Advertisement

ವಿದ್ಯಾರ್ಥಿಗಳ ಪ್ರಶ್ನೆಯೂ ಡುಂಡಿರಾಜರ ಉತ್ತರವೂ

03:50 AM Apr 14, 2017 | |

ಚುಟುಕು ಎಂದ ಕೂಡಲೇ ನೆನಪಾಗುವುದೇ ಎಚ್‌. ಡುಂಡಿರಾಜ್‌. ಪ್ರಾಯಶಃ ಯಾವುದೇ ಸಾಹಿತ್ಯಿಕ ಸಭೆ-ಸಮಾರಂಭಗಳಲ್ಲಿ ಡುಂಡಿರಾಜರ ಹನಿಗವನಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಳಸಿಕೊಳ್ಳದಿದ್ದರೆ ಆ ಸಮಾರಂಭವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ತಮ್ಮ ಹನಿಗವಿತೆಗಳಿಂದ ಪ್ರಸಿದ್ಧರಾಗಿರುವವರು ಡುಂಡಿರಾಜ್‌. ಸುಮಾರು ಮೂರು ಸಾವಿರಕ್ಕೂ ಅಧಿಕ ಚುಟುಕುಗಳನ್ನು ರಚಿಸಿರುವ ಡುಂಡಿಯವರ ನವ್ಯ ಚುಟುಕುಗಳು ಈ ಹೊತ್ತಿಗೂ “ಉದಯವಾಣಿ’ಯೂ ಸೇರಿದಂತೆ ಬೇರೆ ಬೇರೆ ಅಗ್ರ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಅವರು ಬಹಳಷ್ಟು ನೀಳವಿತೆಗಳನ್ನು , ನಾಟಕಗಳನ್ನು ರಚಿಸಿದ್ದಾರೆ ಎನ್ನುವುದು ಕೆಲವರಿಗೆ ತಿಳಿದೇ ಇಲ್ಲ. 

Advertisement

ಕುಂದಾಪುರ ತಾಲೂಕಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸವಿನುಡಿ ಹಬ್ಬ-2016 ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಬಂದಿದ್ದ ಕವಿ ಡುಂಡಿರಾಜರನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಸಂದರ್ಶಿಸಿದರು. ಅಲ್ಲಿ ಕಿರುನಗೆಯ ಹೊನಲು ಹರಿದು ವಿಚಾರ ವಿನಿಮಯವಾಯಿತು. ಡುಂಡಿಯೊಂದಿಗೆ ಹಾಗೆ ದಂಡಿ ಮಾತಿಗೆ ಕುಳಿತದ್ದು ವಿದ್ಯಾರ್ಥಿಗಳಾದ ಅಕ್ಷತಾ ಪೂಜಾರಿ, ದಿವ್ಯಾ ಪಿ., ಶುಭಾನಾ , ವಾಸುಕಿ ಸುಬ್ರಹ್ಮಣ್ಯ ಭಟ್‌ ಮತ್ತು ರಜತ್‌. ಆ ಸಂದರ್ಶನದ ಸಾರಾಂಶ ಇಲ್ಲಿದೆ.

ಶುಭಾನಾ : ಸರ್‌ ನಿಮ್ಮ ಬಾಲ್ಯ , ವಿದ್ಯಾಭ್ಯಾಸದ ಬಗೆಗೆ ಸ್ವಲ್ಪ ಹೇಳುತ್ತೀರಾ?
ಡುಂಡಿರಾಜ್‌ : ನಾನು ಮೂಲತಃ ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿನವನು. ನಾಲ್ಕನೇ ತರಗತಿಯವರೆಗೆ ಊರಲ್ಲಿ ಕಲಿತು ಆ ಬಳಿಕ ಬಸೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ತರಗತಿಗೆ ಮೊದಲಿಗನಾಗಿ ಮುಗಿಸಿ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಪಿಯುಸಿ ಓದಿದ್ದು. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿಯಲ್ಲಿ ಬಿಎಸ್ಸಿ , ಧಾರವಾಡದಲ್ಲಿ ಎಮ್ಮೆಸ್ಸಿ ಮುಗಿಸಿ ಕಾರ್ಪೊರೇಷನ್‌ ಬ್ಯಾಂಕಿನಲ್ಲಿ ಕೃಷಿ ಅಧಿಕಾರಿಯಾಗಿ ಬರೋಬ್ಬರಿ 36 ವರುಷಗಳ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ನಡೆಸುತ್ತಿದ್ದೇನೆ.

