Advertisement

ಸಮಸಮಾಜದ ಕನವರಿಕೆಯಲ್ಲಿ…

01:27 AM Apr 27, 2021 | Team Udayavani |

ಬಡತನ ಒಂದು ಜಾಗತಿಕ ಸಮಸ್ಯೆ. ಅದು ಪಾಪವೇನಲ್ಲ ನಿಜ, ಆದರದು ಅಭಿವೃದ್ಧಿಶೀಲ ಸಮಾಜಕ್ಕಂಟಿದ ಶಾಪವಂತೂ ಹೌದು. ಸಂಪತ್ತಿನ ಅಸಮಾನ ಹಂಚಿಕೆಯು ಸಮಷ್ಠಿಪ್ರಜ್ಞೆಯ ಆಶಯಕ್ಕೆ ವಿರುದ್ಧವಾದ ಬೆಳವಣಿಗೆಯಲ್ಲದೆ ಮತ್ತೂಬ್ಬರ ಬದುಕಿನ ಹಕ್ಕನ್ನು ಕಿತ್ತುಕೊಳ್ಳಬಲ್ಲ ಅಪಾಯಕಾರಿ ಪರಿಸ್ಥಿತಿಯೂ ಹೌದು. “ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು’ ಎಂದವರು ಅರ್ಥಶಾಸ್ತ್ರಜ್ಞ ಆ್ಯಡಂ ಸ್ಮಿತ್‌. ರಾಷ್ಟ್ರದ ಅಭ್ಯುದಯದಲ್ಲಿ ದಣಿವರಿಯದೆ ದುಡಿಯುವ ಶ್ರಮಿಕವರ್ಗಕ್ಕೆ ದುಡಿಮೆಯ ಅವಕಾಶದ ಕೊರತೆಯ ಬಗ್ಗೆ ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳ ಬೇಕಾದ ಸಂದರ್ಭವಿದು. ಶರಣಸಂಕುಲದ ಉತ್ಕಟ ಹಂಬಲವಾಗಿದ್ದ ಸಮಸಮಾಜದ ಪರಿಕಲ್ಪನೆಯು ಈಗಲೂ ನನಸಾಗದ ಕನಸಾಗಿಯೇ ಉಳಿದಿರುವುದು ದುರಂತ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವೀಗ ಮತ್ತಷ್ಟು ವಿಸ್ತಾರ.

Advertisement

ಯಾವುದೇ ದೇಶದ ಕ್ಷೇಮಾಭಿವೃದ್ಧಿಯ ಸೂಚ್ಯಂಕವು ಅಲ್ಲಿನ ಜನರ ಜೀವನಮಟ್ಟವನ್ನು ಅವಲಂಬಿಸಿರುತ್ತದೆ. ದಕ್ಕಿರುವ ಮೂಲಭೂತ ಸೌಲಭ್ಯಗಳು, ದುಡಿಮೆಯ ಅವಕಾಶ, ಉತ್ಪಾದಕತೆ ಮತ್ತು ಕೊಳ್ಳುವ ಸಾಮರ್ಥ್ಯದ ಮೇಲೆಯೇ ನಿರ್ಧ ರಿತವಾಗುತ್ತದೆ. ಅದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕೈಗನ್ನಡಿ ಕೂಡ. ಕಾಲಾಂತರ ದಿಂದ ಸರಕಾರದ ಸಾಮಾಜಿಕ ಕಾಳಜಿಯಡಿ ಯಲ್ಲಿ ಬಡತನ ನಿರ್ಮೂಲನೆಗೆ ಲೆಕ್ಕವಿರದಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬರಲಾಗಿದೆ. ಫ‌ಲಿತಾಂಶದಲ್ಲಿ ಮಾತ್ರ ಕಳಪೆ ಸಾಧನೆ! “ಗರೀಬೀ ಹಟಾವೋ’ ಯಶಸ್ವಿಯಾಗುವುದು “ಗರೀಬೋಂಕಾ ಹಟಾವೋ’ ಆದಾಗಲೇ ಎಂಬಂತಹ ಕುಹಕವೊಂದು ಹುಟ್ಟಿಕೊಂಡದ್ದು ಪರಿಸ್ಥಿತಿಯ ವ್ಯಂಗವೂ ಹೌದು.

