Advertisement

ವೇತನ ಖಾತ್ರಿಗೆ ನಿಲಯ ಕಾರ್ಮಿಕರ ಆಗ್ರಹ

03:39 PM Jan 21, 2022 | Team Udayavani |

ರಾಯಚೂರು: ಕೋವಿಡ್‌ ಆರೈಕೆ ಕೇಂದ್ರಗಳಾಗಿ ಪರಿವರ್ತಿಸುತ್ತಿರುವ ವಸತಿ ಶಾಲೆ ಹಾಗೂ ವಸತಿ ನಿಲಯಗಳ ಕಾರ್ಮಿಕರಿಗೆ ವೇತನ ಖಾತ್ರಿ ಪಡಿಸಬೇಕು ಎಂದು ರಾಜ್ಯ ವಸತಿ ನಿಲಯ ಹಾಗೂ ವಸತಿ ಶಾಲೆಗಳ ಕಾರ್ಮಿಕರ ಸಂಘದ ಸದಸ್ಯರು ಒತ್ತಾಯಿಸಿದರು.

Advertisement

ಈ ಕುರಿತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದ ಸಂಘಟನೆ ಸದಸ್ಯರು, ಮಸ್ಕಿಯ ಎರಡು ಹಾಗೂ ಅಮರೇಶ್ವರ, ದೇವದುರ್ಗ, ಸಿರವಾರ ಹಾಗೂ ಮಾನ್ವಿಯ ವಸತಿ ನಿಲಯ ಹಾಗೂ ಶಾಲೆಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಮಾಡಲಾಗಿದೆ. ಅಲ್ಲದೇ ಅಲ್ಲಿನ ಸುಮಾರು 500 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. 66ಕ್ಕೂ ಹೆಚ್ಚು ಅಡುಗೆ ಹಾಗೂ ಕಾವಲು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೊದಲ ಮತ್ತು ಎರಡನೇ ಅಲೆಯ ವೇಳೆ ಈ ಸಿಬ್ಬಂದಿಗೆ ವೇತನ ನೀಡಿಲ್ಲ ಎಂದು ದೂರಿದರು.

ಪ್ರತಿ ವರ್ಷವೂ ಕಾರ್ಮಿಕ ಇಲಾಖೆ ಹೆಚ್ಚಿಸಿದ ತುಟ್ಟಿ ಭತ್ಯೆಯನ್ನು ವಸತಿ ಶಾಲೆಗಳ ಸಿಬ್ಬಂದಿ ವೇತನಕ್ಕೆ ಸೇರಿಸಿ ಪಾವತಿಸುತ್ತಿಲ್ಲ. 2017ರಿಂದ 2021ರ ಡಿಸೆಂಬರ್‌ ವರೆಗೂ ಕಾರ್ಮಿಕ ಇಲಾಖೆಯ ಅಸೂಚಿತ ದರದಲ್ಲಿ ವೇತನ ಪಾವತಿಸಿಲ್ಲ. ಕೂಡಲೇ ಆ ಅವಧಿಯ ವೇತನದ ವ್ಯತ್ಯಾಸ ಸಂಬಂಧಪಟ್ಟ ಎಲ್ಲ ಕಾರ್ಮಿಕರಿಗೆ ಪಾವತಿಸಬೇಕು, ಅಡುಗೆ ಹಾಗೂ ಕಾವಲು ಸಿಬ್ಬಂದಿಗೆ ಉದ್ಯೋಗ ಹಾಗೂ ವೇತನ ಭದ್ರತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಜಿ.ಅಮರೇಶ, ಉಪಾಧ್ಯಕ್ಷ ರಂಗನಾಥ ಮಸ್ಕಿ, ಪ್ರಧಾನ ಕಾರ್ಯದರ್ಶಿ ಕೈಸರ್‌ ಅಹಮ್ಮದ್‌ ಸೇರಿ ಅನೇಕ ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next