Advertisement

ನೀರಿನ ವಿಚಾರ ಪ್ರಸ್ತಾವ: ಆಡಳಿತ –ವಿಪಕ್ಷಗಳ ಆರೋಪ, ಪ್ರತ್ಯಾರೋಪ

03:06 PM May 31, 2017 | Harsha Rao |

ಉಡುಪಿ : ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಅಲ್ಲಲ್ಲಿ ಜೋತು ಬೀಳುತ್ತಿರುವ ಕೇಬಲ್‌ ವಯರ್‌, ಗುತ್ತಿಗೆ ಕೆಲಸಗಾರರನ್ನು ಕಾರಣವಿಲ್ಲದೆ ತೆಗೆದು ಹಾಕುವ, ಸ್ವರ್ಣೆಯಲ್ಲಿ ಹೂಳೆತ್ತುವ ಸಮಸ್ಯೆಗಳ ಕುರಿತು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ಮಧ್ಯೆ ಚರ್ಚೆ ನಡೆಯಿತು. 

Advertisement

ಸ್ವರ್ಣಾ ನದಿ ಪ್ರದೇಶದಲ್ಲಿ ಹೂಳೆತ್ತದಿರುವುದು, ನೀರಿನ ಸೋರಿಕೆ ತಡೆಯುವಲ್ಲಿ ವಿಫ‌ಲವಾಗಿರುವುದರಿಂದ ನಗರಸಭಾ ವ್ಯಾಪ್ತಿಯಲ್ಲಿ ಈ ಬಾರಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಹೀಗೆ ಆದರೆ ಮುಂದಿನ ಬಾರಿಯೂ ಇದೇ ಸಮಸ್ಯೆ ಎದುರಾಗಬಹುದು ಎಂದು ವಿಪಕ್ಷ ಸದಸ್ಯ ಹೆರ್ಗ ದಿನಕರ್‌ ಶೆಟ್ಟಿ ಹೇಳಿದರು. 

ಈ ಕುರಿತು ಪೌರಾಯುಕ್ತ ಡಿ. ಮಂಜುನಾಥಯ್ಯ ಮಾತನಾಡಿ ಹೂಳೆತ್ತುವ ಬಗ್ಗೆ ಹೈಡ್ರೋಲಾಜಿಕಲ್‌ ಸರ್ವೇ ಮಾಡಲಾಗಿದೆ. ಸಚಿವರು, ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳ ಜತೆಗೆ ಬಜೆ ಪ್ರದೇಶಕ್ಕೆ ಭೇಟಿ ನೀಡಿ ಹೂಳೆತ್ತುವ ಸಂಬಂಧ ಬಜೆಯಿಂದ ಶೀರೂರುವರೆಗೆ 7 ಪ್ರದೇಶಗಳನ್ನು ಗುರುತಿಸಲಾಗಿತ್ತು. ಶೀರೂರು ಮಠದ ಭಂಡಾರಿಬೆಟ್ಟು, ಮಠದ ಗುಂಡಿ, ಪುತ್ತಿಗೆ ಮಠದ ಬಳಿಯೆಲ್ಲ ಹೂಳು, ಮರಳು, ಕಲ್ಲು ತುಂಬಿದ್ದು ಅದನ್ನು ತೆಗೆಯಲು ಟೆಂಡರ್‌ ನೀಡಲಾಗಿತ್ತು ಎಂದರು. 

ಆದರೆ ಕಾರ್ಕಳದ ಮುಂಡ್ಲಿ ಜಲಾಶಯದಲ್ಲಿ ಹೂಳೆತ್ತುವ ನೆಪದಲ್ಲಿ ಅಕ್ರಮ ಮರಳು ಸಾಗಾಟ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಡಿಸಿಯವರು ಎಲ್ಲ ಕಡೆ ಹೂಳೆತ್ತುವ ಕಾರ್ಯಕ್ಕೆ ತಡೆ ನೀಡಲಾಗಿದ್ದು, ಆದರೂ ಸಚಿವರ ಮೂಲಕ ಡಿಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಸಿಗುವ ಭರವಸೆ ಇದೆ ಎಂದು ಹೇಳಿದರು.

