Advertisement

Quit India Movement ಕರ್ನಾಟಕದಲ್ಲೂ ಏರಿತ್ತು ಕ್ವಿಟ್‌ ಇಂಡಿಯಾ ಚಳವಳಿಯ ಕಾವು

11:58 PM Aug 07, 2023 | Team Udayavani |

ಕ್ವಿಟ್‌ ಇಂಡಿಯಾ ಚಳವಳಿಗೆ ದೇಶದೆಲ್ಲೆಡೆಯ ಜನರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಈ ಹೋರಾಟದಲ್ಲಿ ಸಹಸ್ರಾರು ಮಂದಿ ಪ್ರಾಣ ತ್ಯಾಗ ಮಾಡಿದರು. ಹಲವೆಡೆ ತ್ರಿವರ್ಣ ಧ್ವಜಗಳು ಹಾರಿಸಲ್ಪಟ್ಟರೆ ಹಳ್ಳಿಹಳ್ಳಿಗಳಲ್ಲಿ ಸ್ವಾತಂತ್ರ್ಯದ ಘೋಷಣೆಗಳು ಮೊಳಗಿದವು.

Advertisement

ಭಾರತ ಸ್ವಾತಂತ್ರ್ಯ ಹೋರಾಟದ ಒಂದು ಪ್ರಮುಖ ಮಜಲು ಎಂದೇ ಪ್ರಸಿದ್ಧಿಯಾದ ಆಗಸ್ಟ್‌ ಕ್ರಾಂತಿ, ಅಥವಾ ಕ್ವಿಟ್‌ ಇಂಡಿಯಾ ಚಳವಳಿಗೆ ಈ ಆಗಸ್ಟ್‌ 8ಕ್ಕೆ 81ನೇ ವರ್ಷ. ಮಾಡು ಇಲ್ಲವೇ ಮಡಿ ಎಂಬುದು ಹೋರಾಟಗಾರರ ಸಮರ ಗೀತೆಯಾಗಿತ್ತು!

ಕ್ವಿಟ್‌ ಇಂಡಿಯಾ ಒಂದು ಶಾಂತಿಯುತ ಮತ್ತು ಅಹಿಂಸಾತ್ಮಕ ಚಳುವಳಿಯಾಗಿ ರೂಪುಗೊಂಡು ಬ್ರಿಟಿಷರು ಭಾರತವನ್ನು ತೊರೆದು, ಸ್ವಾತಂತ್ರ್ಯವನ್ನು ನೀಡಬೇಕು ಎಂಬುದೇ ಉದ್ದೇಶವಾಗಿತ್ತು.

ಮುಂಬಯಿಯಲ್ಲಿ 1942ರ ಆಗಸ್ಟ್‌ 8ರಂದು ಗಾಂಧೀಜಿಯವರು ಕ್ವಿಟ್‌ ಇಂಡಿಯಾ ಚಳವಳಿ ಯನ್ನು ಘೋಷಿಸಿ ಬ್ರಿಟಿಷ್‌ ಆಡಳಿತ ಕೊನೆಗೊಳಿಸು ವಂತೆ ಜನರಿಗೆ ಸ್ಪಷ್ಟವಾದ ಕರೆ ನೀಡಿದರು. 1944ರ ವೇಳೆಯಲ್ಲಿ ಚಳವಳಿ ನಿಗ್ರಹಿಸಲ್ಪಟ್ಟರೂ, ಬ್ರಿಟಿಷರ ವಿರುದ್ಧ ದೇಶಾದ್ಯಂತ ಜನರನ್ನು ಒಗ್ಗೂಡಿಸುವಲ್ಲಿ ಈ ಆಂದೋಲನ ಪ್ರಮುಖ ಪಾತ್ರ ವಹಿಸಿತ್ತು.

