Advertisement

ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ ‘ಸ್ವಚ್ಛತಾ ಜಾಗೃತಿ ಅಭಿಯಾನ’

10:12 AM Nov 20, 2017 | Team Udayavani |

ಮಹಾನಗರ : ರಾಮಕೃಷ್ಣ ಮಿಷನ್‌ ಸ್ವತ್ಛತಾ ಅಭಿಯಾನದ ಅಂಗವಾಗಿ ‘ಸ್ವಚ್ಛತಾ ಜಾಗೃತಿ ಅಭಿಯಾನವನ್ನು ನ.6ರಿಂದ 16ರ ವರೆಗೆ ಮಂಗಳೂರಿನ ವಿವಿಧ ಬಡಾವಣೆಗಳಲ್ಲಿ ಆಯೋಜಿಸಲಾಯಿತು. ಸುಮಾರು ಹನ್ನೊಂದು ಸ್ವಚ್ಛತಾ  ತಂಡಗಳು ಭಾಗವಹಿಸಿ ಒಟ್ಟು 1,200 ಮನೆಗಳನ್ನು ಸಂದರ್ಶಿಸಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.

Advertisement

ಜಪ್ಪು ಮಾರ್ಕೆಟ್‌ ರಸ್ತೆ ಹಾಗೂ ಮುಳಿಹಿತ್ಲು ಮುಖ್ಯರಸ್ತೆಯಲ್ಲಿ ಶ್ರೀ ಅಂಬಾಮಹೇಶ್ವರಿ ಭಜನ ಮಂದಿರದ ಸದಸ್ಯರು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಧ್ಯಕ್ಷ ರಾಘವ ಪೂಜಾರಿ ನಿರ್ದೇಶನದಲ್ಲಿ ಯುವಕರು ಮೂರು ತಂಡ ರಚಿಸಿ ಮನೆ ಮನೆ ಭೇಟಿಯ ಜತೆಗೆ ಮುಳಿಹಿತ್ಲು ಜಪ್ಪು ಮಾರ್ಗಗಳಲ್ಲಿನ ಪ್ಲಾಸ್ಟಿಕ್‌ ಪೇಪರ್‌ ಹಾಗೂ ತ್ಯಾಜ್ಯ ತೆಗೆದು ಸ್ವಚ್ಛಗೊಳಿಸಿದರು.

ಮೋರ್ಗನ್ಸ್‌ ಗೇಟ್‌ನಲ್ಲಿ ಭಗಿನಿ ಸಮಾಜದ ಮುಖ್ಯಸ್ಥೆ ವಜ್ರಾ ರಾವ್‌ ಹಾಗೂ ರತ್ನಾ ಆಳ್ವ ನೇತೃತ್ವದಲ್ಲಿ ನೂರಾರು ಮನೆಗಳನ್ನು ಭೇಟಿ ಮಾಡಿ ಶುಚಿತ್ವದ ಮಹತ್ವವನ್ನು ತಿಳಿಸಿಕೊಡಲಾಯಿತು. ಸುಮಾರು 40 ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಎಮ್ಮೆಕೆರೆ ಪ್ರದೇಶದಲ್ಲಿ ನಿವೇದಿತಾ ಬಳಗದವರಿಂದ ಮನೆ ಮನೆ ಭೇಟಿ ಕಾರ್ಯಕ್ರಮ ಜರಗಿತು. ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.

 ‘ಸಂಕಲ್ಪ’ ಕರಪತ್ರ ವಿತರಣೆ
ಅನಂತರ ನಿವೇದಿತಾ ಬಳಗದ ಸದಸ್ಯರು ಗೃಹಿಣಿಯರಿಗೆ ಸ್ವಚ್ಛತೆ ಹಾಗೂ ಕಸ ವಿಂಗಡಿಸಿ ಕೊಡುವ ಬಗ್ಗೆ ತಿಳಿಸಿದರು. ಜತೆಗೆ ನೂರು ಮನೆಗಳಿಗೆ ತೆರಳಿ ‘ಸಂಕಲ್ಪ’ ಕರಪತ್ರ ನೀಡಿದರು.

