Advertisement

ಸಾವಿರಾರು ಅರ್ಜಿ ಬಂದರೂ ಕೇವಲ 31 ಮಂದಿ ಆಯ್ಕೆ ಮಿತಿ

09:32 PM Oct 18, 2019 | Lakshmi GovindaRaju |

ಚನ್ನರಾಯಪಟ್ಟಣ: ಪಶುಭಾಗ್ಯ ಯೋಜನೆಗೆ ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ರೈತರು ಈಗಾಗಲೇ ಪಶು ಇಲಾಖೆಗೆ ಸಲ್ಲಿಸಿದ್ದಾರೆ. ಆದರೆ, ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದ 5 ಹೋಬಳಿ, ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದ ಒಂದು ಹೋಬಳಿಯಿಂದ ಕೇವಲ 31 ಫ‌ಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ.

Advertisement

ಶ್ರವಣಬೆಳಗೊಳ ಶಾಸಕ ಸಿ.ಎನ್‌.ಬಾಲಕೃಷ್ಣ, ಸ್ಥಳೀಯರಾಗಿರುವ ಹಾಸನ ವಿಧಾನ ಪರಿಷತ್ತಿನ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಹೊಳೆನರಸೀಪುರ ವಿಧಾನ ಸಭೆ ಶಾಸಕ ಎಚ್‌.ಡಿ.ರೇವಣ್ಣ ಈ ಮೂರು ಮಂದಿಯ ಮನೆ ಬಾಗಿಲಿಗೆ ನಿತ್ಯವೂ ನೂರಾರು ಮಂದಿ ತೆರಳಿ ಪಶುಭಾಗ್ಯ ಯೋಜನೆ ಸವಲತ್ತು ಕೊಡಿಸುವಂತೆ ಅಂಗಲಾಚಿ ಬೇಡುತ್ತಿದ್ದಾರೆ. ಆದರೆ, ಪ್ರಸಕ್ತ ವರ್ಷ ಕೇವಲ 31 ಮಂದಿಯನ್ನು ಮಾತ್ರ ಆಯ್ಕೆ ಮಾಡಬೇಕಿದ್ದು ಜನಪ್ರತಿನಿಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕಮಿಟಿ ಇಲ್ಲ: ಪಶುಭಾಗ್ಯ ಯೋಜನೆ ಜಾರಿಯಾದಾಗ 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಪಶುಭಾಗ್ಯ ಯೋಜನೆ ಸಮಿತಿ ಮಾಡಿ ಶಾಸಕರು ಅಧ್ಯಕ್ಷರಾಗಿದ್ದರೆ, ವಿಧಾನಪರಿಷತ್‌ ಸದಸ್ಯರು ಉಪಾಧ್ಯಕ್ಷರನ್ನಾಗಿ ಮಾಡಿ ಸ್ಥಳಿಯ ರೈತ ಮುಖಂಡರನ್ನು ಸದಸ್ಯರನ್ನಾಗಿ ನೇಮಕ ಮಾಡಿತ್ತು. ಇದರಿಂದ ಫ‌ಲಾನುಭವಿಗಳ ಆಯ್ಕೆಗೆ ತೊಂದರೆ ಇರಲಿಲ್ಲ, ಕಾಂಗ್ರೆಸ್‌ ಸರ್ಕಾರ ನಂತರ ಬಂದ ಮೈತ್ರಿ ಸರ್ಕಾರ ಹಾಗೂ ಪ್ರಸಕ್ತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪಶುಭಾಗ್ಯ ಯೋಜನೆಗೆ ಸಮಿತಿ ರಚನೆ ಮಾಡದೆ ಇರುವುದರಿಂದ ಕ್ಷೇತ್ರದ ಜನಪ್ರತಿನಿಧಿಗಳು ಆಯ್ಕೆ ಮಾಡಬೇಕಿದೆ.