ಕರ್ನಾಟಕದಲ್ಲಿ ಚಳವಳಿ
ಗಾಂಧೀಜಿ ಕ್ವಿಟ್‌ ಇಂಡಿಯಾ ಚಳವಳಿಯನ್ನು ಘೋಷಿಸಿದ ತತ್‌ಕ್ಷಣ ಕರ್ನಾಟಕದಲ್ಲಿ ಪ್ರತಿಭಟನೆ ಯನ್ನು ಕೈಗೊಳ್ಳಲು ಜೆ. ಅಂಬಲಿ ಮತ್ತು ಆರ್‌.ಆರ್‌. ದಿವಾಕರ್‌ ನೇತೃತ್ವದಲ್ಲಿ ಒಂದು ಕಾರ್ಯಸಮಿತಿಯನ್ನು ಕೆಪಿಸಿಸಿ ನೇಮಿಸಿತು. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅನೇಕ ಗ್ರಾಮ ಕಚೇರಿಗಳು ಅಗ್ನಿಗಾಹುತಿ ಯಾದವು. ರೆವಿನ್ಯೂ ದಾಖಲೆಗಳು ನಾಶವಾದವು. ಟೆಲಿಗ್ರಾಫ್ ತಂತಿಗಳು, ರೈಲು ಹಳಿಗಳು ತುಂಡರಿಸ ಲ್ಪಟ್ಟವು. ರೈಲು ನಿಲ್ದಾಣಗಳು ಸರಕಾರಿ ಕಚೇರಿಗಳು ಧ್ವಂಸಗೊಂಡವು. ಯುರೋಪ್‌ ಮಿಲಿಟರಿಯನ್ನು ಈ ಎರಡು ಜಿಲ್ಲೆಗಳಲ್ಲಿ ನಿಯೋಜಿಸಲಾಯಿತು. ಹಳೆ ಮೈಸೂರು, ಬೆಂಗಳೂರು, ಭದ್ರಾವತಿ, ಕೋಲಾರ, ದಾವಣಗೆರೆ ಮತ್ತಿತರ ಕಡೆಗಳಲ್ಲಿ ಕಾರ್ಮಿಕರು ಗಾಂಧೀಜಿ ದಸ್ತಗಿರಿಯನ್ನು ವಿರೋಧಿಸಿ ಪ್ರತಿಭಟಿಸಿ ದರು. ಸರಕಾರಿ ಟಿಂಬರ್‌ ಡಿಪೋ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳನ್ನು ಬಹಿಷ್ಕರಿಸುವ ಮೂಲಕ ವಿದ್ಯಾರ್ಥಿಗಳು ಮುಷ್ಕರದಲ್ಲಿ ಭಾಗವಹಿಸಿದರು. ರೈಲು ನಿಲ್ದಾಣಗಳು, ಅಂಚೆ ಕಚೇರಿ ಮತ್ತು ಪೊಲೀಸ್‌ ಸ್ಟೇಶನ್‌ಗಳು ಬೆಂಕಿಗಾಹುತಿಯಾದವು. 1942-43ರಲ್ಲಿ ಕರ್ನಾಟಕದ ಸುಮಾರು 15 ಸಾವಿರ ಜನರು ಜೈಲು ಸೇರಿದರು, 30 ಮಂದಿ ಪೊಲೀಸ್‌ ಗುಂಡಿಗೆ ಬಲಿಯಾದರು.

