Advertisement

Temperature; ಬಿಸಿಲಿನ ಧಗೆ: ರಾಜ್ಯದಲ್ಲಿ ಅತಿಸಾರ ಭೇದಿ ಕೇಸ್‌ ಏರಿಕೆ

11:34 PM Mar 24, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಬಿಸಿ ಗಾಳಿಯಿಂದ ನಿರ್ಜಲೀಕರಣ, ಅತಿಸಾರ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಅತಿಸಾರಕ್ಕೆ ಸಂಬಂಧಿಸಿದಂತೆ 30,000 ಅಧಿಕ ಪ್ರಕರಣಗಳ ವರದಿಯಾಗಿದೆ.

Advertisement

ರಾಜ್ಯದಲ್ಲಿ ಇತ್ತೀಚಿಗೆ ಏರುತ್ತಿರುವ ತಾಪಮಾನದಿಂದಾಗಿ, ಮಕ್ಕಳ, ಹಿರಿಯರು ಎಲ್ಲರೂ ಅತಿಸಾರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ವಾಸ್ತವವಾಗಿ, ಬೇಸಗೆಯಲ್ಲಿ ಆಹಾರವು ಬೇಗನೆ ಹಾಳಾಗುತ್ತದೆ. ಇದನ್ನು ಜನರು ಅದನ್ನು ನಿರ್ಲಕ್ಷಿಸಿ ಅದನ್ನೇ (ಹಾಳಾದ ಆಹಾರ) ಸೇವಿಸುತ್ತಿರುವುದು ಹಾಗೂ ಅಸುರಕ್ಷಿತ ನೀರಿನ ಸೇವನೆಯಿಂದ ಅಪಾಯಕಾರಿ ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಅತಿಸಾರ ಭೇದಿಗೆ ಕಾರಣವಾಗುತ್ತಿದೆ.
ಅತಿಸಾರ ಹೆಚ್ಚಾದಾಗ ದೇಹವು ನೀರು ಮತ್ತು ಲವಣಗಳು ವೇಗವಾಗಿ ಕಳೆದುಕೊಳ್ಳುತ್ತದೆ.ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ನಿರ್ಜಲೀಕರಣ ತೀವ್ರಗೊಂಡಾಗ ಸಾವು ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸುವುದು ಆವಶ್ಯಕ.

ರಾಜ್ಯದಲ್ಲಿ 2024ರ ಜನವರಿಯಿಂದ 17ರವರೆಗೆ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದುವರೆಗೆ 30,577 ಮಂದಿ ಅತಿಸಾರ ರೋಗಕ್ಕೆ ತುತ್ತಾಗಿದ್ದಾರೆ. ವಾರಕ್ಕೆ ಸರಾಸರಿ ಏನಿಲ್ಲವೆಂದರೂ 4,000 ಪ್ರಕರಣಗಳು ವರದಿಯಾಗುತ್ತಿವೆ. ಫೆಬ್ರವರಿ ಅಂತ್ಯಕ್ಕೆ 13 ಸಾವಿರವಿದ್ದ ಪ್ರಕರಣಗಳು ಇದೀಗ 30 ಸಾವಿರಕ್ಕೆ ಏರಿಕೆಯಾಗಿದೆ. ಮಾರ್ಚ್‌ ತಿಂಗಳ ಅಂತ್ಯಕ್ಕೆ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಇನ್ನು ಸರಕಾರಿ ಆಸ್ಪತ್ರೆಗಳನ್ನು ಹೊರತು ಖಾಸಗಿ ಆಸ್ಪತ್ರೆಯಲ್ಲಿ ಪ್ರತಿನಿತ್ಯ 5ರಿಂದ 10 ಅತಿಸಾರ ಪ್ರಕರಣಗಳು ವರದಿಯಾಗುತ್ತಿದೆ.

