Advertisement

ಹೇಳುವಿಕೆ, ಕೇಳುವಿಕೆ…ಹೇಳಿದ್ದನ್ನು ಸುಮ್ಮನೆ ಪಾಲಿಸಬೇಕೇ ಅಥವಾ ಪರಾಮರ್ಶಿಸಬೇಕೇ…

12:18 PM Apr 29, 2023 | Team Udayavani |

ಹಿರಿಯರು ಹೇಳಿದ್ದನ್ನು ಕಿರಿಯರು ಕೇಳಬೇಕು, ಅದನ್ನು ಪರಿಪಾಲಿಸಬೇಕು ಎನ್ನುವ ಪಾಠ ನಮ್ಮಲ್ಲಿದೆ. ಆದರೆ ಅವರೂ ಕೆಲವೊಮ್ಮೆ ತಪ್ಪು ಹೇಳಬಹುದು ಅಥವಾ ನಮ್ಮ ಬದುಕಿಗೆ, ಜೀವನಶೈಲಿಗೆ ಅನ್ವಯವಾಗದೇ ಇರಬಹುದು. ಆಗ ನಾವು ಅದನ್ನು ಸುಮ್ಮನೆ ಪಾಲಿಸಬೇಕೇ ಅಥವಾ ಪರಾಮರ್ಶಿಸಬೇಕೇ ಎನ್ನುವ ಪ್ರಶ್ನೆ ಮನದೊಳಗೆ ಉದ್ಭವವಾಗುವುದು ಸಹಜ. ಕೆಲವರು ಹಿರಿಯರು ಹೇಳಿದ್ದಾರೆ ಎಂದು ತಮಗಿಷ್ಟವಿಲ್ಲದಿದ್ದರೂ ಪಾಲಿಸುತ್ತಾರೆ. ಇನ್ನು ಕೆಲವರು ತಮ್ಮಿಂದ ಸಾಧ್ಯವಿಲ್ಲ ಎಂದುಕೊಂಡು ಇನ್ನೊಬ್ಬರಿಗೆ ದಾಟಿಸಿ ಬಿಡುತ್ತಾರೆ. ಮತ್ತೆ ಕೆಲವರು ಅದ್ಯಾಕೆ ಪಾಲಿಸಬೇಕು ಎಂದು ಚರ್ಚೆ, ವಾಗ್ವಾದಕ್ಕೇ ಇಳಿದು ಬಿಡುತ್ತಾರೆ. ಇದರ ಪರಿಣಾಮಗಳು ಏನಾಗಬಹುದು ಎನ್ನುವ ಕುತೂಹಲ ತಣಿಸುವ ಬಯಕೆಯಷ್ಟೇ ನನ್ನದು.

Advertisement

ಪ್ರತಿಯೊಂದೂ ವಿಷಯಕ್ಕೂ ಹೇಳುವವರು ಯಾರೋ ಇರ್ತಾರೆ. ಆದರೆ ಹೇಳುವವರು ಹೇಳುತ್ತಾರೆ ಎಂದರಷ್ಟೇ ಸಾಲದು, ಅದನ್ನು ಕೇಳುವವರೂ ಇರಬೇಕು. ಹೇಳಿದ್ದನ್ನು ಕೇಳುವುದು ಪಾಲಿಸಿದಂತೆ ಅಷ್ಟೇ, ಆದರೆ ಅದನ್ನು ಪರಾಮರ್ಶಿಸಿ ಪಾಲಿಸುವುದು ಉತ್ತಮ. ಕೆಲವೊಮ್ಮೆ ಸುಮ್ಮನೆ ಪಾಲಿಸಬೇಕು, ಪರಾಮರ್ಶೆ ಹೆಸರಿನಲ್ಲಿ ಇತ್ತಂಡವಾದ ಸಲ್ಲದು. ಈ ಮಾತುಗಳು ಎಂದೆಂದಿಗೂ ಸಲ್ಲುತ್ತದೆ ಎಂಬುದೇ ಸತ್ಯ.

