷೆಯಂತೆ ಟಿಕೆಟ್‌ ದೊರೆತಿದೆ. ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಶರಣಪ್ಪ ಸುಣಗಾರ, ಗಡಿ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸುಭಾಷ್‌ ಛಾಯಾಗೋಳ, ಜಿಪಂ ಮಾಜಿ ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರವಿಗೌಡ ಪಾಟೀಲ ಸೇರಿ ಹಲವರು ಮುನಿಸಿಕೊಳ್ಳುವ ನಿರೀಕ್ಷೆ ಇದೆ. ಇವರ ಟಿಕೆಟ್‌ ಕೈ ತಪ್ಪಿರುವ ಕಾರಣ ಇವರ ನಡೆ ಹೇಗೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಇನ್ನು ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರಾಗಿರುವ ರಾಜು ಆಲಗೂರು ಅವರು ಪ್ರತಿನಿಧಿಸುವ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ಕ್ಷೇತ್ರದಿಂದಲೂ ಕಾಂಗ್ರೆಸ್‌ ಟಿಕೆಟ್‌ ಪ್ರಕಟವಾಗಿಲ್ಲ. ಶಾಸಕ ಆಲಗೂರ ಅವರು ಕಳೆದ ಚುನಾವಣೆಯಲ್ಲಿ 664 ಅತ್ಯಲ್ಪ ಮತಗಳ ಅಂತರದಿಂದ ಗೆದ್ದಿರುವ ಕಾರಣ ಈ ಬಾರಿ ಸ್ಪರ್ಧೆಗೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಈ ಕ್ಷೇತ್ರದಿಂದ ಸಚಿವ ಎಂ.ಬಿ. ಪಾಟೀಲ ಅವರ ಬಲಗೈ ಬಂಟ ಸುರೇಶ ಗೋಣಸಗಿ, ಮಾಜಿ ಶಾಸಕ ವಿಲಾಸಬಾಬು ಆಲಮೇಲಕರ,
ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ ಪೈಪೋಟಿ ಹಚ್ಚಿರುವ ಕಾರಣ ಈ ಕ್ಷೇತ್ರದ ಟಿಕೆಟ್‌ ಕೂಡ ಇನ್ನೂ ಪ್ರಕಟಗೊಂಡಿಲ್ಲ. 

Advertisement

ಉಳಿದಂತೆ ಸಚಿವ ಡಾ| ಎಂ.ಬಿ. ಪಾಟೀಲ-ಬಬಲೇಶ್ವರ, ಹಾಲಿ ಶಾಸಕರಾದ ಸಿ.ಎಸ್‌. ನಾಡಗೌಡ-ಮುದ್ದೇಬಿಹಾಳ,
ಬಸವನಬಾಗೇವಾಡಿ-ಶಿವಾನಂದ ಪಾಟೀಲ, ಇಂಡಿ-ಯಶವಂತರಾಯಗೌಡ ಪಾಟೀಲ ಇವರಷ್ಟೇ ಟಿಕೇಟ್‌ ಆಕಾಂಕ್ಷಿಗಳಾಗಿದ್ದು ಸಹಜವಾಗಿಯೇ ಇವರಿಗೆ ಮಣೆ ಹಾಕಲಾಗಿದೆ. ಇನ್ನು ಟಿಕೆಟ್‌ ಹಂಚಿಕೆ ಹಂತದಲ್ಲಿ ಮುಸ್ಲಿಂ, ಕೂಡುಒಕ್ಕಲಿಗ, ಪಂಚಮಸಾಲಿ, ಆದಿ ಬಣಜಿಗ ಸಮುದಾಯಕ್ಕೆ ತಲಾ ಒಂದೊಂದು ಟಿಕೆಟ್‌ ದಕ್ಕಿದ್ದರೆ ರಡ್ಡಿ ಸಮುದಾಯಕ್ಕೆ ಎರಡು ಟಿಕೇಟ್‌ ನೀಡಿ ಮಣೆ ಹಾಕಲಾಗಿದೆ. ಜಾತಿ ಲೆಕ್ಕಾಚಾರದಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿರುವ ಹಾಲುಮತ, ಗಂಗಾಮತ, ಗಾಣಿಗ ಸಮುದಾಯಕ್ಕೆ ಮಣೆ ಹಾಕಿಲ್ಲ. ಇದು ಜಿಲ್ಲೆ ಕಾಂಗ್ರೆಸ್‌ ವಲಯದಲ್ಲಿ ಪ್ರತಿರೋಧದ ಬೆಂಕಿ ಹೊತ್ತಿರುವ ನಿರೀಕ್ಷೆ ಇದೆ. 

