Advertisement

ಕೃಷಿ ಕ್ಷೇತ್ರಕ್ಕೂ ಬಂತು ಡಿಜಿಟಲ್‌ ಪದ್ಧತಿ

03:45 AM Jun 11, 2017 | |

ಬಳ್ಳಾರಿ: ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸುವತ್ತ ರೈತರನ್ನು ಪ್ರೇರೇಪಿಸಲು ಹಾಗೂ ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸುವಂತೆ ಮಾಡಿ ಕೃಷಿ ಉತ್ಪಾದನೆ ಹೆಚ್ಚಿಸಲು ರಾಜ್ಯ ಸರ್ಕಾರ ಡಿಜಿಟಲ್‌ ಕೃಷಿ ಯೋಜನೆ ಜಾರಿಗೊಳಿಸಿದೆ.

Advertisement

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹಾಗೂ ಧಾರವಾಡ ಜಿಲ್ಲೆಯ ನರಗುಂದ ತಾಲೂಕುಗಳಲ್ಲಿ ವಿನೂತನ ಪ್ರಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ 2016-17ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಮಾಧ್ಯಮಗಳನ್ನು ಬಳಸಿ ಕೃಷಿ ಸೇವಾ ಕ್ಷೇತ್ರವನ್ನು ವಿಸ್ತರಿಸುವ ಬಗ್ಗೆ ಪ್ರಸ್ತಾಪಿಸಿದ್ದರು.

ಅಂತೆಯೇ ಈ ಕುರಿತು ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮಾರ್ಗದರ್ಶನದಲ್ಲಿ ವಿನೂತನ ಮಾದರಿಯ ಕೃಷಿ  ವಿಸ್ತರಣಾ ವ್ಯವಸ್ಥೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಈ ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಅಲ್ಲದೆ ಡಿಜಿಟಲ್‌ ಕೃಷಿ ಯೋಜನೆ ಜಾರಿ ಉದ್ದೇಶಕ್ಕಾಗಿ 2016ರ ಆ.17ರಂದು 20 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಯೋಜನೆ ಜಾರಿ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕನ್ನು ರಾಯಚೂರಿನ ಕೃಷಿ ವಿವಿ ಹಾಗೂ ನವಲಗುಂದ ತಾಲೂಕನ್ನು ಧಾರವಾಡ ಕ‌ೃಷಿ ವಿವಿಗಳು ನಿರ್ವಹಿಸಲಿವೆ.

ಏನಿದು ಡಿಜಿಟಲ್‌ ಕ‌ೃಷಿ?:
ಕೃಷಿ ವಿವಿಗಳು ಉತ್ತಮ ಕೃಷಿ ಪದ್ಧತಿಗಳಾದ ಸಮಗ್ರ ಕೀಟ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಬೆಳೆಗಳ ರೋಗ ನಿರ್ಣಯ ಹಾಗೂ ಇವುಗಳನ್ನು ನಿರ್ವಹಿಸಲು ಇಂತಿಷ್ಟೇ ಆರ್ಥಿಕ ಮಿತಿ ಹಾಕಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಸೇವೆ ಒದಗಿಸುವ ಸಂಸ್ಥೆಗೆ ನೀಡಲಿವೆ. ಇವನ್ನೆಲ್ಲ ಬಹು ಮಾಧ್ಯಮಗಳ ಮೂಲಕ ರೈತರಿಗೆ ತಲುಪಿಸಲಾಗುತ್ತದೆ.

ಸಿರುಗುಪ್ಪ ತಾಲೂಕಿನ 20 ಹಾಗೂ ನವಲಗುಂದ ತಾಲೂಕಿನ 20 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 100 ಸಣ್ಣ, 60 ಮಧ್ಯಮ ಹಾಗೂ 40 ದೊಡ್ಡ ಹಿಡುವಳಿದಾರರನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಎರಡೂ ತಾಲೂಕುಗಳ ಒಟ್ಟು 8000 ರೈತರು ಈ ಯೋಜನೆ ಲಾಭ ಪಡೆಯಲಿದ್ದಾರೆ.

