Advertisement

ಬಸ್‌ಗಳಿಗೆ ಬಾಗಿಲು ಅಳವಡಿಕೆ ; ಡಿಸಿ ಗಡುವು ಸಮೀಪಿಸಿದರೂ ಬಗೆಹರಿಯದ ಗೊಂದಲ!

02:48 PM Mar 27, 2024 | Team Udayavani |

ಮಹಾನಗರ: ಬಸ್‌ಗಳಲ್ಲಿ ಬಾಗಿಲು ಅಳವಡಿಸಲು ಜಿಲ್ಲಾಧಿಕಾರಿಯವರು ನೀಡಿರುವ ಗಡುವು ಸಮೀಪಿಸುತ್ತಿದೆ. ಆದರೆ ಹೆಚ್ಚಿನ ಬಸ್‌ಗಳು ಬಾಗಿಲು ರಹಿತವಾಗಿಯೇ ಓಡಾಡುತ್ತಿವೆ! ಬಸ್‌ನಿಂದ ನಿರ್ವಾಹಕರು, ಪ್ರಯಾಣಿಕರು ಬಿದ್ದು ಮೃತಪಟ್ಟ ಒಂದೆರಡು ಘಟನೆಗಳ ಹಿನ್ನೆಲೆಯಲ್ಲಿ ಫೆ. 28ರಂದು ನಡೆದಿದ್ದ ರಸ್ತೆ ಸುರಕ್ಷೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಬಸ್‌ಗಳಿಗೆ ಬಾಗಿಲು ಅಳವಡಿಸುವುದಕ್ಕೆ ಒಂದು ತಿಂಗಳ ಗಡುವು ನೀಡಿದ್ದರು.

Advertisement

ಸಿಟಿ ಬಸ್‌ಗಳಿಗೆ ಅನ್ವಯವಾಗದು: ಬಸ್‌ಗಳಿಗೆ ಬಾಗಿಲು ಅಳವಡಿಸಬೇಕು ಎಂಬ ನಿಯಮ ಸಿಟಿಬಸ್‌ಗಳಿಗೆ ಅನ್ವಯಿಸುವುದಿಲ್ಲ. ನಗರದ ಪ್ರದೇಶಗಳಲ್ಲಿ ಓಡಾಡುವ ಬಸ್‌ ಗಳು ಅಲ್ಲಲ್ಲಿ ನಿಲುಗಡೆಯಾಗುತ್ತವೆ. ಪದೇ ಪದೇ ಬಾಗಿಲು ತೆಗೆದು ಹಾಕುವುದು ಅಸಾಧ್ಯ. ಇದರಿಂದ ಇತರ ವಾಹನಗಳಿಗೆ, ಅದರಲ್ಲಿಯೂ ಮುಖ್ಯವಾಗಿ ದ್ವಿಚಕ್ರ ವಾಹನಗಳಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ಅಪಘಾತಕ್ಕೂ ಕಾರಣವಾಗುತ್ತದೆ ಎನ್ನುತ್ತಾರೆ ಸಿಟಿ ಬಸ್‌ಗಳ ಮಾಲಕರು.

