Advertisement

ದೇಶದ ಮೊದಲ ಜಾನಪದ ವಿವಿಗೆ 8ರ ಸಂಭ್ರಮ

04:58 PM Sep 28, 2018 | Team Udayavani |

ಹಾವೇರಿ: ದೇಶದ ಮೊದಲ ಜಾನಪದ ವಿವಿ ಖ್ಯಾತಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯನೂರೆಂಟು ವಿಘ್ನಗಳನ್ನು ಎದುರಿಸುತ್ತಲೇ ಎಂಟು ವರ್ಷ ಪೂರೈಸಿದ್ದು ಶೈಕ್ಷಣಿಕ ಪ್ರಗತಿಯಲ್ಲಿ ದಾಪುಗಾಲಿಟ್ಟಿದೆ.

Advertisement

ಜನಪದ ಜ್ಞಾನದ ಅನನ್ಯತೆಯನ್ನು ಶೋಧಿಸುವ, ಸಂರಕ್ಷಿಸುವ, ಜನಪದ ಜ್ಞಾನದ ಸಂಗ್ರಹ, ಸಂಪಾದನೆ, ಕಲಿಕೆ, ಪ್ರದರ್ಶನ ಕಾರ್ಯಗಳನ್ನು ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶದಿಂದ ಎಂಟು ವರ್ಷಗಳ ಹಿಂದೆ ಸರ್ಕಾರ ಶಿಗ್ಗಾವಿ ತಾಲೂಕು ಗೋಟಗೋಡಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿತು. ಕೇವಲ ಎಂಟು ವಿದ್ಯಾರ್ಥಿಗಳೊಂದಿಗೆ ಆರಂಭವಾದ ಕರ್ನಾಟಕ ಜಾನಪದ ವಿವಿ, ಈಗ ಜೋಯಿಡಾ, ಬೀದರ್‌, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಅಧ್ಯಯನ ಕೇಂದ್ರ, 25ಕ್ಕೂ ಹೆಚ್ಚು ಮಾನ್ಯತಾ ಸಂಸ್ಥೆಗಳನ್ನು ಹೊಂದಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾನಪದದ ವಿವಿಧ ವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಸರ್ಟಿಫಿಕೇಟ್‌ ಕೊರ್ಸ್‌ಗಳ ಮೂಲಕ ಜಾನಪದ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ 250 ಜನರು ಸ್ನಾತಕೋತ್ತರ ಪದವಿ ಮಾಡುತ್ತಿದ್ದರೆ, 87 ಜನರು ಪಿಎಚ್‌ಡಿ ಮಾಡುತ್ತಿದ್ದಾರೆ.

ಆರಂಭದಲ್ಲಿ ಕೇವಲ ಆರು ಸ್ನಾತಕೋತ್ತರ ಪದವಿ ಹಾಗೂ 11 ಸರ್ಟಿಫಿಕೇಟ್‌ ಕೊರ್ಸ್‌ಗಳಿದ್ದವು. ಪ್ರಸ್ತುತ 14 ಸ್ನಾತಕೋತ್ತರ ಪದವಿ ಹಾಗೂ ಮೂರು ಡಿಪ್ಲೊಮಾ ಸೇರಿದಂತೆ 15ಕ್ಕೂ ಹೆಚ್ಚು ಸರ್ಟಿಫಿಕೇಟ್‌ ಕೋರ್ಸ್‌ಗಳು ನಡೆಯುತ್ತಿವೆ. ವಿವಿ ಅಧ್ಯಯನ ಸಂಸ್ಥೆಗಳ ಜತೆಗೆ ರಾಜ್ಯಾದ್ಯಂತ 25ಕ್ಕೂ ಹೆಚ್ಚು ಮಾನ್ಯತಾ ಸಂಸ್ಥೆಗಳನ್ನು ಗುರುತಿಸಿ ಶಿಕ್ಷಣ ನೀಡುತ್ತಿದೆ.

ಪ್ರಗತಿ ಹೆಜ್ಜೆ: ಶೈಕ್ಷಣಿಕ, ಪ್ರಸಾರಾಂಗ ಹಾಗೂ ಸಂಶೋಧನಾ ವಿಭಾಗದಲ್ಲಿ ವಿವಿ ಸಾಧನೆಯ ಪುಟ್ಟ ಹೆಜ್ಜೆಗಳನ್ನು ಇಡುತ್ತ ಬಂದಿದೆ. ವಿವಿ ಆವರಣದಲ್ಲಿ ಬೃಹತ್‌ ಆಡಳಿತ ಭವನ ಹಾಗೂ ಶೈಕ್ಷಣಿಕ ಭವನ ನಿರ್ಮಾಣಗೊಂಡಿದೆ. 15 ಸಿಬ್ಬಂದಿ ಕೊಠಡಿಗಳು ನಿರ್ಮಾಣಗೊಂಡಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ ಸಹ ನಿರ್ಮಾಣಗೊಂಡಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್‌ ನಿರ್ಮಾಣ ಹಂತದಲ್ಲಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ 2.5 ಕೋಟಿ ರೂ.ಗಳಲ್ಲಿ ಜನಪದ ವಸ್ತು ಸಂಗ್ರಹಾಲಯ ನಿರ್ಮಾಣವಾಗುತ್ತಿದ್ದು, 6 ಸಾವಿರ ವಸ್ತುಗಳ ಸಂಗ್ರಹ ಇಲ್ಲಿದೆ. ಇನ್ನು ಜೋಯಿಡಾದ ಅಧ್ಯಯನ ಕೇಂದ್ರದಲ್ಲಿ ಶೈಕ್ಷಣಿಕ ಭವನ ನಿರ್ಮಾಣಗೊಳ್ಳುತ್ತಿದೆ. ಮಲೆಮಹದೇಶ್ವರಬೆಟ್ಟ ಅಧ್ಯಯನ ಕೇಂದ್ರದಲ್ಲಿ ಮಲೆಮಹದೇಶ್ವರ ಪರಂಪರೆಗೆ ಸಂಬಂಧಿಸಿದ ವಸ್ತುಸಂಗ್ರಹಾಲಯ, ಶೈಕ್ಷಣಿಕ ಭವನ ನಿರ್ಮಾಣಗೊಳ್ಳುತ್ತಿದೆ.

