Advertisement

ಕಳ್ಳತನಕ್ಕಿಳಿದ ಮೊದಲ ಪ್ರಕರಣದಲ್ಲೇ ಪೊಲೀಸರ ಅತಿಥಿ; ಕೃತ್ಯ ನಡೆದ 2 ಗಂಟೆಯೊಳಗೆ ಆರೋಪಿ ಬಂಧನ

08:34 PM Apr 03, 2022 | Team Udayavani |

ಬೆಂಗಳೂರು: ಮಹಿಳೆಯ ಮಾಂಗಲ್ಯ ಸರ ಕಸಿದುಕೊಳ್ಳಲು ಯತ್ನಿಸಿದ ಆರೋಪಿಯನ್ನು ಕೃತ್ಯ ನಡೆದ ಕೇವಲ ಎರಡು ಗಂಟೆಯೊಳಗೆ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

Advertisement

ಉತ್ತರಪ್ರದೇಶದ ಗೋರಖ್‌ಪುರ ಮೂಲದ ನಿತಿಲೇಶ್‌ (20) ಬಂಧಿತ. ಶಶಿಕಲಾ ಬಾಗಲಗುಂಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಶುಕ್ರವಾರ ಸಂಜೆ ಶಾಲೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಹೋದ ಆರೋಪಿ, ಸರ ಕಸಿದುಕೊಂದು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದ. ಇತ್ತ ಶಿಕ್ಷಕಿಯ ಚೀರಾಟ ಕೇಳಿ ಓಡಿ ಬಂದ ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಸ್ತಿನಲ್ಲಿದ್ದ ಬಾಗಲಗುಂಟೆ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಐದಾರು ಮಂದಿಯನ್ನು ವಿಚಾರಿಸಿದ್ದರು. ಅದೇ ರೀತಿ ಆರೋಪಿ ನಿತಿಲೇಶ್‌ನನ್ನು ವಿಚಾರಿಸಿ ಆತನ ಜೇಬು ಪರಿಶೀಲಿಸಿದಾಗ ಚಿನ್ನದ ಸರ ಪತ್ತೆಯಾಗಿತ್ತು. ಆತನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ, ಚಿನ್ನದ ಸರ ಕಸಿದುಕೊಂಡು ಹೋಗಿರುವುದನ್ನು ಒಪ್ಪಿಕೊಂಡಿದ್ದ.

ಕೃತ್ಯ ನಡೆದ ಕೇವಲ 2 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಪಿಯು ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದು ಪೇಂಟಿಂಗ್‌ ಕೆಲಸ ಮಾಡುತ್ತಿದ್ದ. ಕಡಿಮೆ ಅವಧಿಯಲ್ಲಿ ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಮೊದಲ ಬಾರಿ ಕಳ್ಳತನಕ್ಕೆ ಇಳಿದಿದ್ದ. ಮೊದಲ ಪ್ರಯತ್ನದಲ್ಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next