Advertisement

ಅಭಿಮಾನಿಯ ಅಭಿಮಾನದ ಕಥೆ

12:32 PM Sep 11, 2017 | Team Udayavani |

“ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೇ ಮರೆಯಲಿ…’ ಚಿತ್ರ ಶುರುವಾದಾಗ ಚಿಕ್ಕಂದಿನಲ್ಲಿರುವ ಶಿವಣ್ಣ ಈ ಹಾಡು ಕೇಳಿರುತ್ತಾನೆ. ದೊಡ್ಡವನಾಗಿ ಘಟನೆಯೊಂದರಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿರುವಾಗ ಕ್ಲೈಮ್ಯಾಕ್ಸ್‌ನಲ್ಲೂ ಇದೇ ಹಾಡು ರಿಪೀಟ್‌ ಆಗುತ್ತೆ. ಹಾಡು ಕೇಳಿದ ಕೂಡಲೇ, ಆಸ್ಪತ್ರೆಯಿಂದ ಎದ್ದು ಹೊರಬರುತ್ತಾನೆ. ಅಲ್ಲಿಗೆ ಸಂಗೀತಕ್ಕೂ ಜೀವವನ್ನು ಉಳಿಸುವ ಶಕ್ತಿ ಇದೆ ಅನ್ನುವುದನ್ನು ಇಲ್ಲಿ ಸಾಕ್ಷೀಕರಿಸುತ್ತಾರೆ ನಿರ್ದೇಶಕರು.

Advertisement

ಚಿತ್ರ ನೋಡುಗರಿಗೆ “ಹಳ್ಳಿ ಸೊಗಡು’ ಸಾಕ್ಷ್ಯಚಿತ್ರವಾ ಅಥವಾ ವ್ಯಕ್ತಿ ಚಿತ್ರಣವಾ ಎಂಬ ಗೊಂದಲಕ್ಕೀಡು ಮಾಡುತ್ತೆ. ಯಾಕೆಂದರೆ, ಇದು ಸಾಹಿತಿ, ಗೀತರಚನೆಕಾರ ಡಾ.ದೊಡ್ಡ ರಂಗೇಗೌಡರ ಅಭಿಮಾನಿಯೊಬ್ಬನ ಸಿನಿಮಾ. ಹಾಗಾಗಿ, ಇಲ್ಲಿ ದೊಡ್ಡರಂಗೇಗೌಡರ ಬಗೆಗಿನ ಚಿತ್ರಣವೂ ಇದೆ, ಅವರ ಅಭಿಮಾನಿ ಕುರಿತ ಅಭಿಮಾನದ ವ್ಯಕ್ತಿ ಚಿತ್ರಣವೂ ಒಳಗೊಂಡಿದೆ. ಹಾಗಾಗಿ ಸಣ್ಣ ಗೊಂದಲ ಮೂಡಿದರೂ, ಇದನ್ನು ಒಂದು “ಅಭಿಮಾನದ ಡ್ರಾಮ’ ಅಂತ ಕರೆಯಲ್ಲಡ್ಡಿಯಿಲ್ಲ.

ಗೀತರಚನೆಕಾರ ದೊಡ್ಡ ರಂಗೇಗೌಡರ ಅಭಿಮಾನಿಯೊಬ್ಬ ಅವರ ಹಾಡುಗಳನ್ನು ಕೇಳಿಕೊಂಡೇ ತನ್ನ ಬದುಕನ್ನು ಕಟ್ಟಿಕೊಂಡಿರುವಾತ. ಹಾಗಾಗಿ ಇಲ್ಲಿ ಆ ಅಭಿಮಾನಿಯೊಬ್ಬನೇ ಅಲ್ಲ, ಚಿತ್ರದಲ್ಲಿ ಕಾಣಿಸಿಕೊಳ್ಳುವ ಕೆಲ ಪಾತ್ರಗಳೂ ದೊರಂಗೌ ಅವರ ಪದಗಳನ್ನೇ ಹಾಡಿ ಖುಷಿಪಡುತ್ತಾರೆ. ಕಮರ್ಷಿಯಲ್‌ ದೃಷ್ಟಿಯಲ್ಲಿ ಈ ಚಿತ್ರವನ್ನು ನೋಡುವಂತಿಲ್ಲ. ಆ ಭ್ರಮೆ ಬಿಟ್ಟು ಸುಮ್ಮನೆ ಒಂದು ವ್ಯಕ್ತಿಚಿತ್ರಣ ಅಂದುಕೊಂಡು ನೋಡಿ ಹೊರಬಂದರೆ ಬಹುಶಃ ಯಾವ ಅಪಾಯವೂ ಇರೋದಿಲ್ಲ.

ಕಥೆಯನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು ಸಾಧ್ಯವಿತ್ತು. ಚಿತ್ರಕಥೆಯಲ್ಲಿ ಮತ್ತಷ್ಟು ವೇಗ ಅಳವಡಿಸಿಕೊಳ್ಳಬಹುದಿತ್ತು. ನಿರ್ದೇಶಕ ಕಪಿಲ್‌ ಅವರ ಮೊದಲ ಪ್ರಯತ್ನವಾದ್ದರಿಂದ ಇರುವ ತಪ್ಪುಗಳನ್ನು ಪಕ್ಕಕ್ಕಿಡಬಹುದು. ಹಾಗಂತ “ಹಳ್ಳಿ ಸೊಗಡು’ ಒಂದೇ ನೋಟಕ್ಕೆ ಇಷ್ಟವಾಗುವಂಥದ್ದೂ ಅಲ್ಲ. ಇಲ್ಲಿ ಬೇಡದ ಅನೇಕ ದೃಶ್ಯಗಳಿವೆ. ಅವುಗಳಿಗೆ ಕಡಿವಾಣ ಹಾಕಿದ್ದರೆ, ಒಂದು ನೀಟ್‌ ಸಿನಿಮಾ ಸಾಲಿಗೆ ಸೇರಿಸಬಹುದಿತ್ತು. ಆದರೂ, ಒಬ್ಬ ಅಭಿಮಾನಿ ಕಥೆಯನ್ನು ತನಗೆ ಸಿಕ್ಕಿರುವ ಚೌಕಟ್ಟು ಹಾಗೂ ಇತಿಮಿತಿಯಲ್ಲಿ ತೋರಿಸಿರುವ ನಿರ್ದೇಶಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು.

ಇಲ್ಲಿ ಹಳ್ಳಿ ಸೊಗಡಿಗಿಂತ ಅಭಿಮಾನದ ಸೊಗಡೇ ಹೆಚ್ಚಿದೆ. ಚಿತ್ರದ ಇನ್ನೊಂದು ಮೈನಸ್‌ ಅಂದರೆ, ಅದು ವಿನಾಕಾರಣ ಯಾವಾಗ ಬೇಕೋ ಅವಾಗ ನುಗ್ಗುವ ಹಾಸ್ಯ ದೃಶ್ಯಗಳು. ಅವುಗಳಿಲ್ಲದೆಯೇ, ಅಚ್ಚುಕಟ್ಟಾಗಿ ಸಿನಿಮಾ ತೋರಿಸಲು ಸಾಧ್ಯವಿತ್ತು. ಎಲ್ಲೋ ಒಂದು ಕಡೆ, ಕೆಲವೊಂದು ದೃಶ್ಯ ಗಂಭೀರವಾಗಿ ಸಾಗುತ್ತಿದೆ ಅಂದುಕೊಳ್ಳುವಷ್ಟರಲ್ಲಿ, ಕಾಮಿಡಿ ಟ್ರ್ಯಾಕ್‌ ನುಗ್ಗಿ ಬಂದು, ನೋಡುಗರ ಮಗ್ಗಲು ಬದಲಿಸುವಂತೆ ಮಾಡುತ್ತೆ. ಇಲ್ಲಿ ಇಷ್ಟವಾಗುವ ಅಂಶವೆಂದರೆ, ದೊರಂಗೌ ಅವರ ಹಳೆಯ ಹಾಡುಗಳ ತುಣುಕುಗಳನ್ನು ಬಳಸಿಕೊಂಡಿರುವುದು.

Advertisement

ಆ ಸಮಯಕ್ಕೆ ಬರುವ ಹಳೆಯ ಹಾಡಷ್ಟೇ ಚಿತ್ರದ ಸೊಗಡನ್ನು ಎತ್ತಿಹಿಡಿಯುತ್ತದೆ. ಉಳಿದಂತೆ ಹೇಳುವದೇನೂ ಇಲ್ಲ. ಮೊದಲೇ ಹೇಳಿದಂತೆ, ಇದು ದೊಡ್ಡರಂಗೌಡರ ಅಭಿಮಾನಿಯ ಚಿತ್ರಣ. ಹಾಗಾಗಿ, ಇಲ್ಲಿ ಅಭಿಮಾನದ ಸಂಭ್ರಮ ಹೊರತಾಗಿ ಬೇರೇನೂ ಇಲ್ಲ. ಒಂದರ್ಥದಲ್ಲಿ ಇಲ್ಲಿ, ದೊರಂಗೌ ಅವರ ಸಾಕ್ಷ್ಯಚಿತ್ರ ನೋಡಿದಂತೆ ಭಾಸವಾದರೂ, ಅಭಿಮಾನಿಯ ಪ್ರೀತಿಯ ಅಭಿಮಾನ ಎಷ್ಟಿದೆ ಅನ್ನುವುದನ್ನೂ ನಿರ್ದೇಶಕರು ಹೇಳುವ ಮೂಲಕ ಒಂದಷ್ಟು ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಶಿವಣ್ಣ (ಆರವ್‌ ಸೂರ್ಯ) ಚಿಕ್ಕಂದಿನಿಂದಲೂ ಹಾಡು ಕೇಳುತ್ತ ಬೆಳೆದವನು. ಬೆಳೆಯುತ್ತಲೇ, ದೊರಂಗೌ ಅವರ ಹಾಡುಗಳ ಅಭಿಮಾನಿಯಾದವನು. ಗೆಳೆಯರ ಜೊತೆಗೂಡಿ ಅವರ ಹಾಡುಗಳನ್ನು ರಾಜ್ಯಾದ್ಯಂತ ಹಾಡುವ ಮೂಲಕ ಬದುಕು ಕಟ್ಟಿಕೊಂಡವನು. ಅಡ್ಡದಾರಿ ಹಿಡಿದ ಊರಿನ ಕೆಲವರನ್ನು ಬದಲಾಯಿಸುತ್ತಾನೆ. ಊರಿನ ಜನರಿಗೆ ಆತ್ಮೀಯನಾಗುತ್ತಾನೆ.

