Advertisement

ಕುಡಿಯಲು ಇಲ್ಲದ ಕಾವೇರಿ, ಬಳಕೆಗೆ

11:39 AM Apr 07, 2017 | Team Udayavani |

ಪಾಲಿಕೆ ವ್ಯಾಪ್ತಿಯಲ್ಲಿ ಜಯನಗರ, ಬಸವನಗುಡಿಯಂಥ ಹಳೇ ಪಟ್ಟಣಗಳೂ ಇವೆ. ದಾಸರಹಳ್ಳಿ, ಜಕ್ಕೂರು, ದೊಡ್ಡಬೊಮ್ಮಸಂದ್ರದಂಥ ಹಳ್ಳಿಗಳೂ ಸೇರಿವೆ. ಹೊಸದಾಗಿ ಪಾಲಿಕೆಗೆ ಸೇರಿದ ಹಳ್ಳಿಗಳಿಗೆ‌ ಇನ್ನೂ ಕಾವೇರಿ ನೀರು ಕುಡಿಯಲು ಸಿಕ್ಕಿಲ್ಲ. ಆದರೆ, ಹಳೇ ಬೆಂಗಳೂರಿಗೆ ಅಡಚಣೆ ಇಲ್ಲದೇ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಕುಡಿಯಲು, ಬಳಸಲು ಬಳಸಲಾಗುತ್ತಿದೆ. ಇದು ಪಾಲಿಕೆ ವ್ಯಾಪ್ತಿಯಲ್ಲಿನ ನೀರಿನ ವೈರುಧ್ಯಕ್ಕೆ ಸಾಕ್ಷಿ 

Advertisement

ಬೆಂಗಳೂರು: ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ ಬಹುತೇಕ ಪ್ರದೇಶಗಳ ಜನ ಅಪರೂಪಕ್ಕೂ ಕಾವೇರಿ ನೀರಿನ ರುಚಿ ಕಂಡಿಲ್ಲ. ಆದರೆ, ನಗರದ ಕೇಂದ್ರ ಭಾಗದ ಜನರಿಗೆ ಕುಡಿಯಲು ಮಾತ್ರವಲ್ಲದೇ ಸರ್ವ ಕಾರ್ಯಕ್ಕೂ ಕಾವೇರಿ ನೀರು ಬಳಕೆಯಾಗುತ್ತಿದೆ. ಇದು ಬಿಬಿಎಂಪಿ ವ್ಯಾಪ್ತಿಯಲ್ಲೇ ಇರುವ ಪ್ರದೇಶಗಳ ನಡುವಿನ ವೈರುಧ್ಯದ ಸ್ಪಷ್ಟ ನಿದರ್ಶನ. 

ಪಾಲಿಕೆ ವ್ಯಾಪ್ತಿಯಲ್ಲಿ ಹಲವು ದಶಕಗಳಿಂದ ಇರುವ ಜಯನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಶಾಂತಿನಗರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿಲ್ಲ. ಎರಡು ದಿನಕ್ಕೊಮ್ಮೆ ಕಾವೇರಿ ನೀರು ಮನೆ ಮನೆಗಳಿಗೂ ಹರಿಯುವುದರಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲವೆನ್ನಬಹುದು.

ಆದರೆ, ಜಯನಗರ, ಬಸವನಗುಡಿ, ಚಾಮರಾಜಪೇಟೆಯಂತಹ ಪ್ರತಿಷ್ಠಿತ ಬಡಾವಣೆಗಳಲ್ಲಿ ಕುಡಿಯಲು, ಅಡುಗೆ, ಗೃಹ ಬಳಕೆ ಮಾತ್ರವಲ್ಲದೇ ವಾಹನ ತೊಳೆಯಲು, ಕೈತೋಟ, ಮೆಟ್ಟಿಲು, ಗೇಟ್‌ ಸ್ವತ್ಛಗೊಳಿಸಲು ಕಾವೇರಿ ನೀರನ್ನೇ ಬಳಕೆ ಮಾಡಲಾಗುತ್ತಿದೆ.

ಕುಡಿಯುವ ಉದ್ದೇಶಕ್ಕೆ ಕಾವೇರಿ ನೀರನ್ನು ಬಳಸಬೇಕು ಎಂದು ಪಾಲಿಕೆ ಮತ್ತು ಜಲಮಂಡಳಿ ಹೇಳುತ್ತದಾದರೂ ಪಾಲನೆಯಾಗುತ್ತಿಲ್ಲ. ದಿನಬಿಟ್ಟು ದಿನ ನೀರು ಬರುತ್ತಿರುವುದರಿಂದ ಸಂಪುಗಳಲ್ಲಿ ತುಂಬಿಟ್ಟುಕೊಂಡು ಅದನ್ನೇ ಎಲ್ಲ ಕಾರ್ಯಕ್ಕೂ ಬಳಸಲಾಗುತ್ತಿದೆ. 

