Advertisement
ಈ ಎಲ್ಲ ನಮ್ಮ ಸಂಗೀತಸಂಬಂಧೀ ಮನೋವಾಂಛೆಗಳ ಹಿಂದೆ ನಿಜವಾಗಿ ನಾವು ನಮ್ಮ ಅಂದಿನ ಅಥವಾ ಹಿಂದಿನ ದಿನಗಳ ಮನೋಸ್ಥಿತಿಯ ತಳಪಾಯವಿರುತ್ತದೆ ಎಂಬುದನ್ನು ನಾವು ನಿಜವಾಗಿ ಗಮನಿಸಿರುವುದಿಲ್ಲ ಅಥವಾ ಕಛೇರಿಯ ಆ ಸಂದರ್ಭ ಮತ್ತು ನಮ್ಮ ಜೀವನದಲ್ಲಿ ನಿಜವಾಗಿ ಆಗುತ್ತಿರುವ ಎಲ್ಲ ಬೆಳವಣಿಗೆಗಳೂ ಸಂಗೀತಪ್ರೇಮಿಗಳಾದ ನಮ್ಮ ರಾಗಾಕಾಂಕ್ಷೆಯ ಮೇಲೆ ಸತತವಾಗಿ ಪ್ರಭಾವವನ್ನು ಬೀರುತ್ತಿರುತ್ತದೆ ಎಂಬುದನ್ನೂ ನಾವು ಅವಗಾಹಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ನಮಗೆ ಬೇಕಾಗಿರುವುದು ಬದುಕಿನ ರಾಗಗಳಿಗೆ ನೇರವಾಗಿ ನೆರವಾಗುವಂಥ ಮನಸ್ಸಿನ ರಾಗಗಳ ಉದ್ದೀಪನ ಅಥವಾ ಸಮಾಧಾನ. ರಾಗವು ರಂಜಕವಂತೂ ಹೌದು. ಈ ರಂಜಕತೆ ಎಂದರೆ ನಮ್ಮನ್ನು ಖುಷಿಯಿಂದ ಕುಣಿಯುವಂತೆ ಮಾಡುವಂಥ ಸ್ವಭಾವವುಳ್ಳದ್ದು ಎಂದಷ್ಟೆ ಅಲ್ಲ. ರಂಜನಾತ್ ರಾಗಃ ಎಂಬ ಶಬ್ದದ ವುತ್ಪತ್ತಿಯು ರಾಗ ಮತ್ತದರ ಪ್ರಭಾವವನ್ನು ಸಮಗ್ರವಾಗಿ ಹೇಳುವುದಾದರೂ ರಾಗವೆನ್ನುವಂಥದ್ದು ನಮ್ಮ ಮನೋಮಂಡಲವನ್ನು ನೇರವಾಗಿ, ಜೊತೆಗೆ ಅನಿರ್ದಿಷ್ಟವಾಗಿ ಸಂತಸಭಾವ ಬೀರುತ್ತ ಹೋಗುವಂಥದ್ದು. ಹಾಗಾಗಿ, ನಮ್ಮಲ್ಲಿ ಇಂದು ಸಂಜೆ ಪೂರಿಯಾ ಧನಶ್ರೀ ರಾಗವನ್ನು ಕೇಳುವ ಆಸೆ ಹುಟ್ಟಿದರೆ ನಾಳೆ ಅಂಥಾದ್ದೇ ಪರಿಸ್ಥಿತಿಯಲ್ಲಿ, ಅದೇ ಸಂಜೆಯ ಅದೇ ಏಕಾಂತದಲ್ಲಿ, ಅದೇ ಬಾಲ್ಕನಿಯ ಕಟ್ಟೆಯ ಮೇಲೆ ಹದವಾಗಿ ಹಬೆಯಾಡುವ ಅದೇ ಚಹಾದ ಕಪ್ಪಿನ ಸಾನ್ನಿಧ್ಯದಲ್ಲಿ ನಮಗೆ ಮಾರ್ವಾ ರಾಗವನ್ನು ಕೇಳುವ ಹಂಬಲವು ಹುಟ್ಟಬಹುದು. ಮತ್ತು ಮಾರನೆಯ ದಿನ ಜಗತ್ತಿನ ಈ ಎಲ್ಲ ಆಗುಹೋಗುಗಳಿಗಿಂತ ಸಂಪೂರ್ಣ ಭಿನ್ನ ಮತ್ತು ವ್ಯತಿರಿಕ್ತವಾದಂಥ ಸ್ಥಿತಿಯಲ್ಲಿ, ಉದಾಹರಣೆಗೆ ಜಗತ್ತಿನ ಅತೀ ಕೆಟ್ಟ ಟ್ರಾಫಿಕ್ನಲ್ಲಿ ಬೈಕು ಓಡಿಸುವಾಗ ಭೈರವಿಯು ಬಂದು ಕಾಡಬಹುದು! ಇದು ಕೇಳುಗ ಮತ್ತು ಕಲಾವಿದರಿಬ್ಬರೂ ಒಳಗೊಳ್ಳುವ ಮನಸ್ಸಿನ ರಾಗ ಮತ್ತು ಸಂಗೀತದ ರಾಗಗಳು ಒಟ್ಟಿಗೇ ಮೇಳೈಸುವ ರಾಗಪ್ರಕ್ರಿಯೆ.
