Advertisement

ಗೃಹ ನಿರ್ಮಾಣ ವೆಚ್ಚಕ್ಕಿಂತ ತೆರಿಗೆಯೇ ಹೆಚ್ಚು

11:36 PM Dec 13, 2019 | Lakshmi GovindaRaj |

ಮೈಸೂರು: ತೆರಿಗೆ ಹೆಚ್ಚಳದಿಂದ ವಸತಿ ನಿರ್ಮಾಣಕ್ಕೆ ಸಮಸ್ಯೆ ಎದುರಾಗಿದ್ದು, ಮಧ್ಯಮ ಮತ್ತು ಬಡವರ್ಗದ ಜನರು ಅತ್ಯಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಬಿಲ್ಡರ್ ಅಸೋಸಿಯೇಷನ್‌ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಶ್ರೀರಾಮ್‌ ಹೇಳಿದರು. ಬಿಲ್ಡರ್ ಅಸೋಸಿಯೇಷನ್‌ ಆಫ್ ಇಂಡಿಯಾ ಮೈಸೂರು ಘಟಕದ ವತಿಯಿಂದ ವಿಶ್ವೇಶ್ವರ ನಗರದ ಬಿಲ್ಡರ್ ಚಾರಿಟಬಲ್‌ ಟ್ರಸ್ಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಸ್ವಾತಂತ್ರ್ಯ ನಂತರದಿಂದ ಇಂದಿನನವರೆಗೂ ವಸತಿ ಸಮಸ್ಯೆ ಇದೆ. ಇದಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನಗರೀಕರಣ ಕಾರಣವಾಗಿದೆ. ಇದು ಹೀಗೆ ಮುಂದುವರಿದರೆ ವಸತಿ ಸಮಸ್ಯೆ ಬಹುದೊಡ್ಡ ಸಮಸ್ಯೆಯಾಗಿ ದೇಶವನ್ನು ಕಾಡಲಿದೆ. ವಸತಿ ರಹಿತರಿಗೆ ವಸತಿ ಸೌಲಭ್ಯ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರಧ್ದೋ ಅಥವಾ ರಾಜ್ಯಧ್ದೋ ಎಂದು ಸಂವಿಧಾನ ನಿಖರವಾಗಿ ಹೇಳಿಲ್ಲ. ಇದರಿಂದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುತ್ತಿದೆ. ಗೃಹ ನಿರ್ಮಾಣ ಮಂಡಳಿ ಒಂದು ರೀತಿ ತಂದೆಯಿಲ್ಲ ಕೂಸಿನಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

2014ರಲ್ಲಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ವಸತಿ ರಹಿತರಿಗೆ ಸೂರು ಕಲ್ಪಿಸಿಕೊಡುವುದು ಮೊದಲ ಆದ್ಯತೆ ಎಂದು ಗುರಿ ಹೊಂದಿತ್ತು. ಆದರೆ 2019ರ ಪೂರ್ಣವಾಗುತ್ತಿದ್ದರೂ ಕೇಂದ್ರ ಸರ್ಕಾರ ತನ್ನ ಗುರಿ ತಲುಪಿಲ್ಲ. ಇದಕ್ಕೆ ಕೇಂದ್ರದ ಹೊಸ ತೆರಿಗೆ ನೀತಿ, ನಿವೇಶನ ದರ ಹೆಚ್ಚಾಗಿರುವುದು ಮತ್ತು ಮೂಲ ಸೌಲಭ್ಯಗಳ ಕೊರತೆ. ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಟ್ಟು ಮೊತ್ತದಲ್ಲಿ ಶೇ.40 ರಷ್ಟು ಹಣವನ್ನು ತೆರಿಗೆಗೆ ವಿನಿಯೋಗಿಸುವಂತಾಗಿದೆ. ಇದರಿಂದ ಸಾಮಾನ್ಯ ವರ್ಗದ ಜನ ಹಾಗೂ ಬಡವರು ಮನೆ ನಿರ್ಮಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರ ಹೊಸದೊಂದು ಪಾಲಿಸಿಯನ್ನು ತಂದಿದ್ದು, ಅದರಲ್ಲಿ ಗೃಹ ನಿರ್ಮಾಣಕ್ಕೆ ಇರುವ ಸವಾಲು ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಗೃಹ ನಿರ್ಮಾಣಕಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಮನೆ ನಿರ್ಮಿಸಿಕೊಳ್ಳುವುದನ್ನು ಸ್ವಾಭಿಮಾನದ ಬದುಕು ಎಂದು ತಿಳಿದಿದ್ದಾನೆ. ಯಾರು ಎಷ್ಟು ದೊಡ್ಡ ಮನೆ ನಿರ್ಮಾಣ ಮಾಡಿದ್ದಾರೆ ಎಂಬುದನ್ನು ಜನ ನೋಡುತ್ತಾರೆ.

ತನ್ನ ಜೀವನವಿಡೀ ಸಂಪಾದಿಸಿದ ಹಣವನ್ನು ಮನೆ ಕಟ್ಟಲು ವಿನಿಯೋಗಿಸುತ್ತಾನೆ. ಹಾಗಾಗಿ ಮನೆ ಎಂಬುದು ವ್ಯಕ್ತಿಯ ಜೀವನ ಮಟ್ಟ ಮತ್ತು ಸ್ವಾಭಿಮಾನದ ಬದುಕನ್ನು ನಿರ್ಧರಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಲ್ಡರ್ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ಅಂಬಿಕಾಪತಿ, ಇಂಡಿಯಾ ಹೌಸಿಂಗ್‌ ಫೆಡರೇಷನ್‌ನ ಸಿಇಒ ಮಣಿಕಂದನ್‌, ಬಿ.ಎಸ್‌. ದಿನೇಶ್‌, ಆರ್‌. ರಘುನಾಥ್‌, ಎಸ್‌.ಎಚ್‌. ಶ್ರೀನಿವಾಸ್‌, ವೆಂಕಟೇಶ ಪ್ರಸಾದ್‌ ಮತ್ತಿತರರಿದ್ದರು.

Advertisement

ಮನೆ ಕಟ್ಟುವಾಗ ಮಳೆ ಕೊಯ್ಲು, ಸೌರಶಕ್ತಿ ಅಳವಡಿಸಿ: ಮನೆ ನಿರ್ಮಿಸಿಕೊಡುವವರು ಮತ್ತು ನಿರ್ಮಿಸಿಕೊಳ್ಳುವವರೂ ಪರಿಸರಕ್ಕೆ ಪೂರಕವಾಗಿ ವಸತಿ ನಿರ್ಮಿಸಿಕೊಳ್ಳಬೇಕು. ಮಳೆ ನೀರು ಕೊಯ್ಲು, ಸೌರಶಕ್ತಿ ಬಳಕೆ ಸೇರಿದಂತೆ ವಸತಿ ಸಂಕೀರ್ಣದಂತಹ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆದು ಪರಿಸರ ಮಾಲೀನ್ಯಕ್ಕೆ ತಡೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ತಿಳಿಸಿದರು. ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುಪಾಲು ವಸತಿ ಯೋಜನೆಗಳು ನಗರ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೆ ಕ್ರಮೇಣ ಗ್ರಾಮೀಣ ಪ್ರದೇಶಗಳ ವಸತಿ ರಹಿತ ಜನರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next