Advertisement

ಸರ್ಕಾರ ಕನಿಷ್ಠ ವೇತನ ಜಾರಿಗೊಳಿಸಲಿ

09:56 AM Jan 25, 2019 | Team Udayavani |

ಚಿತ್ರದುರ್ಗ: ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಎಐಟಿಯುಸಿ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು.

Advertisement

ಇಲ್ಲಿನ ದಾವಣಗೆರೆ ರಸ್ತೆಯ ಯೂನಿಯನ್‌ ಪಾರ್ಕ್‌ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಳೆದ 16 ವರ್ಷಗಳಿಂದ ದುಡಿಯುತ್ತಿರುವ ಬಿಸಿಯೂಟ ಕಾರ್ಯಕರ್ತೆಯರು ಜೀವನ ಭದ್ರತೆಯಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡರಿಂದಲೂ ಸೇರಿ ಬಿಸಿಯೂಟ ಕಾರ್ಯಕರ್ತೆಯರಿಗೆ ಕೇವಲ 2700 ರೂ. ಹಾಗೂ ಸಹಾಯಕಿಯರಿಗೆ 2600 ರೂ. ಗೌರವಧನ ಸಿಗುತ್ತಿದೆ. ಇದರಿಂದ ಕುಟುಂಬ ನಡೆಸುವುದು ಅತ್ಯಂತ ಕಷ್ಟವಾಗುತ್ತಿದೆ ಎಂದು ಪ್ರತಿಭಟನಾಕಾರರು ಅಳಲು ವ್ಯಕ್ತಪಡಿಸಿದರು.

