Advertisement

ಅಗ್ಗದ ತಂತ್ರಕ್ಕೆ ಮತದಾರರ ಸೆಳೆತ, ದೇಶ ಹಿತಕ್ಕೆ ಮಾರಕ

06:00 AM Dec 21, 2018 | Team Udayavani |

ಕಾಂಗ್ರೆಸ್‌ ರೈತರ ಸಾಲ ಮನ್ನಾದಂಥ ಅಗ್ಗದ ಪ್ರಣಾಳಿಕೆ ಮತ್ತು ಭರವಸೆಯ ಮೂಲಕ ಪಂಚರಾಜ್ಯ ಚುನಾವಣೆಗಳನ್ನು ಎದುರಿಸಿತ್ತು. ಅದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದ ಪ್ರಗತಿಗೆ ಮಾರಕವಾಗುವಂಥ ಕ್ರಮಗಳನ್ನು ಈ ಬಾರಿಯೂ ಮಾಡಿದೆ 
ಎಂದರೆ ತಪ್ಪಾಗದೇನೋ. ಸಾಲಮನ್ನಾ, ಅತಿಯಾದ ಸಹಾಯಧನ, ಜಾತಿ ಆಧಾರಿತ ಮೀಸಲಾತಿ ಈಗಲೂ ಬಲಶಾಲಿಯಾಗಿದ್ದರೆ ಅದಕ್ಕೆ ನೇರ ಮತ್ತು ಪ್ರಮುಖ ಹೊಣೆಗಾರ ಕಾಂಗ್ರೆಸ್ಸೇ ಆಗುತ್ತದೆ.

Advertisement

ಈಚೆಗೆ ನಡೆದಿರುವ ಐದು ರಾಜ್ಯಗಳ ಚುನಾವಣಾ ಫ‌ಲಿತಾಂಶ ಮತ್ತು ಅದಕ್ಕೆ ಕಾರಣವಾದ ಅಂಶಗಳನ್ನು ಗಮನಿಸುವಾಗ ದೇಶದ ಮತದಾರರ ಅಗ್ಗದ ತಂತ್ರಕ್ಕೆ ಮಾರು ಹೋಗುತ್ತಿರುವುದು ಮೇಲ್ನೋಟಕ್ಕೆ ಸಾಬೀತಾದಂತಿದೆ. ನಾವೆಷ್ಟೇ ದೇಶಪ್ರೇಮಿಗಳು ಎಂದು ಬಿಂಬಿಸಿಕೊಂಡರೂ ಸ್ವಂತ ವಿಷಯ ಬಂದಾಗ ದೇಶದ ಹಿತಕ್ಕೆ ಕಿಂಚಿತ್‌ ಕೂಡ ಆದ್ಯತೆ ನೀಡುವುದು ಸಂಶಯ ಎಂಬುದನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. 