ದಿವ್ಯಾ: ನಿಮ್ಮ ಸಾಹಿತ್ಯಾಭಿರುಚಿಗೆ ಬಾಲ್ಯದ ವಾತಾವರಣ ಹೇಗೆ ಪೂರಕವಾಗಿತ್ತು?
ಡುಂಡಿರಾಜ್‌ : ಆ ಮಟ್ಟಿಗೆ ನಾನು ನಿಜಕ್ಕೂ ಸುದೈವಿ ಅಂತನ್ನಿಸುತ್ತೆ. ನನ್ನ ತಂದೆ ದೊಡ್ಡ ವಿದ್ವತ್ತನ್ನು ಹೊಂದಿದವರು. ತಂದೆ-ತಾಯಿ ನನ್ನನ್ನು ಬಹಳವಾಗಿ ಪ್ರೋತ್ಸಾಹಿಸುತ್ತಿದ್ದರು. ಮನೆಯಲ್ಲಿ ಆರ್ಥಿಕವಾಗಿ ಬಡತನವಿದ್ದರೂ ಸಾಂಸ್ಕತಿಕವಾಗಿ ಸಿರಿವಂತಿಕೆ ಹೊಂದಿದ್ದೆವು. ಮನೆಪಕ್ಕದಲ್ಲಿನ ದೇವಸ್ಥಾನದಲ್ಲಿ ದಿನಾ ನಡೆಯುತ್ತಿದ್ದ ಭಜನೆಗಳಿಂದ ಬಹಳ ಆಕರ್ಷಿತನಾಗಿದ್ದೆ. ನನ್ನ ಬರವಣಿಗೆಗೆ ಪ್ರೇರಣೆ ಸಿಕ್ಕಿದ್ದು ಅಲ್ಲಿಯೇ. ತಂದೆ ಒಳ್ಳೆಯ ಮಾತುಗಾರರು. ಅವರು ಓದಿ ಹೇಳುತ್ತಿದ್ದ ರಾಮಾಯಣ ಮಹಾಭಾರತಗಳು ನನ್ನ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿದ್ದವು. ಮುಂದೆ ಬೆಂಗಳೂರಿನಲ್ಲಿ ಅಣ್ಣನ ಮನೆಯಲ್ಲಿ¨ªಾಗ ಅವರ ಸಾಹಿತ್ಯಾಭಿರುಚಿ ನನ್ನನ್ನು ಮತ್ತಷ್ಟು ಬೆಳೆಸಿತ್ತು. ಸಾಹಿತಿಗಳ ಒಡನಾಟವೂ ಸಿಕ್ಕಿತ್ತು. ಎಲ್ಲವೂ ಅದ್ಭುತ ಅನುಭವ.

ವಾಸುಕಿ :ನಿಮ್ಮ ಸಾಹಿತ್ಯದಲ್ಲಿ ನಿಮ್ಮ ಶ್ರೀಮತಿಯವರ ಸಹಕಾರ ಹೇಗಿತ್ತು ಸರ್‌ ?
ಡುಂಡಿರಾಜ್‌ :
ನಿಜ ನನ್ನ ಸಾಧನೆಯಲ್ಲಿ ಪತ್ನಿ ಭಾರತಿಯ ಸಹಕಾರ ಬಹಳ ದೊಡ್ಡದು. ಅದರ ಬಗೆಗೆ ಚುಟುಕು ಬರೆದಿದ್ದೇನೆ.
ಕಲೆ ಸಾಹಿತ್ಯ ಚುಟುಕುಗಳೆಂದರೆ ನನಗೆ ತುಂಬಾ ಆಸಕ್ತಿಯಿದೆ. ನನ್ನ ಶ್ರೀಮತಿಗೂ ಅದನ್ನೆಲ್ಲಾ ಸಹಿಸಿಕೊಳ್ಳುವ ಆ ಶಕ್ತಿ ಇದೆ.

