Advertisement

ವಿವಿ ಸಾಗರದಿಂದ ಜಲಕ್ಷಾಮ ಆತಂಕ ದೂರ

01:35 PM Apr 12, 2022 | Team Udayavani |

ಹಿರಿಯೂರು: ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿರುವ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವ ಹೇಳತೀರದು. ಗಿಡ-ಮರಗಳು ಒಣಗಿ ಹೋಗಿವೆ. ಲಕ್ಷಾಂತರ ಅಡಿಕೆ, ತೆಂಗಿನ ಮರಗಳು ನಾಶವಾಗಿವೆ. ಇಂತಹ ಸಂದರ್ಭದಲ್ಲಿ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಮೈಲುಗಟ್ಟಲೆ ಖಾಸಗಿ ಜಮೀನುಗಳಿಗೆ ನೀರಿಗಾಗಿ ಅಲೆದಾಡುವಂತಹ ಸನ್ನಿವೇಶಗಳನ್ನು ಹಿರಿಯೂರು ತಾಲೂಕು ಕಂಡಿದೆ.

Advertisement

ಕಳೆದೆರಡು ವರ್ಷಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಹಾಗೂ ಹಾಗೂ ಜನರ ಜೀವನಾಡಿ ವಾಣಿವಿಲಾಸ ಸಾಗರದಲ್ಲಿ ಹೆಚ್ಚು ನೀರು ಸಂಗ್ರಹಗೊಂಡಿದೆ. ವಿವಿ ಸಾಗರದಲ್ಲಿ ಸಂಗ್ರಹಗೊಂಡಿರುವ ಭದ್ರಾ ನೀರು ಹಾಗೂ ಮಳೆ ಕಳೆದ ಎರಡು ವರ್ಷಗಳಿಂದ ನೀರಿನ ಅಭಾವವನ್ನು ಕಡಿಮೆ ಮಾಡಿದೆ. ಇದರಿಂದ ರೈತರಲ್ಲಿದ್ದ ಆತಂಕವೂ ದೂರವಾದಂತಾಗಿದೆ. ವಿಶ್ವೇಶ್ವರಯ್ಯ ಜಲನಿಗಮ ಮೂರು ಹಂತಗಳಲ್ಲಿ 90 ದಿನ ನಾಲೆಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ನೀರಿನ ಅಭಾವ ಬಹುತೇಕ ಕಡಿಮೆ ಆಗಿದೆ. ಐಮಂಗಲ ಹೋಬಳಿ, ಜವನಗೊಂಡನಹಳ್ಳಿ ಹೋಬಳಿ, ವಿವಿ ಪುರ ಹೋಬಳಿಗಳ 19 ಗ್ರಾಮಗಳಿಗೆ 21 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ.

ಏಪ್ರಿಲ್‌ ಕೊನೆಯ ವಾರದಲ್ಲಿ ಐಮಂಗಲ ಮತ್ತು ವಿವಿ ಪುರ ಹೋಬಳಿಯ 60 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ವಿವಿ ಸಾಗರದಿಂದ ಪೈಪ್‌ ಲೈನ್‌ ಮೂಲಕ ಕುಡಿಯುವ ನೀರು ಹರಿಸಲು ಗ್ರಾಮೀಣ ಕುಡಿಯುವ ನೀರು ವಿಭಾಗ ಸಿದ್ಧತೆ ನಡೆಸಿದೆ.

