Advertisement

ಶಿಕ್ಷಕರಿಗೆ ಬರೆ: ವರ್ಗಾವಣೆ ರಾಜಕೀಯ

06:00 AM Oct 30, 2018 | Team Udayavani |

ರಾಜ್ಯ ಸರ್ಕಾರಿ ಪ್ರಾಥ ಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕಳೆದ ಸುಮಾರು ಒಂದು ವರ್ಷಗಳಿಂದ ಒಂದಲ್ಲ ಒಂದು ಕಾರಣದಿಂದ ಮುಂದೂಡಿಕೊಂಡೇ ಬರಲಾಗುತ್ತಿದೆ. ಹಿಂದಿನ ಸರ್ಕಾರದಿಂದ ಆರಂಭವಾಗಿ ಇಲ್ಲಿಯ ತನಕ ಒಂದಲ್ಲ ಒಂದು ನೆಪ ಮುಂದಿಟ್ಟುಕೊಂಡು ವರ್ಗಾವಣೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುತ್ತಿರುವುದನ್ನು ನೋಡಿದರೆ, ವರ್ಗಾವಣೆ ಬಯಸದ ಶಿಕ್ಷಕರ ಲಾಬಿಗೆ ಸರ್ಕಾರ ಮಣಿದಿರುವುದು ಸ್ಪಷ್ಟ ಎನ್ನಬಹುದು. ಕೌನ್ಸೆಲಿಂಗ್‌ ಆರಂಭವಾದ ನಂತರವಾದರೂ ಎಲ್ಲವೂ ಸುಸೂತ್ರವಾಗಿ ನಡೆಯಬಹುದು ಎಂದು ನಿರೀಕ್ಷಿಸಿದ ಸಾವಿರಾರು ಶಿಕ್ಷಕರಿಗೆ ಮತ್ತೆ ಭ್ರಮನಿರಸನವಾಗಿದೆ.

Advertisement

2007ರ ನವೆಂಬರ್‌ನಲ್ಲಿ ಶಿಕ್ಷಕರ ವರ್ಗಾವಣೆಯ ಸಂಬಂಧ ಹೊಸ ಕಾಯ್ದೆ ಜಾರಿಗೆ ಬಂದ ನಂತರ ವಿವಿಧ ಹಂತದಲ್ಲಿ ತಿದ್ದುಪಡಿ ಆಗುತ್ತಲೇ ಬಂದಿದೆ. ಸಹ ಶಿಕ್ಷಕರಿಗಾಗಿ ಸೇವೆಗೆ ಸೇರಿದ ಐದು ವರ್ಷದ ನಂತರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಸೇವಾ ಜೇಷ್ಠತೆಯ ಆಧಾರದಲ್ಲಿ ವರ್ಗಾವಣೆ ನಡೆಸಲಾಗುತ್ತಿದೆ. ಎ, ಬಿ ಮತ್ತು ಸಿ ವಲಯವಾಗಿ ವಿಂಗಡಿಸಲಾಗಿದೆ.   ನಗರದ ಪ್ರದೇಶವನ್ನು ಎ ವಲಯವೆಂದೂ, ಗ್ರಾಮೀಣ ಪ್ರದೇಶವನ್ನು ಸಿ ವಲಯ ಎಂದೂ ಹಾಗೂ ಗ್ರಾಮೀಣ ಹಾಗೂ ನಗರಕ್ಕೆ ಸೇರದ ಪ್ರದೇಶವನ್ನು ಬಿ ವಲಯವಾಗಿ ವರ್ಗಿ ಕರಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ(ಶಿಕ್ಷಕರ ವರ್ಗಾವಣೆ)ನಿಯಮ 2017ರಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ಬದಲಾವಣೆ ಮಾಡಲಾಗಿದೆ.

 ಆದರೆ, ಈ ನಿಯಮ ಜಾರಿಗೆ ಬಂದ ನಂತರ ಒಮ್ಮೆಯೂ ವರ್ಗಾವಣೆ ಸಸೂತ್ರವಾಗಿ ನಡೆಸಲು ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ. ಇದಕ್ಕೆ ಹತ್ತಾರು ಕಾರಣಗಳಿವೆ. ಎ ವಲಯದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚುಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು (ಶೇಕಡವಾರು ಆಧಾರದಲ್ಲಿ) ಕಡ್ಡಾಯ ವರ್ಗಾವಣೆ ಮಾಡುವ ನಿರ್ಧಾರ ಹಿಂದಿನ ಸರ್ಕಾರ ಮಾಡಿತ್ತು ಮತ್ತು ಈ ಸಂಬಂಧ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು. ನಗರ ಪ್ರದೇಶದಲ್ಲಿ ಬಹುಕಾಲದಿಂದ ಇರುವ ಶಿಕ್ಷಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು,  ಕೆಲವು ಶಿಕ್ಷಕರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಆನಂತರ ಚುನಾವಣೆ ನೆಪದಲ್ಲಿ ವರ್ಗ ನಡೆಯಲಿಲ್ಲ.