ಅತಿಸಾರದ ಲಕ್ಷಣಗಳಾವುವು?
ಅತಿಸಾರ ಸಮಸ್ಯೆ ಎದುರಾದಾಗ ಬಾಯಿ ಒಣಗುವುದು, ಕಣ್ಣುಗಳಲ್ಲಿ ಆಯಾಸ ಕಂಡು ಬರುವುದು, ನಿಶ್ಯಕ್ತಿ, ಕಡಿಮೆ ಮೂತ್ರ ವಿಸರ್ಜನೆ, ನಿರಾಸಕ್ತಿ, ನಿರಂತರವಾದ ಮಲವಿಸರ್ಜನೆ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಹಸಿವಾಗದೆ ಇರುವುದು, ನಿರ್ಜಲೀಕರಣ, ತೂಕ ಇಳಿಯುವುದು, ತೀವ್ರ ಜ್ವರ, ಹೊಟ್ಟ ಉಬ್ಬರಿಸುವ ಲಕ್ಷಣಗಳಿರುತ್ತದೆ.

ಅತಿಸಾರ ಕಡಿಮೆಗೊಳಿಸಲು ಕ್ರಮ
-ನೈಸರ್ಗಿಕ ಹಣ್ಣಿನ ರಸ ಹಾಗೂ ದ್ರವ ಆಹಾರ ಸೇವನೆ
-ಫೈಬರ್‌ ಭರಿತ ತರಕಾರಿಗಳ ಸೇವನೆ
-ಕೈ ಸ್ವಚ್ಛತೆಗೆ ಆದ್ಯತೆ
– ಮನೆಯ ಆಹಾರಕ್ಕೆ ಮೊದಲ ಆದ್ಯತೆ
-ಎಳನೀರು, ನಿಂಬೆ ನೀರಿನ ಸೇವನೆ
-ಹಳಸಿದ ಆಹಾರ ಸೇವಿಸದಿರುವುದು
– ಕೃತಕ ಸಿಹಿ ಆಹಾರ ಪದಾರ್ಥ ಸೇವನೆಯಿಂದ ದೂರವಿರಿ

Advertisement

ಮುನ್ನೆಚ್ಚರಿಕೆ ಅಗತ್ಯ
ಅತಿಸಾರವು 24 ಗಂಟೆಗಳ ಒಳಗೆ ಬಂದು ಹೋಗಬಹುದು. ಒಂದು ವೇಳೆ 2-3 ದಿನಗಳವರೆಗೆ ಸಮಸ್ಯೆಯನ್ನು ಹೊಂದಿದ್ದರೆ ತಕ್ಷಣ ವೈದ್ಯರ ಸಂಪರ್ಕಬೇಕು. ಮತ್ತೆ ಮತ್ತೆ ಬೇಯಿಸಿದ ಆಹಾರ, ಬೇಕರಿ ತಿಂಡಿಗಳು, ಚಾಟ್ಸ್‌, ಸಿಹಿ ಆಹಾರ, ಐಸ್ಕ್ರೀಂ, ಕೃತಕ ತಂಪುಪಾನೀಯ ಹಾಗೂ ಅಸುರಕ್ಷಿತ ನೀರು ಸೇವನೆಯಿಂದ ದೂರ ಇರಬೇಕು. ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಕೆರಳಿಸುವ ಆಹಾರಗಳ ಸೇವನೆಯಿಂದ ದೂರವಿರಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳ ಸಮಸ್ಯೆ ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಕಾಡುತ್ತದೆ. ತಿನ್ನುವ ಹಾಗೂ ಕುಡಿಯವ ನೀರಿನಲ್ಲಿ ಸ್ವಲ್ಪ ತೊಂದರೆಯಾದರೆ, ಅತಿಸಾರ ಕಾಣಿಸಿಕೊಳ್ಳುತ್ತದೆ. ಅತಿಸಾರದಿಂದ, ದೇಹದಲ್ಲಿ ನೀರಿನ ತ್ವರಿತ ನಷ್ಟವಾಗುತ್ತದೆ. ತುರ್ತು ಚಿಕಿತ್ಸೆ ಪಡೆಯದೇ ಹೋದರೆ ಜೀವಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
– ಡಾ. ಚೇತನ್‌ ಗಿಣಿಗೇರಿ ಪೀಡಿಯಾಟಿಕ್ಸ್‌ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next