ಮಳೆಕೊಯ್ಲು ಕಡ್ಡಾಯ ಘೋಷಿಸಿ
ನಗರ ಪ್ರದೇಶದಲ್ಲಿ ಮಳೆ ನೀರು ಹಿಂಗಿಸುವಿಕೆ, ಮಳೆಕೊಯ್ಲು ವಿಧಾನ ಅಳವಡಿಕೆ ಕಡಿಮೆಯಾಗುತ್ತಿದ್ದು, ಇದರಿಂದ ನೀರಿನ ಸಮಸ್ಯೆಯನ್ನು ನಾವೇ ಆಹ್ವಾನಿಸುತ್ತಿದ್ದೇವೆ. ನಗರ ವ್ಯಾಪ್ತಿಯಲ್ಲಿ ನಿರ್ಮಿಸುವ ಎಲ್ಲ ಮನೆಗಳಿಗೂ ಮಳೆ ಕೊಯ್ಲು ಅಳವಡಿಕೆ ಕಡ್ಡಾಯ ಮಾಡಬೇಕು. ಇದರಿಂದ ನೀರು ಉಳಿಸಲು ಸಾಧ್ಯವಾಗಬಹುದು ಎಂದು ನಾಮನಿರ್ದೇಶಿತ ಸದಸ್ಯ ಜನಾರ್ದನ ಭಂಡಾರ್‌ಕರ್‌ ಹೇಳಿದರು. ಇದಕ್ಕೆ ಸದಸ್ಯರಾದ ಸುಮಿತ್ರಾ ನಾಯಕ್‌, ಶ್ಯಾಂ ಪ್ರಸಾದ್‌ ಕುಡ್ವ, ನರಸಿಂಹ ನಾಯಕ್‌ ಧ್ವನಿಗೂಡಿಸಿದರು. 

Advertisement

ಕೇಬಲ್‌ ವಯರ್‌- ಅಪಾಯಕ್ಕೆ ಆಹ್ವಾನ..!
ನಗರಸಭಾ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕೇಬಲ್‌ ವಯರ್‌ಗಳು ಜೋತು ಬೀಳುತ್ತಿದ್ದು, ಕೆಲವೆಡೆ ವಿದ್ಯುತ್‌ ಕಂಬಗಳಿಗೆ ಸಿಕ್ಕಿಸಿರುವುದರಿಂದ ತೀರಾ ಕೆಳಮಟ್ಟದಲ್ಲಿರುವುದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಗಳಾಗುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯವನ್ನು ಆಹ್ವಾನಿಸಿದಂತೆ ಎಂದು ಆಡಳಿತ ಪಕ್ಷದ ಸದಸ್ಯ ರಮೇಶ್‌ ಕಾಂಚನ್‌ ಪ್ರಸ್ತಾವಿಸಿದರು. ಈ ಬಗ್ಗೆ ಮೆಸ್ಕಾಂ, ಕೇಬಲ್‌ ಡೀಲರ್ಗಳಿಗೆ ಡಿಸಿ ಮೂಲಕ ಮನವಿ ನೀಡಲಾಗುವುದು ಎಂದು ಪೌರಾಯುಕ್ತರು ಉತ್ತರಿಸಿದರು. 

ಸಿಸಿಟಿವಿ ಅಳವಡಿಸಿ
ಕೆಲವು ಪ್ರದೇಶಗಳಲ್ಲಿ ಬೋರ್ಡ್‌ ಹಾಕಿದ ಮೇಲೂ ಕಸ ಎಸೆಯುತ್ತಿದ್ದು, ಪ್ರತೀ ವಾರ್ಡ್‌ನಲ್ಲೂ ಇಂತಹ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಅದಕ್ಕಾಗಿ ಅನುದಾನ ಮೀಸಲಿಡಿ ಎಂದು ವಿಜಯ್‌ ಮಂಚಿ, ಪ್ರಶಾಂತ್‌ ಭಟ್‌ ಆಗ್ರಹಿಸಿದರು. 

