Advertisement

ಸಾಧಕನೊಳಗಿನ ಸಾದಾ ಮನುಷ್ಯ

05:59 PM Feb 22, 2020 | mahesh |

ನಾಡಿಗಾಗಿ, ನುಡಿಗಾಗಿ ಮತ್ತು ಇವುಗಳ ಹಿನ್ನೆಲೆಯ ಸಂಸ್ಕೃತಿಯ ಸಂಗೋಪನೆಗಾಗಿ ಜೀವನ ಸವೆಯಿಸಿದ ಹಾಗೂ ಹಾಗೆ ಸವೆಸುತ್ತಲೇ ಸೇವಾ ಕಾರ್ಯತತ್ಪರರೂ ಆದ ಅನೇಕ ಮಹನೀಯರು ನಮ್ಮ ನಡುವೆ ಇದ್ದರು, ಇದ್ದಾರೆ! ಅಂತಹವರ ಸಾಲಿಗೆ ಸೇರುವವರು ಎ.ಜಿ. ತಿರುಮಲೇಶ್ವರ ಭಟ್ಟರು.

Advertisement

ಸ್ವಾತಂತ್ರ್ಯ ದೊರೆಯುವ ನಿಕಟಪೂರ್ವ ದಿನಗಳಿಂದ ತೊಡಗಿ, ಸ್ವಾತಂತ್ರ್ಯಾನಂತರದ ನವೋದಯದ ಹರಿಕಾರರೂ ಆಗಿ ಹೆಸರು ಮಾಡಿದವರು. ಅವರು ಬದುಕಿದ್ದು ಕೇವಲ ನಲವತ್ತು ವರ್ಷಗಳು. (1918ರಿಂದ 1959) ಆದರೆ, ಒಬ್ಬ ಪೂರ್ಣಾಯುಷಿಯಾದ ವ್ಯಕ್ತಿಯ ಸಾಧನೆಗೆ ಸರಿಮಿಗಿಲೆನಿಸುವಷ್ಟು ಕ್ರಿಯಾಶೀಲತೆಯನ್ನೂ, ಸಾಮಾಜಿಕ ಕಾಳಜಿಯನ್ನೂ ಅವರು ಪ್ರಕಟಿಸಿದ್ದು ವಿಸ್ಮಯವೇ ಸರಿ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಆಲಂಗಾರು ಅವರ ಹುಟ್ಟೂರು. ಕೃಷಿಕ ಮನೆತನ. ಭಟ್ಟರ ಪ್ರಾರಂಭಿಕ ಶಿಕ್ಷಣವು ಸಮೀಪದ ಕಾಂತಡ್ಕ ಮತ್ತು ವಿಟ್ಲ ಶಾಲೆಗಳಲ್ಲೂ ಅನಂತರ ಹೈಸ್ಕೂಲು ವಿದ್ಯಾಭ್ಯಾಸವು ನೀಲೇಶ್ವರದ ರಾಜಾ ಹೈಸ್ಕೂಲಲ್ಲೂ ನಡೆಯಿತು. ನಂತರದ ದಿನಗಳನ್ನೆಲ್ಲ ಅವರು ಸಾಮಾಜಿಕ ಕಾರ್ಯಗಳಿಗೇ ಮೀಸಲಿಟ್ಟಿದ್ದರು.