ಕಾಲ ಒಂದಿತ್ತು, ಹಿರಿಯರು ನೀನು ನಾಳೆಯಿಂದ ಹದಿನಾಲ್ಕು ವರ್ಷ ವನವಾಸಕ್ಕೆ ಹೋಗಬೇಕು, ಎಂದಾಗ ಅಲ್ಲಿಗೆ ಅರಮನೆಯ ವಾಸ ಮುಗಿಯಿತು ಎಂದೇ ಆಜ್ಞೆಯನ್ನು ಸ್ವೀಕರಿಸಿ, ಅರಮನೆಯನ್ನು ತೊರೆದು ಸಾಗಿದ್ದ ಶ್ರೀರಾಮ. ಅಂದರೆ ರಾಮ ಸುಮ್ಮನೆ ಹೇಳಿದ್ದನ್ನು ಪಾಲಿಸಿದನೇ? ಪರಾಮರ್ಶೆ ಮಾಡಲಿಲ್ಲವೇ? ಖಂಡಿತ ಮಾಡಿದ್ದ. ಮನಕೆ ಬಾರದ ಠಾವನ್ನು ಬಿಟ್ಟು ತೊಲಗಬೇಕು.. ಎಂಬ ದಾಸವಾಣಿ ಹುಟ್ಟಿದ್ದೇ ಆ ಸನ್ನಿವೇಶದಿಂದ. ಶ್ರೀರಾಮ ಸಾಕಷ್ಟು ಪರಾಮರ್ಶಿಸಿ ಹೊರಟು ನಿಂತಿದ್ದ.

ಒಮ್ಮೆ ಹೊರಟು ಬಿಟ್ಟರೆ, ಮಿಕ್ಕ ಮಾತುಗಳು ಅಲ್ಲಿಗೇ ನಿಂತಂತೆ. ಕುಹಕಗಳಿಗೆ ಎಡೆಯೇ ಇರುವುದಿಲ್ಲ. ದಿನನಿತ್ಯದ ಶೀತಲ ಯುದ್ಧಕ್ಕೆ ಆಸ್ಪದವೇ ಇರುವುದಿಲ್ಲ. ಬಾಸ್‌ ಮಾತುಗಳು ಕಿವಿಗೆ ಕಾದ ಸೀಸವಾಗಿ ಸುರಿದರೆ, ಠಾವನ್ನು ಬಿಟ್ಟು ತೊಲಗುವುದಿಲ್ಲವೇ ಕೆಲಸಗಾರ? ಸದಾ ಈ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಆದರೆ ಹಾಗೆ ನಿರ್ಧಾರ ಕೈಗೊಂಡರೆ ಎರಡೂ ಕಡೆಯ ಯುದ್ಧ ಬಂದ್‌, ಇಲ್ಲವಾದರೆ ಅದು ದಿನನಿತ್ಯದ ಶೀತಲ ಯುದ್ಧ. ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಎಂದರೆ ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೇ? ಎಂಬಂತೆ.

