Advertisement

ಭ್ರಷ್ಟಾಚಾರ ರಹಿತ ಅಭಿವೃದ್ಧಿ ಪರ್ವ ಆರಂಭ

11:49 AM Apr 18, 2022 | Team Udayavani |

ಹುಬ್ಬಳ್ಳಿ: ರಾಜಕೀಯ ಪಕ್ಷಗಳ ನಡುವಿನ ಹೊಂದಾಣಿಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದೆ, ಅಭಿವೃದ್ಧಿ ಕುಂಠಿತವಾಗಿದೆ. ಭ್ರಷ್ಟ-ಹೊಂದಾಣಿಕೆ ವ್ಯವಸ್ಥೆ ಬದಲಿಸಿ, ಅಭಿವೃದ್ಧಿ ಪರ್ವ ಆರಂಭಿಸಲು ಆಮ್‌ಆದ್ಮಿ ಪಕ್ಷ ಜನರ ಮನ-ಮನೆ ಪ್ರವೇಶಿಸುವ ಕಾರ್ಯ ಮಾಡಲಿದೆ ಎಂದು ಆಮ್‌ಆದ್ಮಿ ಪಕ್ಷದ ನಾಯಕ ಭಾಸ್ಕರರಾವ್‌ ತಿಳಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಂದಾಣಿಕೆ ರಾಜಕಾರಣದಿಂದಲೇ ನೈತಿಕತೆ ಕಳೆದುಕೊಂಡಿರುವ ರಾಜಕೀಯ ಪಕ್ಷಗಳು ಯಾವುದಾದರೂ ಪ್ರಕರಣ ನಡೆದರೆ ಟೊಳ್ಳು ಹೇಳಿಕೆ, ವಿರೋಧ ತೋರುತ್ತಿವೆಯೇ ವಿನಃ ಪ್ರಾಮಾಣಿಕತೆ ಇಲ್ಲವಾಗಿದೆ. ಭ್ರಷ್ಟ ವ್ಯವಸ್ಥೆ ತೊಲಗಬೇಕು, ಹೊಂದಾಣಿಕೆ ನಿಲ್ಲಬೇಕು, ಜನತೆಗೆ ಮೂಲಭೂತ ಸೌಲಭ್ಯಗಳು ಪ್ರಾಮಾಣಿಕವಾಗಿ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಇರುವ ಕೆಟ್ಟ ವ್ಯವಸ್ಥೆ ಬದಲಾಯಿಸಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಆಮ್‌ ಆದ್ಮಿ ಪಕ್ಷ ಹಲವು ಯೋಜನೆ ಹೊಂದಿದೆ ಎಂದರು.

ದೆಹಲಿಯಲ್ಲಿ ಈಗಾಗಲೇ ಇದನ್ನು ಮಾಡಿ ತೋರಿಸಿದೆ. ಪಂಜಾಬ್‌ ಜನರ ವಿಶ್ವಾಸ ಗಳಿಸಿ ಅಲ್ಲಿಯೂ ಅಭಿವೃದ್ಧಿ ಪರ್ವ ಆರಂಭಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಒಲವು ಗಳಿಸುವತ್ತ ಮಹತ್ವದ ಹೆಜ್ಜೆ ಇರಿಸಿದೆ. ರಾಜ್ಯದಲ್ಲೂ ಸಂಘಟನೆ ಬಲ ಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಯಾವುದೇ ರಾಜಕ್ಕೆ ಹಣದ ಕೊರತೆ ಇಲ್ಲ. ಇರುವುದು ಅಭಿವೃದ್ಧಿ ಯೋಜನೆಗಳ ಪ್ರಾಮಾಣಿಕ ಅನುಷ್ಠಾನದ ಇಚ್ಛಾಶಕ್ತಿ ಕೊರತೆ ಇದೆ. ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸರಕಾರಿ ಶಾಲೆಗಳಿಗೆ ದೆಹಲಿ ಮಾದರಿಯಲ್ಲಿ ಕಾಯಕಲ್ಪ, ಅಗತ್ಯ ಮೂಲಸೌಲಭ್ಯ, ಮಹಿಳಾ ಸುರಕ್ಷತೆಗೆ ಒತ್ತು ನೀಡಲಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಅನೇಕ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ, ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಉತ್ತರದಲ್ಲಿ ಜಲ, ಕೃಷಿ ಉತ್ಪನ್ನ ಸಂಪತ್ತಿಗೆ ಕೊರತೆ ಇಲ್ಲ. ಆದರೆ ನೀರಿನ ಬಳಕೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕಾರ್ಯ ಆಗುತ್ತಿಲ್ಲ. ರಾಜ್ಯದೆಲ್ಲೆಡೆ ಇದೇ ಸ್ಥಿತಿ ಇದೆ. ಇಷ್ಟು ವರ್ಷ ಆಡಳಿತ ನಡೆಸಿದ ರಾಜಕೀಯ ಪಕ್ಷಗಳಿಗೆ ಇದನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.

ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ, ಧಾರವಾಡದ ನುಗ್ಗಿಕೇರಿಯಲ್ಲಿ ಹಣ್ಣಿನ ವ್ಯಾಪಾರಿ ಮೇಲೆ ಹಲ್ಲೆ, ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆ ಪ್ರಕರಣ ಬಗ್ಗೆ ಸರಕಾರದ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲವಾಗಿದೆ. ಪಿಎಸ್‌ಐ ನೇಮಕದಲ್ಲಿ 56 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪೊಲೀಸ್‌ ನೇಮಕಾತಿಯಲ್ಲಿ ಪಾದರ್ಶಕತೆಯೊಂದಿಗೆ ಕರ್ನಾಟಕ ಐಎಸ್‌ಒ ಪ್ರಮಾಣಪತ್ರ ಪಡೆದಿದ್ದು, ದೇಶದಲ್ಲಿಯೇ ಉತ್ತಮ ಸ್ಥಾನ ಹೊಂದಿದೆ.

Advertisement

ಆದರೆ ಈ ಪ್ರಕರಣ ಇಡೀ ವ್ಯವಸ್ಥೆಗೆ ಕಪ್ಪುಚುಕ್ಕೆಯಂತಾಗಿದೆ. ನಾನು ಪೊಲೀಸ್‌ ಇಲಾಖೆಯಲ್ಲಿಯೇ ಇದ್ದೆ. ಹಿಂದೆ ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಸಂದರ್ಶನದಲ್ಲಿ 10 ಅಂಕಗಳು ಇರುತ್ತಿದ್ದವು. ಅಂಕ ಹಾಕಲು ಒತ್ತಡಗಳು ಬರುತ್ತಿದ್ದವಾದರೂ ನೇಮಕಾತಿ ಪಾರದರ್ಶಕತೆ ಮೀರಿರಲಿಲ್ಲ. ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿದೆ. ಅನ್ಯಾಯಕ್ಕೊಳಗಾದವರು ಹೈಕೋರ್ಟ್‌ ಮೊರೆ ಹೋಗುವಂತೆ ಹೇಳಿದ್ದೇನೆ. ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮತ್ತೂಮ್ಮೆ ಪರೀಕ್ಷೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ರಾಜ್ಯ ಸರಕಾರ ಉತ್ತಮ ಆಡಳಿತ ದಿನವಾಗಿ ಆಚರಿಸಿತ್ತು. ದುರಹಂಕಾರ, ಹಣದ ದರ್ಪದಲ್ಲಿರುವ ಬಿಜೆಪಿ ಸರಕಾರ ಯಾವ ನೈತಿಕತೆಯಿಂದ ದಿನಾಚರಣೆ ಕೈಗೊಂಡಿದೆ ಎಂದು ತಿಳಿಯುತ್ತಿಲ್ಲ ಎಂದರು.

ಎಎಪಿ ಮುಖಂಡರಾದ ರೇವಣ ಸಿದ್ದಪ್ಪ, ಎಂ. ಅರವಿಂದ, ರಾಜು ಟೋಪಣ್ಣವರ, ಅನಂತಕುಮಾರ ಬುಗಡಿ, ವಿಕಾಸ ಸೊಪ್ಪಿನ ಇನ್ನಿತರರಿದ್ದರು. ಆಮ್‌ಆದ್ಮಿ ಪಕ್ಷದ ಹು.ಧಾ.ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ ಅವರು ಕೋಮು ಸೌಹಾರ್ದತೆಗಾಗಿ ಬೆಂಗಳೂರುವರೆಗೆ ಕೈಗೊಂಡ ಸೈಕಲ್‌ ಯಾತ್ರೆಗೆ ಭಾಸ್ಕರರಾವ್‌ ಚಾಲನೆ ನೀಡಿದರು.

ಪೊಲೀಸರ ಕೈ ಕಟ್ಟಿ ಹಾಕಿದ್ದರಿಂದ ಗಲಭೆಗಳು ಹೆಚ್ಚಳ

ಧಾರವಾಡ: ಪ್ರಸ್ತುತ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಆದ್ದರಿಂದ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ಪೊಲೀಸರಿಗೆ ಅವರ ಅಧಿಕಾರ ನೀಡಿದ್ದರೆ ಹುಬ್ಬಳ್ಳಿ ಘಟನೆ ತಡೆಯಲು ಆಗುತ್ತಿರಲಿಲ್ಲವೇ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಭಾಸ್ಕರ್‌ರಾವ್‌ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್‌ ಅಧಿಕಾರಿಯಿಂದ ಲಂಚ ಪಡೆಯುವ ಶಾಸಕರು, ಸಚಿವರು ಅವರನ್ನು ತಮಗೆ ಬೇಕಾದ ಸ್ಥಳಕ್ಕೆ ನಿಯೋಜಿಸುತ್ತಾರೆ. ಪೊಲೀಸ್‌ ಇಲಾಖೆ ಶಿಸ್ತಿನ ಇಲಾಖೆ. ಆದರೆ ಲಕ್ಷಾಂತರ ರೂ. ನೀಡಿ ಅಧಿಕಾರಕ್ಕೇರುವವರ ನಿಷ್ಠೆ ಯಾರಿಗೆ ಇರುತ್ತದೆ? ಲಂಚ ಕೊಟ್ಟು ಮೇಲೆ ಬಂದ ಪೊಲೀಸರು ಭ್ರಷ್ಟ ರಾಜಕಾರಣಿಗಳಿಗೆ ಸೆಲ್ಯೂಟ್‌ ಹೊಡಿಯುತ್ತಾ, ಶಾಸಕ, ಸಚಿವರ ಮನೆ ಕಾಯುತ್ತಲೇ ಇರುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next