Advertisement

ಇಳಿದಿದೆ ಅನುತ್ಪಾದಕ ಆಸ್ತಿ ಪ್ರಮಾಣ

06:47 AM Jul 06, 2019 | Lakshmi GovindaRaj |

ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬೇ ಬ್ಯಾಂಕ್‌ಗಳು. ಅವುಗಳ ಬೆಳವಣಿಗೆ ಮತ್ತು ಅಸ್ತಿತ್ವಕ್ಕೆ ಸವಾಲಾಗಿ ಇರುವುದು ಅನುತ್ಪಾದಕ ಆಸ್ತಿ (ಎನ್‌ಪಿಎ). ಹಿಂದಿನ ಒಂದು ವರ್ಷದ ಅವಧಿಯಲ್ಲಿ ಸುಮಾರು 1 ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ಎನ್‌ಪಿಎಯನ್ನು ತಗ್ಗಿಸಲಾಗಿದೆ. ಇದಲ್ಲದೆ, ನಾಲ್ಕು ವರ್ಷಗಳ ಅವಧಿಯಲ್ಲಿ ದಿವಾಳಿ ಕಾಯ್ದೆ (ಐಬಿಸಿ) ಮತ್ತು ಇತರ ಕ್ರಮಗಳ ಅನ್ವಯ 4 ಲಕ್ಷ ಕೋಟಿ ರೂ.ಮೊತ್ತವನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ವಿವರಿಸಿದ್ದಾರೆ.

Advertisement

ದೇಶದ ಸಾಲದ ಪ್ರಮಾಣ ಶೇ.13.8ಕ್ಕೆ ಏರಿಕೆಯಾಗಿದೆ ಎಂದು ವಿವರಿಸಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ ಒಟ್ಟು ಸರ್ಕಾರಿ ಬ್ಯಾಂಕ್‌ಗಳ ಪೈಕಿ ಎಂಟನ್ನು ವಿಲೀನಗೊಳಿಸಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅಂಥ ಕ್ರಮದ ಬಗ್ಗೆ ಬಜೆಟ್‌ ಭಾಷಣದಲ್ಲಿ ಉಲ್ಲೇಖವಾಗಿಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪೈಕಿ ಆರಕ್ಕೆ ಪುನರುಜ್ಜೀವನ ಅಥವಾ ಕಾಯಕಲ್ಪ (ಪಿಸಿಎ) ನಿಯಮಗಳನ್ನು ವಿಧಿಸಲಾಗಿತ್ತು. ಎನ್‌ಪಿಎ ಪ್ರಮಾಣ ತಗ್ಗಿಸುವಿಕೆ, ಆರ್ಥಿಕ ಸದೃಢೀಕರಣ ಕ್ರಮಗಳನ್ನು ಕೈಗೊಂಡ ಬಳಿಕ ಅವುಗಳನ್ನು ಆ ನಿಯಮಗಳಿಂದ ಹೊರ ತರಲಾಗಿದೆ.

ಬ್ಯಾಂಕ್‌ಗಳಿಗೆ ನೆರವು: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳನ್ನು ಮತ್ತಷ್ಟು ಆರ್ಥಿಕವಾಗಿ ಸಬಲ ಗೊಳಿಸಲು ಕೇಂದ್ರ ಬದ್ಧವಾಗಿದೆ. ಅದಕ್ಕಾಗಿ 70 ಸಾವಿರ ಕೋಟಿ ರೂ.ಗಳ ನೆರವು ನೀಡಲಾ ಗುತ್ತದೆ. ಈ ಮೂಲಕ ಅವುಗಳು ಹೆಚ್ಚಿನ ಪ್ರಮಾಣ ದಲ್ಲಿ ಸಾಲ ನೀಡಲು ಶಕ್ತಿಯುತ ವಾಗುವಂತೆ ಮಾಡುವ ಉದ್ದೇಶವಿದೆ.