ಈ ಹೇಳುವಿಕೆ ಮತ್ತು ಕೇಳುವಿಕೆಯ ಅತ್ಯುತ್ತಮ ಉದಾಹರಣೆ ಎಂದರೆ ಭಗವದ್ಗೀತೆ. ತಿಳಿದುಕೊಳ್ಳಲು ಪಾರ್ಥನಿದ್ದ, ತಿಳಿಸಿ ಹೇಳಲು ಪಾರ್ಥ ಸಾರಥಿ ಸಿದ್ಧನಿದ್ದ. ಆದರೆ ಇಲ್ಲಿನ ವಿಷಯವೂ ಹೂವಿನ ಸರ ಎತ್ತಿದಂತೆ ಆಗಿರಲಿಲ್ಲ. ಮಕ್ಕಳಿಗೆ ರಾತ್ರಿ ಕಥೆ ಹೇಳಿ ಮಲಗಿಸಿದಂತೆ ಆಗಿರಲಿಲ್ಲ. ಮೊದಲಿಗೆ ಆ ಶಿಷ್ಯನನ್ನು ನೋಯಿಸಿ, ಬೇಯಿಸಿ, ಮನವನ್ನು ಸಿದ್ಧಗೊಳಿಸಿ ಕೊನೆಗೆ “ಅನ್ಯಥಾ ಶರಣಂ ನಾಸ್ತಿ’ ಎಂಬ ಸ್ಥಿತಿಗೆ ಕೊಂಡೊಯ್ದು ಅನಂತರವೇ ಹೇಳಿದ್ದು. ಬರಡು ನೆಲಕ್ಕೆ ಬೀಜ ಸುರಿದರೆ ಸಸಿ ಏಳದು, ಮೊದಲು ಸಿದ್ಧಗೊಳಿಸಬೇಕು. ಈ ಮಾತು ಏಕೆ ಹೇಳಿದೆ ಎಂದರೆ, ಎಲ್ಲ ದಿಕ್ಕುಗಳೂ ಸರಿ ಇ¨ªಾಗ ಯಾರು, ಯಾವ ಮಾತು ಹೇಳಿದರೂ ಕಿವಿಗೆ ಬೀಳುವುದೇ ಇಲ್ಲ. ಎಲ್ಲೋ ಒಂದೆಡೆ ಹೊಡೆತ ಬಿದ್ದರೇ, ಮನಸ್ಸು ಕೇಳುವ ಸ್ಥಿತಿಗೆ ಬರೋದು. ಆ ಸಮಯದಲ್ಲಿ ಹೇಳುವ ಹೃದಯ ಪರಿಶುದ್ಧವಾಗಿದ್ದರೆ ಕೇಳುಗನೂ ಪುನೀತನಾಗುತ್ತಾನೆ. ನೊಂದು, ಬೆಂದ ವಿಷಯಗಳನ್ನೇ ಕೈಗೆತ್ತಿಕೊಂಡು ಉಪದೇಶವನ್ನೂ ನೀಡಿ, ವ್ಯಾಮೋಹವನ್ನು ಕಳಚಿ, ಧರ್ಮ ರಕ್ಷಣೆಗೆ ನಿಲ್ಲುವಂತೆ ಪ್ರೇರೇಪಿಸಿದವನೇ ಆ ಜಗದ್ಗುರು.

Advertisement

ಇಲ್ಲೊಂದು ಸೂಕ್ಷ್ಮವಿದೆ. ಇಲ್ಲಿ ಗುರುವಾದವನು ಜಗದ್ಗುರುವೇ ಆದ. ಹೇಳಿದವನು ಪ್ರಬುದ್ಧನೇ ಆದ. ಆದರೆ, ಜ್ಞಾನವನ್ನು ಸ್ವೀಕರಿಸಿದವನು ತನ್ನ ಜನ್ಮವಿಡೀ ಕೇಳಿದ್ದನ್ನು ಪಾಲಿಸಿದನೇ? ಹೇಳಿದ್ದನ್ನು ಕೇಳಿ ಪಾಲಿಸುವವರು ಕೆಲವರು. ಹೇಳಿದ್ದನ್ನು ಕೇಳಿ ಸ್ವಲ್ಪ ದಿನಗಳು ಪಾಲಿಸುವವರು ಹೆಚ್ಚಿನ ಕೆಲವರು. ಹೇಳಿದ್ದನ್ನು ಆಲಿಸಿ ಮತ್ತೂಬ್ಬರಿಗೆ ದಾಟಿಸುವವರು ಹಲವರು. ಹೇಳಿದ್ದನ್ನು ಕೇಳಿ ಸುಮ್ಮನಾಗುವವರೇ ಅಧಿಕ.