ಜಿಲ್ಲಾಧಿಕಾರಿ ಹೇಳಿದ್ದೇನು?
2017ರಿಂದ ನೋಂದಣಿಯಾಗಿರುವ ಎಲ್ಲ ಸಾರ್ವಜನಿಕ ಬಸ್‌ಗಳು ಮುಂದಿನ ಒಂದು ತಿಂಗಳೊಳಗೆ ಬಾಗಿಲನ್ನು ಅಳವಡಿಸಿ ಅಫಿದವಿತ್‌ ಸಲ್ಲಿಸಬೇಕು. 2017ರಿಂದ ನೋಂದಣಿಯಾದ ಎಲ್ಲ ಬಸ್‌ಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು.ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರ ಜೀವರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ನಿರ್ಲಕ್ಷ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಸ್‌ಗಳಲ್ಲಿ ಬಾಗಿಲನ್ನು ಅಳವಡಿಸಬೇಕೆಂದು ಸಾರ್ವಜನಿಕರಿಂದಲೂ ತೀವ್ರ ಒತ್ತಡ ಬರುತ್ತಿದೆ. ಜನಸಂಪರ್ಕ ಸಭೆಗಳಲ್ಲಿಯೂ ಮನವಿಗಳು ಬಂದಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳ ಬಸ್‌ಗಳು ಬಾಗಿಲು ಅಳವಡಿಸಿ ಸಂಚರಿಸುತ್ತಿವೆ. ಬೆಂಗಳೂರಿನಲ್ಲಿಯೂ ಸಿಟಿ ಬಸ್‌ಗಳಲ್ಲಿ ಬಾಗಿಲು ಇರುವುದರಿಂದ ಸಾರ್ವಜನಿಕರ ಸಂಚಾರ ನಿರಾತಂಕವಾಗಿದೆ. ಇದರಿಂದ ಸಂಚಾರ ವ್ಯವಸ್ಥೆಯೂ ಸುಗಮವಾಗಿದೆ ಎಂಬುದಾಗಿ ಜಿಲ್ಲಾಧಿಕಾರಿಯವರು ಸಭೆಯಲ್ಲಿ ಹೇಳಿದ್ದರು.

ಆದೇಶ ತಲುಪಿಲ್ಲ, ಕಾನೂನಿಗೆ ಬದ್ಧ ನಮಗೆ ತಿಳಿದಿರುವಂತೆ ಸಿಟಿ ಬಸ್‌ ಗಳಲ್ಲಿ ಬಾಗಿಲು ಅಳವಡಿಕೆ ಕಡ್ಡಾಯವಿಲ್ಲ.
ಜಿಲ್ಲಾಧಿಕಾರಿಯವರ ಆದೇಶ ನಮಗೆ ತಲುಪಿಲ್ಲ. ಅದರಲ್ಲಿರುವ ಅಂಶಗಳಿಗೆ ಬದ್ಧರಾಗಿರುತ್ತೇವೆ. ಕಾನೂನು, ಆದೇಶಗಳನ್ನು ಪಾಲಿಸುತ್ತೇವೆ. ಬಹುತೇಕ ಎಕ್ಸ್‌ಪ್ರೆಸ್‌, ಸರ್ವಿಸ್‌ ಬಸ್‌ಗಳಲ್ಲಿ ಬಾಗಿಲು ಇದೆ. ಸಿಟಿ ಬಸ್‌ಗಳಿಗೆ ಬಾಗಿಲು ಅಳವಡಿಸಿದರೆ
ಸಮಸ್ಯೆಯಾಗುತ್ತದೆ. ಬಸ್‌ನಿರ್ವಾಹಕರು, ಸಾರ್ವಜನಿಕರ ಸುರಕ್ಷೆಗೆ ಆದ್ಯತೆ ನೀಡುತ್ತಿದ್ದೇವೆ. ಆದೇಶವನ್ನು ಗಮನಿಸಿ ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ದ.ಕ. ಜಿಲ್ಲಾ ಖಾಸಗಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಅಜೀಜ್‌ ಪರ್ತಿಪ್ಪಾಡಿ ಅವರು.

ಕಾನೂನು ಅಭಿಪ್ರಾಯ ಪಡೆದು ಕ್ರಮ ಬಸ್‌ಗಳಲ್ಲಿ ಬಾಗಿಲು ಅಳವಡಿಸುವ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಚುನಾವಣೆಯ ಬಳಿಕ ಈ ಬಗ್ಗೆ ಆದ್ಯತೆ ನೀಡಲಾಗುವುದು.
*ಶ್ರೀಧರ ಮಲ್ಲಾಡ್‌, ಆರ್‌ಟಿಒ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next