ಮಹಾನಗರ: ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಗೆ ಕ್ಷಣಗಣನೆ ಆರಂಭವಾಗಿದೆ. ಸಾಹಿತ್ಯದ ಜತೆಗೆ ಸಾಂಸ್ಕೃತಿಕ ಕಲಾ ಲೋಕವು ಇಲ್ಲಿ ಅನಾವರಣಗೊಳ್ಳುವ ಕಾರಣ ನುಡಿಸಿರಿಯು ವಿಭಿನ್ನ ಹಾಗೂ ವಿಶೇಷ ನೆಲೆಗಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ.
ಡಿ. 1ರಿಂದ 3ರವರೆಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿರುವ ‘ಆಳ್ವಾಸ್ ನುಡಿಸಿರಿ’ಯಲ್ಲಿ ಸಾಂಸ್ಕೃತಿಕ ಕಲಾ ಚಟುವಟಿಕೆಗೆ ಈ ಬಾರಿಯೂ ವಿಶೇಷ ಒತ್ತು ನೀಡಲಾಗಿದೆ. ಸಾಹಿತ್ಯಾಸಕ್ತ ಮನಸ್ಸುಗಳಿಗೆ ಸಂಗೀತ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ಪರಿಚಯಿಸಿ, ಮನಸ್ಸು ಉಲ್ಲಸಿತಗೊಳಿಸುವ ವಿನೂತನ ಪ್ರಯತ್ನ ನಡೆಯಲಿದೆ.
ಡಾ| ಎಂ. ಮೋಹನ್ ಆಳ್ವ ನೇತೃತ್ವದಲ್ಲಿ 11 ವೇದಿಕೆಗಳಲ್ಲಿ ಆಳ್ವಾಸ್ ಸಾಂಸ್ಕೃತಿಕ ಲೋಕ ಮೈಬಿಚ್ಚಿ ಕುಣಿಯಲಿದೆ. ನುಡಿಸಿರಿಯ ಮೊದಲ ದಿನದ ಮೆರವಣಿಗೆ, ಕಲಾ ವೇದಿಕೆಯಲ್ಲಿ ಸುಮಾರು 6000ದಷ್ಟು ಕಲಾವಿದರು ಭಾಗವಹಿಸುವ ನಿರೀಕ್ಷೆ ಇರಿಸಲಾಗಿದೆ. ಡಿ. 1ರಂದು ದಿನಪೂರ್ತಿ ಕಾವ್ಯ ಸಂಗೀತ, ನೃತ್ಯ ದರ್ಪಣ, ಆಳ್ವಾಸ್ ಸಾಂಸ್ಕೃತಿಕ ವೈಭವ, ನಾಟಕ, ಸ್ಯಾಕ್ಸೋಫೋನ್ ವಾದನ, ಚಕ್ರಿ ಭಜನೆ, ಜಾನಪದ ಗೀತೆ, ಕರ್ಣಾಟಕ ಹಾಗೂ ಹಿಂದೂಸ್ಥಾನಿ ಸಂಗೀತ, ರಂಗಗೀತೆಗಳು, ಹಾಸ್ಯೋಲ್ಲಾಸ, ಕನಕ ಕೌಮುದಿ, ತೆಂಕುತಿಟ್ಟು ಯಕ್ಷಗಾನ, ಯಕ್ಷ-ದಾಸ ಗಾನ ವೈಭವ, ಹರಿಕಥಾ ಕೀರ್ತನ, ಭರತನಾಟ್ಯ, ಕೂಚುಪುಡಿ, ಗಮಕ ವಾಚನ, ವೀಣಾ ವಾದನ, ದಾಸರ ಪದಗಳು, ನೃತ್ಯ ರೂಪಕ, ಸಮೂಹ ನೃತ್ಯ, ದ್ವಂದ್ವ ಪಿಟೀಲು ವಾದನ, ಭರತ ನೃತ್ಯ ವೈಭವ, ಕೊರಗರ ಸಾಂಸ್ಕೃತಿಕ ವೈಭವ, ಹಗಲು ವೇಷ, ಹುಲಿ ವೇಷ ಕುಣಿತ, ತಾಳಮದ್ದಳೆ ಸಂಯೋಜನೆಗೊಂಡಿವೆ.
