Advertisement

ಜನರ ನಿರೀಕ್ಷೆ ಹುಸಿ ಮಾಡಿದ ಡಿಸಿಎಂ: ಶಾಸಕ ಡಾ|ಚವ್ಹಾಣ

05:46 PM Jan 22, 2021 | Nagendra Trasi |

ಚಡಚಣ: ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಪ್ರಥಮ ಬಾರಿಗೆ ಆಗಮಿಸಿದ ಡಿಸಿಎಂ ಗೋವಿಂದ ಕಾರಜೋಳ ಮೇಲೆ ಕ್ಷೇತ್ರದ ಜನತೆ ಅಪಾರ ನಿರೀಕ್ಷೆ ಇಟ್ಟಿದ್ದರು. ಆದರೆ ಅದೆಲ್ಲವೂ ಹುಸಿಯಾಗಿದೆ ಎಂದು ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರವಧಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಿದೆ. ಇದೇ ವೇಳೆ ಚಡಚಣ-ಹತ್ತಳ್ಳಿ-ಹಾವಿನಾಳ ಹಾಗೂ ಲೋಣಿ ರಸ್ತೆ ಅನುಷ್ಠಾನಗೊಳಿಸಲಾಗಿತ್ತು. ಹತ್ತಳ್ಳಿ ಬೋರಿ ಹಳ್ಳಕ್ಕೆ ಬ್ರಿಡ್ಜ್ ಕಂಬಾಂದಾರ ನಿರ್ಮಾಣ ಕಾಮಗಾರಿ ಹಿಂದಿನ ಸರ್ಕಾರದಲ್ಲಿ ಅನುಮೋದನೆಗೊಂಡಿತ್ತು. ಅಲ್ಲದೇ ನನೆಗುದಿಗೆ ಬಿದ್ದ ಉಮರಾಣಿ ಬ್ಯಾರೇಜ್‌ ಕಾಮಗಾರಿಗೆ ಸಮ್ಮಶ್ರ ಸರ್ಕಾರದಲ್ಲಿ ಚಾಲನೆ ನೀಡಲಾಗಿದೆ ಎಂದ ಅವರು, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಾದರೂ ಯಾವುವು? ಎಂದು ಪ್ರಶ್ನಿಸಿದರು.

ಕೇವಲ ತೋರಿಕೆಗೋಸ್ಕರ ಡಿಸಿಎಂ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಣಗಿ ಜಂಟಿಯಾಗಿ ವಿವಿಧ ಕಾಮಗಾರಿ ಭೂಮಿ ಪೂಜೆ, ಲೋಕಾರ್ಪಣೆ,
ಉದ್ಘಾಟನೆ ಮಂಗಳವಾರ ನೆರವೇರಿಸಿದ್ದಾರೆ.

ನಾಗಠಾಣ ಕ್ಷೇತ್ರದ ಜನತೆ ನೂತನ ತಾಲೂಕಿಗೆ ಅಪಾರ ಪ್ರಮಾಣದ ಅನುದಾನದ ಘೋಷಣೆ, ಬೃಹತ್‌ ಪ್ರಮಾಣದ ಅಭಿವೃದ್ಧಿ ಕಾರ್ಯ ಪ್ರಾರಂಭವಾಗುವ ನಿರೀಕ್ಷೆ, ನೂತನ ತಾಲೂಕಿಗೆ ಬೇಕಾಗುವ ಬಸ್‌ ಡಿಪೋ, ಅಗ್ನಿ ಶಾಮಕ ಕಚೇರಿ, ಮಿನಿ ವಿಧಾನಸೌಧ, ಕುಡಿವ ನೀರಿನ ಸಮಸ್ಯೆ, ನನೆಗುದಿಗೆ ಬಿದ್ದ ಪಟ್ಟಣದ ಪ್ರಮುಖ ರಸ್ತೆ ಕಾಮಗಾರಿಗೆ ಚಾಲನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಘೋಷಣೆಯಾಗುತ್ತವೆ ಎಂದುಕೊಂಡಿದ್ದ ಜನತೆ ಹಾಗೂ ವೈಯಕ್ತಿಕವಾಗಿ ನನಗೂ ನಿರಾಸೆ ತಂದಿದೆ ಎಂದರು. ಬಿಜೆಪಿ ಶಾಸಕರಿರುವ ಕಡೆ ಅನುದಾನ ಇರುತ್ತದೆ. ಆದರೆ ನಾಗಠಾಣ ಕ್ಷೇತ್ರಕ್ಕೆ ಕೇಳಿದರೆ ಕೊರೊನಾ- ಪ್ರವಾಹ ನೆಪವಿದೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next