Advertisement

ಬೆಳೆ ಹಾನಿಗೆ ಹತ್ತು ಸಾವಿರ ಹೆಚ್ಚುವರಿ ಪರಿಹಾರ: ಸಿಎಂ

11:19 PM Oct 15, 2019 | Lakshmi GovindaRaju |

ಬೆಂಗಳೂರು/ಬೆಳಗಾವಿ: ನೆರೆಯಿಂದ ಹಾನಿಗೊಳಗಾದ ಒಣ ಹಾಗೂ ನೀರಾವರಿ ಆಶ್ರಿತ ಬೆಳೆಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಹತ್ತು ಸಾವಿರ ರೂ. ಪರಿಹಾರ ನೀಡಲಿದೆ ಎಂದು ಸಿಎಂ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಣ ಬೇಸಾಯದ ಬೆಳೆಗೆ ಈ ಮುಂಚೆ ಆರು ಸಾವಿರ ಹಾಗೂ ನೀರಾವರಿ ಬೆಳೆಗೆ 13 ಸಾವಿರ ರೂ. ಪರಿಹಾರ ನೀಡಲಾಗುತ್ತಿತ್ತು.

Advertisement

ಇದೇ ಮೊದಲ ಸಲ ಹತ್ತು ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದರು. ಪ್ರವಾಹದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ಈಗಾಗಲೇ ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ಇಷ್ಟೊಂದು ಪರಿಹಾರ ನೀಡುತ್ತಿರುವುದು ಕೂಡ ಇದೇ ಮೊದಲ ಬಾರಿ. ಔರಾದಕರ್‌ ವರದಿಯನ್ನು ತಕ್ಷಣ ಜಾರಿ ಮಾಡಲಾಗುವುದು.

ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸುವ ಬಗ್ಗೆ ಚರ್ಚೆ ನಡೆದಿದ್ದು, ಸಮಗ್ರವಾಗಿ ಚರ್ಚಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.ಮಹಾರಾಷ್ಟ್ರ ರಾಜ್ಯದ ಪ್ರವಾಸದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮಂಗಳವಾರ ಸಂಜೆ ನಗರಕ್ಕೆ ಆಗಮಿಸಿದ್ದು, ಅ.16ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪುನರ್ವಸತಿಗೆಆದ್ಯತೆ ನೀಡಿ: ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಪ್ರವಾಹ ಸಂತ್ರಸ್ತರ ಪರಿಹಾರ ಹಾಗೂ ಪುನರ್ವಸತಿ ಕಾರ್ಯ ತ್ವರಿತಗೊಳಿಸಲು ಸೂಚನೆ ನೀಡಿದರು.

ಉಮೇಶ್‌ ಕತ್ತಿ ಮುನಿಸು ಶಮನಕ್ಕೆ ಬಿಎಸ್‌ವೈ ಯತ್ನ
ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ, ತಮ್ಮನ್ನು ಭೇಟಿಯಾಗದೇ ತೆರಳು ತ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಂ ಯಡಿಯೂರಪ್ಪ ನೇರ ವಾಗಿ ಕತ್ತಿ ಮಾಲೀಕತ್ವದ ಹೋಟೆಲ್‌ಗೆ ತೆರಳಿ ಅವ ರೊಂದಿಗೆ ಉಪಾ ಹಾರ ಸೇವಿಸಿದರು. ಮಂಗಳವಾರ ಬೆಳಗಾವಿಗೆ ಆಗಮಿ ಸಿದ ಯಡಿಯೂರಪ್ಪ ನಿಗದಿಯಂತೆ ಸರ್ಕ್ನೂಟ್‌ ಹೌಸ್‌ಗೆ ತೆರಳಬೇಕಿತ್ತು. ಆದರೆ ಹಠಾತ್ತನೇ ಮಾರ್ಗ ಬದಲಿಸಿ ನೇರವಾಗಿ ಯುಕೆ 27 ಹೋಟೆಲ್‌ಗೆ ತೆರಳಿ ಉಮೇಶ ಕತ್ತಿ ಅವರನ್ನು ಪಕ್ಕಕ್ಕೆ ಕೂರಿಸಿಕೊಂಡು ಮಾತುಕತೆ ನಡೆಸಿದರು.

Advertisement

ಉಪ್ಪಿಟ್ಟು, ಅವಲಕ್ಕಿ, ಸ್ಯಾಂಡ್‌ವಿಚ್‌, ಚಹಾ ಸೇವಿಸಿದ ಯಡಿಯೂರಪ್ಪ, ಉಮೇಶ ಕತ್ತಿ ಅವರ ಕುಶಲೋಪರಿ ವಿಚಾರಿಸಿದರು. ಬಳಿಕ ಕೆಲ ಹೊತ್ತು ಮಾತುಕತೆ ನಡೆಸಿದರು. ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಇತರರು ಇದ್ದರು.

ಕತ್ತಿ, ಕಾಗೆ, ಪೂಜಾರಿಗೆ ಮುನಿಸಿಲ್ಲ – ಸಿಎಂ: “ಉಮೇಶ ಕತ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರಿಗೆ ಯಾವುದೇ ಅಸಮಾಧಾನ, ಮುನಿಸೂ ಇಲ್ಲ’ ಎಂದು ಇದೇ ವೇಳೆ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು. ರಾಜು ಕಾಗೆ ಮತ್ತು ಅಶೋಕ ಪೂಜಾರಿ ಅವರಿಗೂ ಅಸಮಾಧಾನ ಇಲ್ಲ. ಟಿಕೆಟ್‌ ದೊರಕದ ಬಿಜೆಪಿ ನಾಯಕರು ಕಾಂಗ್ರೆಸ್‌ ಬಾಗಿಲು ತಟ್ಟುವ ವಿಷಯ ನನ್ನ ಗಮನಕ್ಕಿಲ್ಲ. ಅನರ್ಹ ಶಾಸಕರ ಕುರಿತು ಅ.25ರ ನಂತರ ಮಾತನಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next