Advertisement

ರಾಜನಂತಿದ್ದ ಅನರ್ಹರು, ಭಿಕ್ಷೆ ಬೇಡುತ್ತಿದ್ದಾರೆ

01:03 AM Sep 18, 2019 | Lakshmi GovindaRaju |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ರಾಜನಂತಿದ್ದ ಅನರ್ಹ ಶಾಸಕರು ಬಿಜೆಪಿ ಬಾಗಿಲಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷಕ್ಕೆ ವಾಪಸ್‌ ಕರೆದುಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಪ್ರಕರಣ ರಮೇಶ್‌ ಕುಮಾರ್‌ ಕಾನೂನಾತ್ಮಕವಾಗಿಯೇ ಕ್ರಮ ಕೈಗೊಂಡಿದ್ದಾರೆ. ಅವರಿಗೆ ವಿಚಾರಣೆಗೆ ಎಲ್ಲ ರೀತಿಯ ಅವಕಾಶ ನೀಡಿದ್ದರು. ಪಕ್ಷವೂ ಅವರಿಗೆ ಎಲ್ಲವನ್ನೂ ನೀಡಿತ್ತು. ರಮೇಶ್‌ ಕುಮಾರ್‌ ಅವರು ಎಲ್ಲವನ್ನೂ ಕಾನೂನು ಪ್ರಕಾರವೇ ಮಾಡಿರುವುದರಿಂದ ಅವರ ಆದೇಶವನ್ನು ಕೋರ್ಟ್‌ ಎತ್ತಿ ಹಿಡಿಯುವ ನಂಬಿಕೆ ಇದೆ ಎಂದು ಹೇಳಿದರು.

ಅನರ್ಹ ಶಾಸಕರಿಗೆ ಬಿಜೆಪಿಯವರನ್ನು ನಂಬಬೇಡಿ ಎಂದು ಹೇಳಿದ್ದೆ. ಆಗ ಮೈತ್ರಿ ಸರ್ಕಾರವನ್ನು, ಪಕ್ಷವನ್ನು ಬಾಯಿಗೆ ಬಂದಂತೆ ಬೈದು ಹೋಗಿದ್ದರು. ಈಗ ಅಲ್ಲಿ ಏನೇ ಸಮಸ್ಯೆಯಾದರೂ ಯಾರ ವಿರುದ್ಧವೂ ಮಾತನಾಡದಂತಹ ಸ್ಥಿತಿ ಇದೆ ಎಂದರು.

ಈಗಿನ ಬಿಜೆಪಿ ಸರ್ಕಾರ ಸತ್ತು ಬಿದ್ದಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ತನಿಖೆ ಮಾಡುವುದರಲ್ಲಿಯೇ ಹೆಚ್ಚು ಸಕ್ರಿಯವಾಗಿದೆ. ಕೇಂದ್ರದವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮರ್ಯಾದೆ ಕೊಡುತ್ತಿಲ್ಲ. ಮಂತ್ರಿಗಳು ಮರ್ಯಾದೆ ಕೊಡುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ಜನರಿಗೆ ಭ್ರಮ ನಿರಸನ ಆಗಿದೆ. ಮೈತ್ರಿ ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಜನರು ಈಗ ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.

ಉಪ ಚುನಾವಣೆಗೆ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸುವ ಬಯಕೆ ಹೊಂದಿದ್ದರೆ ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲಿಯೂ ಸ್ವಂತ ಬಲದಿಂದಲೇ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಿದೆ ಎಂದರು.

Advertisement

ಇಡಿ ವಶದಲ್ಲಿರುವ ಮಾಜಿ ಸಚಿವ ಶಿವಕುಮಾರ್‌ ವಿಚಾರದಲ್ಲಿ ಪಕ್ಷ ಅವರೊಂದಿಗೆ ನಿಂತಿದೆ. ಕುಮಾರಸ್ವಾಮಿ ಅವರೂ ಡಿಕೆ ಶಿವಕುಮಾರ್‌ ಪರವಾಗಿ ಮಾತನಾಡಿದ್ದಾರೆ. ಅವರು ಪ್ರತಿಭಟನೆಗೆ ಬರದಿರುವುದು ಅವರ ವಯಕ್ತಿಕ ವಿಚಾರ. ಈ ಬಗ್ಗೆ ಬೇರೆ ಏನು ಮಾತನಾಡುವುದಿಲ್ಲ. ಡಿ.ಕೆ. ಶಿವಕುಮಾರ್‌ ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಗುವ ಭರವಸೆ ಇದೆ ಎಂದು ಹೇಳಿದರು.