Advertisement

ಅಕ್ಷತಾ : ಚುಟಕು ಕವಿತೆಗಳನ್ನೇ ಮುಖ್ಯವಾಗಿ ಆರಿಸಿಕೊಂಡಿದ್ದು ಯಾಕೆ?
 ಡುಂಡಿರಾಜ್‌:
 ನಾನು ಹಲವಾರು ನಾಟಕಗಳನ್ನು , ಕವಿತೆಗಳನ್ನು ಬರೆದಿದ್ದೀನಿ. ಆದರೆ ಚುಟುಕುಗಳು ಸಣ್ಣದರಲ್ಲೇ ದೊಡ್ಡ ಅರ್ಥವನ್ನು ಕಟ್ಟಿಕೊಡಬಲ್ಲವು. ಮತ್ತು ಜನರ ಮನಸ್ಸನ್ನು ಬೇಗ ತಲುಪಬಲ್ಲವು. ಆ ಕಾರಣಕ್ಕಾಗಿ ಚುಟುಕು ರಚನೆ ಹೆಚ್ಚಾಗಿತ್ತು. ಆದರೆ ಎಲ್ಲವನ್ನೂ ಚುಟುಕು ಮಾತಿನಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ ಎನ್ನುವುದು ಸತ್ಯ.

ರಜತ್‌ : ಒಂದೆಡೆ ಬ್ಯಾಂಕ್‌ ನೌಕರಿ, ಇನ್ನೊಂದೆಡೆ ಸಾಹಿತ್ಯ ಕೃಷಿ ಎರಡನ್ನೂ ಹೇಗೆ ನಿಭಾಯಿಸಿದಿರಿ ಸರ್‌?
ಡುಂಡಿರಾಜ್‌ :
ನಿಜ ಹೇಳಬೇಕೆಂದರೆ, ಬ್ಯಾಂಕ್‌ ಉದ್ಯೋಗ ನನ್ನ ಸಾಹಿತ್ಯದ ಬೆಳವಣಿಗೆಗೆ ಕಾರಣವಾಗಿತ್ತು. ನನ್ನ ಸೇವೆಯಲ್ಲಿ 14 ಸಲ ವರ್ಗಾವಣೆ ಆಗಿತ್ತು. ಆಗೆಲ್ಲ ಹೊಸ ಊರು, ಹೊಸ ಜನರ ಪರಿಚಯವಾಗಿ ಜೀವನದ ಅನುಭವ ವಿಸ್ತಾರಗೊಂಡಿತು. ಸಾಹಿತಿಗೆ ಅದು ಬಹಳ ಮುಖ್ಯ. ಬ್ಯಾಂಕಿನಲ್ಲಿಯೂ ಪ್ರೋತ್ಸಾಹ ಸಿಕ್ಕಿದೆ. ಸನ್ಮಾನಗಳು ನಡೆದಿವೆ. ನಾನು ನೌಕರಿ ಮತ್ತು ಬರವಣಿಗೆ ಒಟ್ಟಿಗೆ ಮಾಡುತ್ತಿರಲಿಲ್ಲ. ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆ ನಡೆಯುತಿತ್ತು. ಒಮ್ಮೊಮ್ಮೆ ಮಧ್ಯರಾತ್ರಿ ಎದ್ದು ಕೂತು ಬರೆದದ್ದೂ ಇದೆ.

ಶುಭಾನಾ : ಸರ್‌, ಓರ್ವ ನಿವೃತ್ತ ಬ್ಯಾಂಕ್‌ ಉದ್ಯೋಗಿಯಾಗಿ ಪ್ರಸ್ತುತ ನೋಟ್‌ ಬ್ಯಾನ್‌ ಬಗೆಗೆ ನಿಮ್ಮ ಅಭಿಪ್ರಾಯ.
ಡುಂಡಿರಾಜ್‌ :
ಇದೊಂದು ದಿಟ್ಟ ನಿರ್ಧಾರ. ಕಪ್ಪು ಹಣ ಮತ್ತು ಖೋಟಾ ನೋಟು ನಿಯಂತ್ರಣಕ್ಕೆ ಇದು ಬಹಳ ಒಳ್ಳೆಯದು. ಉದ್ದೇಶ ಒಳ್ಳೆಯದಿರುವಾಗ ತಾತ್ಕಾಲಿಕ ತೊಂದರೆಗಳನ್ನು ಎದುರಿಸಲು ನಾವು ಸಿದ್ಧರಿರಬೇಕು. ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಯವಾಗಿರಬಹುದು. ಆದರೆ, ಮುಂದೆ ಎಲ್ಲವೂ ಸರಿ ಹೋಗಲಿದೆ, ಕಾಯುವ ತಾಳ್ಮೆ ಬೇಕು. ಅಷ್ಟೆ .