Advertisement

“ಅಯ್ಯೋ…ನೀರು ಕುಡಿಯೋಕು ಬೇಕು. ಬಳಕೆಗೂ ಬೇಕು. ಕಾವೇರಿ ನೀರು ಎಂಬ ಕಾರಣಕ್ಕೆ ಮನೆ ಬಾಗಿಲು ತೊಳೆಯೋಕೆ ಬಳಸಬಾರದೆ. ನಮ್ಮ ಮನೆಯಲ್ಲಿ ಬೋರ್‌ವೆಲ್‌ ಇಲ್ಲ. ಅದಕ್ಕೆ ಎಲ್ಲದಕ್ಕೂ ಕಾವೇರಿ ನೀರನ್ನೇ ಬಳಸುತ್ತೇವೆ. ಪಾಲಿಕೆಯವರೇನು ಅದಕ್ಕೆ ಬಳಸಬೇಡಿ, ಇದಕ್ಕೆ ಬಳಸಬೇಡಿ ಅಂತ ರೂಲ್ಸೇನು ಮಾಡಿಲ್ವಲ್ಲ’ ಎಂದು ಪ್ರಶ್ನಿಸುತ್ತಾರೆ ಬಸವನಗುಡಿಯ ಸುಕನ್ಯಾ ರಾಮೇಗೌಡ.

ಶುದ್ಧ ನೀರಿನ ಘಟಕಕ್ಕೆ ಬೇಡಿಕೆ: ಈ ಮಧ್ಯೆ, ಕಾವೇರಿ ನೀರು ಸಿಕ್ಕರೆ ಸಾಕು ಎಂಬ ಸ್ಥಿತಿ ಇರುವಾಗ ಪ್ರದೇಶಗಳಲ್ಲಿ ಜಲಮಂಡಳಿ ಪೂರೈಸುವ ನೀರೂ ಶುದ್ಧವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಜಲಮಂಡಳಿ ಪೂರೈಕೆ ಮಾಡುವ ನೀರು ಶುದ್ಧವಾಗಿಲ್ಲ ಎಂದು ಕುಡಿಯಲು ಹಾಗೂ ಅಡುಗೆಗೆ ಬಳಸಲು ಹಿಂದೇಟು ಹಾಕುವವರೂ ಇದ್ದಾರೆ. ಇವರು, ಫಿಲ್ಟರ್‌ ನೀರಿನ ಕ್ಯಾನ್‌ಗಳನ್ನು ಹಣ ಕೊಟ್ಟು ಖರೀದಿಸಿ ಬಳಸುತ್ತಿದ್ದಾರೆ. 

ಜಯನಗರ 4ನೇ ಬ್ಲಾಕ್‌ ನಿವಾಸಿ ಜಿತೇಂದ್ರರ್‌ ಜೈನ್‌ ಹೇಳುವಂತೆ, “ನೀರಿನ ಸಮಸ್ಯೆ ಇಲ್ಲ. ದಿನಬಿಟ್ಟು ದಿನ ಕಾವೇರಿ ನೀರು ಬರುತ್ತದೆ. ಕೆಲವೊಮ್ಮೆ ಮಣ್ಣು ಮಿಶ್ರಿತ ನೀರು ಕೂಡ ಬರುವುದುಂಟು. ಬದುಕುವುದಕ್ಕೆ ನೀರು ಕುಡಿಯುವುದೇ ಹೊರತು… ಸಾಯುವುದಕ್ಕಲ್ಲ. ಆದ್ದರಿಂದ ಕ್ಯಾನ್‌ ನೀರು ಬಳಸುತ್ತೇವೆ,” ಎನ್ನುತ್ತಾರೆ. 

ನಾಲ್ಕೈದು ದಿನಗಳಿಂದ ನೀರೇ ಬಂದಿಲ್ಲ
ಹೊಂಬೇಗೌಡ ನಗರದ ಸಿದ್ದಾಪುರ ವಾರ್ಡ್‌ನ ಕೊಳೆಗೇರಿಯದ್ದು ವಿಭಿನ್ನ ಸಮಸ್ಯೆ. ಕಾವೇರಿ ನೀರಿನ ಸಂಪರ್ಕವಿದ್ದರೂ, ಕಳೆದ ನಾಲ್ಕೈದು ದಿನಗಳಿಂದ ಇಲ್ಲಿ ನೀರೇ ಬಂದಿಲ್ಲ ಎನ್ನುತ್ತಾರೆ ನಾಗರಿಕರು. ಈ ಕುರಿತು ನಾಲ್ಕೈದು ಬಾರಿ ಜಲಮಂಡಳಿಗೆ ದೂರು ನಾಗರಿಕರು ದೂರು ನೀಡಿದ್ದಾರೆ. ಆದರೆ, ವಿದ್ಯುತ್‌ ಕಡಿತ, ನೀರಿನ ಸಂಗ್ರಹವಿಲ್ಲ ಎಂದು ಜಲಮಂಡಳಿ ಅಕಾರಿಗಳು ನೆಪ ಹೇಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.  

