Advertisement

ಮಳೆ ಆರಂಭಕ್ಕೆ  ಮೊದಲೇ ಅರಣ್ಯ ಇಲಾಖೆ ಸರ್ವಸನ್ನದ್ಧ  

10:57 AM May 28, 2018 | |

ಮಹಾನಗರ: ಮುಂಗಾರು ಮಳೆ ಆರಂಭಕ್ಕೆ ಮೊದಲೇ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಸಂಭವನೀಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈಗಾಗಲೇ ಕೆಲವೊಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದೆ. 

Advertisement

ರಸ್ತೆಯತ್ತ ಬಾಗಿ ನಿಂತ ಅಪಾಯಕಾರಿ ಮರಗಳನ್ನು ಪಟ್ಟಿ ಮಾಡಿ ಅದನ್ನು ತೆರವುಗೊಳಿಸುವ ಸಲುವಾಗಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಅದನ್ನು ತೆರವುಗೊಳಿಸುವಂತೆ ಕೋರಿಕೊಂಡರೆ, ಅರಣ್ಯ ಇಲಾಖೆಯೇ ಅಂತಹ ಮರಗಳನ್ನು ಕಡಿಸುವ ಕೆಲಸವನ್ನು ಮಾಡುತ್ತದೆ. ಅದಕ್ಕಾಗಿ, ಇಲಾಖೆಯ ಪ್ರತೀ ವಿಭಾಗಗ ಳಲ್ಲೂ ಓರ್ವ ಅರಣ್ಯ ಅಧಿಕಾರಿ, ಗಾರ್ಡ್‌ ಹಾಗು ಇಬ್ಬರು ವಾಚರ್‌ಗಳಿದ್ದ ನಾಲ್ಕು ಜನರ ತಂಡವೊಂದು ದಿನದ 24 ಗಂಟೆಯೂ ನಿಗಾ ವಹಿಸುತ್ತಿದೆ. ಇಲಾಖೆಯ ವತಿಯಿಂದ ಮರದ ಗೆಲ್ಲು ಕಡಿಯಲು ಹಾಗೂ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಕಟ್ಟಿಂಗ್‌ ಮೆಷಿನ್‌, ಗರಗಸ, ಟಾರ್ಚ್‌ ಹಾಗೂ ಇನ್ನಿತರ ಪರಿಕರಗಳನ್ನು ಕೂಡ ಒದಗಿಸಿಕೊಡಲಾಗಿದೆ.

ಸಾರ್ವಜನಿಕರಿಂದ ದಿನದ ಯಾವುದೇ ಅವಧಿಯಲ್ಲಿ ದೂರು ಬಂದರೆ,  ಈ ನಾಲ್ಕು ಜನರ ತಂಡ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ.

ಸೂಕ್ತ ಕ್ರಮಕ್ಕೆ ಸೂಚನೆ
ಪಾಲಿಕೆ ವ್ಯಾಪ್ತಿಯಲ್ಲಿರುವ ಉರ್ವಸ್ಟೋರ್‌, ಅತ್ತಾವರ ಹಾಗೂ ಪಾಂಡೇಶ್ವರದಲ್ಲಿದ್ದ ಅಪಾಯಕಾರಿ ಮರಗಳನ್ನು ಕಡಿಯಲಾಗಿದೆ. ಇನ್ನುಳಿದಂತೆ ನಗರದ ಹೊರವಲಯದ ಮರವೂರು, ಕೈಕಂಬ, ಗಂಜಿಮಠದಲ್ಲಿದ್ದ ಅಪಾಯಕಾರಿ ಮರಗಳನ್ನೂ ಕಡಿಸಿ ಸಂಭವನೀಯ ಅನಾಹುತವನ್ನು ತಪ್ಪಿಸಲಾಗಿದೆ. ಸಾರ್ವಜನಿಕರು ದೂರು ನೀಡುವ ಮೊದಲೇ ಸಂಬಂಧಿತ ಮಹಾನಗರ ಪಾಲಿಕೆ ಅಥವಾ ಆಯಾ ಸ್ಥಳೀಯಾಡಳಿತದ ಅಧಿಕಾರಿಗಳು ತಮ್ಮ ಪರಿಧಿಯೊಳಗಡೆ ಬರುವ ಅಪಾಯಕಾರಿ ಮರಗಳು ಕಂಡು ಬಂದಲ್ಲಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ಕ್ರಮಕೈಗೊಳ್ಳವಂತೆ ನೋಡಿಕೊಳ್ಳುತ್ತಾರೆ.

