ಚಿತ್ರದುರ್ಗ: ಸುಗ್ಗಿ ಕಾಲದಲ್ಲಿ ಬಹುತೇಕ ರೈತರು ರಸ್ತೆಗಳಲ್ಲೇ ಒಕ್ಕಲು ಮಾಡುವ ದೃಶ್ಯಗಳು ಸಾಮಾನ್ಯವಾಗಿರುತ್ತವೆ. ಹೊಸದುರ್ಗ ತಾಲೂಕು ಕಂಚಿಪುರ ಬಳಿ ರೈತರೊಬ್ಬರು ರಸ್ತೆಗೆ ರಾಗಿ ಹುಲ್ಲು ಹಾಕಿ ಒಕ್ಕಲು ಮಾಡುತ್ತಿದ್ದರು. ಈ ವೇಳೆ ಆ ರಸ್ತೆಯಲ್ಲಿ ಬಂದ ಓಮ್ನಿ ವಾಹನದ ಸೈಲೆನ್ಸರ್ ಗೆ ಹುಲ್ಲು ಸಿಕ್ಕಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ತಗುಲಿದ ತಕ್ಷಣ ಇಡೀ ಓಮ್ನಿ ಕಾರು ಧಗಧಗಿಸಿದೆ. ಜತೆಗೆ ಸ್ಥಳದಲ್ಲಿದ್ದ ಹುಲ್ಲು ಹಾಗೂ ಕಾಳು ಕೂಡಾ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ.
ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಗಿ, ನವಣೆ ಸೇರಿದಂತೆ ಅನೇಕ ಧಾನ್ಯಗಳನ್ನು ಹಿಂದೆ ಜಮೀನು ಅಥವಾ ಊರಿನ ಪಕ್ಕದಲ್ಲಿ ಕಣ ಮಾಡಿ ಹುಲ್ಲಿನಿಂದ ಬೇರ್ಪಡಿಸಿ ಕಾಳು ಮನೆಗೆ ತರಲಾಗುತ್ತಿತ್ತು. ಆದರೆ, ಈಗ ಎಲ್ಲವೂ ರಸ್ತೆಯಲ್ಲೇ ಆಗುತ್ತಿರುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ರಸ್ತೆಯಲ್ಲಿ ವಾಹನಗಳ ಕೆಳಗೆ ಹುಲ್ಲು ನುರಿಸುವುದರಿಂದ ಕಾಳು ಮಲಿನವಾಗುವುದು ಒಂದು ಕಡೆಯಾದರೆ, ಇದರಿಂದ ವಾಹನಗಳಿಗೆ ತೊಂದರೆಯೂ ಇದೆ. ಈ ಬಗ್ಗೆ ರೈತರು ಎಚ್ಚೆತ್ತು ಕೊಳ್ಳಬೇಕಿದೆ.