Advertisement

ಟ್ಯಾಕ್ಸಿ ಮಾಲೀಕರಿಂದ ದಿಢೀರ್‌ ರಸ್ತೆ ತಡೆ

12:52 PM Mar 10, 2017 | Team Udayavani |

ದಾವಣಗೆರೆ: ಪರವಾನಗಿಯಿಲ್ಲದೆ ಪ್ರಯಾಣಿಕರನ್ನು ಕರೆದೊಯ್ಯುವ ಖಾಸಗಿ ಟ್ಯಾಕ್ಸಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ನಗರ ಟ್ಯಾಕ್ಸಿ ಮಾಲೀಕರ, ಚಾಲಕರ ಸಂಘದಿಂದ ಗುರುವಾರ ದಿಢೀರ್‌ ರಸ್ತೆ ತಡೆ ನಡೆಸಲಾಯಿತು. ಉಪವಿಭಾಗಾಧಿಕಾರಿ ಕಚೇರಿಮುಂದೆ ಪಿಬಿ ರಸ್ತೆ ತಡೆ ನಡೆಸಿದ  ಚಾಲಕರು, ಮಾಲೀಕರು ಖಾಸಗಿ ಟ್ಯಾಕ್ಸಿಗಳ ವಿರುದ್ಧ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. 

Advertisement

ಪೇಪರ್‌ ವಾಹನದ ಹೆಸರಲ್ಲಿಅನೇಕ ಟ್ಯಾಕ್ಸಿಗಳು ಹೈಸ್ಕೂಲ್‌  ಮೈದಾನದ ಮುಂಭಾಗದಿಂದ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇದರಿಂದ ಪರವಾನಗಿ ಪಡೆದ ಟ್ಯಾಕ್ಸಿಗಳಿಗೆ ನಷ್ಟವಾಗುತ್ತದೆ. ಇದರ ವಿರುದ್ಧ ಕ್ರಮ ವಹಿಸಲು ಅನೇಕ ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲಎಂದು ದೂರಿದರು. 

ಖಾಸಗಿ ಬಸ್‌ ಮಾಲೀಕ, ಪಾಲಿಕೆ ಸದಸ್ಯ ಡಿ.ಕೆ. ಕುಮಾರ್‌ ಮಾತನಾಡಿ, ಪೊಲೀಸ್‌, ಆರ್‌ಟಿಒ ಇತರೆ ಅಧಿಕಾರಿಗಳು ಈ ಟ್ಯಾಕ್ಸಿಗಳ ಮಾಲೀಕರಿಂದ ಮಾಮೂಲಿವಸೂಲಿ ಮಾಡುತ್ತಿದ್ದಾರೆ. ಇದರಿಂದಲೇ ಅವರ ವಿರುದ್ಧ ಕ್ರಮ ವಹಿಸುತ್ತಿಲ್ಲ. ಈ ಕೂಡಲೇ ಅಧಿಕಾರಿಗಳು ನಮ್ಮ ಬೇಡಿಕೆಗೆ ಸ್ಪಂದಿಸಬೇಕು.

ಯಾವುದೇ ಕಾರಣಕ್ಕೂ ಖಾಸಗಿ ಟ್ಯಾಕ್ಸಿಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಒಂದು ಕ್ರೂಸರ್‌ ವಾಹನದಲ್ಲಿ 10 ಜನಕ್ಕೆ ಅನುಮತಿ ಇರುತ್ತದೆ.ಆದರೆ, ಇಲ್ಲಿ ಸಂಚರಿಸುವ ಕ್ರೂಸರ್‌ ವಾಹನಗಳು 15 ಜನರನ್ನು ತುಂಬಿಕೊಂಡು ಹೋಗುತ್ತವೆ. 

ಸಂಚಾರಿ ಪೊಲೀಸರು ಸ್ಥಳದಲ್ಲಿಯೇ ಇದ್ದರೂ ಈ ಕುರಿತು ಕ್ರಮ ವಹಿಸಲುಮುಂದಾಗುವುದಿಲ್ಲವೇಕೆ? ಎಂದು ಅವರು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ನಮ್ಮ ಬೇಡಿಕೆ ಈಡೇರುವವರೆಗೆ ರಸ್ತೆ ತಡೆ ಹಿಂಪಡೆಯುವುದಿಲ್ಲ. ಕೂಡಲೇ ಸ್ಥಳಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ರಾಜ್ಯಸಾರಿಗೆ ನಿಗಮದ ಜಿಲ್ಲಾಮಟ್ಟದ ಅಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಸುಮಾರು 30 ಕ್ರೂಸರ್‌ವಾಹನದ ಮಾಲೀಕರು,

Advertisement

ಚಾಲಕರು  ಪಟ್ಟು ಹಿಡಿದರು. ಕೊನೆಗೆ ನಗರ ಡಿಎಸ್‌ಪಿ ಅಶೋಕ್‌ಕುಮಾರ್‌, ಸಿಪಿಐ ಸಂಗನಾಳ್‌ ಇತರೆ ಪೊಲೀಸ್‌ ಅಧಿಕಾರಿಗಳು ರಸ್ತೆ ತಡೆ ನಡೆಸಿದ್ದವರನ್ನು ಸ್ಥಳದಿಂದ ಚದುರಿಸಿದರು. ಮನವಿ ಪತ್ರ ಪಡೆದುಕೊಂಡು ಶೀಘ್ರ ಕ್ರಮ ವಹಿಸುವ ಭರವಸೆ ನೀಡಿದರು. ದೀಕ್ಷಿತ್‌, ರಾಜು, ರವಿ, ಸಾಧಿಕ್‌, ರಂಗನಾಥ, ಸುಧೀಂದ್ರ, ದಯಾನಂದ, ಪ್ರಕಾಶ್‌ ಹೋರಾಟದ ನೇತೃತ್ವ ವಹಿಸಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next