Advertisement

ಗುತ್ತಿಗೆ ಪದ್ಧತಿ ಅಸಾಂವಿಧಾನಿಕ ವ್ಯವಸ್ಥೆ

11:36 AM Oct 26, 2018 | |

ಮೈಸೂರು: ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಸಿಗಬೇಕು ಎಂಬ ಹಕ್ಕೋತ್ತಾಯ ಮುಂದಿಟ್ಟು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ವತಿಯಿಂದ ಮೈಸೂರಿನಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ತೆರಳಿದ ತಜ್ಞ ವೈದ್ಯರು, ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಗಳು, ನೇತ್ರ ಪರೀಕ್ಷಕರು, ಪ್ರಯೋಗಾಲಯ ತಂತ್ರಜ್ಞರು, ಸ್ಟಾಫ್ ನರ್ಸ್‌, ಸಹಾಯಕರು, ವಾಹನ ಚಾಲಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಗುತ್ತಿಗೆ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ನಡೆಸಿ ಮನವಿ ಸಲ್ಲಿಸಿದರು.

ಅಮಾನವೀಯ: ಜೀತ ಪದ್ಧತಿಯ ಬದಲಾದ ರೂಪದಂತಿರುವ ಗುತ್ತಿಗೆ ಪದ್ಧತಿಯೇ ಅಸಾಂವಿಧಾನಿಕ ವ್ಯವಸ್ಥೆ. ತಮ್ಮ ದುಡಿಯುವ ಆಯಸ್ಸಿನ ಬಹುಕಾಲ ಗುತ್ತಿಗೆ ನೌಕರನಾಗಿ ದುಡಿದು, ಒಂದು ದಿನ ಇದ್ದಕ್ಕಿದ್ದಂತೆ ಇಲಾಖೆಗೆ ಸಂಬಂಧವೇ ಇಲ್ಲದಂತೆ ಹೊರದೂಡಲ್ಪಡುವುದು ಅಮಾನವೀಯ.

ಅದರಲ್ಲೂ ಉದ್ಯೋಗದಾತ ಆಗಿರಬೇಕಾದ ಸರ್ಕಾರದ ಇಲಾಖೆಗಳಲ್ಲೇ ಈ ರೀತಿ ಇರುವುದು ಪ್ರಜಾಪ್ರಭುತ್ವಕ್ಕೆ  ಮಾರಕವಾದುದು. ಗುತ್ತಿಗೆ ನೌಕರರಿಗೆ ಕೆಲಸದ ಜಾಗದಲ್ಲಿ ತಾರತಮ್ಯ, ಸಂಬಳದ ಅನಿಶ್ಚಿತತೆ, 3 ತಿಂಗಳ ಬಾಂಡ್‌, ವರ್ಷಕ್ಕೊಂದು ಬ್ರೇಕ್‌ ಇನ್‌ ಸರ್ವೀಸ್‌ ತರದ ವಿವಿಧ ರೀತಿಯ ಅತಂತ್ರತೆ ಜೊತೆಗೆ ಸದಾಕಾಲ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.

ದೇಶವ್ಯಾಪಿ ಆಂದೋಲನ: ಒಳ ಗುತ್ತಿಗೆಯಲ್ಲಿರುವವರು ಇದ್ದಕ್ಕಿದ್ದಂತೆ ಹೊರ ಗುತ್ತಿಗೆ ಆಗಬೇಕಾಗುತ್ತದೆ. ಗುತ್ತಿಗೆದಾರರ ಇಷ್ಟಗಳಿಗೆ ತಕ್ಕಂತೆ ಉದ್ಯೋಗ ಇರುತ್ತದೆ. ಇಲ್ಲವೇ ಹೋಗುತ್ತದೆ. ನೇರ ನೇಮಕಾತಿಯಾದರೆ ಕೆಲಸ ಕಳೆದುಕೊಳ್ಳಬೇಕಾದ ತೂಗುಕತ್ತಿಯೂ ಇರುತ್ತದೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಸಮಾನ ವೇತನ ಕಲ್ಪಿಸುವ ಆಂದೋಲನ ದೇಶವ್ಯಾಪಿ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. 

Advertisement

ವೇತನ ತಾರತಮ್ಯ: ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಕಾಯಂ ನೌಕರರಿಗಿಂತ ಹೆಚ್ಚಿದೆ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಕೆಲಸದ ಸ್ಥಳದಲ್ಲಿ ಘನತೆಯನ್ನು ಖಾತರಿ ಮಾಡಬೇಕು. ಸುಪ್ರೀಂಕೋರ್ಟ್‌ 2016ರ ಅಕ್ಟೋಬರ್‌ನಲ್ಲಿ ಕಡ್ಡಾಯಗೊಳಿಸಿದ್ದರೂ ಜಾರಿ ಮಾಡದ ತಾರತಮ್ಯ ರಹಿತ ಸಮಾನ ವೇತನವನ್ನು ಕೊಡಬೇಕು.

ಭದ್ರತೆಯಿಲ್ಲದ ಉದ್ಯೋಗ ಮಾಡುತ್ತಿರುವವರು ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು ಹೇಗೆ ಸಾಧ್ಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ನೌಕರರ ವೇದಿಕೆಯ ಜಿಲ್ಲಾ ಸಂಚಾಲಕ ಶ್ರೀವತ್ಸ ವೇದಿಕೆ ಪದಾಧಿಕಾರಿಗಳಾದ ಡಾ.ಅರಸ್‌, ರಾಜೇಶ್‌, ಶಶಿಧರ, ಹರೀಶ್‌, ಶಿವಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next