ಶಾಸಕ ವಿವೇಚನೆ: ಪಶುಭಾಗ್ಯ ಯೋಜನೆ ಫ‌ಲಾನುಭವಿಗಳ ಆಯ್ಕೆ ಜವಾಬ್ದಾರಿ ಶಾಸಕರ ವಿವೇಚನೆಗೆ ಬಿಡಲಾಗಿದೆ. ಶಾಸಕರು ಯಾವ ರೈತನಿಗೆ ಶಿಫಾರಸು ಪತ್ರ ನೀಡುತ್ತಾರೆಯೋ ಅವರಿಗೆ ಯೋಜನೆ ನೀಡಲು ಅಧಿಕಾರಿಗಳು ಮುಂದಾಗುತ್ತಾರೆ. ಆದರೆ ಪ್ರಸಕ್ತ ವರ್ಷ ಸರ್ಕಾರ ಪಶುಭಾಗ್ಯ ಯೋಜನೆ ಫ‌ಲಾನುಭವಿಗಳ ಸಂಖ್ಯೆ ಕಡಿತ ಮಾಡಿರುವುದರಿಂದ ಶಾಸಕರಿಗೆ ಪೀಕಲಾಟ ಉಂಟಾಗಿದೆ.

ಪ್ರಸಕ್ತ ವರ್ಷದ ಯೋಜನೆ: ಪಶುಭಾಗ್ಯ ಯೋಜನೆಯಲ್ಲಿ ಮೇಕೆ- ಕುರಿಗಳನ್ನು ಪಡೆಯಲು ಸಾಮಾನ್ಯ ಮಹಿಳೆ 15 ಮಂದಿ ಫ‌ಲಾನುಭವಿಗಳು ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರಕ್ಕೆ ಮೂರು, ಹೊಳೆನರಸೀಪುರ ಕ್ಷೇತ್ರದಲ್ಲಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಇದೇ ರೀತಿ ಹಸುಗಳು ಐದು ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರಕ್ಕೆ, ಒಂದು ಹೊಳೆನರಸೀಪುರ ಕ್ಷೇತ್ರಕ್ಕೆ, ಎಸ್‌ಸಿ-ಎಸ್‌ಟಿ ಮಹಿಳೆಯರಿಗೆ ಕುರಿ ಮೇಕೆ ಏಳು-ಒಂದು, ಹಸು ಮೂರು-ಒಂದು ಫ‌ಲಾನುಭವಿಗಳ ಆಯ್ಕೆ ಮಾಡಬೇಕಿದೆ.

Advertisement

ಆರ್‌ಕೆವಿವೈ ಸ್ಥಗಿತ: ರಾಜ್ಯದಲ್ಲಿ ಪಶುಭಾಗ್ಯ ಯೋಜನೆ ಫ‌ಲಾನುಭವಿಗಳ ಸಂಖ್ಯೆ ಕಡಿಮೆ ಆಗಲು ಕೇಂದ್ರ ಸರ್ಕಾರದ ಯೋಜನೆಯಾಗಿರುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಸಂಪೂರ್ಣವಾಗಿ ಪ್ರಸಕ್ತ ವರ್ಷ ನಿಲ್ಲಿಸಿದ್ದಾರೆ. ಇದರಿಂದ ಕೇಂದ್ರದಿಂದ ಹಣ ಸಂದಾಯವಾಗುತ್ತಿಲ್ಲ ರಾಜ್ಯದಲ್ಲಿ ಈ ಯೋಜನೆಗೆ ವೆಚ್ಚ ಮಾಡಲು ನಿಗದಿ ಆಗಿರುವ ಹಣದಲ್ಲಿ ಮಾತ್ರ ಯೋಜನೆ ರೈತರಿಗೆ ತಲುಪಬೇಕಿದೆ. ಹೀಗಾಗಿ ಫ‌ಲಾನುಭವಿಗಳ ಸಂಖ್ಯೆ ಕಡಿಮೆಯಾಗಿದೆ.

ಯೋಜನೆ ಉದ್ದೇಶ: ಪಶುಭಾಗ್ಯ ಯೋಜನೆ ಕೃಷಿಯೇತರ ಚಟುವಟಿಕೆಗೆ ಪ್ರೋತ್ಸಾಹಿಸಲು ಜಾರಿ ಮಾಡಲಾಗಿದೆ. ಕೃಷಿಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯಧನ ರೂಪದಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಕೋಳಿ ಖರೀದಿ ಮಾಡಿ, ಇಲಾಖೆಯಿಂದ ವಿತರಣೆ ಮಾಡಲಾಗುತ್ತದೆ. ಕೃಷಿ ಜೊತೆಗೆ ಹೈನುಗಾರಿಕೆಗೆ ಆದ್ಯತೆ ನೀಡುವುದು ಯೋಜನೆಯ ಮುಖ್ಯ ಉದ್ದೇಶ. ಆಯ್ಕೆಯಾದ ಎಸ್‌ಸಿ, ಎಸ್‌ಟಿ ಫ‌ಲಾನುಭವಿಗಳಿಗೆ ಶೇ.90 ಸಹಾಯಧನ, ಸಾಮಾಜ್ಯ ವರ್ಗದವರಿಗೆ ಶೇ.50 ಸಹಾಯಧನ ನೀಡಲಾಗುತ್ತದೆ.