ಬಡವರೆಂದರೆ ಸಣ್ಣ ವ್ಯಾಪಾರಿಗಳು, ಅತೀ ಸಣ್ಣ ರೈತರು, ಕೂಲಿಯಾಳುಗಳು, ರಸ್ತೆ- ಕಟ್ಟಡ ಕಾರ್ಮಿಕರು, ಹಮಾಲಿಗಳು, ಕೈಗಾಡಿ ಎಳೆಯುವ ವರು, ಸ್ವತ್ಛತಾಕಾರ್ಯದಲ್ಲಿ ನಿರತರಾದವರು ಮತ್ತು ನಿರ್ಗತಿಕರನ್ನು ಒಳಗೊಂಡ ದೊಡ್ಡ ಸಂಖ್ಯೆಯ ಶ್ರಮ ಜೀವಿಗಳು. ದೇಶ ಕಟ್ಟುವ, ಸಂಪತ್ತು ಸೃಷ್ಟಿಸುವ, ಸಮಾಜದ ಜೀವಾಳವೇ ಇವರು. ನೆಲ-ಜಲ, ನಾಡು-ನುಡಿ, ಭಾಷೆ-ಸಂಸ್ಕೃತಿಯ ನೈಜ ವಾರಸು ದಾರರು. ಆದರೂ ಎರಡು ಹೊತ್ತಿನ ಊಟ, ನೆರಳಿಗೊಂದು ನೆಲೆ, ಶುದ್ಧ ಗಾಳಿ-ನೀರು, ಕನಿಷ್ಠ ಓದು- ಬರೆಹ, ಆರೋಗ್ಯ ಸೌಲಭ್ಯಗಳ ಖಾತ್ರಿ ಇರದ ನತದೃಷ್ಟರು.

“ಬಡಕೂಲಿ ಕಾರ್ಮಿಕರ ಮತ್ತು ಮಹಿಳೆಯರ ದುಡಿಮೆಗೆ ಸೂಕ್ತ ವೇತನ ನೀಡದ ಮರೆಮಾಚಿದ ವ್ಯವಸ್ಥೆಯೇ ನಮ್ಮದುರಿಗಿದೆ. ಇದೇ ನಮ್ಮ ಸಮಾಜ, ವಹಿವಾಟು ಮತ್ತು ಆರ್ಥಿಕತೆಯನ್ನು ಮುನ್ನಡೆಸುತ್ತಿದೆ. ಸಿರಿವಂತರು ಮತ್ತು ಕಾರ್ಪೋರೆಟ್‌ ಸಂಸ್ಥೆಗಳಿಗೆ ಸರಕಾರ ಕಡಿಮೆ ತೆರಿಗೆ ವಿಧಿಸುತ್ತಿದೆ. ರಿಯಾಯಿತಿ ಬೆಲೆಯಲ್ಲಿ ನೀರು, ಜಾಗ, ರಸ್ತೆ, ವಿದ್ಯುತ್‌ ಮತ್ತಿತರ ಮೂಲ ಸವಲತ್ತುಗಳನ್ನು ಕರುಣಿಸುತ್ತದೆ. ಲಕ್ಷಾಂತರ ಕೋಟಿ ರೂಪಾಯಿಗಳ ಬ್ಯಾಂಕ್‌ ಹಿಂಬಾಕಿಯನ್ನು ಭರಿಸುತ್ತದೆ. ಆ ಮೂಲಕ ಶೋಷಿತರ ಹಿತ ಕಾಯುವ, ಬಡತನ ಮತ್ತು ಅಸಮಾನತೆ ನಿವಾರಣೆ ಉದ್ದೇಶದ ಕಾರ್ಯಕ್ರಮಗಳಿಗೆ ವರಮಾನವೇ ಇರದಂತಾಗುತ್ತದೆ’ ಎಂಬ ಆಕ್ಸ್‌ಫ್ಯಾಮ್‌ ಸಿಇಒ ಅಮಿತಾಬ್‌ ಬೆಹರ್‌ರ ಮಾತಿನಲ್ಲಿರುವ ಗಾಢ ಆತಂಕವು ಸ್ಫಟಿಕಸತ್ಯವಾಗಿ ಗೋಚರಿಸುತ್ತಿದೆ.

