Advertisement

ಅಭಿವೃದ್ಧಿ ಕಾಣದ ಹಳೇ ಊರು

12:21 PM Apr 06, 2018 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಹುಟ್ಟಿದ ಊರು, ಬೆಂಗಳೂರಿನ ಹೆಬ್ಟಾಗಿಲಿನಂತಿರುವ ಯಲಹಂಕ ವಿಧಾನಸಭಾ ಕ್ಷೇತ್ರ ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡನ್ನೂ ಸೇರಿಕೊಂಡು ಸಮ್ಮಿಶ್ರ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. 

Advertisement

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಾದ ನಂತರ ಎರಡು ಚುನಾವಣೆಯಲ್ಲಿ ಬಿಜೆಪಿಯ ಎಸ್‌.ಆರ್‌.ವಿಶ್ವನಾಥ್‌ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕರಾಗಿ ಸಾಕಷ್ಟು ಅನುದಾನ ತಂದು ಕೆಲಸ ಮಾಡಿದ್ದ ಅವರು, ಎರಡನೇ ಅವಧಿಯಲ್ಲಿ ಪ್ರತಿಪಕ್ಷದ ಶಾಸಕರಾಗಿ ಅಂದುಕೊಂಡಷ್ಟು ಕೆಲಸ ಮಾಡಿಲ್ಲ ಎಂಬುದು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಅಭಿಪ್ರಾಯ.

ಬಿಬಿಎಂಪಿಯ ನಾಲ್ಕು ವಾರ್ಡ್‌ಗಳು ಕ್ಷೇತ್ರದಲ್ಲಿದ್ದು, ಉಳಿದಂತೆ ಗ್ರಾಮೀಣ ಪ್ರದೇಶವೇ ಹೆಚ್ಚು. 12 ಜಿಲ್ಲಾ ಪಂಚಾಯಿತಿ, 15 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನೊಳಗೊಂಡಂತೆ 206 ಹಳ್ಳಿಗಳು ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಗ್ರಾಮೀಣ ಪ್ರದೇಶಗಳೂ ನಗರಕ್ಕೆ ಹೊಂದಿಕೊಂಡಿರುವುದರಿಂದ ಜಮೀನಿಗೆ ಹೆಚ್ಚಿನ ಬೆಲೆ ಬಂದಿದ್ದು, ಬಹುತೇಕರು ಮಾರಾಟ ಮಾಡಿದ್ದಾರೆ. ಅದರಲ್ಲೂ ದಾಸನಪುರ ಹೋಬಳಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದ ಭೂಮಿಯಲ್ಲಿ  ಖಾಸಗಿ ಅಪಾರ್ಟ್‌ಮೆಂಟ್‌ಗಳು ವ್ಯಾಪಕವಾಗಿ ತಲೆಎತ್ತಿವೆ.

ಹೊಸ ಊರು ಪರವಾಗಿಲ್ಲ, ಹಳೆಯ ಊರು ಅಭಿವೃದ್ಧಿ ಕಂಡಿಲ್ಲ ಎಂಬಂತೆ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಯಲಹಂಕ ನ್ಯೂಟೌನ್‌ನಲ್ಲಿ ಅಗಲವಾದ ರಸ್ತೆಗಳಿದ್ದು, ಈಗಲೂ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ, ಹಳೆಯ ಯಲಹಂಕದಲ್ಲಿ ಕಿರಿದಾದ ರಸ್ತೆಗಳ ಸಮಸ್ಯೆ ಇದ್ದು, ವಾಹನ ದಟ್ಟಣೆ ಹೆಚ್ಚಿರುವುದರಿಂದ ಪ್ರತಿ ನಿತ್ಯ ಜನರಿಗೆ ಕಿರಿಕಿರಿ ತಪ್ಪಿದ್ದಲ್ಲ.