ಸಾವಿರಾರು ಅರ್ಜಿಗಳು ಮೂಲೆ ಗುಂಪು: ಯೋಜನೆ ಪ್ರಾರಂಭವಾದ ವರ್ಷ ಎರಡು ಸಾವಿರ ಮಂದಿ ಅರ್ಜಿ ನೀಡಿದರೂ ಅಂದು 200 ಮಂದಿ ಫ‌ಲಾನುಭವಿಗಳಿಗೆ ಯೋಜನೆ ತಲುಪಿತು. ನಂತರದ ವರ್ಷದಲ್ಲಿ ಒಂಧೂವರೆ ಸಾವಿರ ಹೀಗೆ ಪ್ರತಿ ವರ್ಷವೂ ಸಾವಿರಾರು ಅರ್ಜಿಗಳು ಪಶು ಇಲಾಖೆ ಕಚೇರಿ ತಲುಪುತ್ತಿವೆ. ಬೇಡಿಕೆಗೆ ತಕ್ಕಂತೆ ಸರ್ಕಾರ ಫ‌ಲಾನುಭವಿಗಳ ಸಂಖ್ಯೆ ಹೆಚ್ಚಿಸದೆ ವರ್ಷದಿಂದ ವರ್ಷಕ್ಕೆ ಯೋಜನೆ ಫ‌ಲಾನುಭವಿಗಳನ್ನು ಕಡಿತ ಮಾಡುತ್ತಿರುವುದರಿಂದ ಕಚೇರಿಯಲ್ಲಿ ಕನಿಷ್ಠ ನಾಲ್ಕು ಸಾವಿರ ಅರ್ಜಿಗಳು ಧೂಳು ಹಿಡಿಯುತ್ತಿವೆ.

ಚರ್ಚೆ ನಡೆಸುವೆ: ಪಶುಭಾಗ್ಯ ಯೋಜನೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಕೃಷಿ ಜೊತೆಯಲ್ಲಿ ಹೈನುಗಾರಿಕೆ ಮಾಡಲು ಹಾಗೂ ಕುರಿ, ಮೇಕೆ ಸಾಕಣೆ ಮಾಡಿ ಹಣ ಸಂಪಾದನೆಗೆ ಉತ್ತಮ ಮಾರ್ಗವಾಗಿದೆ. ಸರ್ಕಾರ ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೆ ವರ್ಷಕ್ಕೆ 200 ರಿಂದ 300 ಫ‌ಲಾನುಭವಿಗಳಿಗೆ ತಲುಪುವಂತೆ ಯೋಜನೆ ರೂಪಿಸಬೇಕಿದೆ. ಪ್ರಸಕ್ತ ವರ್ಷ ಕಡಿಮೆ ಆಗಿರುವ ಬಗ್ಗೆ ಪಶುಸಂಗೋಪನಾ ಮಂತ್ರಿ ಪಭು ಎಸ್‌.ಚೌಹಾಣ್‌ ಜೊತೆ ಚರ್ಚಿಸುತ್ತೇನೆಂದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದ್ದಾರೆ.

ಪಶುಭಾಗ್ಯ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದೆ. ಪ್ರಸಕ್ತ ವರ್ಷ ಬೆರಳೆಣಿಕೆಷ್ಟು ಮಂದಿಗೆ ನೀಡಬೇಕಿರುವುರಿಂದ ಬಹಳ ತೊಂದರೆ ಆಗುತ್ತಿದೆ. ಪ್ರತಿ ಹೋಬಳಿಗೆ ಕನಿಷ್ಠ 50 ನಿಗದಿ ಮಾಡಬೇಕಿದೆ.
-ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್‌ ಸದಸ್ಯರು ಹಾಸನ ಕ್ಷೇತ್ರ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next