ವರ್ಗಾವಣೆ ಪ್ರಕ್ರಿಯೆಗಾಗಿಯೇ ಹೊಸ ಸಾಫ್ಟ್ವೇರ್‌ ಕೂಡ ಸಿದ್ಧಪಡಿಸಲಾಗಿತ್ತು.  ಶಿಕ್ಷಕರ ಸೇವಾ ವಿವರನ್ನು ಆನ್‌ಲೈನ್‌ ಮೂಲಕವೇ ಸಂಗ್ರಹಿಸಲಾಗಿದೆ. ಶಿಕ್ಷಕರು ತಪ್ಪು ಮಾಹಿತಿ ಒದಗಿಸಿದರೆ ಸಾಫ್ಟ್ವೇರ್‌ ಅದನ್ನು ಸಾರಸಗಟಾಗಿ ತಿರಸ್ಕರಿಸುತ್ತದೆ. ಸಾಫ್ಟ್ವೇರ್‌ ನಿರ್ವಹಣೆಗೆ ಒಂದು ಪ್ರತ್ಯೇಕ ತಂಡವೇ ಇದೆ. ಎಲ್ಲ ರೀತಿಯ ವ್ಯವಸ್ಥೆ ಇದ್ದರೂ ವರ್ಗಾವಣೆ ಮಾತ್ರ ಗಣಪತಿ ಮದುವೆಯಂತಾಗಿದೆ.

ವರ್ಗಾವಣೆ ಪ್ರಕ್ರಿಯೆಗಾಗಿ ಮೂರ್‍ನಾಲ್ಕು ಬಾರಿ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿತ್ತು. ವೇಳಾಪಟ್ಟಿ ಪ್ರಕಟಿಸಿ ಒಂದೇ ವಾರದಲ್ಲಿ ಪ್ರಕ್ರಿಯೆಗೆ ಇಲಾಖೆಯೇ ತಾತ್ಕಾಲಿಕ ತಡೆ ನೀಡುತ್ತಿತ್ತು. ಇದು ಕಳೆದೊಂದು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಚುನಾವಣಾ ನೀತಿ ಸಂಹಿತೆ, ಕೋರ್ಟ್‌ ಪ್ರಕರಣವೂ ಇದಕ್ಕೆ ಕಾರಣ ಇರಬಹುದು. ಒಂದು ಹಂತದಲ್ಲಿ ನಗರದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿದ್ದ ಶಿಕ್ಷಕರ ಲಾಬಿ ವರ್ಗಾವಣೆಗೆ ಅಡ್ಡಿ ಮಾಡಿದರೆ, ಈಗ ಹೆಚ್ಚುವರಿ ಶಿಕ್ಷಕರ ಪ್ರಭಾವಕ್ಕೆ ಸರ್ಕಾರ ಮಣಿದಂತಿದೆ. ಇಲ್ಲಿ ರಾಜಕೀಯ ನಾಯಕರ, ಸರ್ಕಾರದ ಹಸ್ತಕ್ಷೇಪವೂ ಇದೆ. ಕಡ್ಡಾಯ ವರ್ಗಾವಣೆ ಬಯಸದ ಶಿಕ್ಷಕರ ಒತ್ತಡವೂ ಇದೆ. ಇದೆಲ್ಲದರ ನಡುವೆ ಹತ್ತಾರು ವರ್ಷಗಳಿಂದ ವರ್ಗಾವಣೆಗಾಗಿ ಕಾದುಕುಳಿತಿರುವ ಸಾಮಾನ್ಯ ಶಿಕ್ಷಕರಿಗೆ ಸದಾ ಅನ್ಯಾಯವಾಗುತ್ತಲೇ ಇದೆ.

Advertisement

ವರ್ಗಾವಣೆ ಪ್ರಕ್ರಿಯೆಗೆ ಸುಮಾರು 78 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಹೆಚ್ಚುವರಿ ಶಿಕ್ಷಕರು ಇದ್ದಾರೆ. ಪ್ರಾಥಮಿಕ ಶಾಲೆಯ ಹೆಚ್ಚುವರಿ ಶಿಕ್ಷಕರ ನಿಯೋಜನೆ ಪೂರ್ಣಗೊಂಡಿದ್ದು, ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರು ಪಟ್ಟಿ ಪ್ರಕಟಿಸುತ್ತಿದ್ದಂತೆ ಇಡೀ ವರ್ಗಾವಣೆ ಪ್ರಕ್ರಿಯೆಗೆ ಇಲಾಖೆ ತಾತ್ಕಾಲಿಕ ತಡೆ ನೀಡಿದೆ. ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಸಹಿತವಾಗಿ ಬಿಸಿಯೂಟ, ಕ್ಷೀರಭಾಗ್ಯ, ವಿದ್ಯಾರ್ಥಿ ಸಮಗ್ರ ಮೌಲ್ಯಮಾಪನ, ಪೌಷ್ಠಿಕಾಂಶಯುಕ್ತ ಮಾತ್ರೆ ವಿತರಣೆ, ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ ಸಹಿವಾಗಿ ಎಲ್ಲವನ್ನು ಶಾಲಾ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರೇ ಮಾಡಬೇಕು. ಇದರ ಜತೆಗೆ ಚುನಾವಣಾ ಕಾರ್ಯ ಹಾಗೂ ಸರ್ಕಾರ ವಹಿಸುವ ಇತರೆ ಕೆಲಸವನ್ನು ಚಾಚೂತಪ್ಪದೇ ಮಾಡಬೇಕು. ಇಲ್ಲವಾದರೆ ಹಿಂಬಡ್ತಿಯ ಅಸ್ತ್ರ ಬಳಸಲಾಗುತ್ತದೆ. ಎಲ್ಲ ಕಾರ್ಯವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಶಾಲಾ ಶಿಕ್ಷಕರಿಗೆ ವರ್ಗಾವಣೆ ವಿಷಯದಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next