ಯಾರೇನೇ ಹೇಳಿದರೂ ನರೇಂದ್ರ ಮೋದಿ ಕೆಲಸ ಮಾಡಿಲ್ಲ ಮತ್ತು ಅವರ ಆಡಳಿತದಲ್ಲಿ ದೇಶದ ಪ್ರಗತಿ ಕಷ್ಟ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಮೋದಿ ನಿಜಾರ್ಥದ ಪ್ರಗತಿ ಬಯಸಿದ್ದು ಮತ್ತು ಅದಕ್ಕಾಗಿ ಜನರಿಗೆ ಕಷ್ಟ ಮತ್ತು ನಷ್ಟ ಉಂಟಾಗುವಂಥ ಕಠಿಣ ಕ್ರಮಗಳನ್ನು ಕೈಗೊಂಡಿರುವುದು ಈ ಚುನಾವಣೆಯಲ್ಲಿ ಬಿಜೆಪಿಗೆ ಈ ರೀತಿಯ ಸೋಲಾಗಲು ಒಂದು ಪ್ರಮುಖ ಕಾರಣ ಎಂದು ಹೇಳಬಹುದು. ಒಂದೊಮ್ಮೆ ಎದುರಾಳಿ ಪಕ್ಷಗಳು ಕೂಡ ಇದೇ ರೀತಿಯ ಆಮಿಷವಿಲ್ಲದ ಪ್ರಗತಿಯ ಕುರಿತು ಮಾತನಾಡಿದ್ದರೆ ಫ‌ಲಿತಾಂಶದ ರೂಪವೇ ಬೇರೆ ಆಗಿರುತ್ತಿತ್ತು. ಆದರೆ ಕಾಂಗ್ರೆಸ್‌ ರೈತರ ಸಾಲಮನ್ನಾದಂಥ ಅಗ್ಗದ ಪ್ರಣಾಳಿಕೆ ಮತ್ತು ಭರವಸೆಯ ಮೂಲಕ ಚುನಾವಣೆ ಎದುರಿಸಿತ್ತು. ಅದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದ ಪ್ರಗತಿಗೆ ಮಾರಕವಾಗುವಂಥ ಕ್ರಮಗಳನ್ನು ಈ ಬಾರಿಯೂ ಮಾಡಿದೆ ಎಂದರೆ ತಪ್ಪಾಗದೇನೋ. ಸಾಲಮನ್ನಾ, ಅತಿಯಾದ ಸಹಾಯಧನ, ಜಾತಿ ಆಧಾರಿತ ಮೀಸಲಾತಿ ಈಗಲೂ ಬಲಶಾಲಿಯಾಗಿದ್ದರೆ ಅದಕ್ಕೆ ನೇರ ಮತ್ತು ಪ್ರಮುಖ ಹೊಣೆಗಾರ ಕಾಂಗ್ರೆಸ್ಸೇ ಆಗುತ್ತದೆ. ಒಂದೊಮ್ಮೆ ಈಗ ಕೇಂದ್ರದ ನರೇಂದ್ರ ಮೋದಿ ಸರಕಾರ ಕೈಗೊಂಡಿದ್ದಂಥ ದಿಟ್ಟ ಕ್ರಮಗಳನ್ನು ಕಾಂಗ್ರೆಸ್‌ ಒಂದೆರಡು ದಶಕದ ಹಿಂದೆಯೇ ಸಣ್ಣ ಪ್ರಮಾಣದಲ್ಲಾದರೂ ಕೈಗೊಂಡಿರುತ್ತಿದ್ದರೆ ಈಗ ದೇಶದ ರೂಪವೇ ಬದಲಾಗಿರುತ್ತಿತ್ತು. ಆಗ ಕಾಂಗ್ರೆಸ್ಸಿಗೆ ಅಂಥ ಕೆಲಸ ಮಾಡಲು ಈಗಿನಷ್ಟು ಕಷ್ಟವೇನೂ ಇರುತ್ತಿರಲಿಲ್ಲ. ಆದರೆ ಕಾಂಗ್ರೆಸ್‌ ಹಾಗೆ ಮಾಡದೆ ಜನರನ್ನು ಓಲೈಸುತ್ತಾ ಬಂತು. ಅವರಿಗೆ ಸಾಲ ಮರುಪಾವತಿಸುವ ವಿಧಾನವನ್ನು ಕಲಿಸುವ ಬದಲು ಸಾಲಮನ್ನಾದ ಭರವಸೆ ನೀಡುತ್ತಾ ಬಂತು. ಇದು ದೇಶದ ದುಸ್ಥಿತಿಗೆ ಕಾರಣವಾಯಿತು ಎಂಬುದು ಒಪ್ಪಿಕೊಳ್ಳಬೇಕಾದ ಸತ್ಯವೇ.

ಬಡವರು ಅನಿವಾರ್ಯವೇ?
ದೇಶದಲ್ಲಿ ಚುನಾವಣೆ ಗೆಲ್ಲಲು ಇಂಥ ಅಗ್ಗದ ಪ್ರಚಾರಕ್ಕೆ ಸ್ಪಂದಿಸುವ ಮತ್ತು ಅಂಥ ಆಮಿಷಗಳು ಅಗತ್ಯ ಎಂದು ಹೇಳುವ ಜನರು ಬೇಕು ಎಂದು ಇದುವರೆಗಿನ ನಮ್ಮ ರಾಜಕೀಯ ವ್ಯವಸ್ಥೆ ನಂಬಿಕೊಂಡು ಬಂದಿದೆ. ಪಾಕಿಸ್ಥಾನ್ಕಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೇಗೆ ಕಾಶ್ಮೀರ ವಿಷಯ ಮುಖ್ಯವೋ ಹಾಗೆ. ಚುನಾವಣೆ ಹೊತ್ತಲ್ಲಿ ನಿಮ್ಮ ಬಡತನವನ್ನೆಲ್ಲ ನಿವಾರಿಸಿ ನಿಮ್ಮನ್ನು ತತ್‌ಕ್ಷಣವೇ ಶ್ರೀಮಂತರಾಗಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ನಮ್ಮ ರಾಜಕೀಯ ಪಕ್ಷಗಳು ಭರವಸೆ ನೀಡುತ್ತಾ ಬಂದವು. ಆದರೆ ದಶಕಗಳ ಕಾಲ ಸಂದರೂ ಬಡವರ ಸ್ಥಿತಿ ಸುಧಾರಿಸಿಲ್ಲ. ಆದರೆ ಕೆಲವು ಪಕ್ಷಗಳು ಮಾತ್ರ ಇದೇ ಬಡವರ ಮತಗಳನ್ನು ಪಡೆದು ಅಧಿಕಾರಕ್ಕೇರಿ ಅವರ ಬಗ್ಗೆ ಈಗಲೂ ಸಹಾನುಭೂತಿಯ ನಾಟಕವಾಡುತ್ತಲೇ ಇವೆ. ಬಹುಶಃ ಇಂಥದ್ದೆಲ್ಲ ಭಾರತದಲ್ಲಿ ಮಾತ್ರವೇ ನಡೆಯಲು ಸಾಧ್ಯ. 