ಎಐಟಿಯುಸಿ ಗೌರವಾಧ್ಯಕ್ಷ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ಹದಿನೆಂಟು ಸಾವಿರ ರೂ.ಗಳನ್ನು ನಿಗದಿಪಡಿಸಬೇಕು. ಬಿಸಿಯೂಟ ಪೂರೈಕೆಯನ್ನು ರಾಜ್ಯ ಸರ್ಕಾರ ಇಸ್ಕಾನ್‌ ಇನ್ನಿತರೆ ಖಾಸಗಿ ಸಂಸ್ಥೆಗಳಿಗೆ ವಹಿಸುವ ಹುನ್ನಾರವನ್ನು ಕೈಬಿಟ್ಟು ಬಿಸಿಯೂಟ ತಯಾರಕರಿಗೆ ಜೀವನ ಭದ್ರತೆ ಒದಗಿಸಬೇಕು. ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಯನ್ನಾಗಿ ಪರಿಗಣಿಸಿ ಪಿಎಫ್‌, ಇಎಸ್‌ಐ ಜಾರಿಗೆ ತರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬಿಸಿಯೂಟ ತಯಾರಕರು ಅಪಘಾತಕ್ಕೊಳಗಾದರೆ ಎರಡು ಲಕ್ಷ ರೂ. ಹಾಗೂ ಅಪಘಾತದಿಂದ ಮೃತಪಟ್ಟರೆ ಐದು ಲಕ್ಷ ರೂ. ಪರಿಹಾರ ನೀಡಬೇಕು. ದಸರಾ ರಜೆ ಮತ್ತು ಬೇಸಿಗೆ ರಜೆಗಳ ಸಂಬಳ ನೀಡಬೇಕು. ಅರವತ್ತು ವರ್ಷ ವಯಸ್ಸಾದ ಬಿಸಿಯೂಟ ತಯಾರಕರಿಗೆ ಮಾಸಿಕ ಮೂರು ಸಾವಿರ ರೂ.ಪಿಂಚಣಿ ಮತ್ತು ಎರಡು ಲಕ್ಷ ರೂ.ಇಡಿಗಂಡು ಪಾವತಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಾಫರ್‌, ಕೆ.ಇ. ಸತ್ಯಕೀರ್ತಿ, ಎಸ್‌.ಸಿ. ಕುಮಾರ್‌, ಸುವರ್ಣಮ್ಮ, ಗಿರಿಜಮ್ಮ, ಪರ್ವೀನ್‌ ತಾಜ್‌, ರಜಿಯಾ, ದೊಡ್ಡಉಳ್ಳಾರ್ತಿ ಕರಿಯಣ್ಣ, ತಿಪ್ಪೇರುದ್ರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ಖಾಸಗಿಗೆ ವಹಿಸುವ ನಿರ್ಧಾರ ಕೈಬಿಡಿ
ಈ ಹಿಂದೆ ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ ಬಜೆಟ್‌ನಲ್ಲಿ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸಬೇಕು. ಬಿಸಿಯೂಟ ಪೂರೈಕೆಯನ್ನು ಖಾಸಗಿಯವರಿಗೆ ವಹಿಸಿದರೆ ರಾಜ್ಯದಲ್ಲಿರುವ ಒಂದು ಲಕ್ಷ ಹದಿನೆಂಟು ಸಾವಿರ ಬಿಸಿಯೂಟ ತಯಾರಕರು ಬೀದಿಗೆ ಬೀಳಬೇಕಾಗುತ್ತದೆ. ಅದಕ್ಕಾಗಿ ಇಂತಹ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಗುಡುಗಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
ಹೊಸದುರ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಿಸಿಯೂಟ ಸಹಾಯಕಿಯರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಳೆದ 16 ವರ್ಷಗಳಿಂದ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯಲ್ಲಿ 1.18 ಲಕ್ಷ ಜನರು ಮುಖ್ಯ ಅಡುಗೆಯವರಾಗಿ ಮತ್ತು ಸಹಾಯಕ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಕೆಲಸ ಭದ್ರತೆಯಾಗಲೀ, ಜೀವನ ಭದ್ರತೆಯಾಗಲೀ, ನಿವೃತ್ತಿ ವೇತನವಾಗಲೀ, ಸಾವು ನೋವಿಗೆ ಪರಿಹಾರವಾಗಲೀ ಸರಕಾರದಿಂದ ಇದುವರೆಗೂ ದೊರೆತಿಲ್ಲ. ಕೆಲಸವನ್ನು ಕಾಯಂಗೊಳಿಸದೆ ಗೌರವ ಸಂಭಾವನೆ ಹೆಸರಿನಲ್ಲಿ ಸರಕಾರ ಶೋಷಣೆ ಮಾಡುತ್ತಿದೆ. ಮಾಸಿಕ ಗೌರವ ಸಂಭಾವನೆ ಮುಖ್ಯ ಅಡುಗೆಯವರಿಗೆ 2700 ರೂ. ಹಾಗೂ ಸಹಾಯಕ ಅಡುಗೆಯವರಿಗೆ 2600 ರೂ. ನೀಡಲಾಗುತ್ತಿದೆ. ಈ ಗೌರವ ಸಂಭಾವನೆಯಲ್ಲಿ ಬಿಸಿಯೂಟ ತಯಾರಕರು ಜೀವನ ನಡೆಸಲು ಕಷ್ಟವಾಗುತ್ತಿದೆ. ಆದ್ದರಿಂದ ಸರಕಾರ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಿಸಿಯೂಟ ತಯಾರಕರಿಗೆ ಕೇಂದ್ರ ಸರಕಾರ ಕನಿಷ್ಠ ವೇತನ 18,000 ರೂ. ನೀಡಬೇಕು. ಕೆಲಸ ಮತ್ತು ಜೀವನ ಭದ್ರತೆಗಾಗಿ ತಮಿಳುನಾಡು ಮಾದರಿಯಲ್ಲಿ ಸವಲತ್ತುಗಳು ಹಾಗೂ ಪಿಎಫ್‌, ಕಾರ್ಮಿಕರ ಆರೋಗ್ಯ ವಿಮೆ ಜಾರಿಗೆ ತರಬೇಕು ಎಂದರು.

ಎಐಟಿಯುಸಿ ಅಧ್ಯಕ್ಷ ಕೆ.ಎನ್‌. ರಮೇಶ್‌, ಕಾರ್ಯದರ್ಶಿ ವಸಂತಬಾಯಿ, ಉಪಾಧ್ಯಕ್ಷೆ ಶಿವಮ್ಮ, ದಾಕ್ಷಾಯಣಮ್ಮ, ಓಂಕಾರಮ್ಮ, ಭಾರತಮ್ಮ, ಸುನೀತಾಬಾಯಿ, ಅಂಬಿಕಾ, ರತ್ನಮ್ಮ, ಜಯಮ್ಮ, ಗಾಯತ್ರಮ್ಮ, ಗಂಗಮ್ಮ, ಕೆಂಚಮ್ಮ, ಶಾರದಮ್ಮ, ಸುನಂದಮ್ಮ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next