Advertisement

ಕದ್ದು ಗುಡಿ ಸೇರುತ್ತಿದ್ದ ಕುಖ್ಯಾತನ ಸೆರೆ

11:31 AM Nov 17, 2017 | Team Udayavani |

ಬೆಂಗಳೂರು: ದಶಕಗಳ ಕಾಲ ಕಳವನ್ನೇ ವೃತ್ತಿಯನ್ನಾಗಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿಯನ್ನು ಭಾರತೀನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ನಿವಾಸಿ ಮಂಜುನಾಥ್‌ ಅಲಿಯಾಸ್‌ ಕಲ್ಕೇರೆ ಮಂಜ (32) ಬಂಧಿತ ಆರೋಪಿ.

Advertisement

ಈತನ ಬಂಧನದಿಂದ 6  ಕಳವು ಪ್ರಕರಣಗಳು ಪತ್ತೆಯಾಗಿದ್ದು, 30 ಲಕ್ಷ ರೂ. ಮೌಲ್ಯದ 850 ಗ್ರಾಂ ಚಿನ್ನಾಭರಣ, 850 ಗ್ರಾಂ ಬೆಳ್ಳಿ ವಸ್ತುಗಳು, ಒಂದು ಸ್ವಿಫ್ಟ್ ಕಾರು, 50 ಇಂಚಿನ ಎರಡು ಟಿವಿ ಮತ್ತು ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ.

ಯಾವುದೇ ಕೆಲಸಕ್ಕೆ ಹೋಗದೆ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಸತತ 15 ವರ್ಷಗಳ ಕಾಲ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಈತ, ಬೀಗ ಹಾಕಿರುವ ಮನೆಗಳನ್ನು ಕಬ್ಬಿಣದ ರಾಡ್‌ಗಳಿಂದ ಮೀಟಿ ಕಳವು ಮಾಡುತ್ತಿದ್ದ. ಮೂಲತಃ ರಾಣಿಪೇಟ್‌ನವನಾದ ಈತ ನಗರದ ಉತ್ತರಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಬೆಂಗಳೂರಿನ ಭಾರತೀನಗರ, ಪುಲಕೇಶಿ ನಗರ, ಸೋಲದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಮತ್ತು ಹಾಸನ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಕಳವು ಪ್ರಕರಣಗಳು ದಾಖಲಾಗಿದೆ. ಇದೇ ವರ್ಷ ಆ.26ರಂದು ಜೈಲಿನಿಂದ ಬಿಡುಗಡೆಯಾಗಿದ್ದ ಈತ, ಆ.31ರಂದು ಕಳ್ಳತನ ಕೃತದ್ಯದಲ್ಲಿ ತೊಡಗಿದ್ದ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇವಲ ಎರಡೇ ದಿನಗಳಲ್ಲಿ ಭಾರತೀನಗರ ಮತ್ತು ಪುಲಕೇಶಿನಗರ ವ್ಯಾಪ್ತಿಯಲ್ಲಿ ಇಬ್ಬರು ಉದ್ಯಮಿಗಳ ಮನೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಈತನ ಮೇಲೆ ಅನುಮಾನ ಬಂದಿತ್ತು. ಈತನನನ್ನು ಹುಡುಕಾಡುತ್ತಿದ್ದ ಪೊಲೀಸರಿಗೆ ಆರೋಪಿ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ. ಈತನಿಂದ ಚಿನ್ನಾಭರಣಗಳನ್ನು ಅಡವಿಟ್ಟುಕೊಳ್ಳುವವರ ವಿರುದ್ಧ ತನಿಖೆ ನಡೆಯುತ್ತಿದೆ. ಹಾಗೆಯೇ ಈತನನ್ನು ಜೈಲಿನಿಂದ ಬಿಡಿಸಲು ಜಾಮೀನು ನೀಡುವ ವ್ಯಕ್ತಿಗಳ ಬಗ್ಗೆಯೂ ನಿಗಾವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ದೇವರೇ ಶ್ರೀರಕ್ಷೆ: ಆರೋಪಿ ಮಂಜ, 10ನೇ ತರಗತಿ ಮುಗಿಯುತ್ತಿದ್ದಂತೆ ಕಳ್ಳತನಕ್ಕೆ ಇಳಿದಿದ್ದ. ಯಾರೊಟ್ಟಿಗೂ ಸೇರದ ಈತ ಕೃತ್ಯವೆಸಗುತ್ತಿದ್ದ. ರಾಮಮೂರ್ತಿನಗರದ ಕಲ್ಕೇರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಂಜ, ಪರಿಚಿತ ಪ್ರದೇಶಗಳಲ್ಲಿ ಮಾತ್ರ ಕಳವು ಮಾಡುತ್ತಿದ್ದ.