ನಾಲ್ವರು ಗುತ್ತಿಗೆ ನೌಕರರನ್ನು ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಶಿರಾಜ್‌ ಕುಂದರ್‌ ಪ್ರಸ್ತಾವಿಸಿದ ವಿಚಾರ ಸಂಬಂಧ ಆಡಳಿತ ಪಕ್ಷದ ಸದಸ್ಯರೇ ಪೌರಾಯುಕ್ತರ ಕಾರ್ಯವೈಖರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಕಸದ ವಾಹನ ಮನೆವರೆಗೆ ಬಾರದಿದ್ದರೂ ಯಾಕೆ ಸೆಸ್‌ ರೂಪದಲ್ಲಿ ಹಣ ಸಂಗ್ರಹಿಸುವುದು ಎಂದು ವಿಜಯ್‌ ಕುಮಾರ್‌ ಬೈಲೂರು ಪ್ರಶ್ನಿಸಿದರು. 

ಕೆಲವೊಂದು ಆರೋಗ್ಯಕರ ಚರ್ಚೆಗಳು ನಡೆದರೂ, ಮಳೆಗಾಲ ಆರಂಭವಾಗುವ ಮುನ್ನ ನಗರದಲ್ಲಾಗಬೇಕಾದ ಸಿದ್ಧತೆ, ಯುಜಿಡಿ ಕಾಮಗಾರಿ, ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಾಣ, ತೋಡುಗಳಲ್ಲಿ ಹೂಳೆತ್ತುವ ಕುರಿತು ಯಾವುದೆ ಚರ್ಚೆಯೇ ಆಗಿಲ್ಲ. 

ಬೆಳಕಿನ ಭಾಗ್ಯ ಕೊಡಿ
ನಗರಸಭೆಯ ಹೆಚ್ಚಿನ ವಾರ್ಡ್‌ಗಳಲ್ಲಿ ಬೀದಿ ದೀಪ ನಿರ್ವಹಣೆ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರಿಂದ ಆರೋಪಗಳು ಕೇಳಿ ಬಂತು. ಟೆಂಡರ್‌ ವಹಿಸಿಕೊಂಡವರು ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸದಿರುವುದರಿಂದ ಅನುಮತಿ ರದ್ದುಗೊಳಿಸುವುದು ಒಳ್ಳೆಯದು ಎನ್ನುವ ಅಭಿಪ್ರಾಯ ಕೇಳಿ ಬಂತು. ಈ ವೇಳೆ ಮಾತನಾಡಿದ ಕೊಳ ವಾರ್ಡ್‌ ಸದಸ್ಯ ಪ್ರಶಾಂತ್‌ ಅಮೀನ್‌ ನನ್ನ ವಾರ್ಡಿಗೆ ಬೆಳಕಿನ ಭಾಗ್ಯ ಕೊಡಿ ಎಂದು ಒತ್ತಾಯಿಸಿದರು. ಅಸಮರ್ಪಕ ದಾರಿ ದೀಪ ನಿರ್ವಹಣೆ ಕುರಿತು ಶಶಿರಾಜ್‌ ಕುಂದರ್‌, ವಸಂತಿ ಬ್ರಹ್ಮಾವರ, ಪ್ರಶಾಂತ್‌ ಭಟ್‌, ಹಾರ್ಮಿಸ್‌ ನೊರೋನ್ಹಾ ಮಾತನಾಡಿದರು. 

ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಶೋಭಾ ಪುತ್ರನ್‌ ಮೊದಲಾದವರು ಉಪಸ್ಥಿತರಿದ್ದರು. ಸದಸ್ಯರಾದ ಪಿ. ಯುವರಾಜ್‌, ಅಮೃತಾ ಕೃಷ್ಣಮೂರ್ತಿ, ಗೀತಾ ಶೇಟ್‌ ಮತ್ತಿತರರು ಮಾತನಾಡಿದರು. 