ಎನ್‌ಬಿಎಫ್ಸಿ ವೃದ್ಧಿಗೆ ಕ್ರಮ: ಸಾಂಪ್ರದಾಯಿಕ ಬ್ಯಾಂಕಿಂಗ್‌ ವ್ಯವಸ್ಥೆಯ ಜತೆಗೆ ಬ್ಯಾಂಕೇತರ ಹಣಕಾಸು ವ್ಯವಸ್ಥೆ (ಎನ್‌ಬಿಎಫ್ಸಿ) ಬಲಪಡಿಸಲು ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಈ ವಲಯ ಬಂಡವಾಳ ಪಡೆದುಕೊಳ್ಳಲು ಅದು ನೆರವಾಗುತ್ತಿದೆ. ಸದೃಢವಾಗಿಯೇ ಇರುವ ಎನ್‌ಬಿಎಫ್ಸಿಗಳು ಬ್ಯಾಂಕ್‌ ಮತ್ತು ಮ್ಯೂಚ್ಯುವಲ್‌ ಫ‌ಂಡ್‌ಗಳಿಂದ ನೆರವು ಪಡೆಯುವಂತಾಗಬೇಕು.

ಆರ್ಥಿಕವಾಗಿ ಸಬಲವಾಗಿರುವ ಎನ್‌ಬಿಎಫ್ಸಿಗಳ ಆಸ್ತಿ ಖರೀದಿಗೆ ಒಂದು ಲಕ್ಷ ಕೋಟಿ ರೂ.ಗಳನ್ನು ಹಾಲಿ ವಿತ್ತೀಯ ವರ್ಷದಲ್ಲಿಯೇ ನೀಡಲಾಗುತ್ತದೆ. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಆರು ತಿಂಗಳ ಆಂಶಿಕ ಸಾಲ ಖಾತರಿ ನೀಡಲಾಗುತ್ತದೆ. ಅದು ಶೇ.10ರಷ್ಟು ನಷ್ಟ ಪ್ರಮಾಣದ ವರೆಗೆ ಮಾತ್ರ. ಭಾರತೀಯ ರಿಸರ್ವ್‌ ಬ್ಯಾಂಕ್‌ ನೇರವಾಗಿ ಇಂಥ ಎನ್‌ಬಿಎಫ್ಸಿಗಳನ್ನು ನಿಯಂತ್ರಿಸುತ್ತದೆ. ಆದರೆ ಅದರ ವ್ಯಾಪ್ತಿ ಸೀಮಿತವಾಗಿದೆ. ಹೀಗಾಗಿ 1934 ಆರ್‌ಬಿಐ ಕಾಯ್ದೆಗೆ ಕೆಲವೊಂದು ತಿದ್ದು ಪಡಿಗಳನ್ನೂ ಸೂಚಿಸಲಾಗಿದೆ. ಇದರಿಂದಾಗಿ ಎನ್‌ಬಿಎಫ್ಸಿಗಳ ವಿಲೀನ, ಪುನರುಜ್ಜೀವನ, ವಿಭಜನೆ ಬಗ್ಗೆ ನಿಯಮಗಳನ್ನು ರೂಪಿಸಲಿದೆ.

Advertisement

ನೋಂದಣಿಗೆ ಕ್ರಮ: ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಹೆಚ್ಚಿನ ರೀತಿಯಲ್ಲಿ ಉತ್ತರದಾಯಿತ್ವತೆ ಹೊಂದುವಂತೆ ಮಾಡಲು ಅವುಗಳನ್ನು ಟ್ರೇಡ್‌ ರಿಸೀವೆಬಲ್ಸ್‌ ಇಲೆಕ್ಟ್ರಾನಿಕ್‌ ಡಿಸ್ಕೌಂಟಿಂಗ್‌ ಸಿಸ್ಟಮ್‌ (ಟಿಆರ್‌ಇಡಿಎಸ್‌- ಖRಛಿಈಖ)ನಲ್ಲಿ ನೋಂದಣಿ ಮಾಡುವಂತೆ ಸೂಚಿಸಲಾಗಿದೆ. ಅದಕ್ಕಾಗಿ ಫಾಕ್ಟರಿಂಗ್‌ ರೆಗ್ಯುಲೇಷನ್‌ ಆ್ಯಕ್ಟ್ 2011ಕ್ಕೆ ತಿದ್ದುಪಡಿಯನ್ನೂ ತರಲಾಗಿದೆ. ಈ ಮೂಲಕ ಅವುಗಳ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಮತ್ತು ನಿಯಂತ್ರಣ ಇರಿಸಲು ಅನುಕೂಲವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next