Advertisement

ಕಾಳ್ಗಿಚ್ಚು ತಡೆಯಲು ಬೆಂಕಿರೇಖೆ ಸೃಷ್ಟಿ

12:06 PM Jan 23, 2017 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗೆ ಬೇಸಿಗೆ ಆರಂಭಕ್ಕೂ ಮುನ್ನ ಬೆಂಕಿ ನಿಯಂತ್ರಿಸಲು 300ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ರೇಖೆ (ಫೈರ್‌ಲೈನ್‌) ನಿರ್ಮಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾಡಿನೊಳಗೆ ಅಕ್ರಮ ಚಟುವಟಿಕೆ- ಕಾಡಿನಲ್ಲಿ ಕಿಡಿ ಇಡುವವವ ಮೇಲೆ ಕಣ್ಗಾವಲು ಇಡಲಾಗಿದೆ. ನಾಗರಹೊಳೆ ಉದ್ಯಾನವನ ಒಂದೆಡೆ ಕೇರಳದ ವಯನಾಡು, ತಮಿಳುನಾಡಿನ ಮಧುಮಲೈ, ಬಂಡೀಪುರ ಅರಣ್ಯಕ್ಕೂ ಸಂಪರ್ಕವಿದೆ.

Advertisement

ಜೊತೆಗೆ ಉದ್ಯಾನದ ಕೆಲ ಪ್ರದೇಶ ಪಶ್ಚಿಮಘಟ್ಟಗಳ ಸಾಲಿಗೂ ಸೇರಲಿದೆ. ಮೈಸೂರು ಹಾಗೂ ಮಡಿಕೇರಿ ಜಿಲ್ಲೆ ವ್ಯಾಪ್ತಿಗೆ ಒಳಪಡುತ್ತದೆ. 643 ಚದರ ಕಿಲೋ ಮೀಟರ್‌ ವ್ಯಾಪ್ತಿಯ 8 ವಲಯಗಳ ಪೈಕಿ 4 ವಲಯಗಳಲ್ಲಿ ಈಗಾಗಲೇ ಮಳೆ ಕೊರತೆ, ಬಿರು ಬಿಸಿಲಿಗೆ ಕಾಡು ಒಣಗಿದೆ. ನೆಲಹುಲ್ಲು ಹಾಗೂ ಮರಗಳ ಎಲೆಗಳು ಉದುರಿದೆ. ಬಹುತೇಕ ಕೆರೆಕಟ್ಟೆಗಳಲ್ಲಿ ನೀರು ಕಡಿಮೆ- ಬರಿದಾಗಿದೆ.

ಉದ್ಯಾನದ ಸುರಕ್ಷತೆಯ ದೃಷ್ಟಿಯಿಂದ ಫೈರ್‌ಲೈನ್‌ ಸೇರಿದಂತೆ ವೀಕ್ಷಣಾ ಗೋಪುರ, ಅಟ್ಟಣೆ ಮೇಲೆ ಕಣ್ಗಾವಲು, ಅರಣ್ಯದಂಚಿನಲ್ಲಿ ಕ್ಯಾಮರಾ ಅಳವಡಿಸಲಾಗಿದೆ ಹಾಗೂ ಫೈರ್‌ಲೈನ್‌ ನಿರ್ಮಾಣಕ್ಕೆ ಅವಶ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವದಲ್ಲಿ ವೀರನಹೊಸಹಳ್ಳಿ, ಮತ್ತಿಗೋಡು, ಆನೆಚೌಕೂರು, ಕಲ್ಲಹಳ್ಳ, ನಾಗರಹೊಳೆ, ಬಳ್ಳೆ (ಅಂತರಸಂತೆ) ಡಿ.ಬಿ.ಕುಪ್ಪೆ (ದೊಡ್ಡಬೈರನಕುಪ್ಪೆ), ಮೇಟಿಕುಪ್ಪೆ ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಜೊತೆಗೆ ಹೊಸದಾಗಿ ಹುಣಸೂರು ವಲಯ ಸೇರಿಸಲಾಗಿದೆ. ಉದ್ಯಾನವನದಾದ್ಯಂತ 1800 ಕಿ.ಮೀ ಬೆಂಕಿ ರೇಖೆ ನಿರ್ಮಿಸಲು ಈಗಾಗಲೇ ಎಲ್ಲೆಡೆ ಫೈರ್‌ಲೈನ್‌ ಮಾರ್ಗದಲ್ಲಿ ಬೆಳೆದು ನಿಂತಿರುವ ಲಂಟಾನಾ ಮತ್ತಿತರ ಗಿಡಗುಂಟಿಗಳನ್ನು ಕಡಿಯಲಾಗಿದೆ. ಬಹುತೇಕ ಕಡೆ ಒಣಗಿದ್ದು, ವೀರನಹೊಸಹಳ್ಳಿ, ಹುಣಸೂರು, ಮತ್ತಿಗೋಡು, ಕಲ್ಲಹಳ್ಳ, ಅಂತರಸಂತೆ ವಲಯಗಳಲ್ಲಿ ಗಿಡಗಂಟಿಗಳನ್ನು ಸುಟ್ಟು, ಒಂದೆಡೆಯಿಂದ ಮತ್ತೂಂದೆಡೆಗೆ ಬೆಂಕಿ ಹರಡದಂತೆ ಫೈರ್‌ಲೈನ್‌ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

