Advertisement

ಮನೆ ಮಾಲೀಕನ ಪತ್ನಿ ಹತ್ಯೆಗೈದು ನೇಣಿಗೆ

12:23 AM Feb 12, 2020 | Lakshmi GovindaRaj |

ಬೆಂಗಳೂರು: ಮನೆ ಮಾಲೀಕನ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಬಾಡಿಗೆದಾರ ನೊಬ್ಬ ಆಕೆಯನ್ನು ಕೊಲೆಗೈದು ಪತಿ ಹಾಗೂ ಪುತ್ರಿಯ ಮೇಲೆ ಹಲ್ಲೆ ನಡೆಸಿ, ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ. ರಾಜಗೋಪಾಲನಗರದ ಹೆಗ್ಗನಹಳ್ಳಿ ಎಂಟನೇ ಕ್ರಾಸ್‌ನಲ್ಲಿ ಮಂಗಳವಾರ ಬೆಳಗ್ಗೆ ಕೃತ್ಯ ನಡೆದಿದ್ದು , ಹೆಗ್ಗನಹಳ್ಳಿ 8ನೇ ಕ್ರಾಸ್‌ ನಿವಾಸಿ ಲಕ್ಷ್ಮೀ(34) ಮೃತ ಮಹಿಳೆ. ಪಾರ್ಶ್ವವಾಯು ಪೀಡಿತ ಪತಿ ಶಿವರಾಜ್‌(44) ಮತ್ತು ಪುತ್ರಿ ಚೈತ್ರಾ(17) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ರಂಗಧಾಮಯ್ಯ (37) ಮೃತ ಆರೋಪಿ. ಲಕ್ಷ್ಮೀ ಹಾಗೂ ಆರೋಪಿ ನಡುವೆ ಅಕ್ರಮ ಸಂಬಂಧವಿದ್ದು, ಅದೇ ಕಾರಣಕ್ಕೆ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶಿವರಾಜ್‌ ಮತ್ತು ಲಕ್ಷ್ಮೀ ದಂಪತಿ ಪುತ್ರಿ ಚೈತ್ರಾ ಮತ್ತು ಪುತ್ರನ ಜತೆ ಹೆಗ್ಗನಹಳ್ಳಿಯ ಎಂಟನೇ ಕ್ರಾಸ್‌ನಲ್ಲಿ ವಾಸವಾಗಿದ್ದು, ಎರಡು ಅಂತಸ್ತಿನ ಸ್ವಂತ ಕಟ್ಟಡ ಹೊಂದಿದ್ದಾರೆ. ಪುತ್ರ ಹಾಸ್ಟೆಲ್‌ನಲ್ಲಿ ಓದುತ್ತಿದ್ದಾನೆ. ಪುತ್ರಿ ಖಾಸಗಿ ಕಾಲೇಜಿನಲ್ಲಿ ಪಿಯು ಮಾಡುತ್ತಿದ್ದಾಳೆ.

ಲಕ್ಷ್ಮೀ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡು ತ್ತಿದ್ದು, ಪಾರ್ಶ್ವವಾಯು ಪೀಡಿತರಾಗಿರುವ ಶಿವರಾಜ್‌ ತಮ್ಮ ಕಟ್ಟಡದಲ್ಲಿರುವ ಸಣ್ಣ ಮಳಿಗೆಯಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ. ಶಿವರಾಜ್‌ ದಂಪತಿ ಕಟ್ಟಡದ ಒಂದನೇ ಮಹಡಿ ಯಲ್ಲಿ ವಾಸವಾಗಿದ್ದರೆ, ಎರಡನೇ ಅಂತಸ್ತಿನ ಎರಡು ಬಾಡಿಗೆ ಮನೆಗಳ ಪೈಕಿ ಒಂದರಲ್ಲಿ ಬಿಹಾರ ಮೂಲದ ಯುವಕರು ಮತ್ತೂಂದು ಮನೆಯಲ್ಲಿ ರಂಗಧಾಮಯ್ಯ ವಾಸವಾಗಿದ್ದ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಂಗಧಾಮಯ್ಯನ ಪತ್ನಿ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಆರೋಪಿ ಮನೆ ಮಾಲೀಕರ ಕುಟುಂಬದ ಜತೆ ಆತ್ಮೀಯತೆ ಹೊಂದಿದ್ದ. ಅಲ್ಲದೆ, ಲಕ್ಷ್ಮೀ ಅವರು ಆರೋಪಿ ಯ ಬಟ್ಟೆ ಒಗೆಯುತ್ತಿದ್ದರು, ಊಟ ಸಹ ನೀಡುತ್ತಿದ್ದರು. ಈ ಮಧ್ಯೆ ರಂಗಧಾಮಯ್ಯ ಮತ್ತು ಲಕ್ಷ್ಮೀ ನಡುವೆ ಅಕ್ರಮ ಸಂಬಂಧ ಇದ್ದು, ಆರೋಪಿ ಪದೇ ಪದೆ ಮನೆಗೆ ಬಂದು ಹೋಗುತ್ತಿದ್ದ. ಈ ವಿಚಾರ ತಿಳಿದ ಪತಿ ಶಿವರಾಜ್‌ ಲಕ್ಷ್ಮೀಯನ್ನು ಪ್ರಶ್ನಿಸಿ, ಸಾಕಷ್ಟು ಬಾರಿ ನಿಂದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಹತ್ಯೆ: ಮಂಗಳವಾರ ಮುಂಜಾನೆ ಆರು ಗಂಟೆಗೆ ಎದ್ದ ಲಕ್ಷ್ಮೀ ಹಾಲು ತಂದು ಮನೆಯಲ್ಲಿ ಇಟ್ಟಿದ್ದರು. ಪತಿ ಮತ್ತು ಪುತ್ರಿ ಇನ್ನು ಮಲಗಿದ್ದರು. ಆರೂವರೆ ಸುಮಾರಿಗೆ ಮನೆಗೆ ಬಂದ ಆರೋಪಿ ರಂಗಧಾಮಯ್ಯ ಏಕಾಏಕಿ ಚಾಕುವಿನಿಂದ ಲಕ್ಷ್ಮೀ ಜತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಎಡ ಕಿವಿಗೆ ಬಲವಾಗಿ ಹೊಡೆದರಿಂದ ಕಿವಿಯಲ್ಲಿ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Advertisement