ಐಮಂಗಲ ಹೋಬಳಿಯ 38 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ವಿವಿ ಸಾಗರ ಜಲಾಶಯ ಭರ್ತಿಯಾಗಿ ವಿವಿ ಸಾಗರದ ಎಡ ಮತ್ತು ಬಲ ನಾಲೆಗಳಲ್ಲಿ ಬೇಸಿಗೆಯಲ್ಲಿ ನೀರನ್ನು ಹರಿಸುತ್ತಿರುವದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳು ಮೈದುಂಬಿಕೊಂಡಿವೆ. ಇದರಿಂದ ಜಮೀನು, ಜನ- ಜಾನುವಾರುಗಳಿಗೆ ನೀರು ದೊರೆಯವಂತಾಗಿದೆ. ತಾಲೂಕಿನಲ್ಲಿ ಒಟ್ಟು 284 ಗ್ರಾಮಗಳಿದ್ದು, ಪ್ರತಿ ಗ್ರಾಮಗಳಲ್ಲಿ ಎರಡರಿಂದ ಮೂರು ಕೊಳವೆಬಾವಿಗಳು ನೀರು ಪೂರೈಕೆ ಮಾಡುತ್ತಿವೆ.

ಹೊಸಯಳನಾಡು, ಹಿಂಡಸಕಟ್ಟೆ, ವಿವಿಪುರ, ಗೋಗುದ್ದು, ಅಜ್ಜನಹಟ್ಟಿ ಸೇರಿದಂತೆ ಕೆಲಗ್ರಾಮಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಅಂತಹ ಗ್ರಾಮಗಳಲ್ಲಿನ ಕೊಳವೆಬಾವಿಗಳನ್ನು ದುರಸ್ತಿ ಮಾಡಿಸಿ ನೀರು ಒದಗಿಸಲು ಹಾಗೂ ಕೆಲವೆಡೆ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಿ ಶಾಶ್ವತವಾಗಿ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಗಮನಹರಿಸಬೇಕೆಂದು ಸೂಚನೆ ನೀಡಿದ್ದಾರೆ.

Advertisement

ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಜಿಪಂ ಸಿಇಒ ಡಾ| ಕೆ. ನಂದಿನಿದೇವಿ ಕುಡಿಯುವ ನೀರಿನ ಅಭಾವ ಇರುವ ಸ್ಥಳಗಳಿಗೆ ಮತ್ತು ನೀರು ಪೂರೈಕೆ ಯೋಜನೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜವನಗೊಂಡನಹಳ್ಳಿ ಹೋಬಳಿಯಲ್ಲಿ ಗಾಯತ್ರಿ ಜಲಾಶಯವಿರುವುದರಿಂದ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಆದರೆ ಹೋಬಳಿಯಲ್ಲಿ ಬಹು ಗ್ರಾಮದ ಯೋಜನೆಯಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಒಂದೊಮ್ಮೆ ನೀರಿನ ಅಭಾವ ಎದುರಾದಲ್ಲಿ ಅಧಿಕಾರಿಗಳು ಖಾಸಗಿ ಕೊಳವೆಬಾವಿ ಮಾಲೀಕರ ಮನವೊಲಿಸಿ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹಿರಿಯೂರು ತಾಲೂಕಿನ 167 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿದ್ದು ಕುಡಿಯುವ ನೀರು ಒದಗಿಸಲಿವೆ. ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಗೆ ಬಹುಗ್ರಾಮ ನೀರು ಯೋಜನೆ ಜವಾಬ್ದಾರಿ ವಹಿಸಲಾಗಿದೆ. ತಾಲೂಕಿನಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. 284 ಹಳ್ಳಿಗಳ ಪ್ರತಿ ಮನೆಗೆ ನಳಗಳ ಮೂಲಕ ನೀರು ಪೂರೈಕೆ ಮಾಡಲು ಗ್ರಾಮೀಣ ನೀರು ಸರಬರಾಜು ವಿಭಾಗ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. 2021ನೇ ಸಾಲಿನಲ್ಲಿ ನೀರು ಸರಬರಾಜು ಮಾಡಲು ಒಂದೂವರೆ ಕೋಟಿ ರೂ. ವಿನಿಯೋಗಿಸಲಾಗಿದೆ. – ಶಿವರಾಮ್‌, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿ

-ಶಿವಶಂಕರ ಮಠದ್‌

Advertisement

Udayavani is now on Telegram. Click here to join our channel and stay updated with the latest news.

Next