ಬಡವರನ್ನು ಮಧ್ಯಮ ವರ್ಗಕ್ಕೆ ತರಲು ಕೂಡ ದಶಕಗಳ ಕಾಲ ಆಡಳಿತ ನಡೆಸಿದವರಿಗೆ ಸಾಧ್ಯವಾಗಿಲ್ಲ. ಇಲ್ಲಿ ಸಾಧ್ಯವಾಗಿಲ್ಲ ಎಂಬುದಕ್ಕಿಂತ ಮನಸ್ಸು ಮಾಡಿಲ್ಲ ಎಂದು ಹೇಳುವುದೇ ಸರಿಯಾದೀತು. ಬಡವರ ಆರ್ಥಿಕ ಸ್ಥಿತಿ ಸುಧಾರಿಸಿದರೆ ಅವರನ್ನು ಸಣ್ಣ ಆಮಿಷ ತೋರಿಸಿ ತಮಗೆ ಬೇಕಾದಂತೆ ಮತಬ್ಯಾಂಕ್‌ ಆಗಿ ಬಳಸಿಕೊಳ್ಳಲು ಸಾಧ್ಯವಾಗದು ಎಂಬ ಭೀತಿಯಿಂದಲೇ ದೇಶದಲ್ಲಿ ಬಡವರ ಸಂಖ್ಯೆಯನ್ನು ಗಣನೀಯವಾಗಿ ಉಳಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಅನಿಸುತ್ತಿದೆ.

Advertisement

ಎಲ್ಲವೂ ಸಮರ್ಥನೀಯವಲ್ಲ
ಹಾಗೆ ನೋಡಿದರೆ ಈಗಿನ ಕೇಂದ್ರ ಸರಕಾರದ ಆರ್ಥಿಕ ಪ್ರಗತಿ ಕ್ರಮಗಳೆಲ್ಲ ಹಾಲಿ ಸ್ಥಿತಿಯಲ್ಲಿ ಸಮರ್ಥನೀಯ ಎಂದು ಹೇಳುವಂತಿಲ್ಲ. ದೇಶದ ಸಾಮಾನ್ಯ ಜನರ ಸ್ಥಿತಿಗತಿ ಮತ್ತು ಅವರು ಪಡುವ ಕಷ್ಟದ ಸ್ಪಷ್ಟದರ್ಶನ ಮಾಡಿಸಿಕೊಳ್ಳಲು ಕೇಂದ್ರ ಸರಕಾರ ವಿಫ‌ಲವಾಗಿದೆ ಎಂಬುದು ವಾಸ್ತವ. ದೇಶದ ಜನರು ಈಗಿನ ಸ್ಥಿತಿಯಲ್ಲಿ ಕೇಂದ್ರದ ಅತಿಯಾದ ಸುಧಾರಣಾ ಕ್ರಮಗಳನ್ನು ಸಹಿಸಿಕೊಳ್ಳುವ ಶಕ್ತಿ ಹೊಂದಿಲ್ಲ. ಹಾಗೆಂದು ಅಂಥ ಕ್ರಮಗಳು ತಪ್ಪು ಎಂದು ಹೇಳಲಾಗದು. ಆದರೆ ಅದರ ಪರಿಣಾಮಗಳ ಪ್ರಭಾವವನ್ನು ಸ್ವಲ್ಪ ಮೃದುಗೊಳಿಸುವುದು ಅತಿ ಅಗತ್ಯವಾಗಿದೆ. ನಾಳೆಯ ಒಳಿತು, ಹಿತ, ಪ್ರಗತಿ ಎಲ್ಲವೂ ಅಗತ್ಯ. ಅದರ ಜತೆಗೆ ಇಂದಿನ ಅಸ್ತಿತ್ವವೂ ಅಗತ್ಯ ಎಂಬುದನ್ನು ಕೇಂದ್ರ ಸರಕಾರ ತಿಳಿದುಕೊಳ್ಳಬೇಕಾಗಿದೆ. ದೇಶದಲ್ಲಿ ಕೇಂದ್ರ ಸರಕಾರ ಈಗ ಜಾರಿಗೆ ತಂದಿರುವ ಕ್ರಮಗಳ ಪರಿಣಾಮಗಳನ್ನು ಎದುರಿಸಲು ಅಸಮರ್ಥರಾಗಿರುವ ಜನರೇ ಹೆಚ್ಚಿದ್ದಾರೆ. ಅಂಥವರೇ ಈಗ ಕಾಂಗ್ರೆಸ್ಸಿನ ಆಮಿಷಗಳಿಗೆ ಅಕರ್ಷಿತರಾಗಿ ಆ ಪಕ್ಷಕ್ಕೆ ಆಪದಾºಂಧವರಾಗಿ ಪರಿವರ್ತಿತರಾದರು ಎಂಬುದು ಸ್ಪಷ್ಟ.