90ಕ್ಕೂ ಹೆಚ್ಚು ಕೃತಿ ಬಿಡುಗಡೆ: ವಿವಿ 90ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದೆ. ಗ್ರಾಮಚರಿತ್ರೆ ಕೋಶ, ಜನಪದ ನಿಘಂಟು, ನಮ್ಮೂರ ಜನಪದ, ಲಂಬಾಣಿ ಜನಪದ ಬಹುಮುಖೀ ದಾಖಲೀಕರಣ, ಬುಡಕಟ್ಟಿನ ಸಂಸ್ಕೃತಿ ಸೇರಿದಂತೆ ಹಲವು ಮಹತ್ವದ ಸಂಶೋಧನಾ ಗ್ರಂಥಗಳ ಜತೆಗೆ ತಮಿಳು, ಮಳಯಾಳಿ ಸೇರಿದಂತೆ ಇತರ ಭಾಷೆಗಳ ಹತ್ತಾರು ಜನಪದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದೆ. 20ಕ್ಕೂ ಹೆಚ್ಚು ಕೃತಿಗಳು ಮುದ್ರಣ ಹಂತದಲ್ಲಿವೆ. ಈಗ ಹೊಸದಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಕರ್ನಾಟನ ಜಾನಪದ ಸಮೀಕ್ಷೆ ಯೋಜನೆ ಹಾಕಿಕೊಂಡಿದ್ದು ಶೀಘ್ರದಲ್ಲಿಯೇ ಹಾವೇರಿ ಜಿಲ್ಲೆಯಿಂದ ಈ ಯೋಜನೆ ಆರಂಭಿಸಲು ನಿರ್ಧರಿಸಿದೆ. ಯಕ್ಷಗಾನ ಮಾದರಿಯಲ್ಲಿ ದೊಡ್ಡಾಟ ಕಲೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಯಕಲ್ಪ ಕೊಡಲು ಬೇಕಾದ ಪರಿಷ್ಕರಣೆಗಾಗಿ ವಿವಿ ಆಲೋಚಿಸಿದ್ದು, ಇದಕ್ಕಾಗಿ ಕಾರ್ಯಾಗಾರ ನಡೆಸಲು ಚಿಂತನೆ ನಡೆಸಿದೆ.

Advertisement

ವಿವಾದದ ಸುಳಿ
ಜಾನಪದ ವಿವಿ ಶೈಕ್ಷಣಿಕವಾಗಿ ಹೆಸರು ಮಾಡಿದ್ದಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಚ್ಚು ಖ್ಯಾತಿಯಾಗಿದೆ. ವಿವಿ ನೇಮಕಾತಿ ವಿಚಾರ ವಿವಾದದ ಸುಳಿಗೆ ಸಿಲುಕಿದ್ದರಿಂದ ಅದು ಈವರೆಗೂ ಸರಿಯಾಗದೆ ಇರುವುದರಿಂದ ವಿವಿಯಲ್ಲಿ ಯಾರೊಬ್ಬರೂ ಕಾಯಂ ಸಿಬ್ಬಂದಿಯಿಲ್ಲ. ಗುತ್ತಿಗೆ ಆಧಾರದಲ್ಲಿ 14 ಸಹಾಯಕ ಪ್ರಾಧ್ಯಾಪಕರು, 12 ಜನ ಅತಿಥಿ ಉಪನ್ಯಾಸಕರು, ಬೋಧಕೇತರ 50 ಸಿಬ್ಬಂದಿ ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾನಪದ ವಿವಿ ಬಗ್ಗೆ ಆಡಳಿತಕ್ಕೆ ಬಂದಂಥ ಸರ್ಕಾರಗಳೂ ಸಹ ವಿಶೇಷ ಗಮನ ಕೊಡದೇ ಇರುವುದರಿಂದ ವಾರ್ಷಿಕ ಸಾಮಾನ್ಯ ಅನುದಾನದಲ್ಲಿಯೇ ವಿವಿ ನಿರ್ವಹಣೆ ನಡೆಯುತ್ತಿದೆ.

ಹೊಸದಾಗಿ ಸ್ಥಾಪನೆಗೊಂಡ ಸಂಸ್ಕೃತ, ಸಂಗೀತ ವಿವಿಗಳಿಗೆ ಹೋಲಿಸಿದರೆ ಜಾನಪದ ವಿವಿ ಪ್ರಗತಿಯಲ್ಲಿ ಮಂಚೂಣಿಯಲ್ಲಿದೆ. ವಿವಿ ನೇಮಕಾತಿ ಪ್ರಕ್ರಿಯೆ ನಡೆಯದೇ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಆದರೆ, ಇರುವ ಸಂಪನ್ಮೂಲ ಬಳಸಿಕೊಂಡು ಪ್ರಗತಿಯತ್ತ ಸಾಗಿದೆ.
ಪ್ರೊ| ಡಿ.ಬಿ. ನಾಯಕ, ಕುಲಪತಿ, ಕಜಾವಿವಿ

Advertisement

Udayavani is now on Telegram. Click here to join our channel and stay updated with the latest news.

Next