Advertisement

ಬೀಳುವ ಹಂತದ ಮರಗಳ ಲಿಸ್ಟ್ ಗೆ ಮುಂದಾದ ನಗರಸಭೆ 

01:54 PM May 19, 2018 | |

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬೀಳುವ ಹಂತದಲ್ಲಿರುವ ಮರಗಳ ಪಟ್ಟಿ ಮಾಡಲು ನಗರಸಭೆ ಮುಂದಾಗಿದೆ. ಇವು ರಸ್ತೆಗೆ ಬಿದ್ದು ಹಾನಿ ಸಂಭವಿಸುವ ಮೊದಲು ತೆರವು ಮಾಡುವುದೇ ಸೂಕ್ತ ಎಂಬ ತೀರ್ಮಾನಕ್ಕೆ ನಗರಸಭೆ ಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಪತ್ರ ಬರೆಯಲು ನಗರಸಭೆ ನಿರ್ಧರಿಸಿದೆ.

Advertisement

ಗುರುವಾರ ರಾತ್ರಿ ಸುರಿದ ಮಳೆಗೆ ಕಿಲ್ಲೆ ಮೈದಾನ ಬಳಿಯ ಹಲಸಿನ ಮರ ಧರಾಶಾಹಿಯಾಗಿದೆ. ಮಧ್ಯರಾತ್ರಿ ಹೊತ್ತಿನಲ್ಲಿ ಮರ ಬಿದ್ದ ಕಾರಣ, ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಒಂದು ವೇಳೆ ಹಗಲು ಹೊತ್ತಿನಲ್ಲಿ ಮರ ಬೀಳುತ್ತಿದ್ದರೆ, ದೊಡ್ಡ ಅವಘಡವೇ ಸಂಭವಿಸುತ್ತಿತ್ತು. ಇದು ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ಹಿಂಬದಿಯಿಂದ ಕಿಲ್ಲೆ ಮೈದಾನವನ್ನು ಸಂಪರ್ಕಿಸುವ ರಸ್ತೆ. ದಿನನಿತ್ಯ ಹಲವಾರು ವಾಹನಗಳನ್ನು ಇದೇ ರಸ್ತೆ ಬದಿ ಪಾರ್ಕ್‌ ಮಾಡಲಾಗುತ್ತಿತ್ತು. ದಿನವಿಡೀ ನೂರಾರು ಮಂದಿ ಸಂಚರಿಸುವ ಬೀದಿ. ಒಂದೊಮ್ಮೆ ಕಿಲ್ಲೆ ಮೈದಾನದಲ್ಲಿ ಗಣೇಶೋತ್ಸವ ನಡೆದಾಗ, ಇದೇ ರಸ್ತೆ ಬದಿಯೇ ಸಂತೆ ನಡೆದಿತ್ತು. ಹೀಗೆ ಹತ್ತು ಹಲವು ಕಾರಣಗಳಿಗೆ ಬಳಕೆಯಾಗುವ ರಸ್ತೆ. ಒಂದು ವೇಳೆ ಹಗಲು ಹೊತ್ತಿನಲ್ಲಿ ಅವಘಡ ಸಂಭವಿಸುತ್ತಿದ್ದರೆ ಪರಿಸ್ಥಿತಿ ಕೈಮೀರುವ ಸಂಭವ ಇತ್ತು.

ಸೂಚನೆ
ಬುಡ ಗಟ್ಟಿಯಾಗಿಲ್ಲದ ಮರ ಧರಾಶಾಹಿ ಆಗಿರುವುದರಲ್ಲಿ ಆಶ್ಚರ್ಯವಿಲ್ಲ. ಇದೇ ರಸ್ತೆಯ ಇನ್ನೊಂದು ಬದಿ ಮಕ್ಕಳ ಪಾರ್ಕ್‌. ಮಕ್ಕಳು ಕುಳಿತುಕೊಳ್ಳದೇ ಇದ್ದರೂ, ಒಂದಿಷ್ಟು ಜನ ಬಂದು ಹೋಗುವವರಿದ್ದಾರೆ. ಹಗಲು ಹೊತ್ತಿನಲ್ಲಿ ಈ ಮರ ಬೀಳುತ್ತಿದ್ದರೆ ಅವರಿಗೂ ಹಾನಿ ಸಂಭವಿಸುವ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ನಗರದಲ್ಲಿರುವ ಬೀಳುವ ಹಂತದ ಮರಗಳನ್ನು ಗುರುತಿಸಲು ನಗರಸಭೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಮರಗಳು ರಸ್ತೆಗೆ ಅಡ್ಡವಾಗಿ ಬೀಳುವುದು ಸಾಮಾನ್ಯ. ಒಂದು ವೇಳೆ ರಸ್ತೆಗೆ ಅಡ್ಡವಾಗಿ ಮರ ಬಿದ್ದರೆ, ಒಂದಷ್ಟು ಹಾನಿಯ ಜತೆಗೆ ದಿನಪೂರ್ತಿ ಸಂಚಾರ ಅಸ್ತವ್ಯಸ್ತ ಉಂಟಾಗುತ್ತದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಮೊದಲೇ ಕ್ರಮ ಕೈಗೊಳ್ಳುವುದು ಉತ್ತಮ. ಒಂದು ವೇಳೆ ಮೊದಲೇ ಎಚ್ಚೆತ್ತುಕೊಂಡರೆ ಮುಂಬರುವ ಎಲ್ಲ ಅಪಾಯಗಳನ್ನು ತಪ್ಪಿಸಲು ಸಾಧ್ಯ.

