Advertisement

ಕುಂದಾಪುರ-ಆನಗಳ್ಳಿ-ಬಸ್ರೂರು ಮಾರ್ಗಕ್ಕಿಲ್ಲ ಸಾರ್ವಜನಿಕ ಸಂಚಾರ ಸಾರಿಗೆ

02:45 AM Nov 13, 2018 | Team Udayavani |

ಆನಗಳ್ಳಿ: ಎರಡು ಪ್ರಮುಖ ಪಟ್ಟಣಗಳಾದ ಬಸ್ರೂರು ಹಾಗೂ ಕುಂದಾಪುರವನ್ನು ಬೆಸೆಯುವ ಹತ್ತಿರದ ಮಾರ್ಗವಾದ ಬಸ್ರೂರು – ಆನಗಳ್ಳಿ – ಸಂಗಮ್‌ ರಸ್ತೆಯು ಕಿರಿದಾಗಿರುವುದು ಹಾಗೂ ಹೊಂಡ – ಗುಂಡಿಗಳಿಂದಾಗಿ ಬಸ್‌ ಆರಂಭಕ್ಕೆ ತೊಡಕಾಗಿ ಪರಿಣಮಿಸಿದೆ.

Advertisement

ಬಹುದಿನಗಳ ಬೇಡಿಕೆ
ಕುಂದಾಪುರದಿಂದ ಬಸ್ರೂರಿಗೆ ತೆರಳಬೇಕಾದರೆ ಆನಗಳ್ಳಿ ಹತ್ತಿರದ ಮಾರ್ಗವಾಗಿದೆ. ಅದರಲ್ಲೂ ಆನಗಳ್ಳಿಯಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಈ ಗ್ರಾಮ ಎರಡೂ ಪ್ರಮುಖ ಪಟ್ಟಣಗಳಿಗೆ ಸಮಾನ ಅಂತರದಲ್ಲಿದೆ. ಬಸ್‌ ವ್ಯವಸ್ಥೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದ್ದು, ಇಲ್ಲಿನ ಇಕ್ಕಟ್ಟಾದ ರಸ್ತೆಯೇ ಸಮಸ್ಯೆಯಾಗಿದೆ.

ಹದಗೆಟ್ಟ ರಸ್ತೆ
ಇನ್ನೂ ಈ ರಸ್ತೆ ಕೂಡ ಸಂಪೂರ್ಣ ಹದಗೆಟ್ಟು ಹೋಗಿದ್ದು, ಹೊಂಡ – ಗುಂಡಿಗಳಿಂದ ಕೂಡಿದೆ. ಕಾರಣ ಈ ಮಾರ್ಗದಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಸಮಸ್ಯೆ
ಆನಗಳ್ಳಿಯಿಂದ ಬಸ್ರೂರು ಹಾಗೂ ಕುಂದಾಪುರ ಪೇಟೆಗೆ ತೆರಳುವ ಶಾಲಾ- ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು, ರಿಕ್ಷಾ ಅಥವಾ ಇನ್ನಿತರ ವಾಹನಗಳ ಮೂಲಕವೇ ತೆರಳ ಬೇಕಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು 4-5 ಕಿ.ಮೀ. ನಡೆದುಕೊಂಡೇ ಕಾಲೇಜಿಗೆ ತೆರಳುತ್ತಾರೆ. ಕುಂದಾಪುರ – ಸಂಗಮ್‌ – ಆನಗಳ್ಳಿ- ಬಸ್ರೂರು ಮಾರ್ಗವಾಗಿ ಬಸ್‌ ಆರಂಭಿಸಿದರೆ ನೂರಾರು ವಿದ್ಯಾರ್ಥಿಗಳ ಜತೆಗೆ ನೂರಾರು ಮಂದಿಗೆ ಪ್ರಯೋಜನವಾಗಲಿದೆ. 

ಹತ್ತಿರದ ಮಾರ್ಗ
ಬಸ್ರೂರಿನಿಂದ ಕುಂದಾಪುರಕ್ಕೆ ಮೂಡ್ಲಕಟ್ಟೆ – ಕೋಣಿ ಮೂಲಕವಾಗಿ ರಾಜ್ಯ ಹೆದ್ದಾರಿಯಲ್ಲಿ ಸುಮಾರು 8 ಕಿ.ಮೀ. ದೂರವಿದೆ. ಅದೇ ಆನಗಳ್ಳಿ ಮಾರ್ಗವಾಗಿ ಕೇವಲ 5 ಕಿ.ಮೀ. ಅಷ್ಟೇ ದೂರವಾಗಲಿದೆ. ಅಂದರೆ ಸುಮಾರು 3 ಕಿ.ಮೀ. ಹತ್ತಿರವಾಗಲಿದೆ. ಅದಲ್ಲದೆ ಬಸ್ರೂರಿನಿಂದ ತಲ್ಲೂರು, ಹೆಮ್ಮಾಡಿ, ಬೈಂದೂರು ಕಡೆಗೆ ತೆರಳುವುದಾದರೂ ಇದು ಹತ್ತಿರದ ಮಾರ್ಗ. 

Advertisement

ಜಿ.ಪಂ. ಸಭೆಯಲ್ಲಿ ಪ್ರಸ್ತಾಪ
ಆನಗಳ್ಳಿ ಜನರಿಗೆ ಕಿರಿದಾದ ರಸ್ತೆಯಿಂದಾಗಿ ಬಸ್‌ ಆರಂಭಕ್ಕೆ ತೊಂದರೆಯಾಗುತ್ತಿರುವುದರ ಕುರಿತು ನನ್ನ ಗಮನಕ್ಕೆ ಬಂದಿದೆ. ಈ ವಿಚಾರವನ್ನು ನಾನು ಮುಂದಿನ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿ, ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು. 
– ಲಕ್ಷ್ಮೀ ಮಂಜು ಬಿಲ್ಲವ,  ಸ್ಥಳೀಯ ಜಿ.ಪಂ. ಸದಸ್ಯರು

ಬಸ್‌ ಇಲ್ಲದೆ ಸಮಸ್ಯೆ
ಈ ಮಾರ್ಗವಾಗಿ ಬಸ್‌ ಆರಂಭಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಯಾಗಿದೆ. ಕಿರಿದಾದ ಸೇತುವೆಯಿತ್ತು. ಅದನ್ನು ಕೂಡ 2 ವರ್ಷಗಳ ಹಿಂದೆ ಅಗಲೀಕರಣಗೊಳಿಸಲಾಗಿದೆ. ಆದರೆ ಬಸ್ರೂರಿನಿಂದ ಆನಗಳ್ಳಿ, ಕುಂದಾಪುರದವರೆಗೂ ಇಕ್ಕಟ್ಟಾದ ರಸ್ತೆ ಇರುವುದರಿಂದ ಬಸ್‌ ಆರಂಭಕ್ಕೆ ಸಮಸ್ಯೆಯಾಗಿದೆ. ಆನಗಳ್ಳಿಯ ಜನರ ಈ ಸಮಸ್ಯೆಯನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿದಲ್ಲಿ ರಸ್ತೆ ಅಗಲೀಕರಣವಾಗಬಹುದು. ಆಗ ಬಸ್‌ ಸಂಚಾರವೂ ಆರಂಭವಾಗುತ್ತದೆ.
– ಆನಂದ ಬಳ್ಕೂರು, ನಿತ್ಯ ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next