ಅಗ್ಗದ ತಂತ್ರ ದೇಶ ಹಿತಕ್ಕೆ ಮಾರಕ 
ದೀರ್ಘ‌ ಕಾಲದ ದೃಷ್ಟಿಯಲ್ಲಿ ಗಮನಿಸುವಾಗ ದೇಶದ ಜನರನ್ನು ಇಂಥ ಅಗ್ಗದ ತಂತ್ರದ ಮೂಲಕ ಸೆಳೆದು ಅಧಿಕಾರಕ್ಕೇರುವುದು ಒಳ್ಳೆಯ ಬೆಳವಣಿಗೆಯಲ್ಲ. ಒಂದೊಮ್ಮೆ ಅಧಿಕಾರಕ್ಕೇರಿದರೂ ಬಳಿಕ ಸಮಷ್ಟಿ ಅಭಿವೃದ್ಧಿಗೆ ಒತ್ತು ಕೊಡಬೇಕಾಗುತ್ತದೆ. ಅಧಿಕಾರಕ್ಕೇರಿದ ಬಳಿಕ ಜನರನ್ನು ಸಮಾಧಾನಪಡಿಸುತ್ತಾ ಮುಂದಿನ ಬಾರಿಗೂ ಅಧಿಕಾರ ಉಳಿಸಿಕೊಳ್ಳುವುದು ಅಗತ್ಯವಾಗುತ್ತದೆ. ಅಂಥವರಿಂದ ಕಠಿಣ ಕ್ರಮದ ಮೂಲಕ ಸಿಗುವ ಪ್ರಗತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂಥ ಬೆಳವಣಿಗೆ ದೇಶದ ಪ್ರಗತಿಗೆ ಮಾರಕ ಎಂಬುದು ನಿಸ್ಸಂಶಯ ಸಂಗತಿ.

ಜನರ ಮನಃಸ್ಥಿತಿ ಬದಲಾಯಿಸಬೇಕಾಗಿದೆ 
ಇಂಥ ಪಕ್ಷಗಳು ಮತ್ತು ವಾತಾವರಣ ಇರುವಷ್ಟು ಕಾಲ ಜನರು ಕೂಡ ಪರಿಶ್ರಮದಿಂದ ಅಭಿವೃದ್ಧಿ ಸಾಧಿಸುವುದು ಸಂಶಯ. ಒಂದು ದೊಡ್ಡ ವರ್ಗದ ಜನರು ಕೂಡ ಇದನ್ನೇ ಬಯಸುತ್ತಿದ್ದಾರೆ. ಆದರೆ ಇದು ತಮಗೆ ದೀರ್ಘ‌ಕಾಲಿಕವಾಗಿ ಶಾಪವಾಗಿ ಕಾಡಬಹುದಾದ ಒಂದು ಕ್ಷಣದ ಸಂತೋಷ ಎಂಬುದು ಅವರಿಗೆ ತಿಳಿದಂತಿಲ್ಲ. ಅಂಥ ಕಠಿಣ ವಾಸ್ತವವನ್ನು ತಿಳಿಸುವವರ ಸಂಖ್ಯೆ ಹೆಚ್ಚಾಗಬೇಕಾದುದು ಈಗಿನ ತುರ್ತು ಅಗತ್ಯ.