Advertisement

ಕ್ಷೇತ್ರ ವ್ಯಾಪ್ತಿಯ ನಗರ ಪ್ರದೇಶಕ್ಕೆ ಕಾವೇರಿ ನೀರು ಬರುತ್ತಿದ್ದು, ಹೊಸದಾಗಿ ಸೇರ್ಪಡೆಯಾಗಿರುವ ಹಳ್ಳಿಗಳಿಗೆ ಇನ್ನೂ ಕಾವೇರಿ ನೀರು ತಲುಪಿಲ್ಲ. ಬೋರ್‌ವೆಲ್‌ಗ‌ಳಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಸಮಾಧಾನದ ಸಂಗತಿ ಎಂದರೆ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ರಾಜಾನುಕುಂಟೆ, ಅಲ್ಲಾಳಸಂದ್ರಗಳಲ್ಲಿ ಫ್ಲೈಓವರ್‌ ಮಾಡಲಾಗಿದೆ. ನಗರ ಪ್ರದೇಶದ ಕೆರೆಗಳ ಅಭಿವೃದ್ಧಿ ಪಡಿಸಲಾಗಿದ್ದು, ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಈಗಲೂ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಾಲ್ಮೀಕಿ ಭವನ, ಅಂಬೇಡ್ಕರ್‌ ಭ ವನ, ಕನಕ ಭವನ, ಸ್ತ್ರೀ ಶಕ್ತಿ ಭವನಗಳೇ ಗ್ರಾಮೀಣ ಭಾಗದ ಅಭಿವೃದ್ಧಿ ಮಾದರಿ.

ಕ್ಷೇತ್ರದಲ್ಲಿ  ಪ್ರಾಥಮಿಕ ಶಾಲೆಯಿಂದ ಪಿಜಿವರೆಗೂ ಒಂದೇ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸ ನಡೆಸಲು ಸರ್ಕಾರಿ ಕಾಲೇಜು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆ ಕೂಡ ನವೀಕರಣಗೊಳಿಸುವ ಕೆಲಸ ನಡೆದಿದೆ. ಹಳೆಯ ಯಲಹಂಕ ಮತ್ತು ಯಲಹಂಕ ನ್ಯೂಟೌನ್‌ಗಳಿಗೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಅರ್ಕಾವತಿ ನದಿ ಇದೇ ಕ್ಷೇತ್ರದಲ್ಲಿ ಹಾದು ಹೋಗಿದ್ದು, ನದಿ ಪುನಶ್ಚೇತನಕ್ಕೆ ಶಾಸಕರು ಪಾದಯಾತ್ರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 

ಹಿಂದಿನ ಫ‌ಲಿತಾಂಶ
-ಎಸ್‌.ಆರ್‌. ವಿಶ್ವನಾಥ್‌ (ಬಿಜೆಪಿ)- 75,507
-ಬಿ.ಚಂದ್ರಪ್ಪ (ಜೆಡಿಎಸ್‌)- 57,110
-ಗೋಪಾಲಕೃಷ್ಣ ಎಂ.ಎನ್‌. (ಕಾಂಗ್ರೆಸ್‌)- 52,372

ಶಾಸಕರು ಏನಂತಾರೆ?
ಕಳೆದ ಹತ್ತು ವರ್ಷಗಳ ಅವಧಿಲ್ಲಿ  ಕ್ಷೇತ್ರದಾದ್ಯಂತ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಿರೀಕ್ಷಿಸಿದಷ್ಟು ಅನುದಾನ ಬಾರದ ಕಾರಣ ಅಂದುಕೊಂಡಷ್ಟು ಕೆಲಸ ಸಾಧ್ಯವಾಗಿಲ್ಲ.
-ಎಸ್‌.ಆರ್‌.ವಿಶ್ವನಾಥ್‌

ಕ್ಷೇತ್ರದ ಮಹಿಮೆ: ಯಲಹಂಕ ನಾಡಪ್ರಭು ಕೆಂಪೇಗೌಡರ ಜನ್ಮಭೂಮಿ. ಹೀಗಾಗಿ, ಕೆಂಪೇಗೌಡರ ವಂಶಸ್ಥರ ಕೋಟೆಯ ಅವಶೇಷಗಳು, ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಈಗಲೂ ಇವೆ. ಈ ಭಾಗದಲ್ಲಿ ನಡೆಯುವ ಮಾಕಳಿ ಭೀಮೇಶ್ವರ ಜಾತ್ರೆ, ಮಧುರೆ ಶನಿಮಹಾತ್ಮ ಸ್ವಾಮಿ ದೇವಾಲಯ ಜಾತ್ರೆ ಇಲ್ಲಿ ಪ್ರಸಿದ್ಧಿ ಪಡೆದಿವೆ. ಒಂದೊಮ್ಮೆ ಬೆಂಗಳೂರಿಗೆ ಕುಡಿಯಲು ನೀರು ನೀಡಿದ್ದ ಹೆಸರಘಟ್ಟ ಕೆರೆ, ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ರೈಲ್ವೆ ಅಚ್ಚು ಮತ್ತು ಗಾಲಿ ಕಾರ್ಖಾನೆ  ಈ ಕ್ಷೇತ್ರದಲ್ಲಿವೆ.