ಕಳವು ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಲ್ಲಿನ ದೇವಾಲಯಗಳಲ್ಲಿ ಮಲಗುತ್ತಿದ್ದ. ವಿಶೇಷವೆಂದರೆ ಯಾವುದೇ ಸಂದರ್ಭದಲ್ಲಿಯೂ ಪೊಲೀಸರು ದೇವಾಲಯದ ಮೇಲೆ ಪೊಲೀಸರು ಬಂದು ಪರಿಶೀಲನೆ ನಡೆಸುವುದಿಲ್ಲ ಎಂಬ ನಂಬಿಕೆ ಮೇಲೆ ಈ ರೀತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

44 ಕೇಸ್‌, 20 ಕ್ಲೀನ್‌ಚೀಟ್‌: 15 ವರ್ಷದ ಕಳ್ಳತನ ಜೀವನದಲ್ಲಿ ಈತನ ವಿರುದ್ಧ 44 ಪ್ರಕರಣಗಳು ದಾಖಲಾಗಿದ್ದು, 20 ಪ್ರಕರಣಗಳು ಖುಲಾಸೆಯಾಗಿವೆ. ಇನ್ನುಳಿದ 24 ಪ್ರಕರಣಗಳ ವಿಚಾರಣೆ ಬಾಕಿಯಿದೆ. ಎರಡು ವರ್ಷಗಳ ಹಿಂದೆ ಜೈಲು ಸೇರಿದ್ದ ಮಂಜುನಾಥ್‌, ಬಿಡುಗಡೆಯಾದ ಐದೇ ದಿನಗಳಲ್ಲಿ ಹಾಸನದಲ್ಲಿ ಮನೆಯೊಂದರ ಕಳ್ಳತನ ಮಾಡಿದ್ದ. ಇಲ್ಲಿ 550 ಗ್ರಾಂ ಚಿನ್ನ ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಕಾರು ಖರೀದಿ: ಹಾಸನದಲ್ಲಿ ಕಳವು ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ ಸ್ವಿಫ್ಟ್ ಕಾರು ಖರೀದಿಸಿದ್ದ. ಇದೇ ಕಾರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿ ಒಂಟಿ ಮನೆಗಳು, ಬೀಗ ಹಾಕಿದ ಮನೆಗಳನ್ನು ಪತ್ತೆ ಹಚ್ಚಿ ಕಳವು ಮಾಡುತ್ತಿದ್ದ. ಅದಕ್ಕಾಗಿ ಕಾರಿನಲ್ಲಿ ಆಯುಧಗಳನ್ನು ಕೂಡ ಇಟ್ಟಿದ್ದ. ಮನೆ ಬೀಗವನ್ನು ಸುಲಭವಾಗಿ ಮುರಿಯುವ ಸಲುವಾಗಿ ಎರಡು ಚೂಪೂಗೊಳಿಸಿದ ಕಬ್ಬಿಣದ ರಾಡ್‌ ಯಾವಾಗಲೂ ಕಾರಿನಲ್ಲಿರುತ್ತಿತ್ತು.

ಟಿವಿ ಕೊಟ್ಟ ಮಾಹಿತಿ!: ಕಳ್ಳತನಕ್ಕೆ ಹೋದಾಗ 50 ಇಂಚಿನ ಎರಡು ಟಿವಿಗಳನ್ನು ಕಳ್ಳತನ ಮಾಡಿದ್ದ ಮಂಜುನಾಥ್‌, ಈ ಪೈಕಿ ಒಂದನ್ನು ಅಡವಿಟ್ಟು ಹಣ ಪಡೆದುಕೊಳ್ಳುವ ಸಲುವಾಗಿ ಶಿವಾಜಿನಗರಕ್ಕೆ ಬಂದಿದ್ದ. ಟಿವಿ ಅಡವಿಡಲು ಬಂದವನ ಮೇಲೆ ಸಾಕಷ್ಟು ಅನುಮಾನ ಬಂದ ಹಿನ್ನೆಲೆಯಲ್ಲಿ ಬಾತ್ಮೀದಾರರೊಬ್ಬರು ಭಾರತೀನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ‌ ನಡೆಸಿದಾಗ  ಆರೋಪಿಯ ಕಳ್ಳ ಚರಿತ್ರೆ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next