ಅದೊಂದು ಮುಂಜಾನೆ, ತನ್ನ ಪೂರ್ವಿಕರ ಮನೆಯಿಂದ ಈ ಹುಡುಗ ಹೊರಬಿದ್ದುದು ಉಟ್ಟ ಬಟ್ಟೆಯಲ್ಲೇ. ಮ್ಯಾಟ್ರಿಕ್ಯುಲೇಶನ್‌ ಪೂರೈಸಿ, ಹಳ್ಳಿಯ ವಾತಾವರಣದಲ್ಲಿ ಕೃಷಿ ಕಾಯಕದಲ್ಲಿದ್ದು ಆತನ ವಿಶ್ವದೃಷ್ಟಿ ಅದಾಗಲೇ ವ್ಯಾಪಕಗೊಂಡಿತ್ತು. 1941ರ ಸುಮಾರಿಗೆ, ತನ್ನ ಇಪ್ಪತ್ತೆರಡರ ಹರೆಯದಲ್ಲಿ ಬ್ರಿಟಿಷರ ವಿರುದ್ಧವಾಗಿ ಭಾಷಣ, ಚಳವಳಿ ಮತ್ತು ಜನಜಾಗೃತಿಯ ಕುಶಲ ಕಾರ್ಯಕರ್ತನಾದನು. ಹೀಗೆ, ಕರಾವಳಿ ಭಾಗದ ಈ ತರುಣ ತಿರುಮಲೇಶ್ವರ, ತನ್ನೂರಿಂದ ಸಾಗುತ್ತಲೇ, ಹೋದಲ್ಲೆಲ್ಲ ಕ್ರಾಂತಿಯ ಕಿಡಿಯನ್ನು ಹೊತ್ತಿಸುತ್ತ ಸುತ್ತಿದರು. ಹೊನ್ನಾವರದಲ್ಲಿ ಅವರ ದಸ್ತಗಿರಿ ಆಯಿತು. ಬಳಿಕ ಆರು ತಿಂಗಳ ನೆರೆವಾಸ, ಬೆಳಗಾವಿಯ ಹಿಂಡಂಗಾ ಜೈಲಲ್ಲಿ. ಅಲ್ಲಿಂದ ಬಿಡುಗಡೆಗೊಂಡು, ಊರಿಗೆ ಬಂದ ಭಟ್ಟರು ಅನಂತರ ಸಂಸಾರಿಯಾಗುತ್ತಾರೆ.

ಜೈಲಿನಿಂದ ಬಿಡುಗಡೆಗೊಂಡ ಬಳಿಕದ ಕೆಲಕಾಲ ಭಟ್ಟರು ಉತ್ತರ ಕರ್ನಾಟಕದ ಹಲವೆಡೆ ಸುತ್ತಾಡಿ, ಧಾರವಾಡದಲ್ಲಿ ಶಂಬಾ ಜೋಶಿ, ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಮತ್ತು ದ.ಬಾ. ಕುಲಕರ್ಣಿ ಮುಂತಾದವರ ಒಡನಾಟದಲ್ಲಿದ್ದರು. ಅನಂತರ ಮಂಗಳೂರಿನ ಆಗಿನ ಪ್ರಸಿದ್ಧ ದೈನಿಕ “ನವಭಾರತ’ದಲ್ಲಿ ತಮ್ಮ ಆತ್ಮೀಯರಾಗಿದ್ದ ನಿರಂಜನ ಹಾಗೂ ಕಯ್ನಾರ ಕಿಂಞಣ್ಣ ರೈ ಅವರೊಂದಿಗೆ ದುಡಿದರು. ಈ ಅವಧಿಯಲ್ಲಿಯೇ ಅವರ ಅನೇಕ ಲೇಖನಗಳು, ಅಂಕಣಗಳು ಮತ್ತು ಕವಿತೆಗಳು ಪ್ರಕಟಗೊಂಡವು. ಶಿವರಾಮ ಕಾರಂತರಿಂದ ಸ್ಫೂರ್ತಿ ಪಡೆದ ಅವರು, ಹುಟ್ಟೂರಿನ ಪರಿಸರದಲ್ಲಿ ಸಮಾಜ ಮುಖೀಯಾಗಿ ಕೆಲಸ ಮಾಡಿದರು. 1940ರಿಂದ 55ರ ವರೆಗಿನ ಕಾಲಾವಧಿಯಲ್ಲಿ ಅವರ ಕ್ರಿಯಾಶೀಲತೆಯು ಉತ್ತುಂಗಕ್ಕೆ ಏರಿತ್ತು. ಕೆಲವು ವರ್ಷಗಳು ಮಂಗಳೂರಿನ ಕರ್ನಾಟಕ ವ್ಯವಸಾಯ ವರ್ತಕ ಸಂಘದಲ್ಲಿ ದುಡಿದು ಅನಂತರ ಸ್ವಂತ ಮನೆಯಲ್ಲಿ ಕೃಷಿ ಕಾಯಕದಲ್ಲಿಯೂ, ಸಮೀಪದ ವಿಟ್ಲದಲ್ಲಿ ವಾಸ್ತವ್ಯ ಹೂಡಿ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡರು. ವಿಟ್ಲದಲ್ಲಿ ಪ್ರೌಢಶಾಲೆಯ ಸ್ಥಾಪನೆ, ಗ್ರಾಮೀಣ ಸಹಕಾರಿ ಸಂಘದ ಚಾಲನೆ, ವಾಚನಾಲಯ-ಗ್ರಂಥಾಲಯಗಳ ರೂಪಣೆ, ಪಶು, ವೈದ್ಯಕೀಯ ಕೇಂದ್ರದ ಭೋಜನ, ತೋಟಗಾರಿಕೆ ಬೆಳೆಗಳ ಕೇಂದ್ರೀಯ ಸಂಶೋಧನಾ ಸಂಸ್ಥೆಯ ಸ್ಥಾಪನೆ ಇವೆಲ್ಲ ಅವರ ಸತತ ಪ್ರಯತ್ನದ ಸಾಕ್ಷಿಕಲ್ಲುಗಳಾಗಿವೆ.