Advertisement

ರೈತ ಮಿತ್ರರ ನೇಮಕ:
ಪ್ರತಿ ಗ್ರಾಮ ಪಂಚಾಯ್ತಿಗೆ ಒಬ್ಬರಂತೆ ಒಟ್ಟು 40 ಮಂದಿ ಕೃಷಿ ಡಿಪೋÉಮಾ ಪಡೆದವರನ್ನು ರೈತ ಮಿತ್ರರೆಂದು ನೇಮಕ ಮಾಡಿಕೊಳ್ಳಲಾಗಿದೆ. ಇವರು ತಮ್ಮ ವ್ಯಾಪ್ತಿಯ ರೈತರ ಬೆಳೆಗಳನ್ನು, ಬೆಳೆ ಕುರಿತ ಸಮಸ್ಯೆಗಳನ್ನು ಸಂಗ್ರಹಿಸಿ ಅವುಗಳನ್ನು ಟ್ಯಾಬ್‌ ಮೂಲಕ ಸಂಬಂಧಿತ ವಿವಿಗೆ ತಲುಪಿಸಬೇಕಿದೆ. ಸಂಬಂಧಿ ತ ವಿವಿಯಲ್ಲಿ ಡಿಜಿಟಲ್‌ ಕೃಷಿ ಯೋಜನೆಗೆಂದೇ ಪ್ರತ್ಯೇಕ ತಜ್ಞರನ್ನು ನೇಮಕ ಮಾಡಿದ್ದು, ಇವರು ರೈತರ ಬಿತ್ತನೆ ಬೀಜದ ಆಯ್ಕೆ ಪ್ರಕ್ರಿಯೆಯಿಂದ ಹಿಡಿದು ಕಟಾವಿನ ನಂತರ ಬೆಳೆ ಸಂರಕ್ಷಣೆ, ಅವುಗಳ ಮಾರಾಟ ವ್ಯವಸ್ಥೆಯ ವರೆಗೆ ರೈತನಿಗೆ ಮಾರ್ಗದರ್ಶನ ಮಾಡಲಿದ್ದಾರೆ.

ಅಲ್ಲದೇ ರೈತ ಮಿತ್ರರು ಆಯಾ ಪ್ರದೇಶ ವ್ಯಾಪ್ತಿಯ ಭೌಗೋಳಿಕ ಮಾಹಿತಿ, ತಾಪಮಾನ ವೈಪರೀತ್ಯಗಳ ಮಾಹಿತಿ ಕಲೆಹಾಕಿ ಅವುಗಳಿಂದ ಆಗಬಹುದಾದ ಕೀಟಬಾಧೆ ಇದರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ರೈತರಿಗೆ ಮುನ್ಸೂಚನೆ ಕೊಡುವ ವ್ಯವಸ್ಥೆಯನ್ನೂ ಡಿಜಿಟಲ್‌ ಕೃಷಿ ಯೋಜನೆಯಲ್ಲಿ ಅಳವಡಿಸಲಾಗಿದೆ.

ರೈತ ಮಿತ್ರರು ನಿಯಮಿತವಾಗಿ ಈ ಯೋಜನೆಯಡಿ 100 ರೂ. ವಂತಿಗೆ ನೀಡಿ ನೋಂದಾಯಿಸಿಕೊಂಡ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳು, ಉತ್ಪಾದಕತೆ ಹೆಚ್ಚಿಸಿ ಆದಾಯ ಹೆಚ್ಚಿಸುವ ಮಾದರಿಗಳ ಕುರಿತ ತರಬೇತಿಯನ್ನೂ ನೀಡಲಿದ್ದಾರೆ. ಎರಡೂ ತಾಲೂಕುಗಳ ರೈತ ಮಿತ್ರರ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಲು, ಅವರ ಚಟುವಟಿಕೆಗಳನ್ನು ದಾಖಲೀಕರಣಗೊಳಿಸಲು ಮೇಲ್ವಿಚಾರಕರನ್ನು ನೇಮಿಸಲಾಗಿದ್ದು, ಅವರು ಈ ತಾಲೂಕುಗಳಲ್ಲಿ ಸಂಚರಿಸಿ ರೈತ ಮಿತ್ರರೊಡನೆ ರೈತರ ಅಭಿವ‌ೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸಲಿದ್ದಾರೆ.

ಡಿಜಿಟಲ್‌ ಕೃಷಿ ಯೋಜನೆಗೆ ರಾಜ್ಯ ಸರ್ಕಾರ ನಮ್ಮ ತಾಲೂಕನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ರೈತರು ಈ ಪದ್ಧತಿಯಲ್ಲಿ ಲಾಭಗಳಿಸುವಂತಾಗಲು ಕೃಷಿ ಮಿತ್ರರ ಸಲಹೆಗಳನ್ನು ಸ್ವೀಕರಿಸಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಿದೆ.
– ಲಕ್ಷ್ಮೀಕಾಂತರೆಡ್ಡಿ, ರೈತ ಮುಖಂಡರು, ಬೈಲೂರು, ಸಿರುಗುಪ್ಪ ತಾಲೂಕು.

ಕ‌ೃಷಿ ಚಟುವಟಿಕೆಗಳಲ್ಲಿ ಉತ್ಪಾದಕತೆ ಹೆಚ್ಚಿಸಲು ಪ್ರಯೋಗಾಲಯದಿಂದ ರೈತರ ಜಮೀನಿಗೆ ಎನ್ನುವ ಸಕಾರಾತ್ಮಕ ಚಿಂತನೆ ಡಿಜಿಟಲ್‌ ಕ‌ೃಷಿ ಯೋಜನೆಯಿಂದ ಅನುಷ್ಠಾನಗೊಳ್ಳಲಿದೆ.
– ಶರಣಪ್ಪ ಮುದುಗಲ್‌, ಜಂಟಿ ಕೃಷಿ ನಿರ್ದೇಶಕರು, ಬಳ್ಳಾರಿ.

– ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next