Advertisement

ಬಾಯಾರಿಕೆ ನೀಗಿಸಿದ ಘಟಪ್ರಭಾ- ಕೃಷ್ಣೆ ಒಡಲು

04:11 PM Apr 28, 2022 | Team Udayavani |

ಬೀಳಗಿ: ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಅತಿಹೆಚ್ಚು ಹಳ್ಳಿಗಳು ಮುಳುಗಡೆಯಾದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಬೀಳಗಿ ತಾಲೂಕು, ಪ್ರತಿವರ್ಷ ಎದುರಿಸುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಈ ಬಾರಿ ಕೊಂಚ ಬ್ರೆಕ್‌ ಬಿದ್ದಿದೆ.

Advertisement

ಹೌದು, ತಾಲೂಕಿನ ಪ್ರತಿಯೊಂದು ಹಳ್ಳಿ, ಪಟ್ಟಣಕ್ಕೆ ಕೃಷ್ಣೆ, ಘಟಪ್ರಭಾ ನದಿಯ ಒಡಲು ಕುಡಿಯುವ ನೀರಿನ ಬಾಯಾರಿಕೆ ನೀಗಿಸಿವೆ. ಕೆಲವು ವರ್ಷಗಳ ಹಿಂದೆ ಹಲವಾರು ಬಾರಿ ಬೇಸಿಗೆಯಲ್ಲಿ ಎರಡು ನದಿಗಳು ಇದ್ದರೂ ತಾಲೂಕಿನ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಸ್ಥಿತಿ-ಸಮಸ್ಯೆಗಳಿಲ್ಲ.

ಮನೆ ಮನೆಗೂ ನಲ್ಲಿ ಸಂಪರ್ಕ: ಕೇಂದ್ರ ಮತ್ತು ರಾಜ್ಯ ಸರಕಾರದ ಜಲ-ಜೀವನ ಮಿಷನ್‌ ಮತ್ತು ಜಲಧಾರೆ ಯೋಜನೆಗಳ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಮನೆ ಮನೆಗೆ ನಲ್ಲಿ ಅಳವಡಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವ ಸಾಧ್ಯತೆಗಳಿಲ್ಲ.

ಈ ಯೋಜನೆಗಳ ಅಡಿಯಲ್ಲಿ ತಾಲೂಕಿನ 18 ಗ್ರಾಮಗಳಿಗೆ 24 ಗಂಟೆಯೂ ನೀರು ಪೂರೈಕೆಯಾಗುತ್ತಿದೆ. ಈ ವರ್ಷ ಇನ್ನೂ 23 ಹಳ್ಳಿಗಳಿಗೆ ಈ ಯೋಜನೆ ವಿಸ್ತರಿಸಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 83 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಹೆರಕಲ್‌, ಅರಕೇರಿ, ತೋಳಮಟ್ಟಿ, ತೆಗ್ಗಿ, ಮೂಂಡಗನೂರ, ಸೊನ್ನ ಸೆರಿದಂತೆ ಒಟ್ಟು 6 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಚಾಲ್ತಿಯಲ್ಲಿವೆ. ಕೃಷ್ಣಾ ಹಾಗೂ ಘಟಪ್ರಭಾ ನದಿಯ ಮೂಲದಿಂದ ತಾಲೂಕಿನ ಗ್ರಾಮಗಳಿಗೆ ಸಾಕಷ್ಟು ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಘಟಪ್ರಭೆಗೆ ಬೇಕಿದೆ ನೀರು: ಸದ್ಯಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಅಭಾವವಿಲ್ಲ. ಘಟಪ್ರಭಾ ನದಿಯಲ್ಲಿ ಲಭ್ಯವಿರುವ ನೀರನ್ನು ಏಪ್ರಿಲ್‌ ಅಂತ್ಯದವರೆಗೆ ಪೂರೈಸಬಹುದಾಗಿದೆ. ನಂತರ ನೀರಿನ ಪ್ರಮಾಣ ಕಡಿಮೆ ಆಗುವುದರಿಂದ ಈ ನದಿಯ ನೀರನ್ನು ಅವಲಂಬಿಸಿರುವ ಲಭ್ಯವಿರುವ ಕೊಳವೆ ಬಾವಿ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ಒಂದು ವೇಳೆ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಈಗಾಗಲೇ ಗುರುತಿಸಲಾದ ಖಾಸಗಿ ಕೊಳವೆ ಬಾವಿ ಮೂಲಕ ಕುಡಿಯುವ ನೀರನ್ನು ಪೂರೈಸಲು ಕ್ರಮ ವಹಿಸಲಾಗುವುದು. ಖಾಸಗಿ ಕೊಳವೆ ಬಾವಿಗಳು ದೊರೆಯದೇ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುವುದು. ಸದ್ಯಕ್ಕೆ ತಾಲೂಕಿನಲ್ಲಿ ಯಾವ ಗ್ರಾಮಗಳಿಗೂ ಖಾಸಗಿ ಕೊಳವೆ ಬಾವಿ ಮೂಲಕ ಅಥವಾ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ “ಉದಯವಾಣಿ’ಗೆ ತಿಳಿಸಿದರು.