ಶಾಸಕಾಂಗ ಸಭೆ: ಬುಧವಾರ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದೇವು. ಅದಕ್ಕಾಗಿ ಮನವಿ ಮಾಡಿದಾಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೌಖೀಕವಾಗಿ ಅನುಮತಿ ನೀಡಿದ್ದರು. ಆದರೆ, ಲಿಖೀತ ರೂಪದಲ್ಲಿ ಪತ್ರ ಬರೆದಿದ್ದು, ಶಾಸಕಾಂಗ ಸಭೆ ನಡೆಸಲು ಅನುಮತಿ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಇದರ ಹಿಂದೆ ಬಿಜೆಪಿಯವರ ಯಾವ ರಾಜಕೀಯ ಇದಿಯೊ ಗೊತ್ತಿಲ್ಲ ಎಂದು ಹೇಳಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮುಖವಾಗಿ ಉಪ ಚುನಾವಣೆಗಳ ಸಿದ್ದತೆ, ಪ್ರವಾಹ ಸಂತ್ರಸ್ತರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರದಿರುವ ಬಗ್ಗೆ ಹೋರಾಟ ರೂಪಿಸುವುದು. ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಕೈ ಬಿಡುತ್ತಿರುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಸಂಸದರಿಗೆ ಬಿಡದಿರುವುದು ಖಂಡನೀಯ: ಚಿತ್ರದುರ್ಗದಲ್ಲಿ ಸಂಸತ್‌ ಸದಸ್ಯ ಎ. ನಾರಾಯಣಸ್ವಾಮಿ ಅವರನ್ನು ಗೊಲ್ಲರ ಹಟ್ಟಿಗೆ ಪ್ರವೇಶ ನೀಡದಿರುವುದು ಖಂಡನೀಯ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ. ಇದೊಂದು ಅಮಾನವೀಯ ಘಟನೆಯಾಗಿದ್ದು. ಈ ರೀತಿಯ ಪ್ರಕರಣಗಳು ನಡೆಯದಂತೆ ಜನರಲ್ಲಿ ಜಾಗೃತಿ ವಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

150ನೇ ಗಾಂಧಿ ಜಯಂತಿಗೆ ಕಾಂಗ್ರೆಸ್‌ನಿಂದ ಪಾದಯಾತ್ರೆ
ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ 150 ನೇ ಜನ್ಮ ದಿನಾಚರಣೆಯನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಆಚರಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸೇವಾದಳದ ಪದಾಧಿಕಾರಿಗಳ ಸಭೆ ನಡೆಸಲಾಗಿದ್ದು. ಅಕ್ಟೋಬರ್‌ 2 ರಿಂದ ಗಾಂಧಿ ತತ್ವ ಪ್ರಚಾರ ಮಾಡಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಾದಯಾತ್ರೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ಗಾಂಧಿ ಕಂಡಿರುವ ಭಾರತಕ್ಕೂ ಈಗಿನ ಭಾರತಕ್ಕೂ ತದ್ವಿರುದ್ದವಾಗಿದೆ. ಗಾಂಧೀಜಿಯ ರಾಷ್ಟ್ರೀಯತೆ ಹಾಗೂ ಈಗಿನ ಭಾರತದಲ್ಲಿ ರಾಷ್ಟ್ರೀಯತೆ ಬಗ್ಗೆ ನಡೆಯುತ್ತಿರುವ ಗೊಂದಲಗಳ ಬಗ್ಗೆ ಚರ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2020 ಜನವರಿ 30ರ ವರೆಗೂ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮಹಾತ್ಮಾ ಗಾಂಧಿಯನ್ನು ಕೇವಲ ಸ್ವಚ್ಛತೆಗೆ ಸೀಮಿತಗೊಳಿಸಲಾಗಿದೆ. ಅದರ ಹೊರತಾಗಿ ಗಾಂಧಿ ದೇಶದ ಐಕ್ಯತೆ ಬಗ್ಗೆ ಸಾಕಷ್ಟು ವಿಚಾರಧಾರೆಗಳನ್ನು ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ರಾಷ್ಟ್ರೀಯತೆಯನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಗಾಂಧಿಗಿರಿ ವಿಶ್ವವನ್ನೇ ಬದಲಾಯಿಸುವ ಸಿದ್ಧಾಂತವಾಗಿದೆ. ಜಾತ್ಯತೀತ, ಸೌಹಾರ್ದತೆ ಅಸ್ಪೃಶ್ಯತೆ ಹೋಗಲಾಡಿಸುವುದು ಗಾಂಧೀಜಿ ಸಿದ್ದಾಂತವಾಗಿತ್ತು. ಅವರ ಕನಸಿನ ಭಾರತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಗೊಲ್ಲರಹಟ್ಟಿಯೊಳಗೆ ಪ್ರವೇಶ ನೀಡದಿರುವುದು ಖಂಡನೀಯ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ  ತಪ್ಪಿತಸ್ಥರ ವಿರುದಟಛಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ. ಇದೊಂದು ಅಮಾನವೀಯ ಘಟನೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next