Advertisement

ಹಂಪನಕಟ್ಟೆಯಲ್ಲಿ ಶ್ರೀ ಕೃಷ್ಣ ಭವನ ಆಟೋ ಚಾಲಕರಿಂದ ಸ್ವಚ್ಛ ಮಂಗಳೂರು ಜಾಗೃತಿ ಅಭಿಯಾನ ಜರಗಿತು. ಸುಮಾರು ನೂರು ವರ್ತಕರನ್ನು ಭೇಟಿ ಮಾಡಿ ಪರಿಸರವನ್ನು ಶುಚಿಯಾಗಿಡಲು ಸಹಕಾರ ನೀಡುವಂತೆ ವಿನಂತಿಸಲಾಯಿತು. ಆಟೋ ಚಾಲಕರ ಸಂಘದ ಅಧ್ಯಕ್ಷ ಸೋಮನಾಥ್‌ ಕುಲಶೇಖರ ಸಹಿತ ಸುಮಾರು 40 ಚಾಲಕರು ಅಭಿಯಾನದಲ್ಲಿ ಭಾಗವಹಿಸಿದರು.

ಯೆಯ್ನಾಡಿ ಪರಿಸರದಲ್ಲಿ ಫ್ರೆಂಡ್ಸ್‌ ಫಾರ್‌ ಎವರ್‌ ಸದಸ್ಯರು ಸ್ವಚ್ಛತೆ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದರು. ಶುಭೋದಯ ಆಳ್ವ ಹಾಗೂ ಸದಸ್ಯರು ಸುಮಾರು ನೂರು ಜನ ವ್ಯಾಪಾರಿಗಳಿಗೆ ಕರಪತ್ರ ನೀಡಿ ಪರಿಸರದ ಸ್ವಚ್ಛತೆಯನ್ನು ಕಾಪಾಡುವಂತೆ ವಿನಂತಿಸಿದರು.

ಮಂಕಿಸ್ಟಾಂಡ್‌ ನ್ಯೂ ರಸ್ತೆಯಲ್ಲಿ ಎಂಎಫ್‌ಸಿ ಯುವಕರು ಸ್ವಚ್ಛತಾ ಜಾಗೃತಿ ಕಾರ್ಯಕ್ರಮದಲ್ಲಿ ಮನೆಗಳನ್ನು ಸಂದರ್ಶಿಸಿ ಕರಪತ್ರ ಹಂಚಿ ಪರಿಸರವನ್ನು ಸಂರಕ್ಷಿಸುವ ಕುರಿತು ಹೇಳಿದರು. ಅನುದೀಪ ಹಾಗೂ ಮಂಕಿಸ್ಟಾಂಡ್‌ ಫ್ರೆಂಡ್ಸ್‌ ಸರ್ಕಲ್‌ ಯುವಕರು ಸಹಯೋಗದಲ್ಲಿ ಕಾರ್ಯಕ್ರಮ ಜರಗಿತು.

ಬಿಜೈ ಬಸ್‌ ನಿಲ್ದಾಣದ ಆಸುಪಾಸಿನಲ್ಲಿ ಮಂಗಳೂರು ಹಿರಿಯರ ಅಸೋಸಿಯೇಶನ್‌ ವತಿಯಿಂದ ಸ್ವಚ್ಛತಾ ಅರಿವು ಮೂಡಿಸಲಾಯಿತು. ಅಂಗಡಿ ವರ್ತಕರನ್ನು ಮತ್ತು ಮಾಲಕರನ್ನು ಭೇಟಿಯಾಗಿ ಅಂಗಡಿ ಮುಂಭಾಗದ ಸ್ಥಳದಲ್ಲಿಯೂ ಸ್ವಚ್ಛತೆಯನ್ನು ಕಾಪಾಡುವಂತೆ ವಿನಂತಿಸಿಕೊಳ್ಳಲಾಯಿತು. ನಾಗೇಶ್‌ ಹಾಗೂ ರಾಮಕುಮಾರ್‌ ಬೇಕಲ್‌ ಕಾರ್ಯಕ್ರಮ ಸಂಯೋಜಿಸಿದರು.

