Advertisement

ಮನಸಿನ ಗಾಯಕ್ಕೆ ಮದ್ದಿಲ್ಲ, ಆದರೆ ಬದುಕಲು ಸಾಕಷ್ಟು ಕಾರಣಗಳಿವೆ!

06:00 AM Dec 18, 2018 | |

ಎಷ್ಟೇ ನೋವಾದರೂ ಇದು ನನ್ನ ಬದುಕಿಗಿಂತ ದೊಡ್ಡದಲ್ಲ, ನಾನು ಬದುಕಬೇಕು, ನನಗೆ ನೋವು ಕೊಟ್ಟವರಿಗೆ ಬದುಕಿ ತೋರಿಸಬೇಕು ಎಂಬ ನಿರ್ಧಾರವಷ್ಟೇ ನಮ್ಮ ಕೈಹಿಡಿದು ಕೊನೆಯತನಕ ಮುನ್ನಡೆಸಬಲ್ಲದು. 

Advertisement

ಯಾರೇ ನಮ್ಮ ಜೀವನದಲ್ಲಿ ಬಂದು ಹೋದರೂ ಕೊನೆಗೆ ನೋವಾಗುವುದು ಮನಸ್ಸಿಗೆ. ದೇಹಕ್ಕಾದ ಪೆಟ್ಟು ವಾಸಿ ಮಾಡಿಕೊಳ್ಳಬಹುದು, ಆದರೆ ಮನಸ್ಸಿಗಾದ ಗಾಯಗಳನ್ನು ಹೇಗೆ ವಾಸಿ ಮಾಡಿಕೊಳ್ಳುವುದು? ನಮ್ಮ ಮನಸ್ಸಿಗೆ ಗಾಯ ಮಾಡಿದವರನ್ನು ನಾವು ಮರೆತಿದ್ದೇವೆ ಎಂದು ಹೊರಗಿನಿಂದ ತೋರ್ಪಡಿಸಿಕೊಂಡರೂ ಒಳಗಿನ ನೋವು ಇದ್ದೇ ಇರುತ್ತದೆ. ಕಾಲಾಯ ತಸೆ¾„ ನಮಃ, ಕಾಲವೇ ಎಲ್ಲವನ್ನೂ ಕಲಿಸುತ್ತದೆ. ಮರೆಸುತ್ತದೆ ಎಂದು ಧೈರ್ಯಮಾಡಿ ಮುಂದೆ ಸಾಗುತ್ತೇವೆ. ಅದು ನಿಜವೇ. ಕಾಲ ಜೀವನದ ಪಾಠ ಕಲಿಸುತ್ತದೆ, ಆದರೆ ಮನಸ್ಸಿನೊಳಗೆ ಅಡಗಿರುವ ನೋವು ಕಾಲದ ಜೊತೆ ಸಾಯುವುದಿಲ್ಲ. ಅದು ಸಾಯುವುದು ನಾವು ಸತ್ತಾಗಲೇ. ನಾವು ನೋವನ್ನು ಎಷ್ಟೇ ಮರೆತಿದ್ದೇವೆಂದು ಸುಮ್ಮನಿದ್ದರೂ ಒಂದಲ್ಲಾ ಒಂದು ದಿನ ಮನಸ್ಸಿನೊಳಗೆ ತೊಳಲಾಟವನ್ನುಂಟು ಮಾಡುತ್ತದೆ. ಇಷ್ಟು ಹಿಂಸೆ ಕೊಡುವ ನೋವುಗಳಿಗೆ ಉತ್ತರವೇ ಇಲ್ಲವೇ ಅಂತ ಯೋಚಿಸಿದರೆ ಕೆಲವು ನೋವುಗಳಿಗೆ ಉತ್ತರ ಸಿಗುವುದು ಕಷ್ಟವೇ.

ನೋವುಗಳನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಂಡ ಅನೇಕರು ಮಾನಸಿಕ ರೋಗಿಗಳಾಗಿ ಟ್ರೀಟ್‌ಮೆಂಟ್‌ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೇರೆಯವರಿಗೂ ಹೇಳಿಕೊಳ್ಳದೆ ಒಳಗೊಳಗೆ ಕೊರಗುತ್ತಿದ್ದಾರೆ. ಕೆಲ ಮಾನಸಿಕ ರೋಗಿಗಳು ಬೇರೆಯವರ ಸಲಹೆಗಳನ್ನು ಸ್ವೀಕರಿಸುವುದಿಲ್ಲ. “ಅವರಿಗೇನು ಗೊತ್ತಾಗಬೇಕು ನನ್ನ ನೋವು? ನನ್ನ ಮನಸ್ಸಿನ ನೋವನ್ನು ಅವರಿಗೆ ವಿವರಿಸಿದರೂ ಅದು ಅವರಿಗೆ ಅರ್ಥವಾಗುವುದಿಲ್ಲ. ಸುಮ್ಮನೆ ಸಮಾಧಾನ ಮಾಡೋಕೆ ಬರ್ತಾರೆ. ಇಲ್ಲಾಂದ್ರೆ ನಾವೇನೋ ತಪ್ಪು ಮಾಡಿದ್ದೀವಿ ಅನ್ನೋ ಹಾಗೆ ನಮ್ಮನ್ನು ಇನ್ನೂ ನೋವಿಗೆ ತಳ್ತಾರೆ. ಜನರಿಗೆ ನಮ್ಮ ನೋವನ್ನು ಅರಿತುಕೊಳ್ಳುವ ಶಕ್ತಿಯೇ ಇಲ್ಲ. ನನ್ನ ಮನಸ್ಸಿನ ಕಷ್ಟ ನನ್ನೊಳಗೇ ಇದ್ದು ನನ್ನ ಜೊತೆಯೇ ಸಾಯಲಿ’ ಅಂತ ಎಲ್ಲವನ್ನೂ ಮುಚ್ಚಿಟ್ಟುಕೊಳ್ಳುತ್ತಾರೆ. 

ನಾನು ತುಂಬಾ ಸೂಕ್ಷ್ಮ ಅನ್ನೋದು ನೋವಿಗೆ ಎಕ್ಸ್‌ಕ್ಯೂಸ್‌ ಅಲ್ಲ, ಕೆಲವು ಸೂಕ್ಷ್ಮ ಜೀವಿಗಳು ಬಹಳ ಬೇಗ ಎಲ್ಲವನ್ನೂ ಮನಸ್ಸಿಗೆ ತೆಗೆದುಕೊಂಡು ತಮ್ಮ ಮಾನಸಿಕ ಸೂಕ್ಷ್ಮತೆಯಿಂದ ಎಲ್ಲರನ್ನೂ ದೂರ ಮಾಡಿಕೊಳ್ಳುತ್ತಾರೆ. ಅವರು ಎಷ್ಟೇ ಒಳ್ಳೆಯವರಾಗಿದ್ದರೂ ಕೆಟ್ಟವರೆಂದೆನಿಸಿಕೊಳ್ಳುತ್ತಾರೆ. ನಮ್ಮ ಮನಸ್ಸಿನ ನೋವಿಗೆ ಬೇರೆಯವರಿಂದ ಪರಿಹಾರ ಅಥವಾ ಸಮಾಧಾನ ಹುಡುಕೋದು ತಪ್ಪು. ಜಗತ್ತಿನಲ್ಲಿ ಯಾರೂ ನಮ್ಮ ಮನಸ್ಸಿನ ನೋವನ್ನು ಗುಣಪಡಿಸಲು ಸಾಧ್ಯವಿಲ್ಲ. ಅವರು ಗಂಡ ಹೆಂಡತಿಯಾಗಿದ್ದರೂ, ಅಮ್ಮ ಮಕ್ಕಳಾಗಿದ್ದರೂ, ಸ್ನೇಹಿತರಾಗಿದ್ದರೂ ನಮ್ಮ ಮಾನಸಿಕ ದುಃಖವನ್ನ ನಾವೇ ಸಹಿಸಿಕೊಳ್ಳಬೇಕು. ನೋವನ್ನು ಮರೆಸಲು ಕೆಲವರು ಪ್ರೀತಿಯಿಂದ ಮಾತಾಡಿಸಿ ಸಮಾಧಾನ ಮಾಡಬಹುದು, ಕೆಲವು ಮನೆಗಳಲ್ಲಿ ಅದನ್ನೂ ಮಾಡುವುದಿಲ್ಲ. ಆದರೆ ಅವ್ಯಾವುವೂ ನಮ್ಮ ಸಮಸ್ಯೆಗೆ ಪರಿಹಾರವಲ್ಲ. ಅದನ್ನು ನಾವೇ ಕಂಡುಕೊಳ್ಳಬೇಕು. ಹೇಗೆ? ಹೇಗೆಂದರೆ, ಸಮಸ್ಯೆಯನ್ನು ಅದು ಇರುವ ಹಾಗೇ ಸ್ವೀಕರಿಸಿ ಅನುಸರಿಸಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಎಲ್ಲವನ್ನೂ ಬೇರೆಯವರ ಬಳಿ ಹೇಳಿ ಸಮಾಧಾನ ಮಾಡಿಕೊಳ್ಳೋಣ ಎಂಬ ಮನಸ್ಥಿತಿಯವರು ನೀವಾಗಿದ್ದರೆ, ಹುಷಾರು, ಕೆಲವರು ದುಃಖದಲ್ಲಿರುವವರಿಗೆ ಇನ್ನೂ ಚುಚ್ಚಿ ಚುಚ್ಚಿ ಮಾತನಾಡಿ ಡಿಪ್ರಷನ್‌ಗೆ ತಳ್ಳುತ್ತಾರೆ. ಯಾವ ನೋವನ್ನು ನಾವು ಮರೆತು ಮುಂದೆ ಸಾಗಿದ್ದೇವೆ ಅಂದುಕೊಳ್ಳುತ್ತೇವೋ ಅದು ಮುಂದೊಂದು ದಿನ, ಅನೇಕ ವರ್ಷಗಳ ನಂತರ ಮತ್ತೆ ಧುತ್ತೆಂದು ಪ್ರತ್ಯಕ್ಷವಾಗಿಬಿಡಬಹುದು. 