ಆಡಳಿತಗಾರರ ಚಿಂತನೆ ಸಾಮಾನ್ಯ ಜನರಿಂದ ಭಿನ್ನವಾಗಿರಬೇಕು
ಆಡಳಿತಗಾರರು ಮತ್ತು ಸಾಮಾನ್ಯ ಜನರು ಒಂದೇ ಮನಃಸ್ಥಿತಿ, ಚಿಂತನೆ ಹೊಂದಿರಬಾರದು. ಪ್ರಗತಿಪರ ಬದಲಾವಣೆ ಎಂಬುದು ಕಠಿಣವೂ, ಅಪ್ರಿಯವೂ ಆಗಿರುತ್ತದೆ. ಅದನ್ನು ಬೇಗನೆ ಸ್ವೀಕರಿಸುವ ಮನಃಸ್ಥಿತಿ ಸಾಮಾನ್ಯ ಜನರಲ್ಲಿ ಇರುವುದಿಲ್ಲ. ಆದರೆ ದೇಶದ ಆಡಳಿತಗಾರರು ಕೂಡ ಅದೇ ಮನಃಸ್ಥಿತಿ ಹೊಂದಿರಬಾರದು. ದುರ್ಬಲರನ್ನು ಸಬಲರಾಗಿಸುವ ಚಿಂತನೆ, ಬಡತನವನ್ನು ನಿವಾರಿಸುವ ಚಿಂತನೆ ಆಡಳಿತಗಾರರಲ್ಲಿರಬೇಕು ಮತ್ತು ಅವರು ಕೈಗೊಳ್ಳುವ ಕ್ರಮಗಳು ಕೂಡ ಅದಕ್ಕೆ ಪೂರಕವಾಗಿಯೇ ಇರಬೇಕು. ಸಾಮಾನ್ಯ ಜನರು, ದೇಶದ ಆಡಳಿತಗಾರರು ಒಂದೇ ಚಿಂತನೆ ಅಳವಡಿಸಿಕೊಂಡರೆ ಅವರ ನಡುವೆ ವ್ಯತ್ಯಾಸವೇ ಇರುವುದಿಲ್ಲ. 

ಬದಲಾಗಬೇಕಿದೆ
ವಿಶ್ವದಲ್ಲಿ ನಮ್ಮ ಸಾಲಿಗೆ ನಿಲ್ಲಬಹುದಾದ ರಾಷ್ಟ್ರಗಳನ್ನು ಗಮನಿಸಿ ಹೇಳುವುದಾದರೆ, ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮಂಥ ಅಗ್ಗದ ಪ್ರಚಾರದಲ್ಲಿ ಚುನಾವಣೆ ಎದುರಿಸುವ ದೇಶಗಳು ಕಂಡು ಬರುವುದಿಲ್ಲ. ಅಲ್ಲಿನ ಪ್ರಜೆಗಳು ಇಂಥದ್ದನ್ನು ನಿರೀಕ್ಷೆ ಮಾಡುವುದೂ ಇಲ್ಲ. ಇಂಥ ಪ್ರಣಾಳಿಕೆಗಳು ಅವರಿಗೆ ತಮಾಷೆಯಂತೆ ಕಂಡು ಬರುತ್ತದೆ. ಇದನ್ನು ಅವರು ಯಾವತ್ತೂ ಪ್ರಗತಿಪರ ಕ್ರಮಗಳು ಎಂದು ಭಾವಿಸುವುದೇ ಇಲ್ಲ. ಅಂಥ ಮನಃಸ್ಥಿತಿಯೇ ಆ ದೇಶಗಳನ್ನು ವೇಗದಲ್ಲಿ ಪ್ರಗತಿಯ ಪಥದಲ್ಲಿ ಕೊಂಡೊಯ್ಯುತ್ತಿರ ಬಹುದು. ಆದ್ದರಿಂದ ನಾವು ಕೂಡ ಆ ದಾರಿಗೆ ಬದಲಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಚಿಂತಿಸುವಾಗ ಅಗ್ಗದ ಪ್ರಚಾರ, ಪ್ರಣಾಳಿಕೆ ತಂತ್ರವನ್ನು ಬಹಿಷ್ಕರಿಸಬೇಕಾದ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಿದೆ. ಜನರಿಗೆ ಮನ್ನಾ ಭಾಗ್ಯಕ್ಕಿಂತ ಆದಾಯ ಭಾಗ್ಯವನ್ನು ಒದಗಿಸಿಕೊಡುವ ನಾಯಕರು ಬೇಕಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂಥವರಿಗೆ ಅವಕಾಶ ಸಿಗಲಿ, ಜನರ ಮನಸ್ಥಿತಿಯೂ ಅದಕ್ಕೆ ಪೂರಕವಾಗಲಿ.

 ಪುತ್ತಿಗೆ ಪದ್ಮನಾಭ ರೈ 

Advertisement

Udayavani is now on Telegram. Click here to join our channel and stay updated with the latest news.

Next