ಡಿ. 2ರಂದು ಪಿಟೀಲು ವಾದನ, ಒಡಿಸ್ಸಿ, ಕೂಚುಪುಡಿ, ಆಳ್ವಾಸ್ ಸಾಂಸ್ಕೃತಿಕ ವೈಭವ, ನಾಟಕ, ವಾದ್ಯ ಸಂಗೀತ, ಜಾಗೃತಿಗಾಗಿ ಜಾನಪದ, ಗೊಂದಲಿಗರ ಮೇಳ, ಸುಗಮ ಸಂಗೀತ, ಹಾಸ್ಯ ರಸಾಯನ, ಯಕ್ಷ ಹಾಸ್ಯ ವೈಭವ, ಬಡಗುತಿಟ್ಟು ಯಕ್ಷಗಾನ, ಸ್ಯಾಕ್ಸೋಫೋನ್, ಕೊಳಲು, ಶಹನಾಯಿ, ಸಂತೂರ್ ವಾದನ, ಕಥಾ ಕೀರ್ತನ, ಬಿದಿರಿನ ವಾದ್ಯ ಸಂಗೀತ, ಯಕ್ಷ ಭರತ ಸಂಗಮ, ಯುಗಳ ಭರತ ನಾಟ್ಯ, ಮಹಿಷಾಸುರ ಮರ್ದಿನಿ, ಭಾವ ಕೃಷ್ಣ, ನಾದಸ್ವರ ವಾದನ, ಹರಿಕಥೆ, ಗಾನಾಂಜಲಿ, ದೇವರ ನಾಮಗಳು, ತಾಳ ನಮನ, ಶಿಶುನಾಳ ಷರೀಫ ಗಾನಾಮೃತ, ಸ್ಪೆಕ್ಟ್ರಂ, ದಶಾವತಾರ, ಆನಂದ ನರ್ತನ, ರಾಜಸ್ಥಾನ ಜಾನಪದ ಸಂಗೀತ, ಜಾಗೋ ಹಿಂದೂ ಸ್ಥಾನಿ, ಜಾನಪದ ನೃತ್ಯ ವೈವಿಧ್ಯ, ಸಂಗೀತ ರಸಸಂಜೆ ಪ್ರದರ್ಶನಗೊಳ್ಳಲಿವೆ.
ಡಿ.3ರಂದು ದಾಸವಾಣಿ, ನೃತ್ಯ ಸಂಸ್ಪರ್ಶನಂ, ಭಜನಾವಳಿ, ಹಾಸ್ಯ ಪುಂಡು ವೇಷ, ತೆಂಕುತಿಟ್ಟು ಯಕ್ಷಗಾನ, ಭಾವಗಾನ ಲಹರಿ, ಕಥಾಕೀರ್ತನ, ಡಿವಿಜಿ ಅಂತಃಪುರ ಗೀತೆಗಳು, ಕೂಚುಪುಡಿ ನೃತ್ಯ, ಶಿಲಾಬಾಲಿಕಾ ನೃತ್ಯ, ನೃತ್ಯ ಮೋಹನಂ, ನೃತ್ಯಧಾರಾ, ಭರತನಾಟ್ಯ ವೈಭವ, ಕಥಕ್, ಡೋಲಿನ್, ತಬ್ಲಾ ವಾದನ, ರಷ್ಯನ್ ಸಿಂಗ್, ರಾಗ ಒಂದು ಭಾವ ಹಲವು, ಸವಿತಕ್ಕನ ಅಳ್ಳಿ ಬ್ಯಾಂಡ್, ಹಾರ್ಮೋನಿಯಂ ಜುಗುಲ್ಬಂದಿ, ನೃತ್ಯಾಭಿವಂದನ, ನಗಾರಿ ವಾದ್ಯಮೇಳ, ಸುಗಮ ಸಂಗೀತ, ಶೃಂಗಾರಿ ಮೇಳ, ಸಂಗೀತ ರಸಸಂಜೆ, ನೃತ್ಯ ನಾಟಕ, ಜಾನಪದ ಸಂಗೀತವನ್ನು ಆಯೋಜಿಸಲಾಗಿದೆ.
ಮುಂಜಾನೆಯಿಂದ ರಾತ್ರಿಯವರೆಗೆ
ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯ 11 ವೇದಿಕೆಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ರತ್ನಾಕರವರ್ಣಿ ವೇದಿಕೆಯಲ್ಲಿ ಮುಂಜಾನೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತವೆ.