ಆ ನೋವನ್ನು ಜ್ಞಾಪಿಸಲು ಅದಕ್ಕೆ ಸಂಬಂಧ ಪಟ್ಟ ವ್ಯಕ್ತಿ ನಮ್ಮ ಕಣ್ಮುಂದೆ ಬರಬಹುದು. ಆ ಸಮಯಕ್ಕೆ ನಮ್ಮ ನೋವು ಮಾಸಿಹೋಗಿದ್ದರೂ, ಅದು ಮನಸ್ಸಿನೊಳಗೆ ಪೂರ್ಣವಾಗಿ ಗುಣವಾಗಲು ಸಾಧ್ಯವೇ ಇಲ್ಲ. ಮಾನಸಿಕ ವೈದ್ಯರೂ ಸಹ ಎಷ್ಟೇ ಪ್ರಯತ್ನ ಪಟ್ಟರೂ ಅನೇಕರನ್ನು ನೋವಿನಿಂದ ಹೊರತರಲು ವಿಫ‌ಲರಾಗುತ್ತಾರೆ. ಅದು ನಮ್ಮ ಕಣ್ಣಿಗೆ ತುಂಬಾ ಚಿಕ್ಕ ವಿಚಾರವಾಗಿ ಕಂಡರೂ, ಆ ಮಾನಸಿಕ ರೋಗಿಗೆ ಅದೇ ದೊಡ್ಡ ವಿಚಾರವಾಗಿರುತ್ತದೆ. ಅದು ನನಗೆ ಯಾಕೆ ಸಿಗುವುದಿಲ್ಲ? ಜನರಲ್ಲಾ ಯಾಕೆ ನನ್ನನ್ನೇ ಬೈತಾರೆ? ನಾನು ಇನ್ನೆಷ್ಟು ಸರಿಯಾಗಿರಬೇಕು?