ಅಂಗನವಾಡಿ ಕೇಂದ್ರಕ್ಕೆ ಸುಣ್ಣ ಬಣ್ಣ
ಕೊಟ್ಟಾರ ಚೌಕಿಯಲ್ಲಿ ಕುಮಾರ್‌ ಜಿಮ್‌ ಫ್ರೆಂಡ್ಸ್‌ ವತಿಯಿಂದ ಜಾಗೃತಿ ಕಾರ್ಯಕ್ರಮ ಜರಗಿತು. ಸಾರ್ವಜನಿಕರು ಅಲ್ಲಲ್ಲಿ ತ್ಯಾಜ್ಯವನ್ನು ಬಿಸಾಡದಂತೆ ವಿನಂತಿಸಲಾಯಿತು. ಕೋಡಿಕಲ್‌ ಪರಿಸರದ ಅಂಗನವಾಡಿ ಕೇಂದ್ರವನ್ನು ಕಿರಣ್‌ ಕುಮಾರ ಪೂಜಾರಿ ಹಾಗೂ ಕುಮಾರ್‌ ಜಿಮ್‌ ಫ್ರೆಂಡ್ಸ್‌ನ ಗೆಳೆಯರು ಸ್ವಚ್ಛಗೊಳಿಸಿ ಸುಣ್ಣ ಬಣ್ಣ ಬಳಿದು ಸುಂದರಗೊಳಿಸಿ ಹಸ್ತಾಂತರಿಸಿದರು.

ಫ್ಲೆಕ್ಸ್‌ಗಳ ತೆರವು
ಪಾಂಡೇಶ್ವರದ ಫೋರಂ ಮಾಲ್‌ ವರ್ತಕರನ್ನು, ಸ್ಟೋರ್‌ ನಿರ್ವಾಹಕರಿಗೆ ಸ್ವತ್ಛತೆಯ ಕರಪತ್ರ ನೀಡಿ ಜಾಗೃತಿ ಮಾಡಲು ಪ್ರಯತ್ನಿಸಲಾಯಿತು. ಕೆಲವರು ಜಾಹೀರಾತಿಗೋಸ್ಕರ ನೇತು ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಅವರಿಗೆ ನೀಡಲಾಯಿತು. ಹಾಗೂ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಜಾಹೀರಾತು ಪ್ರದರ್ಶಿಸದಂತೆ ಮನವಿ ಮಾಡಲಾಯಿತು. ವಾಸುದೇವ್‌ ಎಂ.ಆರ್‌. ಹಾಗೂ ದಿಲ್‌ ರಾಜ್‌ ಆಳ್ವ ಸಹಿತ ಅನೇಕ ಯುವಕರು ಪಾಲ್ಗೊಂಡಿದ್ದರು.

ಮಂಗಳಾ ನಗರದಲ್ಲಿ ಶ್ರೀ ಶಾರದಾ ಮಹಿಳಾ ವೃಂದದವರಿಂದ ಸ್ವಚ್ಛತಾ ಜಾಗೃತಿ ಕಾರ್ಯ ಜರಗಿತು. ನೂರಾರು ಮನೆಗಳಿಗೆ ತೆರಳಿ ಮುಖ್ಯವಾಗಿ ಗೃಹಿಣಿಯರಿಗೆ ಸ್ವತ್ಛತೆ ಕುರಿತು ಮಾಹಿತಿ ನೀಡಲಾಯಿತು. ಅಧ್ಯಕ್ಷೆ ಸತ್ಯವತಿ ಸಂಯೋಜಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next