Advertisement

ಈಸೂರು ಕ್ರಾಂತಿ
ಅಂದು ಮೈಸೂರು ಸಂಸ್ಥಾನಕ್ಕೆ ಸೇರಿದ ಶಿವಮೊಗ್ಗದ ಈಸೂರಿನಲ್ಲಿ ನಡೆದ ಘಟನೆ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಮಹತ್ತರವಾದುದು. ರಾಜ್ಯದ ಬೇರೆ ಕಡೆ ನಡೆದ ಘಟನೆಗಳಿಗಿಂತಲೂ ಇದು ಕಠಿನವಾದುದು. ಗಾಂಧೀಜಿಯವರ ಮಾಡು ಇಲ್ಲವೇ ಮಡಿ ಕರೆಗೆ ಈಸೂರಿನ ಜನ ಸ್ಪಂದಿಸಿ, ಚಳವಳಿಯಲ್ಲಿ ಭಾಗವಹಿಸಿದರು. 1942ರ ಸೆಪ್ಟಂಬರ್‌ 25 ರಂದು ಗ್ರಾಮಕ್ಕೆ ಕಂದಾಯ ಸಂಗ್ರಹಿ ಸಲು ತೆರಳಿದ ಕಂದಾಯ ಅಧಿಕಾರಿಗಳನ್ನು ದೇಶಭಕ್ತಿ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಅವರಲ್ಲಿದ್ದ ದಾಖಲಾತಿ ಪುಸ್ತಕಗಳನ್ನು ವಶಪಡಿಸಿಕೊಂಡರು. ಮರುದಿನ, ಗ್ರಾಮವು ಸ್ವತಂತ್ರ ವಾಯಿತು ಎಂದು ಘೋಷಿಸಲ್ಪಟ್ಟು, ಸಮಾನಾಂತರ ಸರಕಾರವು ಪ್ರತಿಷ್ಠಾಪನೆಗೊಂಡಿತು. ಹೊಸ ಅಮಲ್ದಾರ್‌ನನ್ನು ನೇಮಕ ಮಾಡಲಾಯಿತು. ಖಾದಿ ಟೊಪ್ಪಿಯನ್ನು ಎಲ್ಲರೂ ಧರಿಸಬೇಕೆಂದು ಹೊಸ ಕಾನೂನನ್ನು ಘೋಷಿಸಲಾಯಿತು. ಯುವಕರು ವೀರಭದ್ರೇಶ್ವರ ದೇವಸ್ಥಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸೆಪ್ಟಂಬರ್‌ 28 ರಂದು ಅಮಲ್ದಾರ ಮತ್ತು ಅವರ ಜನರು ಗ್ರಾಮವನ್ನು ಪ್ರವೇಶಿಸಿದಾಗ ಸುತ್ತುವರಿದ ಜನರು ಖಾದಿ ಟೋಪಿ ಧರಿಸುವಂತೆ ಆಗ್ರಹಿಸಿದರು. ಇದರಿಂದ ಕುಪಿತರಾದ ಅಮಲ್ದಾರನ ಜತೆಗಿದ್ದ ಪೊಲೀಸರು ಜನರನ್ನು ನಿಯಂತ್ರಿಸುವಂತೆ ಆದೇಶಿಸಿದರು. ಲಾಠಿ ಚಾರ್ಜ್‌, ಗುಂಡಿನ ಚಕಮಕಿಯ ಪರಿಣಾಮ ಜನರು ಹಿಂಸಾಕೃತ್ಯಕ್ಕಿಳಿ ದರು. ಇದಕ್ಕುತ್ತರ ವಾಗಿ ಮೈಸೂರು ಪೊಲೀಸರು ಮತ್ತು ಸೇನೆ ಮರು ದಾಳಿ ನಡೆಸಿತು. ಇದರಿಂದಾಗಿ ಅನೇಕ ಸಾವುನೋವು, ಅತ್ಯಾಚಾರ, ದರೋಡೆ ನಡೆಯಿತು. ಅನೇಕ ಜನರ ಮೇಲೆ ಆರೋಪಗಳನ್ನು ಹೊರಿಸಲಾಗಿ, ಐವರು ದೇಶಪ್ರೇಮಿಗಳನ್ನು 1943ರ ಮಾರ್ಚ್‌ನಲ್ಲಿ ಗಲ್ಲಿಗೇರಿಸಲಾಯಿತು. ದೇಶದ ಇತರ ಭಾಗಗಳಲ್ಲಿ ನಿಂತರೂ, ಈ ಚಳವಳಿಯು ಮತ್ತೆರಡು ವರ್ಷಗಳ ಕಾಲ ಇಲ್ಲಿ ಮುಂದುವರಿಯಿತು.
ಕೊಡಗಿನ ಮಡಿಕೇರಿಯಲ್ಲೂ ಪಡ್ಯಾಂಡ ಬೆಳಿಯಪ್ಪ ಮತ್ತು ಸಿ.ಎಂ. ಪೂಣಚ್ಚರನ್ನು ಚಳವಳಿಯ ಹಿನ್ನೆಲೆಯಲ್ಲಿ ಬಂಧಿಸಲಾಯಿತು. ಗುಲ್ಬರ್ಗದಲ್ಲಿ ಸ್ವಾಮಿ ರಮಾನಂದತೀರ್ಥ, ಎನ್‌.ಜಿ. ಘೋರೆ, ವೆಂಕಟೇಶ ದೇವುಲ ಗಾವ್ಕರ್‌ ಮುಂತಾದ ದೇಶಭಕ್ತರ ನೇತೃತ್ವದಲ್ಲಿ ಚಳವಳಿಗೆ ಕಾವು ಏರಿತು. ಉಡುಪಿ, ಮಂಗಳೂರಿನಲ್ಲೂ ಕ್ವಿಟ್‌ ಇಂಡಿಯಾದ ಕಾವು ಏರಿದ್ದು ಅನೇಕ ಹೋರಾಟಗಾರರು ಜೈಲುವಾಸ ಅನು ಭವಿಸಿದ್ದರು. ಪೊಲೀಸ್‌ ಸರ್ಪಗಾವಲಿನ ನಡುವೆಯೇ ಉಡುಪಿ ಅನಂತೇಶ್ವರದ ಮಾನ ಸ್ತಂಭದ ಮೇಲೆ ಸ್ವತಂತ್ರ ಭಾರತದ ಧ್ವಜವನ್ನು ಹಾರಿಸಿದ ಕೀರ್ತಿ ಉಡುಪಿಗೆ ಸಲ್ಲುತ್ತದೆ. ಗೆರಿಲ್ಲಾ ಮಾದರಿ ದಾಳಿಯಿಂದಾಗಿ ಕರ್ನಾಟಕದಲ್ಲಿ ಈ ಆಂದೋಲನ ಕರ್ನಾಟಕ ಮಾದರಿ ಎಂದು ಜನಜನಿತ.

ಈಗ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ಣಗೊಂಡಿವೆ. ಇದೀಗ ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಜಾತೀವಾದ ಮತ್ತು ಕೋಮು ವಾದವನ್ನು ಭಾರತದಿಂದ ತೊಲಗಿಸಲು ದೇಶವಾಸಿ ಗಳು ಹೋರಾಟ ನಡೆಸಬೇಕಿದೆ. ದೇಶವನ್ನು ಈ ಎಲ್ಲ ಪಿಡುಗುಗಳಿಂದ ಮುಕ್ತಗೊಳಿಸಲೇಬೇಕಿದೆ. ತನ್ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುವ ಸಂಕಲ್ಪವನ್ನು ನಾವೆಲ್ಲರೂ ತೊಡಬೇಕು.

-ಜಲಂಚಾರು ರಘುಪತಿ ತಂತ್ರಿ, ಉಡುಪಿ 

Advertisement

Udayavani is now on Telegram. Click here to join our channel and stay updated with the latest news.

Next