Advertisement

ವಿಜಯ್‌ ಹಜಾರೆ: ಕರ್ನಾಟಕಕ್ಕೆ ಪುನಃ ಆಘಾತವಿಕ್ಕಿದ ತಮಿಳುನಾಡು

10:41 PM Dec 21, 2021 | Team Udayavani |

ಜೈಪುರ: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಫೈನಲ್‌, ವಿಜಯ್‌ ಹಜಾರೆ ಲೀಗ್‌ ಮುಖಾಮುಖೀಯ ಬಳಿಕ ಇದೇ ಕೂಟದ ಕ್ವಾರ್ಟರ್‌ ಫೈನಲ್‌ನಲ್ಲೂ ತಮಿಳುನಾಡಿಗೆ ಶರಣಾಗುವ ಮೂಲಕ ಕರ್ನಾಟಕ ಕೂಟದಿಂದ ಹೊರಬಿದ್ದಿದೆ. ಮಂಗಳವಾರದ ಈ ನಾಕೌಟ್‌ ಪಂದ್ಯದಲ್ಲಿ ಕರ್ನಾಟಕ ಅನುಭವಿಸಿದ್ದು 151 ರನ್ನುಗಳ ಆಘಾತಕಾರಿ ಸೋಲು!

Advertisement

ತಮಿಳುನಾಡಿಗೆ ಮೊದಲು ಬ್ಯಾಟಿಂಗ್‌ ಬಿಟ್ಟುಕೊಟ್ಟ ಕರ್ನಾಟಕ ಇದರಿಂದ ಯಾವ ಪ್ರಯೋಜನವನ್ನೂ ಪಡೆಯಲಾಗಲಿಲ್ಲ. ಧಾರಾಳ ರನ್‌ ಬಿಟ್ಟುಕೊಟ್ಟ ಬಳಿಕ ಬ್ಯಾಟಿಂಗ್‌ ಹೋರಾಟವನ್ನೇ ಮರೆತು ಮಂಡಿಯೂರಿತು.
ನಾಯಕ ಎನ್‌. ಜಗದೀಶನ್‌ ಅವರ ಶತಕ (102), ಸಾಯಿ ಕಿಶೋರ್‌ (61) ಮತ್ತು ಶಾರೂಖ್‌ ಖಾನ್‌ (ಅಜೇಯ 79) ಅವರ ಸ್ಫೋಟಕ ಆಟದ ನೆರವಿನಿಂದ ತಮಿಳುನಾಡು 8 ವಿಕೆಟಿಗೆ 354 ರನ್‌ ರಾಶಿ ಹಾಕಿತು. ಈ ಮೊತ್ತವನ್ನು ಕಂಡೇ ದಿಗಿಲುಗೊಂಡ ಮನೀಷ್‌ ಪಾಂಡೆ ಬಳಗ 39 ಓವರ್‌ಗಳಲ್ಲಿ 203 ರನ್ನಿಗೆ ಸರ್ವಪತನ ಕಂಡಿತು.

43 ರನ್‌ ಮಾಡಿದ ಎಸ್‌. ಶರತ್‌ ಅವರದೇ ಕರ್ನಾಟಕ ಸರದಿಯ ಸರ್ವಾಧಿಕ ವೈಯಕ್ತಿಕ ಗಳಿಕೆ. ದೇವದತ್ತ ಪಡಿಕ್ಕಲ್‌ ಸೊನ್ನೆ ಸುತ್ತಿದರೆ, ನಾಯಕ ಪಾಂಡೆ 9 ರನ್ನಿಗೆ ಆಟ ಮುಗಿಸಿದರು. ಆರ್‌. ಸಿಲಂಬರಸನ್‌ 4, ವಾಷಿಂಗ್ಟನ್‌ ಸುಂದರ್‌ 3 ವಿಕೆಟ್‌ ಉಡಾಯಿಸಿ ಕರ್ನಾಟಕವನ್ನು ಕಾಡಿದರು.

ಜಗದೀಶನ್‌ 102
ಆರಂಭಕಾರ ಜಗದೀಶನ್‌ 101 ಎಸೆತಗಳಿಂದ 102 ರನ್‌ ಬಾರಿಸಿದರು (9 ಬೌಂಡರಿ, 1 ಸಿಕ್ಸರ್‌). ಅವರು ಸಾಯಿ ಕಿಶೋರ್‌ ಜತೆಗೂಡಿ ದ್ವಿತೀಯ ವಿಕೆಟಿಗೆ 147 ರನ್‌ ರಾಶಿ ಹಾಕಿದರು. ಶಾರೂಖ್‌ ಖಾನ್‌ ಮತ್ತೂಮ್ಮೆ ಕಾಡಿದರು. ಅವರ ಅಜೇಯ 79 ರನ್‌ ಕೇವಲ 39 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 6 ಸಿಕ್ಸರ್‌ ಮತ್ತು 7 ಬೌಂಡರಿ. ದಿನೇಶ್‌ ಕಾರ್ತಿಕ್‌ 44 ರನ್‌ ಕೊಡುಗೆ ಸಲ್ಲಿಸಿದರು.