ಕೊನೆಗೆ ದೊರಂಗೌ ಅವರನ್ನು ತನ್ನೂರಿಗೆ ಕರೆಸಿ, ಅವರನ್ನು ಸನ್ಮಾನಿಸಿ, ಗೌರವಿಸಬೇಕೆಂಬ ಆಸೆ ತನ್ನೂರಿನ ಜನರದ್ದು. ಅವರ ಆಶಯಕ್ಕೆ ಸಾಥ್‌ ಕೊಡುವ ಶಿವಣ್ಣ, ಆ ನಿಟ್ಟಿನಲ್ಲಿ ಊರಲ್ಲೊಂದು ಕನ್ನಡ ಜಾತ್ರೆ ನಡೆಸಿ, ದೊರಂಗೌ ಅವರನ್ನು ಸನ್ಮಾನಿಸಲು ತೀರ್ಮಾನಿಸುತ್ತಾನೆ. ಅವರ ಆಶಯ ಈಡೇರುತ್ತೆ. ಒಂದು ಘಟನೆಯಲ್ಲಿ ಶಿವಣ್ಣ ಅಪಘಾತಕ್ಕೀಡಾಗಿ, ಸಾವು ಬದುಕಿನೊಂದಿಗೆ ಹೋರಾಡುತ್ತಾನೆ. ಆಮೇಲೆ ಏನಾಗುತ್ತೆ ಎಂಬುದೇ ಸಸ್ಪೆನ್ಸ್‌.

ಆರವ್‌ ಸೂರ್ಯ ನಟನೆಯಲ್ಲಿ ಉತ್ಸಾಹವೇನೋ ಇದೆ. ಆದರೆ, ಇನ್ನಷ್ಟು ಚುರುಕಾಗಬೇಕಿದೆ. ನಟಿ ಅಕ್ಷರ, ಭರತನಾಟ್ಯ ಚೆನ್ನಾಗಿ ಮಾಡುವುದು ಬಿಟ್ಟರೆ, ಅವರ ನಟನೆ ಬಗ್ಗೆ ಹೇಳುವಂಥದ್ದೇನಿಲ್ಲ. ದೊರಂಗೌ ಅವರು ನಿರ್ದೇಶಕರನ್ನು ಹೇಳಿದ್ದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಡಿಂಗ್ರಿನಾಗರಾಜ್‌, ರಮಾನಂದ್‌, ಶಂಕರ್‌ಭಟ್‌, ಅರವಿಂದ್‌ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ರಾಗರಮಣ ಸಂಗೀತದಲ್ಲಿ ಸ್ವಾದ ಬೇಕಿತ್ತು. ಶ್ರೀನಾಥ್‌ ಕ್ಯಾಮೆರಾ ಕೈಚಳಕದಲ್ಲಿ ಹಳ್ಳಿಯ ಸೊಬಗು ಕಳೆಗುಂದಿದೆ.

ಚಿತ್ರ: ಹಳ್ಳಿ ಸೊಗಡು
ನಿರ್ಮಾಣ: ಸತೀಶ್‌ಕುಮಾರ್‌ ಮೆಹ್ತಾ
ನಿರ್ದೇಶನ: ಕಪಿಲ್‌
ತಾರಾಗಣ: ಆರವ್‌ ಸೂರ್ಯ, ಅಕ್ಷರ, ಡಾ.ದೊಡ್ಡರಂಗೇಗೌಡ, ಡಿಂಗ್ರಿನಾಗರಾಜ್‌, ರಮಾನಂದ್‌, ಶಂಕರ್‌ಭಟ್‌, ಅರವಿಂದ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next