ಜನಸಂಖ್ಯೆಯ ಹೆಚ್ಚಳದ ಕಾರಣಕ್ಕೆ ತಲಾ ಆದಾಯವೂ ಕನಿಷ್ಠವಾಗಿರುವುದು ವಾಸ್ತವ. ಬಡತನವು ಕಾಲಾಂತರದಿಂದ ಸ್ಥಳದಿಂದ ಸ್ಥಳಕ್ಕೆ ಬದಲಾಗುವುದಿದೆ. ಪ್ರತಿಯೊಬ್ಬರೂ ಸಾಕಷ್ಟು ಆಹಾರ, ಸಮರ್ಪಕ ವಸತಿ, ಶಿಕ್ಷಣ ಲಭ್ಯತೆ, ಆರೋಗ್ಯ ಸೇವೆ, ಹಿಂಸೆಯಿಂದ ರಕ್ಷಣೆ ಮತ್ತು ಸಮುದಾಯದ ಧ್ವನಿಯನ್ನು ಹೊಂದಬೇಕಾದ್ದು ಅಪೇಕ್ಷಣಿಯ. ತಜ್ಞರ ಪ್ರಕಾರ ಕನಿಷ್ಠ ಆಹಾರೇತರ ವೆಚ್ಚದ ಜತೆಗೆ ಸರಾಸರಿ ದಿನವೊಂದರ ಬಳಕೆಗೆ ಅಗತ್ಯ ತಲಾ 2.4 ಕಿ. ಕ್ಯಾಲರಿ ಶಕ್ತಿಯು ಗ್ರಾಮೀಣ ಪ್ರದೇಶದವರಿಗಾದರೆ ನಗರಪ್ರದೇಶದಲ್ಲಿ 2.1 ಕಿ. ಕ್ಯಾಲರಿಯಷ್ಟು ಭರಿಸುವ ತಲಾ ಅನುಭೋಗ ವೆಚ್ಚದ ಮಟ್ಟವನ್ನು ಬಡತನ ರೇಖೆ ಅಥವಾ ನಿರಪೇಕ್ಷ ಬಡತನ ಎನ್ನಲಾಗಿದೆ. ದೇಶದ ಮುಕ್ಕಾಲು ಪಾಲು ಜನಸಂಖ್ಯೆ ಅದರ ಗಡಿಯಲ್ಲಿಯೇ ಇದೆ. ಕೊರೊನಾ ಕಾಲದಲ್ಲಂತೂ ಮಧ್ಯಮ ವರ್ಗ ಬಡವರಾಗಿ, ಬಡವರು ಕಡುಬಡವರಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

Advertisement

ವರ್ತಮಾನವನ್ನು ಕಾಡುತ್ತಿರುವ ಜನಸಂಖ್ಯಾ ಸ್ಫೋಟ, ತೀವ್ರತರದ ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ, ಬೆಲೆ ಏರಿಕೆಯ ಬಿಸಿ, ಬಾಗಿಲು ಮುಚ್ಚಿಕೊಳ್ಳುತ್ತಿರುವ ಸಾರ್ವಜನಿಕ ಉದ್ದಿಮೆಗಳು, ನೈಸರ್ಗಿಕ ವಿಕೋಪಗಳು, ತೀವ್ರಗತಿಯ ಪರಿಸರ ಮಾಲಿನ್ಯ, ಅರಣ್ಯನಾಶ, ಹವಾಮಾನ ವೈಪರಿತ್ಯ ಮತ್ತು ಜಗತ್ತನ್ನು ವ್ಯಾಪಿಸುತ್ತಿರುವ ಕೊರೊನಾದಂತಹ ವ್ಯಾಧಿಗಳೆಲ್ಲ “ಆಧುನಿಕ ಜಗತ್ತಿನ ನಡಿಗೆ ವಿನಾಶ ದೆಡೆಗೆ’ ಎಂಬ ಕಹಿಸತ್ಯವನ್ನು ಧ್ವನಿಸುತ್ತವೆ. ಶೋಷಿತರಿಗೆ ಮಾತ್ರವಲ್ಲ ಸ್ಥಿತಿವಂತರಿಗೂ ಕೂಡ ಮುಂಬರಲಿರುವ ಸಂಕಟ ಮತ್ತು ಸಂಕಷ್ಟಗಳ ಬಗ್ಗೆ ಕಹಿಭವಿಷ್ಯ ನುಡಿಯುತ್ತಿವೆ. ಭರವಸೆಯ ನಾಳೆಗಳ ಕುರಿತು ಆತಂಕ-ಅನುಮಾನಗಳನ್ನು ಮೂಡಿಸುತ್ತವೆ. ಬಹುವ್ಯಕ್ತಿ ಪ್ರಗತಿಗೆ ಒತ್ತುನೀಡಿ, ಸಮೂಹ ಜೀವನ, ಕೂಡಿ ದುಡಿಯುವಿಕೆಯಂತಹ ಆದರ್ಶಗಳಿಗೆ ಜಗತ್ತು ಈಗ ಎದುರುಗೊಳ್ಳಲೇಬೇಕಾದ ಜರೂರ ತ್ತಿದೆ. ಸೂಕ್ತ ಮತ್ತು ಸುಸ್ಥಿರ ಕಾರ್ಯತಂತ್ರದ ಮೂಲಕವಷ್ಟೇ ಬಡತನಕ್ಕೊಂದು ನ್ಯಾಯಯುತ ಪರಿಹಾರ ಕಂಡುಕೊಳ್ಳಲು ಸಾಧ್ಯ.

– ಸತೀಶ್‌ ಜಿ.ಕೆ., ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next