Advertisement

ನಗರದ ವಿವಿಧೆಡೆ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಜನ್ಮದಿನ ಆಚರಣೆ

12:52 PM Apr 15, 2017 | Team Udayavani |

ಮೈಸೂರು: ಡಾ.ಬಿ.ಆರ್‌. ಅಂಬೇಡ್ಕರ್‌ 126ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಲಾಯಿತು.

Advertisement

ಗಣ್ಯರಿಂದ ಮಾಲಾರ್ಪಣೆ: ಅಂಬೇಡ್ಕರ್‌ ಜನ್ಮದಿನಾಚರಣೆ ಹಿನ್ನೆಲೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಸಂಘ – ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಡಿ. ರಂದೀಪ್‌ ಸೇರಿದಂತೆ ಹಲವು ಮಂದಿ ನಗರದ ಪುರಭವನದ ಮುಂಭಾಗದ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ಶಾಸಕ ಎಂ.ಕೆ. ಸೋಮಶೇಖರ್‌ ಸೇರಿದಂತೆ ಹಲವು ಮಂದಿ ಸಚಿವರಿಗೆ ಸಾಥ್‌ ನೀಡಿದರು. 

ಉಳಿದಂತೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಅರಗು ಮತ್ತು ಬಣ್ಣ ಕಾರ್ಖಾನೆ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌, ಕಾಂಗ್ರೆಸ್‌ ಮುಖಂಡ ಆರ್‌.ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಸೇರಿದಂತೆ ಅನೇಕರು ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬೃಹತ್‌ ಮೆರವಣಿಗೆ: ನಗರದ ವಿವಿಧ ದಲಿತ ಸಂಘಟನೆಗಳಿಂದ ಅಂಬೇಡ್ಕರ್‌ ಜನ್ಮದಿನದ ಅಂಗವಾಗಿ ಬೃಹತ್‌ ಮೆರವಣಿಗೆ ನಡೆಸಲಾಯಿತು. ನಗರದ ಅಶೋಕಪುರಂನಲ್ಲಿರುವ ಅಂಬೇಡ್ಕರ್‌ ಉದ್ಯಾನದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಅಂಬೇಡ್ಕರ್‌ ಸ್ತಬ್ದಚಿತ್ರ ಸೇರಿದಂತೆ 15ಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

Advertisement

ಅಶೋಕಪುರಂ ಪಾರ್ಕ್‌ನಿಂದ ಹೊರಟ ಮೆರವಣಿಗೆ ಅಶೋಕಪುರಂನ ಪ್ರಮುಖ ಬೀದಿ ಗಳಲ್ಲಿ ಸಂಚರಿಸಿ, ಬಲ್ಲಾಳ್‌ ವೃತ್ತ, ಲಕ್ಷ್ಮೀಪುರಂ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿರಸ್ತೆ, ಸಂಸ್ಕೃತ ಪಾಠಶಾಲೆ ವೃತ್ತ, ಸಯ್ನಾಜಿರಾವ್‌ ರಸ್ತೆ, ಕೆ.ಆರ್‌.ವೃತ್ತ ಮಾರ್ಗವಾಗಿ ಪುರಭವನದ ಮುಂಭಾಗ ಅಂತ್ಯಗೊಂಡಿತು.

ಹಲವು ಕಡೆಗಳಲ್ಲಿ ಆಚರಣೆ: ಸಂವಿಧಾನ ಶಿಲ್ಪಿಯ 126ನೇ ಜನ್ಮದಿನದ ಅಂಗವಾಗಿ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲೂ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು. ಪ್ರಮುಖವಾಗಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಶಾರದಾ ವಿಲಾಸ ಶಿಕ್ಷಣ ಸಂಸ್ಥೆ, ಪಾಲಿಕೆ ಕಚೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಅಂಬೇಡ್ಕರ್‌ಗೆ ನುಡಿನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next