ಹೇಳಿದ್ದನ್ನು ಕೇಳುವುದು ಎಂಬಲ್ಲಿ ಎರಡು ವಿಧಗಳಿವೆ. ದಿನನಿತ್ಯದಲ್ಲಿ ಇವೆಲ್ಲವನ್ನೂ ಕಂಡಿದ್ದರೂ ಅದನ್ನು ಸೂಕ್ಷ್ಮವಾಗಿ ಪರಿಗಣಿಸಿರುವುದಿಲ್ಲ ಅಷ್ಟೇ. ಹೇಳಿದ್ದನ್ನು ಕೇಳುವುದು ಬೋಧನೆಯ ವಿಷಯದಲ್ಲಿ, ದುಬೋìಧನೆಯ ವಿಷಯದಲ್ಲಿ, ಉಪದೇಶದ ವಿಷಯದಲ್ಲಿ, ಒಣ ಉಪದೇಶದ ವಿಷಯಗಳಲ್ಲಿ. ಇದು ಒಂದು ಬಗೆಯಾದರೆ ಹೇಳಿದ್ದನ್ನು ಕೇಳುವುದು ನಿಯಮದ ವಿಷಯಕ್ಕೂ ಸಲ್ಲುತ್ತದೆ.

ಮೊದಲ ಬಗೆಯಲ್ಲಿ ನಮ್ಮಿಷ್ಟದ ರೀತಿ ವರ್ತಿಸಬಹುದು. ಆದರೆ ಎರಡನೇ ಬಗೆಯಲ್ಲಿ ಪಾಲಿಸದೇ ಹೋದರೆ ಶಿûಾರ್ಹರಾಗುತ್ತೇವೆ. ವೈದ್ಯರ ಬಳಿ ತಪಾಸಣೆಗೆ ಹೋದಾಗ ಅವರು ಹೇಳುತ್ತಾರೆ. ನೀವು ಈ ಕೂಡಲೇ ಕರಿದ ಪದಾರ್ಥ ತಿನ್ನುವುದನ್ನು ನಿಲ್ಲಿಸಬೇಕು… ಸಿಹಿಯತ್ತ ನೋಡಲೇಬೇಡಿ. ವ್ಯಾಯಾಮ ಮಾಡಿ.

ಅವರನ್ನು ಗುರುಗಳು ಎಂದುಕೊಳ್ಳಿ. ಮೇಜಿನ ಮತ್ತೂಂದು ಬದಿಯಲ್ಲಿ ಇರುವವ ಶಿಷ್ಯ ಎಂದುಕೊಂಡರೆ… ಗುರುಗಳ ಮಾತನ್ನು ಶಿಷ್ಯ ಕೇಳುವನೇ? ವೈದ್ಯರು ಹೇಳಿದ ಮಾತಿಗೆ ತಲೆಯಾಡಿಸಿ ಹೊರಬರುವಾಗಲೂ ವೈದ್ಯರ ಮಾತುಗಳು ಇನ್ನೂ ಮನಸ್ಸಿನಲ್ಲಿ ಹೊಗೆಯಾಡುತ್ತಲೇ ಇರುವಾಗ, ಆ ಹೊಗೆಯನ್ನು ನಂದಿಸಲು ಹೊಗೆ ಬಿಡುವ ಸಾಧನವನ್ನು ಬಾಯಿಗಿರಿಸಿಕೊಂಡು ಸಾಗುವಾಗ, ತಾವು ಹೊಗೆ ಹಾಕಿಸಿಕೊಳ್ಳುವ ದಿಶೆಯಲ್ಲಿ ತ್ವರಿತವಾಗಿ ಸಾಗುತ್ತಿದ್ದೇವೆ ಎಂಬುದನ್ನು ಮರೆಯುತ್ತಾರೆ.

