Advertisement

ಉದ್ಘರ್ಷ ಟ್ರೇಲರ್‌ಗೆ ಸುದೀಪ್‌ ಧ್ವನಿ

05:53 AM Feb 06, 2019 | Team Udayavani |

ಸುನೀಲ್‌ಕುಮಾರ್‌ ದೇಸಾಯಿ ನಿರ್ದೇಶನದ “ಉದ್ಘರ್ಷ’ ಮತ್ತೂಂದು ಸುದ್ದಿ ಮಾಡಿದೆ. ಈಗಾಗಲೇ ಹೊಸ ನಿರೀಕ್ಷೆ ಹುಟ್ಟಿಸಿರುವ “ಉದ್ಘರ್ಷ’ ಚಿತ್ರಕ್ಕೆ ಈಗ ನಟ ಸುದೀಪ್‌ ಸಾಥ್‌ ನೀಡಿದ್ದಾರೆ. ಹೌದು, ಸುದೀಪ್‌ ಈ ಚಿತ್ರದ ಟ್ರೇಲರ್‌ಗೆ ಸದ್ದಿಲ್ಲದೆಯೇ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸುನೀಲ್‌ಕುಮಾರ್‌ ದೇಸಾಯಿ ಅವರು “ಉದ್ಘರ್ಷ’ ಮೂಲಕ ಪುನಃ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯೊಂದಿಗೆ ಎಂಟ್ರಿಕೊಟ್ಟಿದ್ದಾರೆ.

Advertisement

ಈ ಚಿತ್ರದ ವಿಶೇಷವೆಂದರೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿದೆ. ಚಿತ್ರದ ಟ್ರೇಲರ್‌ ವೀಕ್ಷಿಸಿರುವ ಸುದೀಪ್‌ ಇಷ್ಟಪಟ್ಟು, ಚಿತ್ರದ ಟ್ರೇಲರ್‌ಗೆ ಧ್ವನಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿದ್ದ ಸುದೀಪ್‌ ಅವರನ್ನು ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ ಹಾಗೂ ನಿರ್ಮಾಪಕರಾದ ಆರ್‌.ದೇವರಾಜ್‌ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಹಾಗೆಯೇ ಚಿತ್ರದ ಟ್ರೇಲರ್‌ ತೋರಿಸಿ, ಧ್ವನಿ ನೀಡಬೇಕು ಅಂದಾಗ, ಹೈದರಾಬಾದ್‌ ಸ್ಟುಡಿಯೋವೊಂದರಲ್ಲೇ ಸುದೀಪ್‌ ಅವರು ಖುಷಿಯಿಂದಲೇ ಟ್ರೇಲರ್‌ಗೆ ಧ್ವನಿ ನೀಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ನಾಲ್ಕು ಭಾಷೆಯಲ್ಲಿ ಇರುವ ಟ್ರೇಲರ್‌ಗೆ ಸುದೀಪ್‌ ಅವರದೇ ಧ್ವನಿ ಇರಲಿದೆ ಎಂಬುದು ನಿರ್ದೇಶಕರ ಮಾತು. ಸುದೀಪ್‌ ಅವರೀಗ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಪ್ರೇಮಿಗಳಿಗೂ ಅಚ್ಚುಮೆಚ್ಚು. ಅವರೀಗ “ಉದ್ಘರ್ಷ’ ಚಿತ್ರದ ಟ್ರೇಲರ್‌ಗೆ ಧ್ವನಿ ನೀಡಿರುವುದರಿಂದ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ ಎಂಬುದು ವಿಶೇಷ.

ಈ ಚಿತ್ರದಲ್ಲಿ ಠಾಕೂರ್‌ ಅನೂಪ್‌ ಸಿಂಗ್‌ ನಾಯಕರಾಗಿ ನಟಿಸಿದ್ದಾರೆ. ಅವರಿಗೆ ತಾನ್ಯಾ ಹೋಪ್‌ ಮತ್ತು ಧನ್ಸಿಕಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಖಳನಟರಾಗಿ ಕಬೀರ್‌ ಸಿಂಗ್‌ ದುಹಾನ್‌, ಶ್ರವಣ್‌ ರಾಘವೇಂದ್ರ, “ಬಾಹುಬಲಿ’ ಖ್ಯಾತಿಯ ಪ್ರಭಾಕರ್‌ ಸೇರಿದಂತೆ ಹಲವರು ನಟಿಸಿದ್ದಾರೆ. ವಂಶಿ ಕೃಷ್ಣ, ಕಿಶೋರ್‌, ಹರ್ಷಿಕಾ ಪೂಣಚ್ಚ ವಿಶೇಷ ಪಾತ್ರದಲ್ಲಿದ್ದಾರೆ. ಪಿ.ರಾಜನ್‌ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬಾಲಿವುಡ್‌ನ‌ ಸಂಜೋಯ್‌ ಚೌಧರಿ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next