ಪೇಟೆಯಲ್ಲಿ ಕೇವಲ 104 ಮರಗಳಷ್ಟೇ ಅಲ್ಲ, ಇನ್ನೂ ಹಲವು ಮರಗಳು ಧರೆಗುರು ಳುವ ಭೀತಿಯಲ್ಲಿದೆ. ಇವನ್ನು ಪಟ್ಟಿಯಲ್ಲಿ
ಸೇರಿಸುವ ಕೆಲಸವನ್ನು ನಗರಸಭೆ ಮಾಡಿಲ್ಲ.

Advertisement

ಬುಡ ಬಾಲಿಶ
ಬೆಳೆದು ನಿಂತ ಮರಗಳಷ್ಟೇ ಧರಾಶಾಹಿ ಆಗುತ್ತಿಲ್ಲ. ಬುಡ ಬಾಲಿಶ ಆಗಿರುವ ಮರಗಳು ಬೀಳುತ್ತಿವೆ. ಪುತ್ತೂರು ಪೇಟೆಯಲ್ಲಿ ನಡೆಸಿದ ವಿವಿಧ ಕಾಮಗಾರಿಗಳಿಗಾಗಿ ಮರಗಳ ಬುಡವನ್ನು ಸವರಿಕೊಂಡು ಹೋಗಲಾಗಿದೆ. ಇದು ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಇದರ ಬಗ್ಗೆಯೂ ನಗರಸಭೆ ಆಲೋಚಿಸಬೇಕಾಗಿದೆ.

ಪಟ್ಟಿಯಲ್ಲಿವೆ 104 ಮರ 
ಈಗಾಗಲೇ ನಗರಸಭೆ ಬೀಳುವ ಹಂತದ ಮರಗಳನ್ನು ಪಟ್ಟಿ ಮಾಡಿವೆ. ಇದರಲ್ಲಿ ದರ್ಬೆಯಿಂದ ಬೆದ್ರಾಳದವರೆಗಿನ ಮರಗಳು ಮಾತ್ರ ಇವೆ. ಒಟ್ಟು 104 ಮರಗಳು ಈ ಪಟ್ಟಿಯಲ್ಲಿವೆ. ಇವಿಷ್ಟು ಮರವನ್ನು ತತ್‌ಕ್ಷಣ ತೆರವು ಮಾಡಬೇಕು ಎಂದು ಅರಣ್ಯ ಇಲಾಖೆಗೆ ಪತ್ರ ಬರೆಯಲು ನಗರ ಸಭೆ ಮುಂದಾಗಿದೆ. ಮಳೆಗಾಲದಲ್ಲಿ ರಸ್ತೆಗಡ್ಡವಾಗಿ ಮರ ಬಿದ್ದರೆ, ದೊಡ್ಡ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ತತ್‌ಕ್ಷಣ ಸೂಚನೆ
ನಗರೋತ್ಥಾನದ ಕೆಲಸ ನಡೆಯುತ್ತಿರುವ ವೇಳೆ ಬೀಳುವ ಹಂತದ ಮರಗಳನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗುವುದು. ಈಗಾಗಲೇ ಪಟ್ಟಿಯಲ್ಲಿ ಗುರುತಿಸಿದಂತೆ 104 ಮರಗಳಿವೆ. ಇನ್ನಷ್ಟು ಮರಗಳಿರುವ ಸಾಧ್ಯತೆ ಇದ್ದು, ತತ್‌ಕ್ಷಣ ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ 

 ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next