Advertisement

ಕುಡಿಯುವ ನೀರಿನ ಪೂರೈಕೆಗೆ ಇರಲಿ ಪ್ರಥಮ ಆದ್ಯತೆ

12:02 AM May 01, 2023 | Team Udayavani |

ಬೇಸಗೆ ಋತುವಿನಲ್ಲಿ ಸುರಿಯುವ ಪೂರ್ವ ಮುಂಗಾರು ಮಳೆ ಪ್ರಸಕ್ತ ವರ್ಷ ರಾಜ್ಯದಲ್ಲಿ ತೀರಾ ಅಲ್ಪ ಪ್ರಮಾಣದಲ್ಲಾಗಿದ್ದು ಜಲಾಶಯಗಳಲ್ಲಿನ ನೀರಿನ ಸಂಗ್ರಹ ತೀವ್ರ ಕುಸಿತ ಕಂಡಿದೆ. ರಾಜ್ಯದ ಹಲವೆಡೆ ನೀರಿನ ಅಭಾವ ತೀವ್ರಗೊಂಡಿದ್ದು ಕುಡಿ ಯುವ ನೀರಿಗಾಗಿ ಜನರು ಅಲೆದಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇದೇ ವೇಳೆ ಬೇಸಗೆ ಮಳೆಯನ್ನು ಆಧರಿಸಿ ನಡೆಸಲಾಗುವ ಕೃಷಿ ಚಟುವಟಿಕೆಗಳು ಇನ್ನೂ ಚುರುಕು ಪಡೆದಿಲ್ಲವಾಗಿದ್ದು ಮುಂದಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೇಸಗೆ ಮಳೆ ಸುರಿಯದೇ ಹೋದಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕಲಿದ್ದಾರೆ. ಅಷ್ಟು ಮಾತ್ರವಲ್ಲದೆ ಮುಂದಿನ ಮುಂಗಾರು ಅವಧಿಯ ಕೃಷಿ ಚಟುವಟಿಕೆಗಳ ಮೇಲೂ ಇದು ಪ್ರತಿಕೂಲ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇದೆ.

Advertisement

ಪ್ರತೀ ಬೇಸಗೆಯಲ್ಲಿ ಮಳೆಯಾಗುವುದು ಸಾಮಾನ್ಯ. ಸುಡುಬಿಸಿಲಿನ ಕಾರಣ ದಿಂದಾಗಿ ಮೋಡಗಳು ಕಟ್ಟಿ ಮಿಂಚು-ಗುಡುಗುಗಳ ಆರ್ಭಟದೊಂದಿಗೆ ಒಂದಿಷ್ಟು ಮಳೆ ಸುರಿಯುವುದು ವಾಡಿಕೆ. ಇದರ ಜತೆಯಲ್ಲಿ ಅರಬಿ ಮತ್ತು ಬಂಗಾಲಕೊಲ್ಲಿ ಸಮುದ್ರಗಳಲ್ಲಿ ಕಾಣಿಸಿಕೊಳ್ಳುವ ಮೇಲ್ಮೆ„ ಸುಳಿಗಾಳಿ, ವಾಯುಭಾರ ಒತ್ತಡ, ವಾಯುಭಾರ ಕುಸಿತ, ಚಂಡಮಾರುತಗಳ ಪ್ರಭಾವದಿಂದಾಗಿ ಒಂದೆರಡು ದಿನಗಳ ಕಾಲ ಮಳೆಯಾಗುತ್ತದೆ. ಈ ಮಳೆ ಬೇಸಗೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ನೀರಿನ ಕೊರತೆಯನ್ನು ನೀಗಿಸುವುದರ ಜತೆಯಲ್ಲಿ ಬತ್ತಿ ಹೋಗಿರುವ ನೀರಿನ ಮೂಲಗಳಾದ ಕೊಳ, ಕೆರೆ, ತೊರೆ, ಹೊಳೆ, ನದಿಗಳಲ್ಲಿ ಒಂದಿಷ್ಟು ನೀರು ಹರಿದು ಹೋಗುವಂತೆ ಮಾಡಿ ಇವುಗಳಿಗೆ ಮರುಜೀವ ತುಂಬುತ್ತದೆ. ಇದರಿಂದ ಸಹಜ ವಾಗಿಯೇ ಅಣೆಕಟ್ಟುಗಳು ಮತ್ತು ಜಲಾಶಯಗಳಲ್ಲಿ ನೀರು ತುಂಬಿ ನೀರಿನ ಸಮಸ್ಯೆ ಯನ್ನು ತಾತ್ಕಾಲಿಕವಾಗಿ ಶಮನ ಮಾಡುತ್ತದೆ. ಆದರೆ ಈ ಬಾರಿ ಪೂರ್ವ ಮುಂಗಾರು ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿಲ್ಲ.

