Advertisement

ಸುಮಲತಾ ಪರ ಪ್ರಚಾರಕ್ಕೆ ಕಿಚ್ಚ ಸುದೀಪ್‌ ಹೋಗಲ್ಲ

09:35 AM Mar 29, 2019 | Team Udayavani |

ಬೆಂಗಳೂರು: ರಾಜ್ಯದಲ್ಲೇ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆ ಬಯಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರನ ವಿರುದ್ಧ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್‌ ಅವರ ಪರವಾಗಿ ಪ್ರಚಾರಕ್ಕೆ ದರ್ಶನ್‌, ಯಶ್‌ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿಗಳೆಲ್ಲಾ ಒಂದಾಗಿದ್ದಾರೆ. ಆದರೆ ತಾನು ಸುಮಲತಾ ಅವರ ಪರ ಪ್ರಚಾರಕ್ಕೆ ಬರುವುದಿಲ್ಲ ಎಂದು ಸ್ಯಾಂಡಲ್‌ ವುಡ್‌ ನ ಜನಪ್ರಿಯ ನಟ ಕಿಚ್ಚ ಸುದೀಪ್‌ ಅವರು ತಿಳಿಸಿದ್ದಾರೆ. ಸುದೀಪ್‌ ಅವರ ಈ ನಿರ್ಧಾರವನ್ನು ಅವರ ಮ್ಯಾನೇಜರ್‌ ಆಗಿರುವ ಜಾಕ್‌ ಮಂಜು ಅವರು ಖಚಿತಪಡಿಸಿದ್ದಾರೆ.

Advertisement

ಸುಮಲತಾ ಅವರು ಸುದೀಪ್‌ ಅವರಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಸುಮಲತಾ ಗೆಲುವಿಗೆ ಸುದೀಪ್‌ ಶುಭ ಹಾರೈಸಿದ್ದರು. ಆದರೆ ಅವರ ಪರ ಪ್ರಚಾರಕ್ಕೆ ಹೋಗದಿರುವ ಕುರಿತು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್‌ ಮತ್ತು ಯಶ್‌ ಅವರು ಸುಮಲತಾ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವದೇ ಸುದಿಪ್‌ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಒಂದುವೇಳೆ ಸುಮಲತಾ ಅವರು ಗೆದ್ದು ಸಂಸದೆಯಾದಲ್ಲಿ ಪ್ರಚಾರ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸದೇ ಇದ್ದಲ್ಲಿ ಅದು ತನಗೆ ಕೆಟ್ಟ ಹೆಸರು ಬರಲು ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ಸುದೀಪ್‌ ಅವರಲ್ಲಿದೆ ಎಂದು ತಿಳಿದುಬಂದಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಸುದೀಪ್‌ ಅವರ ಕುಟುಂಬಕ್ಕೂ ದೇವೇಗೌಡ ಕುಟುಂಬಕ್ಕೂ ನಿಕಟ ಸಂಪರ್ಕ ಇರುವುದರಿಂದ ಮತ್ತು ಇನ್ನೊಂದೆಡೆ ಸುದೀಪ್‌ ಅವರು ಅಂಬರೀಷ್‌ ಕುಟುಂಬದೊಂದಿಗೆ ಪರಮಾಪ್ತತೆ ಹೊಂದಿರುವುದರಿಂದ ಈ ಎರಡೂ ಕುಟುಂಬಗಳ ನಡುವೆ ನಡೆಯುತ್ತಿರುವ ಈ ಚುನಾವಣಾ ಹೋರಾಟದಲ್ಲಿ ಸಮಾನ ಅಂತರವನ್ನು ಕಾಯ್ದುಕೊಳ್ಳಲು ಈ ಬಹುಭಾಷಾ ನಟ ನಿರ್ಧರಿಸಿದ್ದಾರೆ ಎಂದೇ ರಾಜಕೀಯ ವಲಯದಲ್ಲಿ ಇದೀಗ ವಿಶ್ಲೇಷಿಸಲಾಗುತ್ತಿದೆ. ಇನ್ನೋರ್ವ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರೂ ಸಹ ಈ ಹಿಂದೆ ಸುಮಲತಾ ಅವರ ಪರವಾಗಿ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next