ಉದಯವಾಣಿ ವರದಿ ಪ್ರಸ್ತಾವ‌
ಸಭೆಯಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಬೀಡಿನಗುಡ್ಡೆ ಅಸರ್ಮಪಕ ವ್ಯವಸ್ಥೆ ಕುರಿತ ವರದಿ, ಹೂಳೆತ್ತುವ ವಿಚಾರದಲ್ಲಿ ವಿಶೇಷ ವರದಿ, ಉಚಿತ ಟ್ಯಾಂಕರ್‌ ನೀರಿಗೆ ಹಣ ಪಡೆಯುವ ಕುರಿತ  ವರದಿಗಳು ಪ್ರಸ್ತಾವವಾದವು. ಟ್ಯಾಂಕರ್‌ ಚಾಲಕರು ನೀರಿಗೆ ಹಣ ಕೇಳಿಲ್ಲ. ಅಲ್ಲಿನ ಜನರೇ ಚಹಾ ಕುಡಿಯಲು ಕೊಟ್ಟಿದ್ದಾಗಿ ಕೊಡಂಕೂರು ವಾರ್ಡಿನ ಜಾನಕಿ ಶೆಟ್ಟಿಗಾರ್‌ ಸಮಜಾಯಿಷಿ ನೀಡಿದರು. 

ನೀರಿನ ಸಂಪರ್ಕ ಹೆಚ್ಚಳದಿಂದ ಸಮಸ್ಯೆ
ನೀರಿನ ಸಮರ್ಪಕ ನಿರ್ವಹಣೆಯಲ್ಲಿ ನಗರಾಡಳಿತ ವೈಫ‌ಲ್ಯದ ಕುರಿತು ವಿಪಕ್ಷ ನಾಯಕ ಎಂ. ಆರ್‌. ಪೈ, ನರಸಿಂಹ ನಾಯಕ್‌ ಹೇಳಿದ್ದಕ್ಕೆ ಉತ್ತರಿಸಿದ ಪರಿಸರ ಅಭಿಯಂತರ ರಾಘವೇಂದ್ರ 2013 -14ರಲ್ಲಿ  13 ಸಾವಿರ ನೀರಿನ ಸಂಪರ್ಕಗಳಿದ್ದರೆ ಈಗ 19 ಸಾವಿರಕ್ಕೂ ಅಧಿಕ ಸಂಪರ್ಕಗಳಿವೆ. ಅದಲ್ಲದೆ 2026ರ ವರೆಗಿನ ಬಜೆ ಡ್ಯಾಂ ಯೋಜನೆ ಪ್ರಕಾರ ಸಂಗ್ರಹವಾದ ನೀರಿನಲ್ಲಿ ದಿನಕ್ಕೆ 27 ದಶಲಕ್ಷ ಲೀಟರ್‌ ನೀರು ಪಂಪಿಂಗ್‌ ಮಾಡಿದರೆ ಸುಮಾರು 100 ದಿನಕ್ಕೆ ಕೊಡಬಹುದು ಎಂದಿದೆ. ಆದರೆ 23 ದಶಲಕ್ಷ ಲೀ. ನಗರಸಭೆಗೆ, 8ರಿಂದ 9 ದಶಲಕ್ಷ ಲೀ. ಮಣಿಪಾಲಕ್ಕೆ, 7 ಗ್ರಾ. ಪಂ. ಗಳಿಗೆ, 500 ಎಚ್‌ಪಿ ಪಂಪ್‌ ಮೂಲಕ ಕೃಷಿ ಬಳಕೆಗೆ ಹೀಗೆ ದಿನವೊಂದಕ್ಕೆ ಸುಮಾರು 38 ದಶಲಕ್ಷ ಲೀಟರ್‌ ಪಂಪಿಂಗ್‌ ಮಾಡಿರುವುದರಿಂದ 120 ದಿನಕ್ಕೆ ಬರುವ ನೀರು ಕೇವಲ 68 ದಿನಕ್ಕೆ ಖಾಲಿಯಾಗಿತ್ತು. ಇದರಿಂದ ಕಡಿತ ಅನಿವಾರ್ಯವಾಗಿತ್ತು. ಈಗ ಕೇವಲ 30 ರಿಂದ 40 ಗಂಟೆ ಪಂಪಿಂಗ್‌ ಮಾಡುವಷ್ಟು ನೀರಿರುವುದರಿಂದ ಮಳೆಯು ಬಾರದಿರುವುದರಿಂದ 4 ದಿನಕ್ಕೊಮ್ಮೆ ಕೊಡುವುದು ಅನಿವಾರ್ಯವಾಯಿತು ಎಂದುತ್ತರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next