ಅಕ್ಷತಾ : ಸಾಹಿತ್ಯದಿಂದ ಭಾಷೆಯ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಏನು ಮಾಡಬೇಕು?
ಡುಂಡಿರಾಜ್‌ :
ಸಾಹಿತ್ಯದಿಂದ ಭಾಷಾಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಸಿಗುವ ಸಾಹಿತ್ಯದ ಅಧ್ಯಯನಗಳು ನಡೆಯಬೇಕಿದೆ. ಉತ್ತಮ ಹೊಸತನವುಳ್ಳ ವಿಚಾರಗಳೊಂದಿಗೆ ಜನರ ಆಸಕ್ತಿಗೆ ಪೂರಕವಾಗಿ ಸ್ಪಂದಿಸುವ ಸಾಹಿತ್ಯಗಳ ರಚನೆ ಆಗಬೇಕಿದೆ.

ದಿವ್ಯಾ : ಇತ್ತೀಚೆಗೆ ಸಾಹಿತ್ಯ ಪ್ರಶಸ್ತಿಗಳು ವಶೀಲಿದಾರರ ಸೊತ್ತಾಗುತ್ತಿದೆ ಅಂತನ್ನಿಸುತ್ತಿದೆಯಲ್ಲ !
ಡುಂಡಿರಾಜ್‌ :
ನಿಜ. ಹಾಗನ್ನಿಸುತ್ತಿದೆ. ಇಂದು ಸನ್ಮಾನ ಎಂದರೆ ಅನುಮಾನ ಎನ್ನುವಂತಾಗಿದೆ. ಸಾಹಿತಿಗಳು ಪ್ರಶಸ್ತಿಯ ಹಿಂದೋಡಬಾರದು. ಪ್ರಶಸ್ತಿಗಳಿಂದ ಕೃತಿಯ ಮೌಲ್ಯವನ್ನು ನಿರ್ಧರಿಸುವುದು ಸಲ್ಲ. ಕೃತಿ ಬರೆದಾಗಲೇ ನನಗೆ ಖುಷಿ ಜಾಸ್ತಿ. ಜನರ ಗುರುತಿಸುವಿಕೆ, ಹೊಗಳಿಕೆ, ಪ್ರೋತ್ಸಾಹಗಳಿಗಿಂತ ದೊಡ್ಡ ಪ್ರಶಸ್ತಿ ಇಲ್ಲ.

ವಾಸುಕಿ : ಸರ್‌, ಇಂದಿನ ಶಿಕ್ಷಣ ವ್ಯವಸ್ಥೆಯ ಬಗೆಗೆ ನಿಮ್ಮ ಅಭಿಪ್ರಾಯ.
ಡುಂಡಿರಾಜ್‌ : 
ಶಾಲೆಯಲ್ಲಿ ತಿದ್ದಿ ಹೇಳಿ ನಮಗೆ ಪಾಠ ಮಾಡ್ತಾರೆ ಮಾಸ್ತರು.  ಬರೆದು ಬರೆದು ಮಕ್ಕಳು ಕೊನೆಗೆ ಆಗುವರು ಗುಮಾಸ್ತರು.  ಇದರಂತೆ ನಮ್ಮ ಶಿಕ್ಷಣ ವ್ಯವಸ್ಥೆ ಇದೆ. ಬದಲಾವಣೆ ತುರ್ತಾಗಿ ಆಗಬೇಕು. ಬದುಕುವುದನ್ನು ಕಲಿಸುವ, ಹೊಸ ಚಿಂತನೆಗಳನ್ನು ಕಾರ್ಯಗಳನ್ನು ಹೊಮ್ಮಿಸುವ ಶಿಕ್ಷಣ ವ್ಯವಸ್ಥೆ ಬರಬೇಕಿದೆ.

