Advertisement

ಶಿಕ್ಷಕಿಯರಿಗೆ ಶೇ.50 ಹುದ್ದೆ ಕಲ್ಪಿಸಲು ಆಗ್ರಹ

04:35 PM Feb 08, 2021 | Team Udayavani |

ಕಲಬುರಗಿ: ಶಾಲಾ ಶಿಕ್ಷಕಿಯರನ್ನು ಕೇವಲ ಮತ ಬ್ಯಾಂಕ್‌ ಆಗಿ ಬಳಕೆ ಮಾಡಿಕೊಳ್ಳದೇ, ಸರ್ಕಾರಿ ನೌಕರರ ಸಂಘ, ಶಿಕ್ಷಕರ ಸಂಘಗಳಲ್ಲಿ ಶೇ.50ರಷ್ಟು ಪ್ರಮುಖ ಸ್ಥಾನಗಳನ್ನು ನೀಡುವ ಕೆಲಸವಾಗಬೇಕೆಂದು ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜಾಧ್ಯಕ್ಷೆ ಡಾ| ಲತಾ ಎಸ್‌.ಮುಳ್ಳೂರ ಆಗ್ರಹಿಸಿದರು. ನಗರದ ಡಾ| ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಂಘದ ಜಿಲ್ಲಾ ಘಟಕ ಮತ್ತು 12 ತಾಲೂಕು ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ರಾಜ್ಯದಲ್ಲಿ ಒಟ್ಟು ಶಿಕ್ಷಕರಲ್ಲಿ ಶೇ.70ರಷ್ಟು ಶಿಕ್ಷಕಿಯರೇ ಇದ್ದೇವೆ. ಆದರೆ, ನಮ್ಮ ಮಾತೃ ಸಂಸ್ಥೆಗಳಾದ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸರ್ಕಾರಿ ಶಿಕ್ಷಕರ ಸಂಘದಲ್ಲಿ ಎಷ್ಟು ಪ್ರಮುಖ ಸ್ಥಾನ-ಮಾನ ನೀಡಲಾಗಿದೆ ಎನ್ನುವುದನ್ನು ಮನಗಾಣಬೇಕಿದೆ. ಅರ್ಧದಷ್ಟು ಪ್ರಮುಖ ಹುದ್ದೆಗಳಲ್ಲಿ ಪಾಲು ಸಿಗಬೇಕು. ಈ ನಿಟ್ಟಿನಲ್ಲಿ ನೌಕರ ಸಂಘದ ಬೈಲ್‌ಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.

ಈಗಾಗಲೇ ಸಾಕಷ್ಟು ಶಿಕ್ಷಕರ ಅನೇಕ ಸಂಘಟನೆಗಳಿದ್ದರೂ, ಸರ್ಕಾರಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕಿಯರ ಸಂಘಟನೆಯ ಅಗತ್ಯ ಮನಗಂಡು ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ 2018ರಲ್ಲಿ ಸಂಘ ಹುಟ್ಟು ಹಾಕಲಾಯಿತು. ರಾಜ್ಯದೆಲ್ಲೆಡೆ ಸಂಘದ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಶೇ.90ರಷ್ಟು ಶಿಕ್ಷಕರನ್ನು ಸಂಘ ತಲುಪಿದೆ. 24 ಜಿಲ್ಲೆಗಳಲ್ಲಿ ಶಿಕ್ಷಕಿಯರ ಸಂಘದ ಘಟಕಗಳು ಅಸ್ತಿತ್ವಕ್ಕೆ ಬಂದಿವೆ ಎಂದು ಹೇಳಿದರು.

ನಮ್ಮ ಸಂಘ, ಸಂಘಟನೆ ಯಾರ ವಿರುದ್ಧವೂ ಅಲ್ಲ. ಶಿಕ್ಷಕ-ಶಿಕ್ಷಕಿ ಎರಡೂ ಒಂದೇ ನ್ಯಾಣದ ಎರಡು ಮುಖಗಳು. ಶಿಕ್ಷಕಿಯರಿಗೆ ಸಂಘಟನೆ ಮುಖ್ಯವಾಗಿದೆ. ಅರಣ್ಯ ಪ್ರದೇಶದಲ್ಲಿರುವ ಹಳ್ಳಿಗಳು, ಗ್ರಾಮೀಣದಲ್ಲಿರುವ ಶಾಲೆಗಳಿಗೆ ಶಿಕ್ಷಕಿಯರ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿ¨ªಾರೆ. ಇಂತಹ ಸ್ಥಳದಲ್ಲಿ ಮಹಿಳಾ ಶಿಕ್ಷಕಿಯರಿಗೆ ರಕ್ಷಣೆ, ಸೌಲಭ್ಯ ಬೇಕಿದೆ. ಸೂಕ್ತ ವಸತಿಗೃಹಗಳನ್ನು ಮಾಡಬೇಕಿದೆ ಎಂದರು.

ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮತ್ತು 12 ತಾಲೂಕು ಘಟಕಗಳನ್ನು ಶ್ರೀಶೈಲ, ಸುಲಫಲ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಉದ್ಘಾಟಿಸಿದರು.