250-300 ಮಂದಿ ನೇಮಕ: ಪ್ರತಿ ವಲಯಕ್ಕೆ 40-50 ಮಂದಿ ಫೈರ್‌ವಾಚರ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಿತ್ಯ ಕೆಲಸ ನಿರ್ವಹಿಸುವವರಿಗೆ ಕೂಲಿಯೊಂದಿಗೆ ಊಟ, ಕುಡಿಯುವ ನೀರು ಹಾಗೂ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಉದ್ಯಾನದಲ್ಲಿ ಹಾಲಿ ಇರುವ ದೊಡ್ಡದಾದ 15 ವಾಚ್‌ ಟವರ್‌ ಮೂಲಕ ಹಾಗೂ ಉದ್ಯಾನದಂಚಿನ ಪ್ರದೇಶದ ಅಲ್ಲಲ್ಲಿ ಮರದ ಮೇಲೆ ಅಟ್ಟಣೆ ನಿರ್ಮಿಸಲಾಗಿದೆ. ಸಿಬ್ಬಂದಿ ದಿನವಿಡಿ(24/7) ಮಾದರಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಒಳ ನುಸುಳುವವರ ಪತ್ತೆಗಾಗಿ ಹೊಸದಾಗಿ ಹೆಚ್ಚುವರಿ ಕ್ಯಾಮರಾ ಅಳವಡಿಸಲಾಗುತ್ತಿದೆ.

Advertisement

ಹೆಚ್ಚುವರಿ ವಾಹನಗಳ ವ್ಯವಸ್ಥೆ: ಹಾಲಿ ಪ್ರತಿ ವಲಯಕ್ಕೆ 2 ವಾಹನಗಳಿದ್ದು, ಇದರೊಂದಿಗೆ ಮತ್ತೆ ರಡು ಬಾಡಿಗೆ ವಾಹನ ನಿಯೋಜಿಸಲಾಗಿದೆ. ಇದ ರೊಂದಿಗೆ ಹಳೆಯ ವಾಕಿ ಟಾಕಿ ದುರಸ್ತಿ ಜೊತೆಗೆ ಮತ್ತಷ್ಟು ಹೊಸ ವಾಕಿಟಾಕಿ ಖರೀದಿಸಲು ಯೋಜಿಸ ಲಾಗಿದೆ. ಬೆಂಕಿ ಬಿದ್ದವೇಳೆ ತಕ್ಷಣವೇ ಆರಿಸಲು ನೆರವಾಗಲು ಚಿಕ್ಕ ವಾಹನಗಳಲ್ಲಿ ಟ್ಯಾಂಕ್‌ ಮೂಲಕ ನೀರು ಕೊಂಡೊಯ್ಯುವ ವಾಹನಗಳಲ್ಲಿ ಸಣ್ಣ ಸಬ್‌ಮರ್ಸಿಬಲ್‌ ಪಂಪ್‌ ಸಹ ಬಳಸಲು ಉದ್ದೇಶಿಸ ಲಾಗಿದ್ದು, ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಗ್ನಿಶಾಮಕ ವಾಹನವೂ ಸಜ್ಜು: ಉದ್ಯಾನವನ ದೊಳಗೆ ಬೆಂಕಿ ಅವಘಡ ಸಂಭವಿಸಿದಲ್ಲಿ ತಕ್ಷಣಕ್ಕೆ ಕ್ರಮವಹಿಸಲು ಹುಣಸೂರು, ಎಚ್‌.ಡಿ.ಕೋಟೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆ ವಿಭಾಗದಲ್ಲಿ ತಾತ್ಕಾಲಿಕವಾಗಿ 3 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಅಗ್ನಿಶಾಮಕ ಇಲಾಖೆಗೆ ಪತ್ರ ಬರೆಯಲಾಗಿದೆ.