ವೈದ್ಯರ ಕ್ಲಿನಿಕ್‌ನಿಂದ ಹೊರಗೆ ಬರುವಾಗ, ಬೀದಿಯ ಬದಿಯಲ್ಲಿ ಕರಿಯುತ್ತಿರುವ ಬೋಂಡದ ಸುವಾಸನೆ ಮೂಗಿಗೆ ಬಡಿದಾಗ ಚಪಲ ಹತ್ತಿಕ್ಕುವುದು ಕಷ್ಟ. ಸಿಹಿ ತಿನ್ನಲಾರೆ ಎಂದು ನಿರ್ಧರಿಸಿ ಕಾಫಿಗೆ ಎರಡು ಚಮಚೆ ಹೆಚ್ಚು ಸಕ್ಕರೆ ಹಾಕಿಕೊಳ್ಳುವವರು ಕಡಿಮೆಯೇನಿಲ್ಲ. ನಾನೇನೂ ಜಿಲೇಬಿ ತಿನ್ನಲಿಲ್ಲವಲ್ಲ ಎಂಬುದೇ ಸ್ವಂತಕ್ಕೆ ಸಮಾಧಾನ. ವ್ಯಾಯಾಮ ಮಾಡಿ ಅಂತ ಹೇಳಿ¨ªಾರೆ ಅಂತ ಏಕಾಏಕಿ ಒಂದೆರಡು ಗಂಟೆ ವಕೌìಟ್‌ ಮಾಡಿ ಕೈಕಾಲು ಎತ್ತಲೂ ಆಗದಂತೆ ಮಾಡಿಕೊಂಡು ಇವೆಲ್ಲ ನಮಗಲ್ಲ ಬಿಡಿ ಎಂದು ಧನಸ್ಸು ಕೆಳಗಿಡುವವರೇ ಅಧಿಕ.

ಹಿರಿಯರು ಹೇಳಿದ್ದನ್ನು ಕಿರಿಯರು ಕೇಳಬೇಕು ಎಂಬುದು ಹಿಂದಿನಿಂದಲೂ ಬಂದ ಪದ್ಧತಿ. ಇದರ ಹಿಂದೆ ಹಲವಾರು ವಿಚಾರಗಳು. ಭೂಮಿಗೆ ನಮಗಿಂತಲೂ ಮೊದಲು ಬಂದವರು ಅನುಭವಿಸಿರುವುದನ್ನು ಕಿರಿಯರಿಗೆ ತಲುಪಿಸುತ್ತಾರೆ. ಬಿಸಿಯಾದ ಕಬ್ಬಿಣವನ್ನು ಮುಟ್ಟಿದರೆ ಕೈ ಸುಡುತ್ತದೆ ಎಂದು ಹೇಳಿದಾಗ ಕೇಳಬೇಕು ಅಷ್ಟೇ. ಅರಿವಿಲ್ಲದೇ ಮುಟ್ಟಿದಾಗ ಬಿಸಿ ತಾಕಿದಾಗ ಅನುಭವಾಗುತ್ತದೆ ಎಂಬುದು ಬೇರೆ ವಿಷಯ.

ನೀವು ಹೇಳಿದ್ದೇನು ನಾನು ಕೇಳ್ಳೋದು ಎಂದು ಮುಟ್ಟಿದರೂ ಬಿಸಿ ತಾಕುತ್ತದೆ ಬಿಡಿ. ಯಾವುದೋ ಒಂದು ವಿಷಯದ ಬಗ್ಗೆ ಒಂದಿನಿತೂ ಅರಿವಿಲ್ಲದ ಹಿರಿಯರು, ವಯಸ್ಸಿನಲ್ಲಿ ತಾವು ಹಿರಿಯರು ಎಂದು ಉಪದೇಶ ನೀಡಿದಾಗ, ಕೇಳಲೇಬೇಕು ಎಂಬ ಕಟ್ಟಳೆ ಕಿರಿಯರಿಗೆ ಇರಲಾರದು.