ಕ್ಷೇತ್ರದ ಬೆಸ್ಟ್‌ ಏನು?: ಗ್ರಾಮೀಣ ಪ್ರದೇಶಗಳು ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಕೊಳವೆ ಬಾವಿ ನೀರು ಪೂರೈಕೆಯಾಗುವ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೂ ಒಂದೇ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸ ನಡೆಸಲು ಸರ್ಕಾರಿ ಕಾಲೇಜು ಅಭಿವೃದ್ಧಿ ಪಡಿಸಲಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ?: ಗ್ರಾಮೀಣ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿಯಾಗಿಲ್ಲ. ಅರ್ಕಾವತಿ ಪುನಶ್ಚೇತನ ಕಾರ್ಯಗತವಾಗಿಲ್ಲ. ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಹಳೇ ಯಲಹಂಕ ಪ್ರದೇಶದ ಕಿರಿದಾದ ರಸ್ತೆಗಳಿಂದ ಸಂಚಾರ ದಟ್ಟಣೆ ಸಮಸ್ಯೆ ತೀವ್ರವಾಗಿದೆ.

ಆಕಾಂಕ್ಷಿಗಳು
-ಬಿಜೆಪಿ- ಎಸ್‌.ಆರ್‌. ವಿಶ್ವನಾಥ್‌
-ಕಾಂಗ್ರೆಸ್‌- ಗೋಪಾಕೃಷ್ಣ, ಕೇಶವ, ರಾಜಣ್ಣ, ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ
-ಜೆಡಿಎಸ್‌- ನಿವೃತ್ತ ಎಸ್ಪಿ ಕೃಷ್ಣಪ್ಪ

ಜನ ದನಿ
ವಿಶ್ವನಾಥ್‌ ಶಾಸಕರಾದ ಮೇಲೆ  ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ರಸ್ತೆಗಳು, ಮೋರಿ ಸಮುದಾಯಭವನಗಳು, ಯಲಹಂಕ ಕೆರೆ ಅಭಿವೃದ್ಧಿ ಮಾಡಿದ್ದಾರೆ. ಹೇಳಿದ ಕೆಲಸ ಮಾಡುತ್ತಿದ್ದು, ಸಮಸ್ಯೆಗೆ ನೇರವಾಗಿ ಸ್ಪಂದಿಸುತ್ತಾರೆ.
-ಅಂಬರೀಷ್‌

ಹಳೇ ಯಲಹಂಕದಲ್ಲಿ ರಸ್ತೆ, ಸಮುದಾಯ ಭವನ, ಹೊಸ ಬಸ್‌ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಮಾಡಿದ್ದಾರೆ. ಹೌಸಿಂಗ್‌ ಬೋರ್ಡ್‌ನಿಂದ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಿಂದಿಗೆ ಹೋಲಿಸಿದರೆ ಅಪರಾಧ ಪ್ರಕರಣ ಕಡಿಮೆಯಾಗಿವೆ. 
-ರವಿಶಂಕರ್‌

ಕ್ಷೇತ್ರಕ್ಕೆ ಹೊಸದಾಗಿ ಸೇರಿದ ಗ್ರಾಮಗಳಿಗೆ ಕಾವೇರಿ ನೀರು ಬರುವುದಿಲ್ಲ. ಬೋರ್‌ವೆಲ್‌ ಮೂಲಕ ನೀರು ಕೊಡುತ್ತಾರೆ. ನಮ್ಮದೇನಾದರೂ ಕೆಲಸ ಇದ್ದರೆ ನೇರವಾಗಿ ಶಾಸಕರ ಬಳಿ ಹೋಗುತ್ತೇವೆ. ರೌಡಿಸಂ ಕಡಿಮೆಯಾಗಿದೆ.
-ರಾಜು

ನಮದು ಹಳ್ಳಿ. ಕುಡಿಯಲು ಬೋರ್‌ವೆಲ್‌ ನೀರು ಸಿಗುತ್ತಿದೆ. ರಸ್ತೆಗಳು ಟಾರ್‌ ಭಾಗ್ಯ ಕಂಡಿವೆ. ಯಾರ ಹತ್ತಿರವೂ ಸಮಸ್ಯೆ ಹೇಳಿಕೊಂಡು ಹೋಗುವುದಿಲ್ಲ. ಹೀಗಾಗಿ ಯಾರೇ ಬಂದರೂ ನಮಗೆ ತೊಂದರೆಯೂ ಇಲ್ಲ, ಅನುಕೂಲವೂ ಇಲ್ಲ.
-ತಾಯವ್ವ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next