Advertisement

ಬಗೆಹರಿಯಲಿದೆ ವಂಡ್ಸೆ ಪರಿಸರದ ಗ್ರಾಮಸ್ಥರ ಉಪ್ಪು ನೀರಿನ ಸಮಸ್ಯೆ

06:35 PM Jan 04, 2023 | Team Udayavani |

ವಂಡ್ಸೆ: ದೇವಲ್ಕುಂದ, ವಂಡ್ಸೆ, ಕರ್ಕುಂಜೆ, ಚಿತ್ತೂರು ಗ್ರಾಮ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಆತ್ರಾಡಿ ಬಳಿ ನಿರ್ಮಿಸಲಾಗಿರುವ ಬಹುಕೋಟಿ ರೂ. ವೆಚ್ಚದ ನೂತನ ವೆಂಟೆಡ್‌ ಡ್ಯಾಮ್‌ ಸಂಪೂರ್ಣಗೊಂಡಿದ್ದು, ಕ್ರಸ್ಟ್‌ ಗೇಟ್‌ ಅಳವಡಿಕೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಉಪ್ಪು ನೀರಿನ ಸಮಸ್ಯೆಗೊಂದು ಶಾಶ್ವತ ಪರಿಹಾರ ದೊರಕಲಿದೆ.

Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಂಡ್ಸೆ ಪರಿಸರದಲ್ಲಿ ಚಕ್ರಾ ನದಿಯ ಉಪ್ಪು ನೀರಿನಿಂದಾಗಿ ಬಾವಿಗಳಲ್ಲಿ ಉಪ್ಪು ನೀರು ಬಂದು ಸೇರುವುದರಿಂದ ಬಳಸಲು ಎದುರಾದ ಸಮಸ್ಯೆಯಿಂದಾಗಿ ಅಲ್ಲಿನ ಅನೇಕ ನಿವಾಸಿಗಳು ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಇತರೆಡೆಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು. ವಂಡ್ಸೆ ಗ್ರಾ.ಪಂ. ಅದಕ್ಕೊಂದು ಪರಿಹಾರ ಒದಗಿಸಲು ಶಾಸಕರು, ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.

ಶಾಸಕರ ಪ್ರಯತ್ನದ ಫಲ
ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರು ಸರಕಾರದ ಮೇಲೆ ಒತ್ತಡ ಹೇರಿ ವಂಡ್ಸೆ ಪರಿಸರದ ಗ್ರಾಮಸ್ಥರಿಗೆ ಎದುರಾದ ಬಾವಿಯ ಉಪ್ಪು ನೀರಿನ ಸಮಸ್ಯೆ ನಿಭಾಯಿಸಿ, ಸಣ್ಣ ನೀರಾವರಿ ಇಲಾಖೆಯಿಂದ 7.5 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿ ಕಾಮಗಾರಿಗೆ ಅನುವುಗೊಳಿಸಿದ್ದಾರೆ.

ಜೋಡಿಸುತ್ತಿರುವ ಕ್ರಸ್ಟ್‌ ಗೇಟ್‌
ತುರ್ತಾಗಿ ಜೋಡಿಸಬೇಕಾದ ಕ್ರಸ್ಟ್‌ ಗೇಟ್‌ಗಳ ಜೋಡಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಕೂಡಲೇ ಕ್ರಸ್ಟ್‌ ಗೇಟ್‌ ಅಳವಡಿಸದಿದ್ದಲ್ಲಿ ವಂಡ್ಸೆ ಪೇಟೆ ನಿವಾಸಿಗಳಿಗೆ ನಳ್ಳಿ ನೀರಿನಲ್ಲಿ ಉಪ್ಪು ಸೇರಿದರೆ ಮತ್ತೆ ಅದೇ ಗೊಂದಲ ಮುಂದುವರಿಯುವುದು. ವೆಂಟೆಡ್‌ ಡ್ಯಾಮ್‌ ನಿರ್ಮಾಣಕ್ಕೆ ಮೊದಲು ತಡೆಗೋಡೆ ನಿರ್ಮಿಸಿ, ಉಪ್ಪು ನೀರು ಹರಿಯದಂತೆ ಕ್ರಮಕೈಗೊಳ್ಳಲಾಗಿತ್ತು. ಇದೀಗ ಡ್ಯಾಮ್‌ ನಿರ್ಮಾಣಕ್ಕಾಗಿ ತಡೆಗೋಡೆ ತೆರವುಗೊಳಿಸಿರುವುದರಿಂದ ಹೊಳೆಯಲ್ಲಿ ನೀರಿನ ಉಬ್ಬರ ಇಳಿತದಿಂದಾಗಿ ಮತ್ತೆ ಉಪ್ಪು ನೀರು ಹರಿದುಬರುವ ಸಾಧ್ಯತೆ ಇದೆ.

ಕ್ರಸ್ಟ್‌ ಗೇಟ್‌ ಅಳವಡಿಸುವಂತೆ ಕೋರಿಕೆ
ವಿಳಂಬವಾಗುತ್ತಿರುವ ಕ್ರಸ್ಟ್‌ ಗೇಟ್‌ ಅಳವಡಿಕೆ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಇಲಾಖೆ ಹಾಗೂ ಗುತ್ತಿಗೆದಾರರು ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ.

Advertisement

ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಕ್ರಮ
ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಹೊಳೆಯ ನೀರಿನ ಆಳದಲ್ಲಿ ಕಾಮಗಾರಿ ನಡೆಸಬೇಕಾಗಿರುವುದರಿಂದ ಒಂದಿಷ್ಟು ಕಾಲಾವ ಧಿ ಹಿಡಿಯುತ್ತದೆ. ಜ.2ರಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಹುಕಾಲದ ಬೇಡಿಕೆ
ವಂಡ್ಸೆ ಪರಿಸರದ ಗ್ರಾಮಸ್ಥರಿಗೆ ಎದುರಾಗಿದ್ದ, ಉಪ್ಪು ನೀರಿನ ಸಮಸ್ಯೆ ನಿಭಾಯಿಸುವಲ್ಲಿ ಚಕ್ರಾ ನದಿಗೆ ಕಿಂಡಿ ಅಣೆಕಟ್ಟನ್ನು ರಚಿಸಿ ಗ್ರಾಮಸ್ಥರ ಬೇಡಿಕೆ ಈಡೇರಿಸುವಲ್ಲಿ ಕೈಗೊಂಡ ಕ್ರಮ ತೃಪ್ತಿ ತಂದಿದೆ. ವಂಡ್ಸೆ, ದೇವಲ್ಕುಂದ, ಚಿತ್ತೂರು, ಕರ್ಕುಂಜೆ ಪರಿಸರದ ಗ್ರಾಮನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಅಲ್ಲದೇ ಅಂತರ್ಜಲ ಮಟ್ಟವೂ ವೃದ್ಧಿಯಾಗಲಿದೆ.
-ಉದಯಕುಮಾರ್‌ ಶೆಟ್ಟಿ, ಅಧ್ಯಕ್ಷರು,
ಗ್ರಾ.ಪಂ. ವಂಡ್ಸೆ

ಕೃಷಿ ಭೂಮಿಗೆ ಅನುಕೂಲ
ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ವಂಡ್ಸೆ ಪರಿಸರದ ನಿವಾಸಿಗಳಿಗೆ ಎದುರಾಗಿದ್ದ ಕುಡಿಯುವ ಉಪ್ಪು ನೀರಿನ ಸಮಸ್ಯೆ ಬಗೆಹರಿಸಿದಂತಾಗಿದೆ. ಕೃಷಿ ಭೂಮಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ.
– ವಂಡ್ಸೆ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next