ರಜತ್‌ :  ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆಯಲ್ಲಾ ಸರ್‌.
ಡುಂಡಿರಾಜ್‌ :
 ಹಾಗೇನಿಲ್ಲ. ಎಷ್ಟು ಜನ ಪುಸ್ತಕಗಳನ್ನು ಕೊಂಡರು ಎನ್ನುವುದಕ್ಕಿಂತ ಅದರಲ್ಲಿನ ವಿಚಾರಗಳು ಎಷ್ಟು ಜನರಿಗೆ ತಲುಪಿತು ಎನ್ನುವುದು ಮುಖ್ಯ. ಓದಲು ಹೊಸ ಮಾರ್ಗಗಳು ಬಂದಿವೆ. ಒಳ್ಳೆಯ ವಿಚಾರಗಳನ್ನು ಜನ ಯಾವತ್ತೂ ಸ್ವೀಕರಿಸುತ್ತಾರೆ. 

ಅಕ್ಷತಾ :  ಸರ್‌ ನಿಮ್ಮ ಮುಂದಿನ ಯೋಜನೆ?
ಡುಂಡಿರಾಜ್‌ :
 ಮತ್ತಷ್ಟು ಸಾಹಿತ್ಯ ಕೃಷಿ ಮಾಡಬೇಕಿದೆ. ನನ್ನ 3000ಕ್ಕೂ ಅಧಿಕ ಹನಿಗವನಗಳ ಸಮಗ್ರ ಸಂಕಲನವೊಂದನ್ನು ಹೊರತರುವ ಆಶಯವಿದೆ.

ದಿವ್ಯಾ:  ಓರ್ವ ಸಾಹಿತಿಗಿರಬೇಕಾದ ಗುಣಗಳ ಬಗೆಗೆ?
ಡುಂಡಿರಾಜ್‌ :
 ಸಾಹಿತಿಯಾದವ ನಿರಂತರ ಹೋರಾಟದಲ್ಲಿರಬೇಕು. ಸಮಾಜದ ಆಶಯಗಳಿಗೆ ತುಡಿಯಬೇಕು.ಸಮಕಾಲೀನ ವಿಚಾರಗಳಿಗೆ ತೆರೆದುಕೊಂಡಿರಬೇಕು. ಆಗ ಹೆಚ್ಚು ಜನರನ್ನು ತಲುಪಲು ಸಾಧ್ಯ. ಯಾವ ವಿಚಾರಗಳಿಗೂ ಯೋಚನೆ ಇಲ್ಲದೆ ತತ್‌ಕ್ಷಣದ ಪ್ರತಿಕ್ರಿಯೆ ಮಾಡಬಾರದು. ಚಿಂತನೆ ಅನ್ವೇಷಣೆ ಆವಶ್ಯಕ.

ವಾಸುಕಿ :  ಯುವ ಸಾಹಿತಿಗಳಿಗೆ ಸಲಹೆ ಕೊಡುವುದಾದರೆ?
ಡುಂಡಿರಾಜ್‌ :
ವಿಭಿನ್ನವಾಗಿ ಚಿಂತಿಸಿ. ಹೆಚ್ಚು ಓದಿ. ಪ್ರಕಟಣೆಗೆ ಮುನ್ನ ನಿಮ್ಮ ಬರಹಗಳನ್ನು ನೀವೇ ವಿಮರ್ಶಿಸಿ. ಅವಸರದ ಪ್ರವೃತ್ತಿ ಬೇಡ. ತಾತ್ಕಾಲಿಕ ಜನಪ್ರಿಯತೆಗೆ ಮರುಳಾಗದಿರಿ.

ರಜತ್‌ : ಇಂದಿನ ವಿದ್ಯಾರ್ಥಿಗಳಿಗೆ ನಿಮ್ಮ ಕಿವಿಮಾತು !
ಡುಂಡಿರಾಜ್‌ :
ಸಾಹಿತ್ಯ ಅಥವಾ ಬೇರೆ ಯಾವುದೇ ವಿಚಾರಗಳಿಗಿಂತಲೂ ಬದುಕು ದೊಡ್ಡದು. ಅದನ್ನು ನಿರ್ಲಕ್ಷÂ ಮಾಡದಿರಿ. ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸಿರಿ. ನಿಮ್ಮ ಪ್ರಾಥಮಿಕ ಜವಾಬ್ದಾರಿಗಳನ್ನು ಮರೆಯಬೇಡಿ. ಶುಭವಾಗಲಿ.

ನರೇಂದ್ರ ಎಸ್‌. ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next