Advertisement

ಧರ್ಮಸ್ಥಳ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರು ಪೂರೈಕೆ

08:56 PM Nov 09, 2019 | Lakshmi GovindaRaju |

ಅರಸೀಕೆರೆ: ತಾಲೂಕಿನಲ್ಲಿ ಫ್ಲೋರೈಡ್‌ಯುಕ್ತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶುದ್ಧಗಂಗಾ ನೀರಿನ ಘಟಕಗಳನ್ನು ಸ್ಥಾಪಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶುದ್ಧಗಂಗಾ ವಿಭಾಗದ ಯೋಜನಾಧಿಕಾರಿ ಪ್ರವೀಣ್‌ ತಿಳಿಸಿದರು. ನಗರದ ಪಿ.ಪಿ.ವೃತ್ತದ ಬಳಿಯಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶುದ್ಧಗಂಗಾ ಘಟಕದ ಪ್ರೇರಕರ ಅರ್ಧ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಸಕಾಲಕ್ಕೆ ಮಳೆಯಾಗದೇ ಅಂತರ್ಜಲ ಕುಸಿತ: ಪ್ರಕೃತಿ ವೈಪರೀತ್ಯದ ಪರಿಣಾಮ ಕಾಲ ಕಾಲಕ್ಕೆ ಉತ್ತಮ ಮಳೆಯಾಗದೇ ಅಂತರ್ಜಲ ಬತ್ತಿರುವ ಕಾರಣ ರಾಜ್ಯದ ಅನೇಕ ಭಾಗಗಳ ಕೊಳವೆ ಬಾವಿಗಳಲ್ಲಿ ಜನ, ಜಾನುವಾರುಗಳು ಕುಡಿಯಲು ಯೋಗ್ಯವಲ್ಲದ ಫ್ಲೋರೈಡ್‌ ಯುಕ್ತ ನೀರು ಬರುತ್ತಿದೆ ಎಂದರು.

ಫ್ಲೋರೈಡ್‌ ಯುಕ್ತ ನೀರನ್ನು ಕುಡಿದ ಅನೇಕ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿರುವ ಕಾರಣ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯ ಶುದ್ಧಗಂಗಾ ಘಟಕಗಳನ್ನು ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪನೆ ಮಾಡುವ ಮೂಲಕ ಅತ್ಯಂತ ಕಡಿಮೆ ದರದಲ್ಲಿ 1 ಲೀ.ಗೆ 10 ಪೈಸೆಯಂತೆ ಪೂರೈಕೆ ಮಾಡಲಾಗುತ್ತಿದೆ. ರಾಜ್ಯದ 17 ಜಿಲ್ಲೆಯ 55 ತಾಲೂಕಿನಲ್ಲಿ 284 ಇಂತಹ ಶುದ್ಧಗಂಗಾ ನೀರಿನ ಘಟಕಗಳು ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ವಿನಾಯಕ ಪೈ ಅವರು ಮಾತನಾಡಿ, ನಮ್ಮ ಸೇವಾ ಸಂಸ್ಥೆಯ ಸ್ಥಾಪನೆಯನ್ನು ಮಾಡಿರುವ ಶುದ್ಧಗಂಗಾ ನೀರಿನ ಘಟಕ ಅತ್ಯಂತ ಫ‌ಲಪ್ರದವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾನ್ಯ ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಮ್ಮ, ಕೃಷಿ ವಿಭಾಗದ ಮೇಲ್ವಿಚಾರಕರಾದ ಅನಿಲ್‌ ಕುಮಾರ್‌, ಸ್ವಸಹಾಯ ಸಂಘಗಳ ಮೇಲ್ವಿಚಾರಕರಾದ ಯಶೋಧಾ, ಶುದ್ಧಗಂಗಾ ಘಟಕದ ಪ್ರೇರಕರು ಮತ್ತು ಸಿಬ್ಬಂದಿ ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಗ್ರಾಹಕರೇ ದೇವರು: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ವಿನಾಯಕ ಪೈ ಅವರು ಮಾತನಾಡಿ, ಗ್ರಾಹಕರೇ ನಮ್ಮ ದೇವರು ಎನ್ನುವ ಉದಾತ್ತ ಚಿಂತನೆಯಲ್ಲಿ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಪ್ರೇರಕರು ಬೆಳೆಸಿಕೊಳ್ಳುವ ಮೂಲಕ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಗ್ರಾಹಕರೊಂದಿಗೆ ಹೇಗೆ ಪ್ರೇರಕರು ಮತ್ತು ಸಿಬ್ಬಂದಿ ನಡೆದುಕೊಳ್ಳಬೇಕು ಎಂದರು. ಘಟಕದ ಯಂತ್ರೋಪಕರಣಗಳ ನಿರ್ವಹಣೆ ಬಗ್ಗೆ ಸಭೆಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದರು. ಉತ್ತಮ ನಿರ್ವಹಣೆ ಮಾಡುವ ಘಟಕ ಗಳಿಗೆ ಎ ಮತ್ತು ಬಿ ಎಂದು ಎರಡು ಶ್ರೇಣಿಯಲ್ಲಿ ಗುರುತಿಸಿ ಪ್ರೇರಕರಿಗೆ ಮತ್ತು ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಹೇಳಿದರು.

Advertisement

ಪ್ರತಿಯೊಂದು ಶುದ್ಧಗಂಗಾ ನೀರಿನ ಘಟಕಗಳ ನಿರ್ವಹಣೆ ಮಾಡಲು ಹಾಗೂ ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿ ಕಾಪಾಡಲು ಪ್ರೇರಕರು ಮತ್ತು ಮೇಲ್ವಿಚಾರಕರನ್ನು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅವರೆಲ್ಲರಿಗೂ ಉತ್ತೇಜನನ ನೀಡುವ ನಿಟ್ಟಿನಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಗುತ್ತಿದೆ.
-ಪ್ರವೀಣ್‌, ಧರ್ಮಸ್ಥಳ ಸಂಸ್ಥೆ ಶುದ್ಧಗಂಗಾ ವಿಭಾಗ ಯೋಜನಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next