ಮೊದಲಿಗೆ ಹಿರಿಯರು ಒಣ ಉಪದೇಶ ನೀಡಬಾರದು. ಹಾಗೂ ಅಂಥಾ ದಿವ್ಯಾಮೃತ ಬಂದಾಗ, ವಯಸ್ಸಿಗೆ ಗೌರವ ನೀಡಿ ಹಂಗಿಸದೇ ತಳ್ಳಿ ಹಾಕಿದರೂ ತಪ್ಪೇನಿಲ್ಲ. ನನಗೆ ಗೊತ್ತು ನೀವೇನೂ ಹೇಳಬೇಕಿಲ್ಲ ಎಂಬ ಧೋರಣೆ ಸಲ್ಲದು ಅಷ್ಟೇ. ಯಾವುದೇ ವಿಷಯವನ್ನು ಪರಾಮರ್ಶಿಸಿದ ಅನಂತರ ಅಭಿಪ್ರಾಯವನ್ನು ಮಂಡಿಸುವಾಗ ಅನಾವಶ್ಯಕವಾದ ಬಿಸಿ ವಾತಾವರಣ ಸೃಷ್ಟಿಯಾಗಬಾರದು.

ಹೇಳುವವರು ಹಿರಿಯರೇ ಆಗಬೇಕಿಲ್ಲ ಅಲ್ಲವೇ? ಉತ್ತಮ ವಿಚಾರಗಳಾದರೆ, ಅಲ್ಲೊಂದು ಕಲಿಕೆಯಿರುವುದಾದರೆ ಕಿರಿಯರ ಮಾತನ್ನು ಕೇಳಲು ಹಿಂದೆಮುಂದೆ ನೋಡುವುದೇಕೆ? ಕಲಿಸಿದಾತ ಗುರು, ಅವರ ವಯಸ್ಸು ಮುಖ್ಯವಲ್ಲ. ವಯಸ್ಸಿಗೂ, ಜ್ಞಾನಕ್ಕೂ ಸಂಬಂಧವಿಲ್ಲ. ವಯಸ್ಸು ಏರಿದಂತೆ ಅನುಭವ ಹೆಚ್ಚಬಹುದು ಆದರೆ ಜ್ಞಾನವೂ ಏರುತ್ತದೆ ಎಂಬುದನ್ನು ನಿಖರವಾಗಿ ಹೇಳಲಾಗದು. ವಯಸ್ಸು ಏರಿದರೆ ವೃದ್ಧರಾಗುವುದು ಸಹಜ, ವಯಸ್ಸು ಚಿಕ್ಕದಿದ್ದರೂ ಜ್ಞಾನ ಹೆಚ್ಚಿದ್ದರೆ ಅವರು ಜ್ಞಾನವೃದ್ಧರೇ ಆಗಬಹುದು. ವಯಸ್ಸು ಹೆಚ್ಚಿದ್ದರೂ ಜ್ಞಾನ ಶೂನ್ಯರಾಗಿರಬಹುದು. ಕಾಯಿಲೆಗೆ ಹೊಣೆ ಯಾರು? ಶೂನ್ಯ ಜ್ಞಾನಕ್ಕೂ, ಜ್ಞಾನ ಶೂನ್ಯತೆಗೂ ವ್ಯತ್ಯಾಸವಿದೆಯೇ? ಅಂದ ಹಾಗೆ, ಈವರೆಗೆ ನಾನು ಹೇಳಿದ ವಿಷಯ ನಿಮಗೆ ಸರಿ ಕಾಣಲಿಲ್ಲ ಎಂದರೆ ಖಂಡಿತ ತಿಳಿಸತಕ್ಕದ್ದು. ಆದರೆ ಕೊಂಚ ಮೆಲ್ಲಗೆ ಹೇಳಿ ಆಯ್ತಾ? ಚಾಕಲೇಟ್‌ ಸುತ್ತಿದ ಕಾಗದದಲ್ಲಿ ಕಹಿ ಮಿಠಾಯಿ ಇಟ್ಟುಕೊಟ್ಟಂತೆ ಹೇಳಿ, ಆದರೆ ಏನಾದರೂ ಹೇಳ್ಳೋದು ಮರೆಯದಿರಿ.‌

*ಶ್ರೀನಾಥ್‌ ಭಲ್ಲೆ, ರಿಚ್ಮಂಡ್

Advertisement

Udayavani is now on Telegram. Click here to join our channel and stay updated with the latest news.

Next