ಬೀದಿ ನಾಟಕದ ಮೂಲಕ ಅರಿವು: ನಾಗರ ಹೊಳೆ ಉದ್ಯಾದಂಚಿನ ಗ್ರಾಮಗಳಲ್ಲಿ ನುರಿತ ಕಲಾ ತಂಡಗಳಿಂದ ಅರಣ್ಯದ ಮಹತ್ವ, ಬೆಂಕಿ ಹಾಕಿದ್ದಲ್ಲಿ ಪರಿಸರದ ಮೇಲಾಗುವ ಪರಿಣಾಮ ಹಾಗೂ ಅರಣ್ಯ ಜನರದ್ದು ಎನ್ನುವ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಪ್ರದರ್ಶಿಸಲಾಗುತ್ತದೆ. ಜೊತೆಗೆ ಆಸಕ್ತ ಯುವಕರ ಬೆಂಕಿ ತಡೆಗಟ್ಟುವ ಪಡೆಯನ್ನು ಸಹ ರಚಿಸಲಾಗುತ್ತದೆ. ಈಗಾಗಲೇ ಕಾಡಂಚಿನಲ್ಲಿ ಜಾಥಾ ನಡೆಸಲಾಗಿದೆ. ರೇಡಿಯೋದಲ್ಲೂ ಸಹ ಮಾಹಿತಿ ನೀಡಲಾಗಿದೆ.

ಹೆಲಿಕಾಪ್ಟರ್‌ ಬಳಕೆಗೆ ಚಿಂತನೆ: ಈಗಾಗಲೇ ನೀರಿನ ಕೊರತೆ ಇದೆ. ಫೆಬ್ರವರಿ- ಮಾರ್ಚ್‌ನಲ್ಲಿ ಮಳೆ ಬಾರದಿದ್ದಲ್ಲಿ ಮತ್ತಷ್ಟು ತೊಂದರೆಯಾಗಬಹುದು. ಬೆಂಕಿ ತಡೆಗೆ ಮುನ್ನೆಚ್ಚರಿಕೆಯಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದರೂ, ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್‌ ಬಳಸಿ ಬೆಂಕಿ ನಂದಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳಲ್ಲಿ ಚರ್ಚಿಸಿದ್ದು, ಈಗಾಗಲೇ ಹೆಲಿಕಾಪ್ಟರ್‌ಗಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಅರಣ್ಯಕ್ಕೆ ತಂತಾನೆ ಬೆಂಕಿ ಬೀಳುವು ದಿಲ್ಲ. ಬೆಂಕಿ ಬೀಳುವುದನ್ನು ತಡೆಯು ವುದರಲ್ಲಿ ಸಾರ್ವಜನಿಕರ ಜವಾ ಬ್ದಾರಿಯೂ ಇದೆ. ಬೆಂಕಿ ಹಚ್ಚಿ ಅರಣ್ಯನಾಶ ಮಾಡುವ ಕಿಡಿಗೇಡಿಗಳ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಕಾಡಂಚಿನವನರು ಮಾಹಿತಿ ನೀಡಬೇಕು, ಅರಣ್ಯನಾಶವಾದಲ್ಲಿ ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆವಹಿಸಿದೆ. ಆದರೂ ಅರಣ್ಯದಂಚಿನ ಗ್ರಾಮಗಳ ರೈತರು, ಬೆಂಕಿ ತಡೆಗಟ್ಟುವಲ್ಲಿ ಯುವಕರು, ವಿದ್ಯಾರ್ಥಿಗಳ ಸಹಕಾರವೂ ಅಗತ್ಯ.
-ಮಣಿಕಂಠನ್‌, ಅರಣ್ಯ ಸಂರಕ್ಷಣಾಕಾರಿ

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next