ಹಲವಾರು ವರ್ಷಗಳಿಂದ ನೀರುಣಿಸಿದ್ದ ಕೊಳವೆಬಾವಿಗಳು ಕೆಟ್ಟು ನಿಂತಿವೆ. ಒಂದೆರಡು ಸಲ ದುರಸ್ತಿ ಮಾಡಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಹೊಸದಾಗಿ ಕೊಳವೆ ಬಾವಿ ಕೊರೆಸಿದ್ದೇವೆ. ಕಾವೇರಿ ನೀರಿಗಾಗಿ ಪೈಪ್‌ಲೈನ್‌ ಸಂಪರ್ಕ ನೀಡಲಾಗಿದೆ. ಆದರೆ, ಜಲಮಂಡಳಿಯಿಂದ ನೀರು ಮಾತ್ರ ಹರಿದಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಈ ಕೊಳೆಗೇರಿಯಲ್ಲಿ ಸುಮಾರು 550 ಮನೆಗಳಿದ್ದು, ಅಂದಾಜು 3 ಸಾವಿರಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಇಲ್ಲಿ ಈ ಹಿಂದೆ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಬರುತ್ತಿತ್ತು. ಕಳೆದೆರಡು ವಾರಗಳಿಂದ ಮೂರ್‍ನಾಲ್ಕು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ.

ಕೆಲವು ಮನೆಗಳಲ್ಲಿ ಕಾವೇರಿ ನೀರಿನ ಸಂಪರ್ಕವಿಲ್ಲದೆ ಸಾರ್ವಜನಿಕ ಕೊಳಾಯಿಯೇ ಗತಿ.  ಆ ಕೊಳಾಯಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಎಂಟತ್ತು ಬಿಂದಿಗೆ ನೀರು ಹಿಡಿಯುವುದರಲ್ಲಿ ನೀರು ನಿಂತು ಹೋಗಿರುತ್ತದೆ. ಮತ್ತೆ ನೀರಿಗಾಗಿ ಮೂರು ದಿನ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಅಲವತ್ತುಕೊಂಡಿದ್ದಾರೆ. 

ಬಟ್ಟೆ ತೊಳೆಯುವುದಕ್ಕೆ ಮೊದಲು ಕೆಂಪಾಂಬುದಿ ಕೆರೆಗೆ ಹೋಗುತ್ತಿದ್ದೆವು. ಈಗ ಅಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ಹತ್ತಿರ ಹೋಗಲು ಕೂಡ ಅಸಹ್ಯವಾಗುತ್ತೆ. ಬೋರ್‌ ನೀರು ಬಳಸಿದರೆ ಕೊಳೆ ಹೋಗೋಲ್ಲ. ಆದ್ದರಿಂದ ಎರಡು ದಿನಕ್ಕೊಂದು ಸಲ ನೀರು ಬರೋದ್ರಿಂದ ಕಾವೇರಿ ನೀರು ಬಳಸಿ ಬಟ್ಟೆ ತೊಳೆಯುತ್ತೇವೆ.
-ಶ್ರೀನಿವಾಸ, ದೋಬಿಘಾಟ್‌, ಗವಿಪುರ

ಅಡುಗೆ ಮತ್ತು ಕುಡಿಯಲು ಕಾವೇರಿ ನೀರು ಬಳಸಿ ಎಂದು ಹೇಳುತ್ತೇವೆ. ಬೇರೆ ಉದ್ದೇಶಗಳಿಗೆ ಸಾಧ್ಯವಾದಷ್ಟು ನೀರಿನ ದುಂದುವೆಚ್ಚ ಕಡಿಮೆ ಮಾಡುವಂತೆ ಹೇಳಬಹುದೇ ಹೊರತು, ಇತರೆ ಕಾರ್ಯಗಳಿಗೆ ಕಾವೇರಿ ನೀರು ಬಳಸಬಾರದು ಎಂಬ ಯಾವುದೇ ನಿಯಮ ಮಾಡಿಲ್ಲ.
-ರಮಣಗೌಡ, ಕಾರ್ಯಪಾಲಕ ಅಭಿಯಂತರ (ಕಾವೇರಿ ವಿಭಾಗ-4)

* ಸಂಪತ್‌ ತರೀಕೆರೆ 

Advertisement

Udayavani is now on Telegram. Click here to join our channel and stay updated with the latest news.

Next