ಉಳಿದ ವೇದಿಕೆಯಲ್ಲಿ ಬೆಳಗ್ಗೆ 8ರ ಅನಂತರ ನಾಡೋಜ ಏಣಗಿ ಬಾಳಪ್ಪ ವೇದಿಕೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ವೇದಿಕೆ, ಕುವೆಂಪು ಸಭಾಂಗಣ, ಕು.ಶಿ. ಹರಿದಾಸ ಭಟ್ಟ ವೇದಿಕೆ, ನಾಡೋಜ ಕಯ್ನಾರ ಕಿಂಞಣ್ಣ ರೈ ವೇದಿಕೆ, ಡಾ| ಶಿವರಾಮ ಕಾರಂತ ಸಭಾಂಗಣ, ಪಳಕಳ ಸೀತಾರಾಮ ಭಟ್ಟ ವೇದಿಕೆ, ಡಾ| ವಿ.ಎಸ್. ಆಚಾರ್ಯ ಸಭಾಭವನ, ಹರೀಶ್ ಆರ್.ಭಟ್ ವೇದಿಕೆ, ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಪ್ರೊ| ಎಸ್. ರಾಮದಾಸ ತೋಳ್ಪಾಡಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
ತುಳುನಾಡಿನ ತೆಲಿಕೆದ ತಮ್ಮನ!
ನುಡಿಸಿರಿಯೊಳಗೆ ತುಳು ಸಾಂಸ್ಕೃತಿಕ ಲೋಕವನ್ನು ಪರಿಚಯಿಸಲಾಗಿದ್ದು, ನಾಡೋಜ ಕಯ್ನಾರ ಕಿಂಞಣ್ಣ ರೈ ವೇದಿಕೆಯಲ್ಲಿ ತುಳುನಾಡಿನ ವೈಭವ ಪ್ರದರ್ಶನಗೊಳ್ಳಲಿದೆ. ಡಿ.1ರಂದು ಸಂಜೆ 6ರಿಂದ ತುಳು ಚಿತ್ರ ರಸಮಂಜರಿ, ತೆಲಿಕೆ ಬಂಜಿ ನಿಲಿಕೆ, ಕುಸಲ್ದ ಗೌಜಿ, ತೆಲಿಕೆದ ತಮ್ಮನ ಆಯೋಜಿಸಲಾಗಿದೆ. ಡಿ.2ರಂದು ಸಂಜೆ 6ರಿಂದ ತುಳು ಪಾಡªನ ಮೇಳ, ತೆಲಿಕೆದ ಪರ್ಬ, ತುಳುನಾಡ ಪೊರ್ಲು ತಿರ್ಲ್, ತೆಲಿಕೆದ ಬರ್ಸ, ಪುರುಳಿ ನಲಿಕೆ, ಕುಸಲ್ದ ಕುರ್ಲರಿ ನಡೆಯಲಿದೆ. ಡಿ. 3ರಂದು ಸಂಜೆ 6ರಿಂದ ಕಾಮಿಡಿ ಪಂಚ್, ತುಳುನಾಡ ಕಲರಿ ಪ್ರದರ್ಶನ, ಬಲೆ ತೆಲಿಪುಲೆ, ತೆಲಿಕೆದ ಗೊಂಚಿಲ್ ಪ್ರದರ್ಶನಗೊಳ್ಳಲಿದೆ.
ಅಪೂರ್ವ ಸಂಭ್ರಮ
ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತಿ ವಿನೂತನ ರೀತಿಯಲ್ಲಿ ಆಯೋಜಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಕಾರ್ಯಕ್ರಮ ನಡೆದಿಲ್ಲ ಎಂಬಷ್ಟರ ಮಟ್ಟಿಗೆ ನುಡಿಸಿರಿಯ ಸಾಂಸ್ಕೃತಿಕ ಕಾರ್ಯಕಲಾಪವನ್ನು ಅಣಿಗೊಳಿಸಲಾಗಿದೆ. ಎಲ್ಲ ಕಲಾವಿದರ ಕಲಾ ಪ್ರದರ್ಶನಕ್ಕೂ ನುಡಿಸಿರಿ ವೇದಿಕೆ ಒದಗಿಸಿದೆ.
–
ಡಾ| ಎಂ. ಮೋಹನ್ ಆಳ್ವ,,
ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ದಿನೇಶ್ ಇರಾ