Advertisement

ಕೆಲವರು ಕಡು ಬಡತನದಿಂದಾಗಿ ಮಾನಸಿಕ ಖನ್ನತೆಗೊಳಗಾಗುತ್ತಾರೆ. ಇನ್ನು ಕೆಲವರು ರೂಪ, ವಿದ್ಯೆ, ಹಣ ಎಲ್ಲವೂ ಇದ್ದರೂ ಜನರಿಂದ ಮೋಸ ಹೋಗಿ ಅಥವಾ ನಂಬಬಾರದವರ ಮಾತಿಗೆ ಬೆಲೆ ಕೊಟ್ಟು ಮಾನಸಿಕ ರೋಗಕ್ಕೊಳಗಾಗುತ್ತಾರೆ. ಮನಸ್ಸಿನ ನೋವನ್ನು ಮರೆಸಲು ಎಷ್ಟೇ ಸಿನಿಮಾ ತೋರಿಸಿದರೂ, ಬೇರೆ ಬೇರೆ ದೇಶಗಳನ್ನು ಸುತ್ತಿಸಿದರೂ, ಕಲರ್‌ಫ‌ುಲ್‌ ಪಾರ್ಟಿಗಳಿಗೆ ಕರೆದುಕೊಂಡು ಹೋದರೂ ಮನಸ್ಸು ತನಗಾದ ನೋವನ್ನು ಕಿಂಚಿತ್ತೂ ಮರೆಯುವುದಿಲ್ಲ. ಮೆದುಳಿನ ಶಾಶ್ವತ ನೆನಪುಗಳ ಕಂಪಾರ್ಟ್‌ಮೆಂಟಿನಲ್ಲಿ ಅದು ಅಚ್ಚಳಿಯದೆ ಉಳಿದುಬಿಡುತ್ತದೆ. ಆಗಾಗ ಅದನ್ನು ನೆನಪಿಸಿಕೊಂಡು ಮೆಲುಕು ಹಾಕಿ ಒಳಗೊಳಗೇ ಕೊರಗುತ್ತೇವೆ. ಇದೆಲ್ಲಾ ನಮಗೆ ಸಹಾಯ ಮಾಡುತ್ತವೆ ನಿಜ. ಆದರೂ ನಮ್ಮ ಮನಸ್ಸಿನಲ್ಲಿರುವ ನೋವು ಜಿಡ್ಡಿನಂತೆ ಅಂಟಿಕೊಂಡಿರುತ್ತದೆ. ಯಾವ ಸೋಪು ಹಾಕಿ ತೊಳೆದುಕೊಂಡರೂ ಮನಸ್ಸಿನ ಕೊರಗು ಯಾಕೆ ಮಾಯವಾಗುತ್ತಿಲ್ಲ ಎಂಬುದು ಮಾನಸಿಕ ತೊಳಲಾಟದಲ್ಲಿರುವವರ ಪ್ರಶ್ನೆ! ಯಾಕೋ ಏನೂ ಸರಿಹೋಗ್ತಿಲ್ಲ… ಇವತ್ತು ಸರಿಹೋದ್ರೂ ನಾಳೆ ಮತ್ತೆ ನೆನಪಾಗತ್ತೆ, ನಾಳೆ ಹೇಗೆ ಬದುಕೋದು? ಯಾವ ಡಾಕ್ಟರೂ ನನ್ನ ಮನಸ್ಸನ್ನು ಸರಿ ಮಾಡುವುದಿಲ್ಲ ಎನ್ನುವುದು ಅವರ ನೋವು. ಪ್ರೀತಿಯಲ್ಲಿ ಬಿದ್ದಾಗ ಮಾತ್ರ ಮನಸ್ಸಿಗೆ ನೋವಾಗುತ್ತದೆ ಅಂತೇನಿಲ್ಲ. ಕೆಲವು ಸಲ ಮನೆಯಲ್ಲಿ ನಡೆಯುವ ಜಗಳಗಳು, ತಂದೆ, ತಾಯಿ, ಮಕ್ಕಳ ಮನಸ್ತಾಪಗಳು, ಅಣ್ಣ, ತಮ್ಮ, ಅಕ್ಕ, ತಂಗಿ, ಸಂಬಂಧಿಕರು ಇವರನ್ನೆಲ್ಲ ಹೊರತುಪಡಿಸಿ ಬೀದಿಯಲ್ಲಿ ನಡೆಯುವ ಜಗಳಗಳು, ಅಪವಾದಗಳು, ಅವಮಾನಗಳು ಹೀಗೆ ಯಾವ ಸನ್ನಿವೇಶ ಬೇಕಾದರೂ ನಮ್ಮ ಮನಸ್ಸನ್ನು ನೋವು ಮಾಡಬಹುದು. ನಮ್ಮ ಸ್ನೇಹಿತರೇ ನಮ್ಮನ್ನು ಖನ್ನತೆಗೆ ತಳ್ಳಬಹುದು. ನಮ್ಮ ಮನಸ್ಸು ಯಾವುದರಿಂದ ಯಾವಾಗ ನೋವಿನಲ್ಲಿ ಸಿಲುಕಿ ಒದ್ದಾಡುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಾವು ತುಂಬಾ ಗಟ್ಟಿ ಮನಸ್ಸಿನವರು ಅಂತ ನಮಗೆ ನಾವೇ ಅಂದೊRಂಡಿರುತ್ತೇವೆ, ಆದರೆ ನೋವಾದಾಗಲೇ ನಮ್ಮ ಮಾನಸಿಕ ಸಾಮರ್ಥ್ಯ ನಮಗೆ ಅರ್ಥವಾಗುವುದು.

