Advertisement

ಪದ್ಮಾವತ್‌ ವಿವಾದ  ಹದ್ದು ಮೀರಿ ಪ್ರತಿಭಟನೆ 

10:21 AM Jan 26, 2018 | |

ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ವಿಷಮಿಸುತ್ತಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಗಳಷ್ಟೇ ಕೇಂದ್ರವೂ ಹೊಣೆಗೇಡಿತನ ಪ್ರದರ್ಶಿಸಿದೆ.

Advertisement

ಪದ್ಮಾವತ್‌ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಎಲ್ಲ ಮಿತಿಯನ್ನು ದಾಟಿರುವಂತೆ ಕಾಣಿಸುತ್ತಿದೆ. ಹರ್ಯಾಣದ ಗುರುಗ್ರಾಮದಲ್ಲಿ ನಿನ್ನೆ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದು ಶಾಲಾ ಮಕ್ಕಳಿರುವ ಬಸ್‌ಗಳ ಮೇಲೆ ಕಲ್ಲು ತೂರಿದ್ದು ಅಕ್ಷಮ್ಯ ಅಪರಾಧ. ಇವರನ್ನು ಪ್ರತಿಭಟನೆಕಾರರು ಎನ್ನುವುದಕ್ಕಿಂತ ಗೂಂಡಾಗಳು ಎನ್ನುವುದೇ ಹೆಚ್ಚು ಸೂಕ್ತ. ಸುಮಾರು 50ರಷ್ಟಿದ್ದ ಪ್ರತಿಭಟನೆಕಾರರು ಶಾಲೆಯಿಂದ ಕಂದಮ್ಮಗಳನ್ನು ಕರೆದೊಯ್ಯುತ್ತಿದ್ದ ಎರಡು ಬಸ್‌ಗಳ ಮೇಲೆ ಮುಗಿ ಬಿದ್ದಿದ್ದಾರೆ. ಒಂದು ಬಸ್ಸಿನ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದ್ದಾರೆ. ತಕ್ಷಣ ಬಸ್ಸಿನಲ್ಲಿದ್ದ ಶಿಕ್ಷಕರು ಮತ್ತು ಚಾಲಕ ಸಮಯ ಪ್ರಜ್ಞೆ ತೋರಿಸದಿರುತ್ತಿದ್ದರೆ ಮುಗ್ಧ ಮಕ್ಕಳು ಅಪಾಯಕ್ಕೀಡಾಗುತ್ತಿದ್ದವು. ಮಕ್ಕಳಿಗೆಲ್ಲ ಸೀಟಿನ ಕೆಳಗೆ ತೂರಿಕೊಳ್ಳುವಂತೆ ಹೇಳಿದುದರಿಂದ ಕಲ್ಲೇಟು ಮತ್ತು ಗಾಜಿನ ತುಂಡುಗಳಿಂದಾಗಬಹುದಾದ ಗಾಯಗಳಿಂದ ಮಕ್ಕಳು ಪಾರಾಗಿವೆ. ಪ್ರತಿಭಟನೆಕಾರರ ಕೈಯಲ್ಲಿ ಪೆಟ್ರೋಲು ಬಾಂಬ್‌ಗಳು ಇದ್ದವು. ಎಲ್ಲಿಯಾದರೂ ಪೊಲೀಸರು ಚದುರಿಸದಿದ್ದರೆ ಅವರು ಬಸ್ಸುಗಳ ಮೇಲೆ ಬಾಂಬ್‌ ಎಸೆಯಲು ಹಿಂಜರಿಯುತ್ತಿರಲಿಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಈ ರೀತಿಯ ಪ್ರತಿಭಟನೆ ಬೇಕೆ? ಪ್ರತಿಭಟಿಸುವವರಿಗೆ ತಮ್ಮ ಮನೆಯಲ್ಲೂ ಇಂತಹ ಮಕ್ಕಳಿವೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇರಲಿಲ್ಲವೇ? ಬಾಲಿವುಡ್‌ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಶಾಲಾ ಬಸ್ಸಿನ ಮೇಲೆ ದಾಳಿ ಮಾಡಿರುವುದಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಇದೀಗ ಈ ಮಾದರಿಯ ಪ್ರತಿಭಟನೆಯನ್ನು ಹತ್ತಿಕ್ಕುವುದು ಸರಕಾರದ ಜವಾಬ್ದಾರಿ. ಆದರೆ ಸದ್ಯ ಯಾವ ಸರಕಾರಕ್ಕೂ ಈ ಇರಾದೆ ಇದ್ದಂತಿಲ್ಲ. ಏಕೆಂದರೆ ಪದ್ಮಾವತ್‌ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಭಾರೀ ಹಿಂಸಾಚಾರ ಸಂಭವಿಸಬಹುದು ಎಂದು ಮೊದಲೇ ಗೊತ್ತಿದ್ದರೂ ತಕ್ಕ ಭದ್ರತಾ ಏರ್ಪಾಡು ಪೊಲೀಸರು ಮಾಡಿಕೊಂಡಿಲ್ಲ ಅಥವಾ ಮಾಡಿಕೊಳ್ಳದಂತೆ ಅವರನ್ನು ತಡೆಯಲಾಗಿದೆ. ಅದರಲ್ಲೂ ಹರಿಯಾಣದ ಪೊಲೀಸರು ಗುಂಪು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಪದೇ ಪದೇ ವಿಫ‌ಲರಾಗುತ್ತಿದ್ದಾರೆ. ಬಾಬಾ ರಾಮ್‌ ರಹೀಂ ಘಟನೆಯ ಬಳಿಕವೂ ಅವರು ಪಾಠ ಕಲಿತುಕೊಂಡಿಲ್ಲ.  ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶಿಸಿದ ಪದ್ಮಾವತ್‌ ಚಿತ್ರ ಚಿತ್ರೀಕರಣ ಸಮಯದಿಂದಲೇ ವಿವಾದಕ್ಕೊಳಗಾಗಿತ್ತು. ರಜಪೂತರ ಹಿತ ರಕ್ಷಿಸುವ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಕರ್ಣಿ ಸೇನೆ ಚಿತ್ರದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿದೆ. ಪ್ರಸ್ತುತ ರಾಜಸ್ಥಾನ, ಹರಿಯಾಣ, ಗುಜರಾತ್‌, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ಕರ್ಣಿ ಸೇನೆಯಿದೆ.ಗಮನಾರ್ಹ ಅಂಶವೆಂದರೆ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆಯಿದೆ. ಪದ್ಮಾವತ್‌ನಲ್ಲಿ ರಜಪೂತರು ದೇವತೆ ಎಂದು ಪೂಜಿಸುತ್ತಿರುವ ರಾಣಿ ಪದ್ಮಿನಿಯನ್ನು ಅವಮಾನಕಾರಿಯಾಗಿ ತೋರಿಸಲಾಗಿದೆ ಎನ್ನುವುದು ಕರ್ಣಿ ಸೇನೆಯ ವಿರೋಧಕ್ಕೆ ಕಾರಣ. ವಿವಾದ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಕೊನೆಗೂ ಬಿಡುಗಡೆಗೆ ಅನುಮತಿ ಸಿಕ್ಕಿದೆ. ಚಿತ್ರ ಬಿಡುಗಡೆಯಾಗುವಾಗ ಹಿಂಸಾಚಾರ ನಡೆಯುವುದು ನಿರೀಕ್ಷಿತವೇ ಆಗಿತ್ತು. ಆದರೆ ಅದು ಈ ಮಟ್ಟಕ್ಕೆ ಹೋಗಬಹುದು ಎಂಬ ಕಲ್ಪನೆ ಇರಲಿಲ್ಲ. ಇಡೀ ಉತ್ತರ ಭಾರತ ಈ ಚಿತ್ರದ ಕಾರಣದಿಂದ ಹೊತ್ತಿ ಉರಿಯುತ್ತಿರುವುದು ದುರದೃಷ್ಟಕರ.