ಗ್ರಾಮಾಂತರ ಭಾಗಗಳಲ್ಲಿ ಆ ದಿನಗಳಲ್ಲೇ ಅವರು ಅಪೂರ್ವವೆನಿಸುವ ಸಮಾವೇಶಗಳನ್ನು ಸಂಘಟಿಸಿದವರು. ಅಭ್ಯಾಸ ಶಿಬಿರಗಳನ್ನೂ ವಿಚಾರಗೋಷ್ಠಿಗಳನ್ನೂ ಆಯೋಜಿಸಿದವರು. ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಭಟ್ಟರಿಗೆ ಕೇವಲ ಆದರ್ಶವಷ್ಟೇ ಅಲ್ಲ, ಪ್ರತ್ಯಕ್ಷ ಪ್ರಮಾಣವೂ ಆಗಿತ್ತು. ಹಾಗಾಗಿ, ಮದ್ಯಪಾನ ವರ್ಜನೆ, ಸಾಕ್ಷರತಾ ಆಂದೋಲನ, ಸಹಕಾರ ದೃಷ್ಟಿ ಅವರ ಆದ್ಯತೆಗಳಾಗಿದ್ದವು.

Advertisement

ಅದಮ್ಯ ಉತ್ಸಾಹ ಮತ್ತು ಜೀವನಪ್ರೀತಿಯಿಂದ ವ್ಯಸ್ತರಾಗಿದ್ದ ಅವರು ಮದುವೆಯಾದುದು ಪರಮೇಶ್ವರಿ ಅವರನ್ನು. ನಾಲ್ವರು ಮಕ್ಕಳ ಸಂಸಾರ. ಆದರೆ, ಎ.ಜಿ.ಯವರಿಗೆ ಅಚಾನಕ್ಕಾಗಿ ಕ್ಯಾನ್ಸರ್‌ ರೋಗ ಬಾಧಿಸಿತು. ಸೂಕ್ತ ಚಿಕಿತ್ಸೆ ಮಾಡಿದರೂ ಫ‌ಲಕಾರಿಯಾಗದೆ ನಲುವತ್ತರ ಹರೆಯದಲ್ಲೇ ಅವರು ನಿಧನರಾದರು.

ಇತ್ತೀಚೆಗೆ, ಅವರ ಶತಮಾನದ ಸಂಸ್ಮರಣೆಯ ಕಾರ್ಯಕ್ರಮವೊಂದು ನೆರವೇರಿದೆ. ಎ.ಜಿ. ತಿರುಮಲೇಶ್ವರ ಭಟ್‌ ಬದುಕು-ಬರಹ ಶೀರ್ಷಿಕೆಯ ಒಂದು ಕೃತಿ 1997ರಲ್ಲಿ ಪ್ರಕಟವಾಗಿದೆ. 2019ರಲ್ಲಿ ಅವರ ಸಹೋದರ ಎ.ಜಿ. ರಮೇಶಚಂದ್ರರು ಬರೆದೊಂದು ಕಿರುಪುಸ್ತಕವೂ ಹೊರಬಂದಿದೆ. ಇಷ್ಟಿದ್ದರೂ, ಅವರ ಎಲ್ಲ ಲೇಖನಗಳನ್ನು ಕವಿತೆ-ಕಥೆ-ಅಂಕಣಗಳನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸುವ ಕೆಲಸ ಆಗಬೇಕಾಗಿದೆ.

ತಾಳ್ತಜೆ ವಸಂತ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next