ಅಪಾಯಕಾರಿ ಮರಗಳಿದ್ದರೆ ತಿಳಿಸಿ
ಸಾರ್ವಜನಿಕ ಪ್ರದೇಶದಲ್ಲಿ ಅಪಾಯಕಾರಿ ಮರಗಳಿದ್ದಲ್ಲಿ ಅಥವಾ ಮರ ಬಿದ್ದು ವಿದ್ಯುತ್‌ ಕಂಬ, ತಂತಿಗಳು ಹಾನಿಯಾಗುವ ಸಂಭವವಿದ್ದಲ್ಲಿ ಆಯಾ ಸ್ಥಳೀಯಾಡಳಿತದ ಸಂಬಂಧಿತ ಅಧಿಕಾರಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಬೇಕು. ಒಂದು ವೇಳೆ ಇಂತಹ ಮರಗಳು ತಮ್ಮ ಖಾಸಗಿ ಜಾಗದಲ್ಲಿ ಇದ್ದಲ್ಲಿ, ಆ ಜಾಗದ ಸಂಬಂಧಿತ ವ್ಯಕ್ತಿಗಳೇ ಕಡಿಸಬೇಕು. ಆದರೆ, ಹೀಗೆ ಕಡಿಯುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳವುದು ಅತ್ಯಗತ್ಯ. ಯಾವುದೇ ಮರ ಅತೀ ಅಪಾಯ ವೆಂದು ಕಂಡು ಬಂದು, ಜೀವ ಹಾನಿಯ ಸಂಭವವೂ ಇದೆ ಎಂದಾದಲ್ಲಿ ಸಕಾರಣ ನೀಡಿ ಅಂತಹ ಮರಗಳನ್ನು ಕಡಿದು ಅನಂತರ ಇಲಾಖೆಗೆ ಮಾಹಿತಿಯನ್ನು ನೀಡಬಹುದು. 

Advertisement

1926- ಸಹಾಯವಾಣಿ
ಅರಣ್ಯ ಇಲಾಖಾ ಟೋಲ್‌ಫ್ರೀ ನಂಬರ್‌ – 1926 ಸಂಪರ್ಕಿಸಬಹುದು. ಕರೆಮಾಡಿದವರು ಅನಾಹುತ ಸಂಭವಿಸಬಹುದಾದ ಸ್ಥಳದ ಹೆಸರು, ವಿಳಾಸ ತಿಳಿಸಿದರೆ, ಆಯಾ ರೇಂಜ್‌ನ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಸಹಾಯಕ್ಕೆ ಸಿದ್ದ
ಪ್ರತೀ ರೇಂಜ್‌ನಲ್ಲಿಯೂ ಅಗತ್ಯ ಪರಿಕರಗಳೊಂದಿಗೆ ಸನ್ನದ್ಧರಾಗಿರುವ ತಂಡವೊಂದು ಸದಾ ಜಾಗರೂಕವಾಗಿದೆ. ಈಗಾಗಲೇ ಅಪಾಯವೆಂದು ಕಂಡು ಬಂದ ಮರಗಳ ಕೊಂಬೆ, ರೆಂಬೆಗಳನ್ನು ಕಡಿಸಲಾಗಿದೆ. ಸಾರ್ವಜನಿಕರು ದೂರುಗಳಿದ್ದಲ್ಲಿ, ಅಥವಾ ಸಂಭವನೀಯ ಅಪಘಾತದ ಬಗ್ಗೆ ಇಲಾಖೆಯ ಟೋಲ್‌ ಫ್ರೀ ನಂಬರ್‌ಗೆ ಕರೆಮಾಡಿ ತಿಳಿಸಿದ್ದಲ್ಲಿ, ಆಯಾ ರೇಂಜ್‌ನ ತಂಡದ ಸದಸ್ಯರು ವಿಳಂಬಿಸದೆ ಸಹಾಯಕ್ಕೆ ಧಾವಿಸುತ್ತಾರೆ.
– ಪಿ. ಶ್ರೀಧರ್‌, ಅರಣ್ಯಾಧಿಕಾರಿ, ಮಂಗಳೂರು ವಲಯ

ಗಣೇಶ್‌ ಮಾವಂಜಿ

Advertisement

Udayavani is now on Telegram. Click here to join our channel and stay updated with the latest news.

Next