ಮನರಂಜನೆ ಒದಗಿಸುವ ಯಕಶ್ಚಿತ್‌ ಒಂದು ಸಿನೇಮಾ ದೇಶದ ರಾಜಕೀಯ ವ್ಯವಸ್ಥೆಯನ್ನು ನಿರ್ದೇಶಿಸುವುದು ಬಹುಶಃ ಭಾರತದಲ್ಲಿ ಮಾತ್ರ ಸಾಧ್ಯವೇನೋ? ಪದ್ಮಾವತ್‌ ಹಿಂಸಾಚಾರದ ಹಿಂದೆ ರಾಜಕೀಯ ಕುಮ್ಮಕ್ಕು ಇಲ್ಲ ಎಂದರೆ ನಂಬುವಷ್ಟು ಮುಗ್ಧರಲ್ಲ ಜನರು. ಅದರಲ್ಲೂ ಸದ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಹಿಂಸಾಚಾರ ತೀವ್ರಗೊಂಡಿರುವುದು ಇದನ್ನು ಪುಷ್ಟೀಕರಿಸುತ್ತಿದೆ. ಹೀಗಾಗಿ ಆಡಳಿತ ಪಕ್ಷವಾಗಲಿ ವಿರೋಧ ಫ‌ಕ್ಷವಾಗಲಿ ಹಿಂಸಾಚಾರ ಎಸಗುತ್ತಿರುವವರ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸುತ್ತಿದ್ದಾರೆ. ಸಾಮಾನ್ಯ ಸಂದರ್ಭದಲ್ಲಾಗಿದ್ದರೆ ತೀವ್ರ ಖಂಡನೆಗೆ ಗುರಿಯಾಗಬೇಕಿದ್ದ ಹಿಂಸಾಚಾರದ ವಿರುದ್ಧ ಈಗ ಎಲ್ಲರೂ “ರಾಜಕೀಯವಾಗಿ ಸರಿಯಾದ’ ಹೇಳಿಕೆಗಳನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದು ಹಿಂಸಾನಿರತರಿಗೆ ಇನ್ನಷ್ಟು ಕುಮ್ಮಕ್ಕು ನೀಡಿದೆ. ಕರ್ಣಿ ಸೇನೆ ಇತರ ಕೆಲವು ಸಂಘಟನೆಗಳ ನಾಯಕರು ಬಹಿರಂಗವಾಗಿಯೇ ಮೂಗು ಕತ್ತರಿಸುವ, ರುಂಡ ಚೆಂಡಾಡುವ, ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿದಾಗಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟು ವಿಷಮಿಸುತ್ತಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಗಳಷ್ಟೇ ಕೇಂದ್ರವೂ ಹೊಣೆಗೇಡಿತನ ಪ್ರದರ್ಶಿಸಿದೆ.ಇನ್ನಾದರೂ ಕಾನೂನು ಮತ್ತು ವ್ಯವಸ್ಥೆ ಪಾಲೆಯನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಗಳಿಗೆ ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next