ಇದಕ್ಕೇನು ಪರಿಹಾರ?
ನಮ್ಮ ಮನಸ್ಸಿನ ನೋವಿಗೆ ನಾವೇ ಮುಲಾಮು ಹಂಚ್ಚಿಕೊಳ್ಳಬೇಕು. ಅದು ಯಾರ ಮಾತನ್ನೂ ಕೇಳುವುದಿಲ್ಲ. ಕಿವಿಕೊಟ್ಟರೂ ಸಹ ಕೊನೆಗೆ ನಾನು ಅಂದಿಕೊಂಡಿದ್ದೇ ಸರಿ ಎಂದು ವಾದಿಸುತ್ತದೆ. ವಾಸ್ತವವಾಗಿ ಅದೇ ಸರಿ. ಆದರೆ, ಅದು ನೆಗೆಟಿವ್‌ ನಿರ್ಧಾರವಾಗಿದ್ದರೆ ಖಂಡಿತ ತಪ್ಪು! ಪಾಸಿಟಿವ್‌ ನಿರ್ಧಾರವಾಗಿದ್ದರೆ ಖಂಡಿತ ಸರಿ. ಹೀಗೊಂದು ನಿರ್ಧಾರವನ್ನು ನಮ್ಮೊಳಗೆ ನಾವೇ ಗಟ್ಟಿಮಾಡಿಕೊಂಡರೆ ಎಂಥ ನೋವನ್ನೂ ಮೆಟ್ಟಿ ನಿಲ್ಲಬಹುದು. ಇದೇ ಬದುಕುವ ಕಲೆ ಚೆನ್ನಾಗಿ ಬದುಕುವುದು ಹೇಗೆಂದು ಮ್ಯಾನೇಜ್‌ಮೆಂಟ್‌ ತಜ್ಞರು ಹೇಳಿಕೊಡಬಹುದು, ಆದರೆ ಎಲ್ಲರಂತೆ ಹೇಗೆ ಬದುಕಬೇಕು ಎಂಬುದನ್ನು ನಾವೇ ಕಂಡುಕೊಳ್ಳಬೇಕು. ಎಷ್ಟೇ ನೋವಾದರೂ ಇದು ನನ್ನ ಬದುಕಿಗಿಂತ ದೊಡ್ಡದಲ್ಲ, ನಾನು ಬದುಕಬೇಕು, ನನಗೆ ನೋವು ಕೊಟ್ಟವರಿಗೆ ಬದುಕಿ ತೋರಿಸಬೇಕು ಎಂಬ ನಿರ್ಧಾರವಷ್ಟೇ ನಮ್ಮ ಕೈಹಿಡಿದು ಕೊನೆಯತನಕ ಮುನ್ನಡೆಸಬಲ್ಲದು. 

Advertisement

Udayavani is now on Telegram. Click here to join our channel and stay updated with the latest news.

Next