Related Articles
Advertisement
ಮತ್ತೂಬ್ಬ ಖ್ಯಾತ ಸಿತಾರ್ ವಾದಕರಾದ ಪಂಡಿತ್ ಬುಧಾದಿತ್ಯ ಮುಖರ್ಜಿಯವರ ಇತ್ತೀಚಿನ ಸಂದರ್ಶನದಲ್ಲಿ ಅವರು ಹೀಗೆ ಹೇಳುತ್ತ ಹೋಗುತ್ತಾರೆ : “”ನನ್ನ ಎರಡೂ ಕೈಗಳ ಚಲನೆಯ ವೇಗ, ಮೀಂಡಿನ ಶುದ್ಧತೆಗಳ ಬಗ್ಗೆ ಬಹಳ ಜನ ತಾರೀಫಿನ ಮಾತುಗಳನ್ನಾಡುತ್ತಾರೆ. ವಾಸ್ತವದಲ್ಲಿ ಅದು ಸಂಗೀತವಲ್ಲ. ನನ್ನ ಮನೋಸ್ಥಿತಿಗೆ ಹೊಂದುವಂಥ ಸರಿಯಾದ ಸಿತಾರ್ನ ಅನ್ವೇಷಣೆಯಲ್ಲಿ ಮತ್ತು ಆ ಅನ್ವೇಷಣೆಯ ಹಾದಿಯಲ್ಲಿ ನನಗೆ ಬೇಕಾದ ನಾದವನ್ನು ಹೊಮ್ಮಿಸಲು ನಾನು ಪಟ್ಟ ವಿಫಲ ಪ್ರಯತ್ನಗಳ ಫಲಿತಾಂಶ ಆ ಸ್ವರ ಶುದ್ಧತೆ. ಯಾಕೆಂದರೆ, ನನಗೆ ಬೇಕಾದಂಥ ನಾದವನ್ನು ನನ್ನ ಸಿತಾರಿನಲ್ಲಿ ಹೊಮ್ಮಿಸಲು ಅಸಾಧ್ಯವಾಗುತ್ತಿದ್ದುದರಿಂದ ಆ ಸಿಟ್ಟಿನ ರಭಸದಲ್ಲಿ ಅಲಂಕಾರಗಳನ್ನು ತೀಡುತ್ತ ತೀಡುತ್ತ ನನ್ನ ಕೈಯ ವೇಗ, ಬೆರಳುಗಳ ತೀಕ್ಷ್ಣ¡ತೆ ಮತ್ತು ಪ್ರಖರತೆ ತೀವ್ರವಾಗುತ್ತ ಹೋಯಿತು!”
ಕಲಾವಿದನಾಗುವುದು ನಿಜಕ್ಕೂ ಬಹಳ ದೊಡª ಪ್ರಕ್ರಿಯೆ. ಆ ಪ್ರಕ್ರಿಯೆ ಹಿಂದಿನ ಭಾವತೀವ್ರತೆ ಮತ್ತು ಶ್ರದ್ಧೆಯನ್ನು ನಿರಂತರ ಕಾಪಾಡಿಕೊಂಡು ಹೋಗಬೇಕಾಗುವ ನೋವು ನಾಲ್ಕಕ್ಷರಗಳಲ್ಲಿ ನಿಜಕ್ಕೂ ಬರೆದು ಮುಗಿಸುವಂಥದ್ದಲ್ಲ. ಮೇಲಿಂದ ಕಲಾವಿದನಾದ ಮೇಲೆ ತಮ್ಮ ಕಲೆಯನ್ನು ಪ್ರದರ್ಶಿಸಲು ಬೇಕಾದ ವೇದಿಕೆಗಳ, ಸರಿಯಾದ ಹಿನ್ನೆಲೆ ಮತ್ತು ಘರಾನೆಗಳ ಕೃಪೆಯಿಲ್ಲದೆ ಹೋದರೆ ಸಂದರ್ಭಕ್ಕೆ ಕಾಯುವ ಸಾವಧಾನ ಮತ್ತು ನೋವು, ವೇದಿಕೆ ಸಿಕ್ಕಾಗ ತಮ್ಮೆಲ್ಲ ಬಗೆಯ ಮಾನಸಿಕ ತೊಯ್ದಾಟಗಳನ್ನು ವಿಪರೀತ ಮನಃಸ್ಥಿತಿಯನ್ನು ಕಾಪಾಡಿಕೊಂಡು ಹಾಡಬೇಕಾದ ಅನಿವಾರ್ಯತೆ. ಹೀಗೆ ನಮ್ಮೆದುರು ವೇದಿಕೆಯಲ್ಲಿ ಕುಳಿತ ಕಲಾವಿದರ ಆ ಕಛೇರಿಯ ಬಣ್ಣದ ವಾತಾವರಣದ ಹಿಂದಿನ ಯಾತನಾಪ್ರವಾಸ ಬಹಳ ದೀರ್ಘ ಮತ್ತು ದಿನಗಟ್ಟಲೆ ಕುಳಿತು ಆಲೋಚಿಸಬೇಕಾದಂಥದ್ದು !
ಇವೆಲ್ಲದರ ಕೊನೆಗೆ ನಾವು ಕಛೇರಿಯ ಅಂತ್ಯದಲ್ಲಿ ಆ ಕಲಾವಿದರ ಭೈರವಿಯನ್ನು ಕೇಳಿ ನಾವು ಕಣ್ಣೀರಾಗಿ ಮನೆ ತಲುಪುತ್ತೇವೆ ಎಂಬಲ್ಲಿಗೆ, ಆನಂದ ಮತ್ತು ಆನಂದದ ಹಿಂದಿನ ನೋವು ನಮ್ಮ ಭಾವನದಿಯಲ್ಲಿ ಬೇಡದಿದ್ದರೂ ಉಕ್ಕುತ್ತದೆ.
ಕಣಾದ ರಾಘವ