Advertisement

ಸಹಾಯವಾಣಿ ಸ್ಥಾಪನೆ: ತಾಲೂಕಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲ್ತಿಯಲ್ಲಿದ್ದು, ಒಂದು ವೇಳೆ ರಿಪೇರಿ ಉಂಟಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಸಹಾಯವಾಣಿ ನಿರ್ಮಾಣ ಸ್ಥಾಪಿಸಲಾಗುವುದು. ಗ್ರಾಮಸ್ಥರ ದೂರು ಬಂದ ಎರಡು ದಿನಗಳ ಒಳಗಾಗಿ ತ್ವರಿತವಾಗಿ ದುರಸ್ತಿಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.

ಪಟ್ಟಣಕ್ಕೆ ನೀರಿನ ಸಮಸ್ಯೆ: ಇಡೀ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಉದ್ಭವಿಸುವ ಸಾಧ್ಯತೆ ಇಲ್ಲ. ಆದರೆ, ತಾಲೂಕು ಕೇಂದ್ರವಾದ ಬೀಳಗಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಕೊಂಚ ಹೆಚ್ಚಾಗಿಯೇ ಇದೆ. ಒಟ್ಟು 18 ವಾರ್ಡ್‌ ಹೊಂದಿರುವ ಬೀಳಗಿ ಪಟ್ಟಣಕ್ಕೆ ಗುಳಬಾಳ ಜಾಕ್‌ ವೆಲ್‌ನಿಂದ ನೀರನ್ನು ಎತ್ತಿ ತೆಗ್ಗಿಯ ನೀರು ಶುದ್ಧೀಕರಣ ಘಟಕಕ್ಕೆ ತರಲಾಗುತ್ತದೆ. ಅಲ್ಲಿಂದ ಪಟ್ಟಣದ ಗಾಂಧಿ ನಗರದಲ್ಲಿನ 10 ಲಕ್ಷ ಲೀಟರ್‌ ಸಾಮರ್ಥ್ಯದ ಮತ್ತು ಸಿದ್ದೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ 4 ಲಕ್ಷ ಲೀಟರ್‌ ಸಾರ್ಥ್ಯದ ನೀರಿನ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ಟ್ಯಾಂಕ್‌ಗಳು ಭರ್ತಿಯಾಗಲು 14 ಗಂಟೆ ಬೇಕು. ಪಟಣದ ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ 14 ಲಕ್ಷ ಲೀಟರ್‌. ಆದರೆ ಪಟ್ಟಣದಲ್ಲಿ ಅಂದಾಜು 20 ಸಾವಿರ ಜನಸಂಖ್ಯೆ ಇದೆ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಒಂದು ದಿನಕ್ಕೆ ಸುಮಾರು 27 ಲಕ್ಷ ಲೀಟರ್‌ ನೀರು ಬೇಕು. ಹೀಗಾಗಿ ಒಂದು ವಾರಕ್ಕೊಮ್ಮೆ ಇಲ್ಲಿನ ನಲ್ಲಿಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣದಲ್ಲಿ ಒಟ್ಟು 7 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವೂ ಕೂಡಾ ಸಮರ್ಪಕವಾಗಿ ಬಳಕೆಯಾ ಗುತ್ತಿಲ್ಲ. ಒಂದೆಡೆ ಅಧಿಕಾರಿಗಳ ದಿವ್ಯ ನಿರ್ಲಕ್ಷವಾದರೆ, ಇನ್ನೊಂದೆಡೆ ಸಾರ್ವಜನಿಕರ ಸಹಕಾರದ ಕೊರತೆಯಿಂದ ಘಟಕಗಳಲ್ಲಿನ ಸಾಮಗ್ರಿಗಳು ಹಾಳಾಗುತ್ತಿವೆ ಎಂಬ ದೂರು ಕೇಳಿ ಬಂದಿದೆ.

ಪಟ್ಟಣಕ್ಕೆ 20 ವರ್ಷಗಳ ಹಿಂದೆ ಅಳವಡಿಸಿದ ಪೈಪ್‌ಗ್ಳ ಮೂಲಕವೆ ನೀರು ಸರಬರಾಜು ಮಾಡುತ್ತಿರುವುದರಿಂದ ಈಗಿನ ಜನ ಸಂಖೆಗೆ ಅನುಗುನವಾಗಿ ಸಮರ್ಪಕವಾಗಿ ನೀರು ಒದಗಿಸಲಾಗುತ್ತಿಲ್ಲ. ಆದರೆ ಮುಂಬರುವ 2-3 ತಿಂಗಳಲ್ಲಿ ನಿರಂತರ 24 ಗಂಟೆ ನೀರು ಒದಗಿಸುವ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

   -ಕಿರಣ ನಾಯ್ಕರ

Advertisement

Udayavani is now on Telegram. Click here to join our channel and stay updated with the latest news.

Next