Advertisement

ಸಿದ್ಧಾರ್ಥ್ ಬುದ್ಧವಿಹಾರದ ಸಂಗಾನಂದ ಭಂತೇಜಿ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌, ಡಯಟ್‌ ಉಪ ನಿರ್ದೇಶಕ ಶಾಂತಗೌಡ ಪಾಟೀಲ್‌, ಸಂಘದ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ್‌, ಕೋಶಾಧ್ಯಕ್ಷೆ ಮಲ್ಲಮ್ಮ ಮತ್ತಿಮಡು, ಪದಾಧಿಕಾರಿಗಳಾದ ವಿಶಾಲಾಕ್ಷಿ ಬಿ.ಎಂ., ಮೀನಾಕ್ಷಿ ಬನಸೋಡೆ, ಜ್ಯೋತಿ ಅಗ್ನಿಹೋತ್ರ, ಗೌರಾಬಾಯಿ ಆಹೇರಿ, ಸುಧಾ ಬಿರಾದಾರ, ವಿವಿಧ ತಾಲೂಕುಗಳ ಘಟಕಗಳ ಅಧ್ಯಕ್ಷರಾದ ಪ್ರಮೀಳಾದೇವಿ ಗೌಡಪ್ಪ ಶೇರಿಕಾರ, ಅರ್ಚನಾ ಜೈನ್‌, ಶೈಲಜಾ ಪೋಮಾಜಿ, ಸುಮಂಗಲಾ ಡಿಗ್ಗಾವಿ, ವಿಜಯಲಕ್ಷ್ಮೀ ಹಿರೇಮಠ, ನಗುಬಾಯಿ ಮಲಘಾಣ, ಶಶಿಕಲಾ ಮೂಲಭಾರತಿ, ನಾಗವೇಣಿ, ಕೃಷ್ಣಾಬಾಯಿ ರಾಂಪುರ, ಕಲಾವತಿ ನೆಲೋಗಿ, ಶಶಿಕಲಾ ಹವಾಲ್ದಾರ, ಸವಿತಾ ಬಡಿಗೇರ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ, ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಕಟ್ಟಿಮನಿ, ಸಿದ್ದಣ್ಣ ಪೂಜಾರಿ ಇದ್ದರು.

ವಾರಿಯರ್ಸ್‌-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಶಿಕ್ಷಕರ ಸಂಘದ ಘಟಕಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಚಾರಿ ಪಿಎಸ್‌ಐ ಭಾರತಿಬಾಯಿ ಧನ್ನಿ, ಪೇದೆ ರಾಜಕುಮಾರ ಕೋಬಾಳ, ಮಂಗಲಮೂರ್ತಿ, ಮಹಾದೇವಿ, ಶಾಂತಾಬಾಯಿ ಸೇರಿದಂತೆ 13 ಜನ ಕೊರೊನಾ ವಾರಿಯರ್ಸ್‌ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವೈಷ್ಣವಿ, ಅಜಬಾ ನಸ್ರಿನ್‌, ಭಾಗ್ಯಶ್ರೀ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಶಿಲ್ಪಾ, ವಿಜಯಲಕ್ಷ್ಮೀ, ನಿಖಿತಾ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಶಿಕ್ಷಕಿಯರಾದ ಕಮಲಾ ಕುಲಕರ್ಣಿ, ಶಶಿಕಲಾ ಮೂಲಭಾರತಿ, ಗೀತಾ ಭರಣಿ ಅವರಿಗೆ “ಶಿಕ್ಷಣ ಸುಧಾಂಶು’ ಮತ್ತು ಶರಣಮ್ಮ ರೂಗಿ ಅವರಿಗೆ “ಕುಶಲಮತಿ’ ಎನ್ನುವ ವಿಶೇಷ ಪ್ರಶಸ್ತಿ ಹಾಗೂ ಗಮನಾರ್ಹ ಸೇವೆ ಸಲ್ಲಿಸಿದ ಶಾಂತಾ ಹಾವನೂರಮಠ, ಸಪ್ನಾ ಪಾಟೀಲ, ಶೈಲಜಾ ಜಾಲವಾದಿ, ನಸ್ರಿನ್‌ ಭಾನು, ಗಂಗುಬಾಯಿ, ಭಾರತಿ ಮೊದಲಾದ ಶಿಕ್ಷಕಿಯರಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.

ಸಮಾರಂಭಕ್ಕೂ ಮೊದಲು ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ರಂಗಮಂದಿರ ವರೆಗೆ ಸಾವಿತ್ರಿಬಾಯಿ ಫುಲೆ ಭಾವಚಿತ್ರ ಮೆರವಣಿಗೆ ನಡೆಯಿತು. ಶಿಕ್ಷಕಿಯರು ಸಂಪ್ರಾಯಿಕ ಹಾಡುಗಳಿಗೆ ಹೆಜ್ಜೆ ಹಾಕಿದರು. ಮೇಲಾಗಿ 350ಕ್ಕೂ ಹೆಚ್ಚಿನ ಶಿಕ್ಷಕರು ಒಂದೇ ಬಣ್ಣದ ಇಳಕಲ್‌ ಸೀರೆ, ಕುಪ್ಪಸ ಧರಿಸಿದ್ದು
ಗಮನ ಸೆಳೆಯಿತು.

ಶಿಕ್ಷಕಿಯರು ಒಟ್ಟಾಗಿ ಒಳ್ಳೆಯ ಕಾರ್ಯ ಮಾಡುವಾಗ ಕಾಲು ಎಳೆಯುವ ಜನರಿರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಯಶಸ್ಸು ಸಾಧಿಸಿದಾಗ ಅವರೇ ನಿಮ್ಮನ್ನು ಹೊಗಳುತ್ತಾರೆ. ಇದು ಹೇಗೆ ಸಾಧ್ಯ ಎನ್ನುವಂತೆ ಆಗಬೇಕು. ಶಿಕ್ಷಕರ ಸಂಘಟನೆ ಬಲಿಷ್ಠಗೊಳಿಸುವ ಕೆಲಸವಾಗಲಿದೆ.
ಜಯಶ್ರೀ ಬಸವರಾಜ
ಮತ್ತಿಮಡು, ಸಮಾಜ ಸೇವಕಿ

Advertisement

Udayavani is now on Telegram. Click here to join our channel and stay updated with the latest news.

Next