ಏಕೆಂದರೆ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಈ ಎರಡೂ ಸಮುದಾಯದವರೇ ನಿರ್ಣಾಯಕ ಮತದಾರಿದ್ದಾರೆ. ಉಳಿದಿರುವ ಸಿಂದಗಿ ಮಾತ್ರ ಪ್ರಕಟಣೆಗೆ ಬಾಕಿ ಇದ್ದು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. 

ಶಾಸಕ ಬಾಗವಾನಗೆ ಮುಖಭಂಗ
ವಿಜಯಪುರ: ವಿಜಯಪುರ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ| ಎಂ.ಎಸ್‌. ಬಾಗವಾನ  ವರಿಗೆ ಟಿಕೆಟ್‌ ಕೈ ತಪ್ಪಿಸುವಲ್ಲಿ ಅವರ ವಿರೋಧಿ ಪಾಳೆಯ ಯಶಸ್ವಿಯಾಗಿದೆ. ಆ ಮೂಲಕ ಬಾಗವಾನ ಅವರಿಗೆ ಸ್ವಪಕ್ಷೀಯ ವಿರೋಧಿಗಳು ಟಾಂಗ್‌ ನೀಡಿ ಕೈ ಕೈ  ಚುಕಿಕೊಳ್ಳುವಂತೆ ಮಾಡಿದ್ದಾರೆ.

ಟಿಕೆಟ್‌ ಹಂಚಿಕೆಗೆ ಮುನ್ನವೇ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಒಂದು ಬಣ ಹಾಲಿ ಶಾಸಕ ಡಾ| ಬಾಗವಾನಗೆ ಟಿಕೆಟ್‌ ನೀಡದಂತೆ ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಹಿರಂಗ ಆಕ್ರೋಶ ಹೊರ ಹಾಕಿತ್ತು. ನಗರ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಸುಮಾರು 22 ಜನರಲ್ಲಿ ಎಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಮುಶ್ರೀಫ್‌ ಅವರಿಗೆ ಟಿಕೆಟ್‌ ಕೊಡಿಸುವ ಮೂಲಕ ಶಾಸಕರ ವಿರೋಧಿಗಳು ಯಶಸ್ವಿಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೂಡ ಹಲವು ಪ್ರಬಲರ ಮಧ್ಯೆ ಪಕ್ಷದಲ್ಲೇ ಪ್ರಮುಖ ನಾಯಕರಿಗೆ ಹೆಸರೇ ಗೊತ್ತಿಲ್ಲದ ಡಾ| ಎಂ.ಎಸ್‌. ಬಾಗವಾನ ರಾಜಕೀಯ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿ ಟಿಕೆಟ್‌ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದರು. ಟಿಕೇಟ್‌ ಪೈಪೋಟಿ ನಡೆಸಿದ್ದ ಎಲ್ಲರೂ ಬಿಜೆಪಿ-ಕೆಜೆಪಿ ಅಭ್ಯರ್ಥಿಗಳಿಗೆ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ತಮ್ಮ ಅತೃಪ್ತಿ ನುಂಗಿಕೊಂಡು ಒಗ್ಗಟ್ಟಿನಿಂದ ಡಾ| ಎಂ.ಎಸ್‌. ಬಾಗವಾನ ಅವರ ಗೆಲುವಿಗೆ ಶ್ರಮಿಸಿದ್ದರು. ಆದರೆ ಗೆದ್ದ ನಂತರ ಪಕ್ಷದ ಸಂಘಟನೆ ಹಾಗೂ ಅವಕಾಶಗಳ ಹಂಚಿಕೆ ವಿಷಯದಲ್ಲೂ ಕುಟುಂಬ ರಾಜಕೀಯ ಮಾಡಿದರೆಂಬ ಕಾರಣಕ್ಕೆ ಗೆಲ್ಲಿಸಿದವರೆ ವೈರಿಗಳಾಗಿ ಪರಿವರ್ತನೆಗೊಂಡಿದ್ದರು.

ಚುನಾವಣೆಯ ಸದಾವಕಾಶಕ್ಕೆ ಕಾಯುತ್ತಿದ್ದ ಡಾ| ಬಾಗವಾನ ವಿರೋಧಿ ಬಣ ಕೊನೆಗೂ ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರಿ ಮುಶ್ರೀಫ್‌ ಅವರಿಗೆ ಟಿಕೆಟ್‌ ಕೊಡಿಸುವ ಮೂಲಕ ಹಾಲಿ ಶಾಸಕ ಡಾ| ಬಾಗವಾನ ಕೈ ಕೈ ಹಿಚುಕಿಕೊಳ್ಳುವಂತೆ ಮಾಡಿದ್ದಾರೆ

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next