ಆಕೆಯ ಚೀರಾಟ ಕೇಳಿದ ಪತಿ ಶಿವರಾಜ್‌ ಮತ್ತು ಪುತ್ರಿ ಚೈತ್ರಾ ಕೊಣೆಯಿಂದ ಹೊರಬಂದು ಆರೋಪಿಯನ್ನು ತಡೆಯಲು ಯತ್ನಿಸಿದ್ದಾರೆ. ಆಗ ಚೈತ್ರಾಳ ತಲೆಗೆ ಹೊಡೆದು, ಗೋಡೆಗೆ ಗುದ್ದಿದ್ದಾನೆ. ಆಕೆಯೂ ಪ್ರಜ್ಞೆ ತಪ್ಪಿದ್ದಾಳೆ. ಇನ್ನು ಶಿವರಾಜ್‌ ಅವರ ಕುತ್ತಿಗೆಗೆ 2-3 ಬಾರಿ ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿ, ಅವರು ಕೆಳಗೆ ಬಿದ್ದರಿಂದ ಸ್ಥಳದಿಂದ ಆತ ಪರಾರಿಯಾಗಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.

ಸಹೋದ್ಯೋಗಿಯಿಂದ ಘಟನೆ ಬೆಳಕಿಗೆ: ಬೆಳಗ್ಗೆ ಸಹೋದ್ಯೋಗಿಯೊಬ್ಬರು ಲಕ್ಷ್ಮೀಗೆ ಹತ್ತಾರು ಬಾರಿ ಕರೆ ಮಾಡಿದ್ದಾರೆ. ಪ್ರತಿಕ್ರಿಯೆ ನೀಡದೇ ಇದ್ದ ಕಾರಣ ನೇರವಾಗಿ 11 ಗಂಟೆ ಸುಮಾರಿಗೆ ಮನೆ ಬಳಿ ಬಂದು ನೋಡಿದಾಗ ಲಕ್ಷ್ಮೀ, ಶಿವರಾಜ್‌ ಮತ್ತು ದಂಪತಿ ಪುತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದರಿಂದ ಗಾಬರಿಗೊಂಡು ಜೋರಾಗಿ ಕೂಗಿಕೊಂಡಿದ್ದಾರೆ. ಬಳಿಕ 11.15ರ ಸುಮಾರಿಗೆ ಸ್ಥಳೀಯರು ಪೊಲೀಸ್‌ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.

ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಶಿವರಾಜ್‌ ಮತ್ತು ಪುತ್ರಿ ಚೈತ್ರಾರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಇಬ್ಬರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಉತ್ತರ ವಿಭಾಗ ಡಿಸಿಪಿ ಎನ್‌.ಶಶಿಕುಮಾರ್‌, ಎಸಿಪಿ ವಿ.ಧನಂಜಯ್‌ ಭೇಟಿ ನೀಡಿ ಮಾಹಿತಿ ಸಂಗ್ರಹಸಿದರು.

ಪತಿ, ಪುತ್ರಿಯಿಂದ ಬುದ್ಧಿವಾದ: ರಂಗಧಾಮಯ್ಯ ಮತ್ತು ಪತ್ನಿ ನಡುವಿನ ಅಕ್ರಮ ಸಂಬಂಧ ಮಾಹಿತಿ ತಿಳಿದ ಪತಿ ಶಿವರಾಜ್‌ ಮತ್ತು ಪುತ್ರಿ ಚೈತ್ರಾ, ಲಕ್ಷ್ಮೀಗೆ ಬುದ್ಧಿವಾದ ಹೇಳಿದ್ದಾರೆ. ಆತನಿಂದ ದೂರ ಇರುವಂತೆ ಮನವಿ ಮಾಡಿದ್ದಾರೆ. ಆದರೆ, ಅದರಿಂದ ಲಕ್ಷ್ಮೀ ಬೇಸರಗೊಂಡಿದ್ದರು.

ಲಕ್ಷ್ಮೀ ಅವರು ರಂಗಧಾಮಯ್ಯನಿಗೆ ಪತಿ ಮತ್ತು ಪುತ್ರಿಯ ಬುದ್ಧಿವಾದದ ಬಗ್ಗೆ ಹೇಳಿರುವ ಸಾಧ್ಯತೆಯಿದೆ. ಅಲ್ಲದೆ, ಫೆ.10ರಂದು ತಡರಾತ್ರಿ 12 ಗಂಟೆಗೆ ಲಕ್ಷ್ಮೀ ಮನೆಗೆ ಬಂದಿದ್ದ ರಂಗಧಾಮಯ್ಯ ಮುಂಜಾನೆ ನಾಲ್ಕು ಗಂಟೆವರೆಗೆ ಅಲ್ಲಿಯೇ ಕಾಲ ಕಳೆದಿದ್ದಾನೆ. ಬಳಿಕ ತಮ್ಮ ಮನೆಗೆ ಹೋಗಿ ಆರೂವರೆ ವೇಳೆಗೆ ಮತ್ತೆ ಮನೆಗೆ ಬಂದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next