ಸಂಕ್ಷಿಪ್ತ ಸ್ಕೋರ್‌
ತಮಿಳುನಾಡು-8 ವಿಕೆಟಿಗೆ 354 (ಜಗದೀಶನ್‌ 102, ಶಾರೂಖ್‌ ಔಟಾಗದೆ 79, ಸಾಯಿ ಕಿಶೋರ್‌ 61, ದಿನೇಶ್‌ ಕಾರ್ತಿಕ್‌ 44, ದುಬೆ 67ಕ್ಕೆ 3, ಪ್ರಸಿದ್ಧ್ ಕೃಷ್ಣ 57ಕ್ಕೆ 2). ಕರ್ನಾಟಕ-39 ಓವರ್‌ಗಳಲ್ಲಿ 203 (ಶರತ್‌ 43, ಅಭಿನವ್‌ 34, ಸಿದ್ಧಾರ್ಥ್ 29, ದುಬೆ 26, ಕದಂ 24, ಸಿಲಂಬರಸನ್‌ 36ಕ್ಕೆ 4, ವಾಷಿಂಗ್ಟನ್‌ 43ಕ್ಕೆ 3).

Advertisement

ಇದನ್ನೂ ಓದಿ:ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನತ್ತ ದ್ರಾವಿಡ್‌ ವಿಶೇಷ ಗಮನ

ಹಿಮಾಚಲಕ್ಕೆ ನಡುಗಿದ ಯುಪಿ
ದಿನದ ಇನ್ನೊಂದು ಪಂದ್ಯದಲ್ಲಿ ಉತ್ತರ ಪ್ರದೇಶವನ್ನು 5 ವಿಕೆಟ್‌ಗಳಿಂದ ಮಣಿಸಿದ ಹಿಮಾಚಲ ಪ್ರದೇಶ ಸೆಮಿಫೈನಲ್‌ ಪ್ರವೇಶಿಸಿದೆ.

ಉತ್ತರ ಪ್ರದೇಶ 9 ವಿಕೆಟಿಗೆ ಕೇವಲ 207 ರನ್‌ ಗಳಿಸಿದರೆ, ಹಿಮಾಚಲ ಪ್ರದೇಶ 45.3 ಓವರ್‌ಗಳಲ್ಲಿ 5 ವಿಕೆಟಿಗೆ 208 ರನ್‌ ಮಾಡಿತು.

ಚೇಸಿಂಗ್‌ ವೇಳೆ ಆರಂಭಕಾರ ಪ್ರಶಾಂತ್‌ ಚೋಪ್ರಾ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಂಡರು. ನಿಖೀಲ್‌ ಗಂಗಾr 58 ರನ್‌ ಹೊಡೆದರು.

ಯುಪಿ ಪರ ಕೆಳ ಹಂತದ ಆಟಗಾರರಾದ ರಿಂಕು ಸಿಂಗ್‌ (76) ಮತ್ತು ಭುವನೇಶ್ವರ್‌ ಕುಮಾರ್‌ (46) ಸೇರಿಕೊಂಡು ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಉತ್ತರ ಪ್ರದೇಶ-9 ವಿಕೆಟಿಗೆ 207 (ರಿಂಕು ಸಿಂಗ್‌ 76, ಭುವನೇಶ್ವರ್‌ 46, ಆಕಾಶ್‌ದೀಪ್‌ 32, ಗಲೇಟಿಯಾ 19ಕ್ಕೆ 3, ಸಿದ್ಧಾರ್ಥ್ ಶರ್ಮ 27ಕ್ಕೆ 2, ಪಂಕಜ್‌ ಜೈಸ್ವಾಲ್‌ 43ಕ್ಕೆ 2). ಹಿಮಾಚಲ ಪ್ರದೇಶ-45.3 ಓವರ್‌ಗಳಲ್ಲಿ 5 ವಿಕೆಟಿಗೆ 208 (ಪ್ರಶಾಂತ್‌ ಚೋಪ್ರಾ 99, ನಿಖೀಲ್‌ ಗಂಗಾr 58, ಶಿವಂ ಮಾವಿ 34ಕ್ಕೆ 3, ಅಂಕಿತ್‌ ರಜಪೂತ್‌ 52ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next