ಕಳೆದ ವರ್ಷ ಮುಂಗಾರು ಮತ್ತು ಈಶಾನ್ಯ ಮಾರುತಗಳು ನಿಗದಿತ ವೇಳೆ ಯಲ್ಲಿಯೇ ವಾಪಸಾದ ಪರಿಣಾಮ ದೇಶದಲ್ಲಿ ಮಳೆಗಾಲ ಬಲುಬೇಗ ಅಂತ್ಯ ಗೊಂಡಿತ್ತು. ಹೀಗಾಗಿ ನೀರಿನ ಮೂಲಗಳು ಮತ್ತು ಜಲಾಶಯಗಳಲ್ಲಿ ನೀರಿನ ಹರಿವು ಮತ್ತು ಸಂಗ್ರಹ ಪ್ರಮಾಣ ಸಾಧಾರಣವಾಗಿಯೇ ಇತ್ತು. ಇದೇ ವೇಳೆ ಈ ವರ್ಷ ಚಳಿಗಾಲ ಅಂತ್ಯಗೊಳ್ಳುತ್ತಿದ್ದಂತೆಯೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದರಿಂದಾಗಿ ನೀರಿನ ಮೂಲಗಳೆಲ್ಲ ಬತ್ತಿ ಹೋಗಿ ಜಲಾಶಯಗಳು ಮತ್ತು ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹ ತೀವ್ರ ಕುಸಿತ ಕಾಣುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷ ದಕ್ಷಿಣ ಭಾರತದ ಜಲಾಶಯಗಳಲ್ಲಿನ ನೀರಿನ ಪ್ರಮಾಣ ಶೇ.8 ಇಳಿಕೆ ಕಂಡಿದೆ.

ಕಳೆದ ಮೂರು ದಿನಗಳಿಂದೀಚೆಗೆ ರಾಜ್ಯದೆಲ್ಲೆಡೆ ಅದರಲ್ಲೂ ಒಳನಾಡಿನಾದ್ಯಂತ ಮತ್ತು ಕರಾವಳಿಯ ಕೆಲವೆಡೆ ಮಳೆ ಸುರಿಯುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಕೊಂಚ ಕಡಿಮೆಯಾಗಿದ್ದು, ಬತ್ತಿಹೋಗಿದ್ದ ನೀರಿನ ಮೂಲಗಳಲ್ಲಿ ಹರಿವು ಕಾಣಲಾರಂಭಿಸಿದೆ. ಆದರೆ ಇನ್ನೂ ಒಂದು ತಿಂಗಳು ಬೇಸಗೆ ಋತು ಇರು ವುದರಿಂದ ಸದ್ಯ ಸುರಿದಿರುವ ಮಳೆ ಈಗ ಸೃಷ್ಟಿಯಾಗಿರುವ ನೀರಿನ ಅಭಾವವನ್ನು ಸಂಪೂರ್ಣವಾಗಿ ನೀಗಿಸದು. ಹವಾಮಾನ ಇಲಾಖೆಯ ಪ್ರಕಾರ ಸಮುದ್ರದಲ್ಲಿ ಮುಂದಿನ 10 ದಿನಗಳ ಅವಧಿಯಲ್ಲಿ ಚಂಡಮಾರುತದ ಸಾಧ್ಯತೆ ತೀರಾ ವಿರಳ ವಾಗಿರುವುದರಿಂದ ಮಳೆಯ ಕೊರತೆ ಮುಂದುವರಿಯಲಿದೆ. ಆದರೆ ಮೇ ಕೊನೆ ವಾರದಲ್ಲಿ ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಇದು ಮುಂಗಾರು ಮಳೆಗೆ ಪೂರಕವಾಗಲಿದೆ ಎಂದು ತಿಳಿಸಿದೆ. ಒಂದು ವೇಳೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೇ ಇದ್ದಲ್ಲಿ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸರಕಾರ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಚುನಾವಣ ಭರಾಟೆಯ ನಡುವೆಯೂ ಕೃಷಿ, ನೀರಾವರಿ ಇಲಾಖೆ ಹಾಗೂ ಸ್ಥಳೀಯಾಡಳಿತಗ ಳು ಜನರಿಗೆ ವ್ಯವಸ್ಥಿತವಾಗಿ ಕುಡಿಯುವ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next